Advertisement

ತಿಹಾರ್ ನ ಗೋಡೆಯೊಳಗೆ ‘ಬೇಡಿ’ ತೊಟ್ಟ ಮನಗಳಲ್ಲಿ ಹೊಸ ‘ಕಿರಣ’ ಮೂಡಿದ ಕಥೆ

10:14 AM Sep 21, 2019 | Hari Prasad |

ತಿಹಾರ್ ಜೈಲಿನ ಹೆಸರು ಕೇಳಿದೊಡನೆ ಹೊರಜಗತ್ತಿಗೆ ಪಕ್ಕನೆ ಹೊಳೆಯುವ ಇನ್ನೊಂದು ಹೆಸರೇ ಕಿರಣ್ ಬೇಡಿ. ಹೌದು, ಕಿರಣ್ ಬೇಡಿಗೂ ತಿಹಾರ್ ಜೈಲಿಗೂ ಒಂದು ವಿಶಿಷ್ಟವಾದ ನಂಟಿದೆ. 1993ರಲ್ಲಿ ಕಿರಣ್ ಬೇಡಿ ಅವರು ನವದೆಹಲಿಯಲ್ಲಿರುವ ತಿಹಾರ್ ಜೈಲಿಗೆ ಇನ್ ಸ್ಪೆಕ್ಟರ್ ಜನರಲ್ (ಐಜಿ) ಆಗಿ ನೆಮಕಗೊಂಡರು. ಆಗ ತಿಹಾರ್ ಜೈಲಿಗೂ ಗೊತ್ತಿರಲಿಲ್ಲ ಮತ್ತು ಹೊರಜಗತ್ತಿಗೂ ಗೊತ್ತಿರಲಿಲ್ಲ ಇಲ್ಲಿಗೆ ನೇಮಕಗೊಂಡು ಬಂದಿರುವುದು ಮುಂದೊಂದು ದಿನ ಈ ಜೈಲಿನ ಇತಿಹಾಸವನ್ನು ಬದಲಿಸುತ್ತಾರೆ, ಇಲ್ಲಿನ ಖೈದಿಗಳ ಪಾಲಿಗೆ ಭರವಸೆಯ ಕಿರಣವಾಗುತ್ತಾರೆ ಎಂದು.

Advertisement

ಸ್ವತಂತ್ರ ಭಾರತದ ಮೊದಲ ಮಹಿಳಾ ಐ.ಪಿ.ಎಸ್. ಅಧಿಕಾರಿ ಎಂಬ ಹೆಗ್ಗಳಿಕೆಯೊಂದಿಗೆ 1975ರಲ್ಲಿ ದೆಹಲಿಯ ಚಾಣಕ್ಯಪುರಿಯಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಕಿರಣ್ ಬೇಡಿ ಅವರು ಗೋವಾ, ಮಿಝೋರಾಂಗಳಲ್ಲಿ ಸೇವೆ ಸಲ್ಲಿಸಿದ ಬಳಿಕ 1993ರಲ್ಲಿ ಬೇಡಿ ಅವರು ತಿಹಾರ್ ಜೈಲಿಗೆ ಐಜಿ ಆಗಿ ನೇಮಕಗೊಳ್ಳುತ್ತಾರೆ. 2500 ಖೈದಿಗಳ ಸಾಮರ್ಥ್ಯದ ಈ ಬೃಹತ್ ಬಂಧೀಖಾನೆಯ ಮೇಲ್ವಿಚಾರಣೆಗೆ ಓರ್ವ ಮಹಿಳಾ ಅಧಿಕಾರಿ ಬಂದಿದ್ದು ಸಹಜವಾಗಿ ಒಳಗಿನವರಿಗೂ ಹೊರಗಿನವರಿಗೂ ಕುತೂಹಲದ ವಿಷಯವಾಗಿ ಮಾರ್ಪಟ್ಟಿತ್ತು!

ಬೇಡಿ ತಿಹಾರ್ ಜೈಲಿಗೆ ಬಂದು ಅಧಿಕಾರ ಸ್ವೀಕರಿಸಿಕೊಂಡ ಸಂದರ್ಭದಲ್ಲಿ ಈ ಜೈಲಿನಲ್ಲಿ 8000 ದಿಂದ 9500 ಖೈದಿಗಳಿದ್ದರು ಎಂದರೆ ಈ ಜೈಲಿನ ಆಗಿನ ಪರಿಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ಇದರಲ್ಲಿ ಹೆಚ್ಚಿನವರು ವಿಚಾರಣಾಧೀನ ಖೈದಿಗಳಾಗಿದ್ದರು. ಇನ್ನೊಂದು ಭಯಾನಕ ವಿಚಾರವಂದರೆ ಕಿರಣ್ ಬೇಡಿ ಅವರು ಇಲ್ಲಿಗೆ ನೇಮಕಗೊಳ್ಳುವ ಮೊದಲು ಒಂಭತ್ತು ತಿಂಗಳುಗಳವರೆಗೆ ಇಲ್ಲಿನ ಐಜಿ ಹುದ್ದೆ ಖಾಲಿಯಾಗಿಯೇ ಇತ್ತು! ಹಾಗಾದರೆ ಊಹಿಸಿಕೊಳ್ಳಿ ತಿಹಾರ್ ಜೈಲಿನ ಒಳಗಿನ ಪರಿಸ್ಥಿತಿ ಆಗ ಹೇಗಿದ್ದರಬಹುದು ಎಂದು!

ಈ ಜೈಲಿನ ಕಾರ್ಯನಿರ್ವಹಣೆಗೆ ಆಗ ನಿಗದಿಯಾಗಿದ್ದ ಮೊತ್ತ ಕೇವಲ 15 ಕೋಟಿ ರೂಪಾಯಿಗಳು ಮಾತ್ರ. ಇದು ಅಲ್ಲಿನ ಮೂಲಭೂತ ವ್ಯವಸ್ಥೆಗಳಿಗೇ ಸರಿಹೋಗುತ್ತಿತ್ತು.

ಈ ಸಂಕಷ್ಟದ ಸಂದರ್ಭದಲ್ಲೇ ತಿಹಾರ್ ಜೈಲಿಗಂಟಿದ್ದ ಶಾಪವನ್ನು ಮುಕ್ತಗೊಳಿಸಲೆಂದು ಬಂದವರಂತೆ ಅಧಿಕಾರ ವಹಿಸಿಕೊಂಡ ಕಿರಣ್ ಬೇಡಿ ಪ್ರಾರಂಭದಲ್ಲಿ ಜೈಲಿನಲ್ಲಿ ಕೆಲವೊಂದು ಸುಧಾರಣೆಗಳನ್ನು ತರಲು ಉದ್ದೇಶಿಸಿದರು.

Advertisement

ಮೊಟ್ಟಮೊದಲಿಗೆ ತಿಹಾರ್ ಜೈಲಿನಲ್ಲಿ ಕಿರಣ್ ಬೇಡಿ ಮಾಡಿದ ಕೆಲಸವೆಂದರೆ ಇಲ್ಲಿದ್ದ ಕುಖ್ಯಾತ ಅಪರಾಧಿಗಳನ್ನು ಪ್ರತ್ಯೇಕ ಬ್ಯಾರಕ್ ನಲ್ಲಿರಿಸಿದ್ದು. ಇಲ್ಲಿಯವರೆಗೆ ಇವರೆಲ್ಲಾ ತಮ್ಮ ತಮ್ಮ ಗ್ಯಾಂಗ್ ಗಳಿಗೆ ವ್ಯಕ್ತಿಗಳನ್ನು ತಿಹಾರ್ ಜೈಲಿನಿಂದಲೇ ನೇಮಕ ಮಾಡಿಕೊಳ್ಳುತ್ತಿದ್ದರು. ಅಂದರೆ ಅಪರಾಧ ಮಾಡಿ ಶಿಕ್ಷೆ ಅನುಭವಿಸಲೆಂದು ಜೈಲು ಸೇರಿದವ ಮತ್ತೆ ಹೊರ ಪ್ರಪಂಚಕ್ಕೆ ದೊಡ್ಡ ಅಪರಾಧಿಯಾಗಿಯೇ ಕಾಲಿಡುತ್ತಿದ್ದ. ಈ ವ್ಯವಸ್ಥೆಗೆ ಮೊದಲಿಗೆ ಕಡಿವಾಣ ಹಾಕಲು ಬೇಡಿ ಮುಂದಾಗುತ್ತಾರೆ.

ಇದಾದ ಬಳಿಕ ಇಲ್ಲಿನ ಖೈದಿಗಳಿಗೆ ಬೇಡಿ ಹಲವಾರು ಸರ್ಟಿಫಿಕೇಟ್ ತರಬೇತಿಗಳನ್ನು ಪ್ರಾರಂಭಿಸುತ್ತಾರೆ. ಬೇಡಿ ಅವರ ಅಧಿಕಾರವಧಿಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ ಮತ್ತು ರಾಷ್ಟ್ರೀಯ ಮುಕ್ತ ಶಾಲೆಗಳ ಕೇಂದ್ರಗಳು ತಿಹಾರ್ ಜೈಲಿನ ಆವರಣದಲ್ಲಿ ಪ್ರಾರಂಭಗೊಂಡಿದ್ದವು. ಹಾಗೆ ನೋಡಿದರೆ ಶಿಕ್ಷಣವನ್ನೇ ಖೈದಿಗಳ ಕೋಣೆ ಬಾಗಿಲಿಗೆ ಮುಟ್ಟಿಸುವ ಪ್ರಯತ್ನವನ್ನು ಬೇಡಿ ಪ್ರಾರಂಭಿಸಿದ್ದರು.

ಇನ್ನು ಜೈಲಿನ ವಾತಾವರಣದಲ್ಲಿ ಶಿಸ್ತಿನ ಗಾಳಿ ನಿಧಾನವಾಗಿ ಬೀಸಲಾರಂಭಿಸಿತು. ಜೈಲಿನಲ್ಲಿ ಧೂಮಪಾನವನ್ನು ಬೇಡಿ ಕಡ್ಡಾಯವಾಗಿ ನಿಷೇಧಿಸಿದರು. ವಿಚತ್ರವೆಂದರೆ ಬೇಡಿ ಅವರ ಈ ಕ್ರಮಕ್ಕೆ ಖೈದಿಗಳಿಂದ ಬಿಡಿ ಜೈಲಿನ ಕೆಲವು ಸಿಬ್ಬಂದಿಗಳಿಂದಲೂ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ ತಿಹಾರದ ಹಣೆಬರಹವನ್ನು ಬದಲಾಯಿಸಲು ಈ ಮಾತೃಹೃದಯಿ ಅಧಿಕಾರಿ ನಿರ್ಧರಿಸಿಯಾಗಿತ್ತು ಮಾತ್ರವಲ್ಲದೇ ಅದಕ್ಕೆ ಬೇಕಾಗಿದ್ದ ಅಧಿಕಾರವೂ ಇವರ ಕೈಯಲ್ಲಿತ್ತು.

ಇನ್ನು ಖೈದಿಗಳ ವರ್ತನೆಯಲ್ಲಿ ಸುಧಾರಣೆಯನ್ನು ತರಲೆಂದೇ ಬೇಡಿ ಅವರು ಜೈಲಿನಲ್ಲಿ ಯೋಗ ಮತ್ತು ವಿಪಷ್ಯನಾ ತರಗತಿಗಳನ್ನು ಪ್ರಾರಂಭಿಸಿದರು. ಇನ್ನು ಪ್ರತೀನಿತ್ಯ ಗ್ಯಾಂಗ್ ವಾರ್, ಪುಡಿ ರೌಡಿಗಳ ಹಾರಾಟ, ಚೀರಾಟ ನಡೆಯುತ್ತಿದ್ದ ತಿಹಾರ್ ಜೈಲಿನಲ್ಲಿ ನಿಧಾನವಾಗಿ ಕ್ರೀಡಾ ಚಟುವಟಿಕೆಗಳು ಪ್ರಾರಂಭಗೊಂಡವು. ಸದಾ ಬೈಗುಳಗಳ ಮೂಲಕವೇ ಮಾತನಾಡುತ್ತಿದ್ದ ಖೈದಿಗಳ ಬಾಯಲ್ಲಿ ದೇವತಾ ಪ್ರಾರ್ಥನೆಗಳು ಕೇಳಿಬರಲಾರಂಭಿಸಿತು ಇನ್ನು ಎಲ್ಲಾ ಧರ್ಮಗಳ ಹಬ್ಬಗಳನ್ನು ಖೈದಿಗಳೆಲ್ಲಾ ಸೇರಿ ಆಚರಿಸುವ ಪರಿಪಾಠ ನಿಧಾನವಾಗಿ ಪ್ರಾರಂಭಗೊಂಡಿತು.

ತಿಹಾರ್ ಜೈಲಿನಲ್ಲಿ ಆಳವಾಗಿ ಬೇರೂರಿದ್ದ ಡ್ರಗ್ಸ್ ದಂಧೆಯನ್ನು ಕಿರಣ್ ಬೇಡಿ ಸಮರ್ಥವಾಗಿ ಮಟ್ಟಹಾಕಿದರು. ಅದಕ್ಕಾಗಿ ಅವರು ಈ ದಂಧೆಯಲ್ಲಿ ಶಾಮೀಲಾಗಿದ್ದ ತನ್ನದೇ ಕೈಕೆಳಗಿನ ಅಧಿಕಾರಗಳನ್ನು ಸಸ್ಪೆಂಡ್ ಮಾಡಲೂ ಹಿಂಜರಿಯಲಿಲ್ಲ. ಇಷ್ಟು ಮಾತ್ರವಲ್ಲದೇ ಜೈಲಿನೊಳಗೆ ವ್ಯಸನ ಮುಕ್ತ ಕೇಂದ್ರಗಳನ್ನೂ ಸಹ ತೆರೆದರು.

ಇನ್ನು ಖೈದಿಗಳಲ್ಲಿ ಉಳಿತಾಯದ ಮನೋಭಾವನೆಯನ್ನು ಪ್ರೋತ್ಸಾಹಿಸಲು ಮತ್ತು ಅವರೆಲ್ಲಾ ಹೊರಜಗತ್ತಿಗೆ ಕಾಲಿಟ್ಟ ಬಳಿಕ ಗೌರವಯುತ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಕಿರಣ್ ಬೇಡಿ ಅವರು ಜೈಲಿನೊಳಗೆ ಬ್ಯಾಂಕ್ ಒಂದನ್ನು ಸಹ ತೆರೆದರು. ಇನ್ನು ಖೈದಿಗಳನ್ನು ಕಾರ್ಯಚಟುವಟಿಕೆಯಲ್ಲಿ ನಿರತವಾಗಿಸಲು ಮತ್ತು ಅವರ ಆದಾಯ ಮಟ್ಟವನ್ನು ಉತ್ತಮಗೊಳಿಸಲು ಬೆಕರಿ ಉತ್ಪನ್ನಗಳ ತಯಾರಿ, ಮರದ ವಸ್ತುಗಳ ತಯಾರಿ, ನೆಯ್ಗೆ ಸಹಿತ ಸಣ್ಣ ಉತ್ಪಾದನಾ ಘಟಕಗಳನ್ನು ಜೈಲಿನೊಳಗೆ ಸ್ಥಾಪಿಸಿದರು.

ಜೈಲು ಸಿಬ್ಬಂದಿಗಳು ಖೈದಿಗಳ ಸಮಸ್ಯೆಗಳನ್ನು ಆಲಿಸುತ್ತಾರೆ ಎಂಬುದನ್ನು ಕಂಡುಕೊಳ್ಳಲು ಕಿರಣ್ ಬೇಡಿ ಅವರು ಪ್ರತೀದಿನ ಖೈದಿ ಪ್ರವಾಸ ಕಾರ್ಯಕ್ರಮ ನಡೆಸುತ್ತಿದ್ದರು. ಮತ್ತು ಆಹಾರ ಗುಣಮಟ್ಟವನ್ನು ಖುದ್ದು ಪರಿಶೀಲಿಸುತ್ತಿದ್ದರು.

ಜೈಲಿನೊಳಗೊಂದು ಪಂಚಾಯತ್
ತಿಹಾರ್ ಜೈಲಿನಲ್ಲಿ ಕಿರಣ್ ಬೇಡಿ ತಂದ ಇನ್ನೊಂದು ಗಮನಾರ್ಹ ವ್ಯವಸ್ಥೆ ಎಂದರೆ ‘ಪಂಚಾಯತ್ ವ್ಯವಸ್ಥೆ’. ತಮ್ಮ ಪ್ರಾಯ, ವಿದ್ಯೆ ಅಥವಾ ಗುಣನಡತೆಗಳಿಂದಾಗಿ ಸಹ ಖೈದಿಗಳಿಂದ ಗೌರವಿಸಲ್ಪಡುತ್ತಿದ್ದ ಕೈದಿಗಳನ್ನು ಆರಿಸಿ ಅವರು ಇತರೇ ಖೈದಿಗಳ ಸಮಸ್ಯೆಯನ್ನು ಆಲಿಸಿ ಅವುಗಳನ್ನು ಪ್ರತೀದಿನ ಸಾಯಂಕಾಲ ಹಿರಿಯ ಜೈಲು ಅಧಿಕಾರಿಗಳ ಎದುರು ನಿವೇದಿಸಿಕೊಳ್ಳುವ ವ್ಯವಸ್ಥೆಯನ್ನು ಬೇಡಿ ಜಾರಿಗೆ ತಂದರು. ಇಷ್ಟು ಮಾತ್ರವಲ್ಲದೆ ಜೈಲಿನ ಆವರಣದೊಳಗೆ ಅಲ್ಲಲ್ಲಿ ದೂರು ಪೆಟ್ಟಿಗೆಗಳನ್ನು ಇರಿಸಿ ಅದರಲ್ಲಿ ಖೈದಿಗಳು ತಮ್ಮ ಸಮಸ್ಯೆಯನ್ನು ಬರೆದು ಹಾಕುವ ವ್ಯವಸ್ಥೆಯನ್ನು ಕಲ್ಪಿಸಿದರು.

ಈ ಹಿಂದೆಯೂ ಜೈಲಿನಲ್ಲಿ ದೂರು ಪೆಟ್ಟಿಗೆ ಇತ್ತಾದರೂ ಅಲ್ಲಿನ ಸಿಬ್ಬಂದಿಗಳು ಅದರಲ್ಲಿ ಬೀಳುವ ದೂರುಗಳನ್ನು ಹರಿದು ಬಿಸಾಡುತ್ತಿದ್ದರು. ಆದರೆ ಬೇಡಿ ಅವರು ಖೈದಿಗಳು ನೀಡಿದ ದೂರುಗಳಿಗೆ ಪ್ರತಿಯಾಗಿ ಸ್ವೀಕೃತಿ ಚೀಟಿಯನ್ನು ನೀಡುವ ಪದ್ಧತಿಯನ್ನು ಪ್ರಾರಂಭಿಸಿದರು. ಇದರಿಂದ ತಮ್ಮ ಸಮಸ್ಯೆ ನೇರವಾಗಿ ಜೈಲಿನ ಹಿರಿಯ ಅಧಿಕಾರಿಗಳನ್ನು ತಲುಪುತ್ತಿದೆ ಎನ್ನುವ ಭಾವನೆ ಖೈದಿಗಳಲ್ಲಿ ಬೆಳೆಯುವಂತೆ ಮಾಡಿದ ಕೀರ್ತಿ ಬೇಡಿಗೆ ಸಲ್ಲುತ್ತದೆ.

ಇನ್ನು ಈ ಎಲ್ಲಾ ಸುಧಾರಣೆಗಳನ್ನು ಕಿರಣ್ ಬೇಡಿ ತಾವೊಬ್ಬರೇ ಮಾಡಲಿಲ್ಲ. ಅದಕ್ಕಾಗಿ ಅವರು ವಿವಿಧ ಸರಕಾರೇತರ ಸಂಸ್ಥೆಗಳು, ಶಾಲೆಗಳು, ಸಮಾನ ಮನಸ್ಕ ನಾಗರಿಕರು ಮತ್ತು ಮಾಜೀ ಅಧಿಕಾರಿಗಳನ್ನೆಲ್ಲಾ ಸೇರಿಸಿಕೊಂಡರು. ತಾವು ಈ ಮಹಾನ್ ಕಾರ್ಯದಲ್ಲಿ ಕಾರಣಿಕರ್ತ ಶಕ್ತಿಯಾಗಿ ಮುಂಚೂಣಿಯಲ್ಲಿ ನಿಂತುಬಿಟ್ಟರು.

ಕಿರಣ್ ಬೇಡಿಯವರ ಈ ಎಲ್ಲಾ ಶ್ರಮಗಳ ಫಲ ತಿಹಾರ್ ಆವರಣದಲ್ಲಿ ನಳನಳಿಲಾರಂಭಿಸಿತು. ಖೈದಿಗಳ ನಡುವೆ ಜಗಳಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಾರಂಭಿಸಿತು. ಇಷ್ಟು ಮಾತ್ರವಲ್ಲದೇ ತಮ್ಮ ಕುಖ್ಯಾತಿ ವರ್ತನೆಗಳಿಂದಾಗಿ ಪ್ರತ್ಯೇಕ ಬ್ಯಾರಕ್ ಗಳಲ್ಲಿದ್ದ ಹಲವು ಹಾರ್ಡ್ ಕೋರ್ ಕ್ರಿಮಿನಲ್ ಗಳೂ ಸಹ ತಮ್ಮ ವರ್ತನೆಯಲ್ಲಿ ಸುಧಾರಣೆಯನ್ನು ತಂದುಕೊಂಡರು. ಮತ್ತು ಅವರಲ್ಲಿ ಹಲವರು ಧ್ಯಾನ ಶಿಬಿರಗಳಲ್ಲಿ ಮತ್ತು ಶಿಕ್ಷಣ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದಲೇ ಪಾಲ್ಗೊಳ್ಳಲಾರಂಭಿಸಿದರು.


ತಿಹಾರ್ ಜೈಲಿನ ಐಜಿಯಾಗಿ 1993 ರಿಂದ 1995ರವರೆಗಿನ ಎರಡು ವರ್ಷಗಳ ತನ್ನ ಕಾರ್ಯನಿರ್ವಹಣಾವಧಿಯಲ್ಲಿ ಕಿರಣ್ ಬೇಡಿ ಅವರು ಏಷ್ಯಾದ ಅತೀದೊಡ್ಡ ಬಂಧೀಖಾನೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದ್ದ ತಿಹಾರ್ ನ ಖೈದಿಗಳ ಬಾಳಿನಲ್ಲಿ ಹೊಸ ಚೈತನ್ಯವನ್ನೇ ರೂಪಿಸಿದರು. 3ಸಿ ಸೂತ್ರ ಅಂದರೆ ಕಲೆಕ್ಟಿವ್ (ಒಗ್ಗೂಡುವಿಕೆ), ಕರೆಕ್ಷಿವ್ (ತಿದ್ದುವಿಕೆ) ಮತ್ತು ಕಮ್ಯುನಿಟಿ (ಸುಮದಾಯಕತೆ) ಇವುಗಳ ಮೂಲಕವೇ ಖೈದಿಗಳ ಮನಪರಿವರ್ತನೆ ಸಾಧ್ಯ ಎನ್ನುವುದು ಕಿರಣ್ ಬೇಡಿ ಅವರ ಬಲವಾದ ನಂಬಿಕೆಯಾಗಿತ್ತು.

ತಿಹಾರ್ ಜೈಲಿನಲ್ಲಿ ಕಿರಣ್ ಬೇಡಿ ಅವರು ಕೈಗೊಂಡ ಸುಧಾರಣಾ ಕ್ರಮಗಳು ಅದೆಷ್ಟೋ ಖೈದಿಗಳ ಬಾಳಿನಲ್ಲಿ ಹೊಸ ಜೀವನದ ಬೆಳಕನ್ನು ಮೂಡಿಸಿದೆ ಎಂದರೆ ಖಂಡಿತಾ ತಪ್ಪಾಗಲಾರದು. ತನ್ನ ಈ ಮಾದರಿ ಕಾರ್ಯಕ್ಕಾಗಿ ಕಿರಣ್ ಬೇಡಿ ಅವರನ್ನು ತಿಹಾರ್ ಜೈಲು ಮಾತ್ರವಲ್ಲದೇ ವಿಶ್ವವೇ ಗುರುತಿಸುತ್ತಿದೆ ಮತ್ತು ಅವರಿಗೆ ರಾಮೊನ್ ಮ್ಯಾಗಸ್ಸೇ ಪ್ರಶಸ್ತಿಯೂ 1994ರಲ್ಲಿ ಲಭಿಸುತ್ತದೆ. ಮಾತ್ರವಲ್ಲದೇ 2003ರಲ್ಲಿ ವಿಶ್ವಸಂಸ್ಥೆಯ ಪ್ರಥಮ ಮಹಿಳಾ ಸೆಕ್ರೆಟರಿ ಜನರಲ್ ಆಗಿಯೂ ಕಿರಣ್ ಬೇಡಿ ಅವರು ನೇಮಕಗೊಳ್ಳುತ್ತಾರೆ.

ಒಟ್ಟಿನಲ್ಲಿ ಸಾವಿರಾರು ಖೈದಿಗಳಿಗೆ ನವಜೀವನ ರೂಪಿಸಿಕೊಳ್ಳುವ ಅವಕಾಶ ಮಾಡಿಕೊಟ್ಟ ತಿಹಾರ್ ಜೈಲು ಇವತ್ತು ಭ್ರಷ್ಟ ರಾಜಕಾರಣಿಗಳು, ವಂಚಕ ಉದ್ಯಮಿ ಕುಳಗಳು ಸಾಲು ಸಾಲಾಗಿ ಇಲ್ಲಿಗೆ ಹೋಗುತ್ತಿರುವ ಕಾರಣಕ್ಕೆ ಸುದ್ದಿಯಾಗುತ್ತಿರುವುದು ಮಾತ್ರ ವಿಚಿತ್ರವೇ ಸರಿ.

ಮಾಹಿತಿ ಸಂಗ್ರಹ ಬರಹ: ಹರಿಪ್ರಸಾದ್

Advertisement

Udayavani is now on Telegram. Click here to join our channel and stay updated with the latest news.

Next