Advertisement

ಸರ್ಕಾರ ಯಾವಾಗಲಾದ್ರೂ ಬೀಳಬಹುದು

06:12 AM Feb 01, 2019 | |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಏರುಪೇರುಗಳಾಗುತ್ತಿದ್ದು, ಕಾಂಗ್ರೆಸ್‌, ಜೆಡಿಎಸ್‌ನವರು ಕಚ್ಚಾಡಿಕೊಂಡು, ಬಡಿದಾಡಿಕೊಂಡು ಯಾವಾಗ ಸರ್ಕಾರ ಬೀಳುತ್ತಿದೆಯೋ ಗೊತ್ತಿಲ್ಲ . ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಬಿಜೆಪಿ ಕಚೇರಿಯಲ್ಲಿ ಲೋಕಸಭಾ ಚುನಾವಣಾ ಸಿದ್ಧತಾ ಸಭೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಶಾಸಕರೇ ಜೆಡಿಎಸ್‌ನೊಂದಿಗಿನ ಸಂಬಂಧ ಕಳಚಿಕೊಳ್ಳಬೇಕು ಎಂದು ಬೀದಿಗಿಳಿದಿದ್ದು, ರಾಜಕೀಯದಲ್ಲಿ ಏನು ಬೇಕಾದರೂ ಏರುಪೇರಾಗಬಹುದು. ನಾವು ಪಕ್ಷ ಸಂಘಟನೆ ಬಲಪಡಿಸುವ ಜತೆಗೆ ಪಕ್ಷ ಬಲವರ್ಧನೆಗೆ ಒತ್ತು ನೀಡಬೇಕು ಎಂದು ಹೇಳಿದರು.

ರಾಜ್ಯ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌- ಜೆಡಿಎಸ್‌ನವರು ಕಳೆದ ಏಳು ತಿಂಗಳಲ್ಲಿ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದು,  ಎಚ್‌.ಡಿ.ದೇವೇಗೌಡರು ನಿತ್ಯ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ತಮಗೆ ಸಹಕಾರ ಸಿಗುತ್ತಿಲ್ಲ, ನಾಮ್‌ಕೇವಾಸ್ತೆ ಮುಖ್ಯಮಂತ್ರಿಯಾಗಿದ್ದೇನೆ ಎಂದು ಹಲವು ಬಾರಿ ಹೇಳಿದ್ದಾರೆ.

ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ 20ಕ್ಕೂ ಹೆಚ್ಚು ಶಾಸಕರು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಇದನ್ನೆಲ್ಲಾ ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದ ವೇಳೆ ಶೇ. 70ರಷ್ಟು ಮಂದಿ ಈ ಸರ್ಕಾರ ತೊಲಗಬೇಕು ಎಂದು ಬಯಸುತ್ತಿರುವುದು ಕಂಡುಬಂದಿದೆ. ಕಾಂಗ್ರೆಸ್‌- ಜೆಡಿಎಸ್‌ ನಾಯಕರ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತವಾಗಿದೆ.

Advertisement

ಪಕ್ಷದಿಂದ 5 ತಂಡಗಳು 20 ಜಿಲ್ಲೆಗಳಲ್ಲಿ ಬರಪೀಡಿತ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದು, ಎಲ್ಲಿಯೂ ಸರ್ಕಾರ ಬರ ನಿರ್ವಹಣೆಗೆ ಕ್ರಮ ಕೈಗೊಂಡಿರುವುದು ಕಂಡುಬಂದಿಲ್ಲ. 155 ತಾಲೂಕು ಬರ ಪೀಡಿತವಾಗಿದ್ದು, ಪರಿಹಾರ ಕಾರ್ಯಗಳಿಗೆ ಸರ್ಕಾರ ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಮೊದಲು ಕೊಟ್ಟ ಹಣ ಖರ್ಚು ಮಾಡಲಿ: ಕೇಂದ್ರ ಸರ್ಕಾರವು ರಾಜ್ಯಕ್ಕೆ 950 ಕೋಟಿ ರೂ. ಬರ ಪರಿಹಾರ ವಿತರಿಸಿದೆ. ರಾಜ್ಯ ಸರ್ಕಾರದಿಂದ ಅನುದಾನ ಬಳಕೆ ಪ್ರಮಾಣ ಪತ್ರಗಳು ಸಮರ್ಪಕವಾಗಿ ಕೇಂದ್ರಕ್ಕೆ ಸಲ್ಲಿಕೆಯಾಗುತ್ತಿಲ್ಲ. ಸದ್ಯ ಕೇಂದ್ರ ಸರ್ಕಾರ ಘೋಷಿಸಿರುವ 950 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಲಿ. ನಂತರ ಹೆಚ್ಚುವರಿ ಪರಿಹಾರ ಕೇಳಿದರೆ ಕೇಂದ್ರ ಸ್ಪಂದಿಸಲಿದೆ  ಎಂದು ಹೇಳಿದರು.

ಬೀದಿಗಿಳಿದು ಹೋರಾಟಕ್ಕೆ ಕರೆ: ಕಾಂಗ್ರೆಸ್‌- ಜೆಡಿಎಸ್‌ ನಾಯಕರ ಕಚ್ಚಾಟದಿಂದ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದಿದೆ. ನೀರಾವರಿ ಯೋಜನೆಗಳು ಸ್ಥಗಿತವಾಗಿವೆ. 1000 ಅಡಿ ಆಳದಲ್ಲೂ ಅಂತರ್ಜಲ ಸಿಗುತ್ತಿಲ್ಲ. ಬರದಿಂದಾಗಿ ಜನರ ಸ್ಥಿತಿ ಶೋಚನೀಯವಾಗಿದ್ದು, ಸರ್ಕಾರ ಅವರ ಬಗ್ಗೆ ಕಾಳಜಿ ತೋರುತ್ತಿಲ್ಲ. ಹಾಗಾಗಿ ತಾಲ್ಲೂಕು ಮಟ್ಟದಲ್ಲಿ ಬೀದಿಗಿಳಿದು ಹೋರಾಟ ನಡೆಸಿ ಕುಂಭಕರ್ಣ ನಿದ್ರೆಯಲ್ಲಿರುವ ಸರ್ಕಾರವನ್ನು ಎಚ್ಚರಿಸಬೇಕಿದೆ ಎಂದು ಕರೆ ನೀಡಿದರು.

ಬಜೆಟ್‌ ವೇಳೆ ಬಣ್ಣ ಬಯಲಾಗಲಿದೆ: ಫೆ.6ರಂದು ರಾಜ್ಯಪಾಲರು ಜಂಟಿ ಅಧಿವೇಶನ ಭಾಷಣ ಮಾಡಲಿದ್ದಾರೆ. ಫೆ.8ರಂದು ರಾಜ್ಯ ಬಜೆಟ್‌ ಮಂಡನೆಗೆ ಸರ್ಕಾರ ಮುಂದಾಗಿದ್ದು, ಬಣ್ಣ ಬಯಲಾಗಲಿದೆ. ತೆರಿಗೆದಾರರ ಹಣ ಸದ್ಬಳಕೆಯಾಗುತ್ತಿಲ್ಲ. ಸಮಾಜದಲ್ಲಿ ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕೆ ಸರ್ಕಾರ ಗಮನ ನೀಡುತ್ತಿಲ್ಲ.

ಹಾಗಾಗಿ ಒಂದೆಡೆ ಲೋಕಸಭಾ ಚುನಾವಣೆಗೆ ಸಜ್ಜಾಗುವ ಜತೆಗೆ ಮತ್ತೂಂದೆಡೆ ಬರದಿಂದ ತತ್ತರಿಸಿರುವ ಜನರು ನೆಮ್ಮದಿಯಿಂದ ಬದುಕುವಂತೆ ಮಾಡಲು ನೆರವಾಗಬೇಕು. ನಾವು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾರಂಭಿಸಿದ ಬಳಿಕ ಸಚಿವರು ಬರ ಪ್ರದೇಶಗಳತ್ತ ಮುಖ ಮಾಡಿದ್ದಾರೆ. ಆಗ ಜನರು ಸಚಿವರಿಗೆ ಛೀಮಾರಿ ಹಾಕಿ ಊರಿನೊಳಗೆ ಸೇರಿಸದೆ ವಾಪಸ್‌ ಕಳಿಸಿರುವುದು ಸರ್ಕಾರದ ಬಗೆಗಿನ ಜನರ ಆಕ್ರೋಶ ತೋರಿಸುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next