Advertisement

ಎಲೆಕ್ಟೆಡ್‌-ಸೆಲೆಕ್ಟೆಡ್‌ ನಡುವಿದೆ ಅಂತರ

01:42 AM Jul 27, 2019 | Team Udayavani |

ಕಳೆದ ವಾರ ಅಂತಾರಾಷ್ಟ್ರೀಯ ನ್ಯಾಯಾಲಯವು ಕುಲಭೂಷಣ್‌ ಜಾಧವ್‌ ಪ್ರಕರಣದಲ್ಲಿ ತೀರ್ಪು ಕೊಟ್ಟಿತಲ್ಲ, ಆ ಇಡೀ ದಿನ ನಾನು ಟಿ.ವಿ. ಚರ್ಚೆಗಳನ್ನು ನೋಡುವುದರಲ್ಲಿ ವ್ಯಸ್ಥಳಾಗಿದ್ದೆ. ಒಂದರಿಂದ ಇನ್ನೊಂದು ಚಾನೆಲ್ ಬದಲಾಯಿಸುತ್ತಾ ಕೊನೆಗೆ ‘ಆಜ್‌ತಕ್‌’ ಚಾನೆಲ್ಗೆ ಬಂದು ತಲುಪಿದೆ. ನ್ಯೂಸ್‌ ಆ್ಯಂಕರ್‌ ರೋಹಿತ್‌ ಸರ್ದಾನಾ ಪಾಕಿಸ್ಥಾನಿ ಪತ್ರಕರ್ತೆಯೊಬ್ಬರಿಗೆ 26/11 ಮುಂಬೈ ದಾಳಿಯ ಬಗ್ಗೆ ಪ್ರಶ್ನೆ ಕೇಳಿದರು. ಆ ಪತ್ರಕರ್ತೆ, ”ಈ ಕುಕೃತ್ಯಕ್ಕೆ ಅಜ್ಮಲ್ ಕಸಬ್‌ ಕಾರಣವಾಗಿರಲಿ ಅಥವಾ ‘ಡೀಪ್‌ ಸ್ಟೇಟ್’ ಕಾರಣವಾಗಿರಲಿ…ಯಾರೇ ಕಾರಣವಾಗಿದ್ದರೂ ನಿಜಕ್ಕೂ ಖಂಡಿಸಲೇಬೇಕಾದ ಕೃತ್ಯವಿದು” ಎಂದು ಹೇಳಿದರು. (ಡೀಪ್‌ ಸ್ಟೇಟ್ ಎಂದರೆ, ದೇಶವೊಂದರಲ್ಲಿ ಮೇಲ್ನೋಟಕ್ಕೆ ಸರ್ಕಾರವೊಂದು ಇದ್ದರೂ, ನೀತಿ ನಿರೂಪಣೆ, ಭದ್ರತೆಯ ಮೇಲಿನ ಹಿಡಿತವೆಲ್ಲ ಬೇರೆ ಯಾರಧ್ದೋ ಕೈಯಲ್ಲಿರುತ್ತದೆ ಎಂದರ್ಥ. ಸರಳವಾಗಿ ಹೇಳಬೇಕೆಂದರೆ, ‘ಸರ್ಕಾರದ ಸೂತ್ರಧಾರರು’ ಎನ್ನಬಹುದು. ಪಾಕಿಸ್ಥಾನದ ವಿಷಯದಲ್ಲಿ, ಅಲ್ಲಿನ ಸೇನೆಯನ್ನು ಡೀಪ್‌ ಸ್ಟೇಟ್ ಎನ್ನಲಾಗುತ್ತದೆ).

Advertisement

ಆ ಪತ್ರಕರ್ತೆಯ ಮಾತು ಕೇಳಿದ್ದೇ ರೋಹಿತ್‌, ”ಹಾಗಿದ್ದರೆ ಪಾಕಿಸ್ತಾನದಲ್ಲಿ ಡೀಪ್‌ಸೆrೕಟ್ ಇದೆ ಎಂದು ಒಪ್ಪಿಕೊಳ್ಳುತ್ತೀರಾ?” ಎಂದು ಕೇಳಿದಾಗ ಆಕೆ ನಸುನಕ್ಕು, ”ನಾನು ಮಾತನಾಡುತ್ತಿರುವುದು ಭಾರತದಲ್ಲಿನ ಡೀಪ್‌ಸ್ಟೇಟ್ ಬಗ್ಗೆ” ಎಂದರು. ಸತ್ಯವೇನೆಂದರೆ, ಪಾಕಿಸ್ಥಾನದ ಪತ್ರಕರ್ತೆಯ ಮಾತು ಕೇಳಿ ನನಗೆ ಆಶ್ಚರ್ಯವೇನೂ ಆಗಲಿಲ್ಲ, ಏಕೆಂದರೆ ಪಾಕಿಸ್ಥಾನದ ನನ್ನ ಗೆಳೆಯರ ಬಾಯಿಂದ ಇದೇ ಮಾತನ್ನು ಅನೇಕಬಾರಿ ಕೇಳಿದ್ದೇನೆ.

ಹಾಗೆ ನೋಡಿದರೆ, ನನ್ನ ಪಾಕಿಸ್ಥಾನಿ ಗೆಳೆಯರೆಲ್ಲ ವಿದ್ಯಾವಂತರು, ಶಾಂತಿಪ್ರಿಯರು. ಭಾರತಕ್ಕೆ ಬರಲು ಅವರು ತುದಿಗಾಲಲ್ಲಿ ನಿಂತಿರುತ್ತಾರೆ, ನಮ್ಮ ದೇಶವನ್ನು ಇಷ್ಟಪಡುತ್ತಾರೆ. ಆದರೆ ಅವರ್ಯಾರೂ ಭಾರತದಲ್ಲಿ ‘ಡೀಪ್‌ಸೆrೕಟ್’ ಎನ್ನುವಂಥ ಸಂಗತಿಯೇ ಇಲ್ಲ ಎನ್ನುವುದನ್ನು ಮಾತ್ರ ನಂಬುವುದೇ ಇಲ್ಲ. ತಮಾಷೆಯ ವಿಷಯ ಏನೆಂದರೆ, ಪಾಕಿಸ್ಥಾನದಲ್ಲಿನ ಡೀಪ್‌ಸೆrೕಟ್ ಅಂದರೆ ಏನು ಎನ್ನುವುದು ಭಾರತದ ಕೆಲವು ಪರಿಣತರನ್ನು ಬಿಟ್ಟರೆ ನಮ್ಮಲ್ಲಿ ಅನೇಕರಿಗೆ ಗೊತ್ತೇ ಇಲ್ಲ.

ಅನೇಕ ಭಾರತೀಯ ಪತ್ರಕರ್ತರು ಕೆಲ ದಿನಗಳಿಂದ ಇಮ್ರಾನ್‌ ಖಾನ್‌ರ ಅಮೆರಿಕ ಪ್ರವಾಸದ ಬಗ್ಗೆ ದಂಡಿಯಾಗಿ ಬರೆದಿದ್ದಾರೆ. ಟ್ರಂಪ್‌ ಸರ್ಕಾರದೊಂದಿಗಿನ ಇಮ್ರಾನ್‌ರ ಮಾತುಕತೆ ಎಷ್ಟು ಮುಖ್ಯವಾದದ್ದು ಎನ್ನುವುದನ್ನೂ ವರ್ಣಿಸಿದ್ದಾರೆ. ಆದರೆ ನಿಜಕ್ಕೂ ಮಾತುಕತೆ ನಡೆಯುವುದು ಇಮ್ರಾನ್‌-ಟ್ರಂಪ್‌ ಸರ್ಕಾರದ ನಡುವೆ ಅಲ್ಲ, ಬದಲಾಗಿ, ಜನರಲ್ ಬಾಜ್ವಾ-ಟ್ರಂಪ್‌ ಸರ್ಕಾರದ ನಡುವೆ ಎಂದು ಸ್ಪಷ್ಟವಾಗಿ ಬರೆದವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಈ ಮಾತು ಏಕೆ ಹೇಳುತ್ತಿದ್ದೇನೆಂದರೆ, ಇಮ್ರಾನ್‌ ಖಾನ್‌ ಒಂದು ಮುಖವಾಡವಷ್ಟೇ. ಇಮ್ರಾನ್‌ ಖಾನ್‌ ಎಷ್ಟು ದುರ್ಬಲ ಪ್ರಧಾನಮಂತ್ರಿಯೆಂದರೆ, ಅವರನ್ನು ‘ಎಲೆಕ್ಟೆಡ್‌’ ಅಲ್ಲ, ‘ಸೆಲೆಕ್ಟೆಡ್‌ ಪ್ರಧಾನಮಂತ್ರಿಯೆಂದು ಕರೆಯಲಾಗುತ್ತದೆ.

ನಾನು ಕಳೆದ ಮೂವತ್ತು ವರ್ಷಗಳಿಂದ ಪಾಕಿಸ್ಥಾನವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಆದರೆ ಒಂದು ಮಾತನ್ನು ಒಪ್ಪಿಕೊಳ್ಳುತ್ತೇನೆ, ನಾನು 1988ರಲ್ಲಿ ಎನ್‌ಡಿಟಿವಿಗಾಗಿ ಬೆನಜೀರ್‌ ಭುಟ್ಟೋರ ಚುನಾವಣಾ ರ್ಯಾಲಿಯನ್ನು ಕವರ್‌ ಮಾಡಲು ಪಾಕಿಸ್ಥಾನಕ್ಕೆ ಹೋಗಿದ್ದಾಗ, ‘ಡೀಪ್‌ಸ್ಟೇಟ್’ ಅಂದರೇನು? ಅದರ ತಾಕತ್ತು ಎಂಥದ್ದು?’ ಎನ್ನುವುದು ನನಗೂ ಗೊತ್ತಿರಲಿಲ್ಲ. ಬೆನಜೀರ್‌ ಭುಟ್ಟೋಗೆ ವಿಪರೀತ ಜನಪ್ರಿಯತೆ ಸಿಕ್ಕಿತ್ತು, ಜನಬೆಂಬಲವೆಲ್ಲ ಆಕೆಯ ಪರವಾಗಿಯೇ ಇತ್ತು. ಆದರೆ ಇಷ್ಟೆಲ್ಲಾ ಇದ್ದರೂ, ಚುನಾವಣೆಯಲ್ಲಿ ಆಕೆಗೆ ಪೂರ್ಣ ಬಹುಮತ ಸಿಗಲಿಲ್ಲ. ಆಗ ನನಗೆ ತುಂಬಾ ತಲೆಕೆಡಿಸಿಕೊಂಡ ಮೇಲೆ ಅರ್ಥವಾಗಿದ್ದು- ಪಾಕಿಸ್ಥಾನದ ನಿಜವಾದ ಚುಕ್ಕಾಣಿಯಿರುವುದು ಬೇರೆಯದ್ದೇ ಶಕ್ತಿಗಳ ಕೈಯಲ್ಲಿ ಎನ್ನುವುದು. ಪಾಕಿಸ್ಥಾನವನ್ನು ಮುನ್ನಡೆಸುವುದೂ ಇವರೆ, ಆ ದೇಶದ ವಿದೇಶಾಂಗ ಮತ್ತು ಸುರಕ್ಷಾ ನೀತಿಗಳ ಮೇಲೆ ಹಿಡಿತವಿರುವುದೂ ಈ ಶಕ್ತಿಗಳಿಗೇ. ಇವರಿಂದಾಗಿಯೇ ಲಷ್ಕರ್‌-ಎ-ತಯ್ಯಬಾದಂಥ ಜಿಹಾದಿ ಸಂಘಟನೆಗಳು ಮತ್ತು ಹಾಫಿಜ್‌ ಸಯೀದ್‌ನಂಥ ಆತಂಕವಾದಿಗಳ ಸೃಷ್ಟಿಯಾಗಿದೆ. ಪಾಕಿಸ್ಥಾನದ ಡೀಪ್‌ಸ್ಟೇಟ್‌ನ ಅನುಮತಿಯಿಲ್ಲದೇ ಅಜ್ಮಲ್ ಕಸಬ್‌ ಮತ್ತು ಅವನ ತಂಡಕ್ಕೆ ಮುಂಬೈನಲ್ಲಿ ಕಾಲಿಡಲೂ ಸಾಧ್ಯವಿರಲಿಲ್ಲ.

Advertisement

ಸಮಸ್ಯೆಯೇನೆಂದರೆ, ಇಂದು ಭಾರತ ಮತ್ತು ಪಾಕಿಸ್ಥಾನದ ನಡುವೆ ಮಾತುಕತೆ ನಡೆಸಲು ಪದಗಳೇ ಉಳಿದಿಲ್ಲ. 26/11 ದಾಳಿಗೆ ಪಾಕಿಸ್ಥಾನದ ಡೀಪ್‌ಸ್ಟೇಟ್ ಕಾರಣ ಎನ್ನುವುದನ್ನು ಈಗಲೂ ಪಾಕಿಸ್ಥಾನಿಯರಿಗೆ ಅರ್ಥಮಾಡಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಅಮೆರಿಕದ ಜೈಲಿನಿಂದ ಡೇವಿಡ್‌ ಹೆಡ್ಲಿ ಕೊಟ್ಟಿರುವ ಹೇಳಿಕೆಯೇ ಸಾಕು, ಆರೋಪ ರುಜುವಾತಾಗುವುದಕ್ಕೆ.

ಆದರೆ, ಇದು ಪಾಕಿಸ್ಥಾನಕ್ಕೆ, ಅಲ್ಲಿನ ಪತ್ರಕರ್ತರಿಗೆ, ಜನರಿಗೆ ಸಾಕಾಗುವುದಿಲ್ಲ. ಏಕೆಂದರೆ, ಆ ದೇಶ ಬೇರೆ ಯಾವುದೋ ಲೋಕದಲ್ಲಿ ಬದುಕುತ್ತಿದೆ. ಕುಲಭೂಷಣ್‌ ಜಾಧವ್‌ ಕುರಿತ ಅಂತಾರಾಷ್ಟ್ರೀಯ ತೀರ್ಪು ತನ್ನ ಪರವಾಗಿಯೇ ಇದೆ ಎಂದು ಪಾಕಿಸ್ಥಾನ ಭಾವಿಸುತ್ತಿರುವುದೂ ಇದೇ ಕಾರಣಕ್ಕೆ. ಇಮ್ರಾನ್‌ ಖಾನ್‌ ಅವರು ಟ್ವೀಟ್ ಮಾಡಿ, ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದರು. ನ್ಯಾಯಾಲಯ ಜಾಧವ್‌ರನ್ನು ಬಿಡುಗಡೆಗೊಳಿಸಲು ಆದೇಶಿಸಿಲ್ಲ ಎನ್ನುವ ಆಧಾರದ ಮೇಲೆ ಅವರು ಹಾಗೆ ಟ್ವೀಟ್ ಮಾಡಿದ್ದರು.

ಗಡಿಯ ಈ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಟ್ವೀಟ್ ಮಾಡಿ, ತೀರ್ಪು ಭಾರತದ ಪರ ಬಂದಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದರು. ಏಕೆಂದರೆ, ಜಾಧವ್‌ಗೆ ನೀಡಲಾಗಿದ್ದ ಮರಣದಂಡನೆಗೆ ತಡೆ ಬಿದ್ದಿದೆ, ಅವರನ್ನು ಭೇಟಿಯಾಗುವ ಅಧಿಕಾರ ನಮ್ಮ ರಾಜತಾಂತ್ರಿಕರಿಗೆ ಸಿಕ್ಕಿದೆ.

ಇಮ್ರಾನ್‌ ಟ್ವೀಟ್ಗಿಂತ ಮೋದಿಯವರ ಟ್ವೀಟು ಏಕೆ ಮಹತ್ವ ಪಡೆಯುತ್ತದೆ. ಏಕೆಂದರೆ ಮೋದಿ ಅಸಲಿ ಪ್ರಧಾನಮಂತ್ರಿ, ಇಮ್ರಾನ್‌ ಪಾಕಿಸ್ಥಾನದ ಡೀಪ್‌ಸ್ಟೇಟ್‌ನ ಕೈಗೊಂಬೆಯಷ್ಟೆ.

ಭಾರತದ ಸಮಸ್ಯೆಯೇನೆಂದರೆ, ಕಾಂಗ್ರೆಸ್‌ ಪಕ್ಷದ ಕೆಲವು ನಾಯಕರು ಆರ್‌ಎಸ್‌ಎಸ್‌ ಪಾತ್ರವನ್ನು ಎಷ್ಟೊಂದು ದೊಡ್ಡದು ಮಾಡಿ ಬಿಂಬಿಸುತ್ತಾ ಬರುತ್ತಿದ್ದಾರೆಂದರೆ, ನನ್ನ ಪಾಕಿಸ್ಥಾನಿ ಮಿತ್ರರೆಲ್ಲ ಆರ್‌ಎಸ್‌ಎಸ್‌ ಸಂಘಟನೆ ಭಾರತದ ಡೀಪ್‌ಸ್ಟೇಟ್ ಆಗಿ ಬದಲಾಗಿದೆ ಎಂದೇ ಭಾವಿಸುತ್ತಾರೆ. ಕೆಲವು ಕಾಂಗ್ರೆಸ್‌ ನಾಯಕರು 26/11 ಮುಂಬೈ ಉಗ್ರ ದಾಳಿಯ ಹಿಂದೆ ಆರ್‌ಎಸ್‌ಎಸ್‌ ಕೈವಾಡವಿದೆ ಎಂದು ಹೇಳಿದಾಗಲೂ ಹೀಗೆಯೇ ಆಗಿತ್ತು.

ಚುನಾವಣೆಯ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಬಿಜೆಪಿಗೆ ಸಹಾಯ ಮಾಡುತ್ತದೆ ಎನ್ನುವುದು ನಮಗೆ ತಿಳಿದಿದೆ. ಆದರೆ ನರೇಂದ್ರ ಮೋದಿ ಈ ಬಾರಿ ಮತ್ತು ಹಿಂದಿನ ಬಾರಿ ಗೆದ್ದದ್ದು ತಮ್ಮ ಸ್ವಂತ ಬಲದ ಮೇಲೆಯೇ. ಮೋದಿ ಇರಲಿಲ್ಲ ಎಂದರೆ ನಿಸ್ಸಂಶಯವಾಗಿಯೂ ಬಿಜೆಪಿಗೆ 300ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸಿಕೊಡಲು ಸಂಘಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಆದಾಗ್ಯೂ, ಸಂಘದ ಕೆಲವು ಹಿರಿಯ ನಾಯಕರು ಆಡಳಿತದಲ್ಲಿ, ಕೆಲವು ನೀತಿಗಳ ವಿಚಾರದಲ್ಲಿ ಸ್ವಲ್ಪ ಮಟ್ಟದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎನ್ನುವುದೇನೋ ನಿಜ. ಆದರೆ, ವಿದೇಶಾಂಗ ಅಥವಾ ಸುರಕ್ಷಾ ನೀತಿಯಂಥ ಕ್ಷೇತ್ರಗಳಲ್ಲಿ ಸಂಘದ ಹಸ್ತಕ್ಷೇಪದ ಪ್ರಶ್ನೆಯೇ ಉದ್ಭವವಾಗುವುದಿಲ್ಲ.

ಭಾರತದಲ್ಲಿ ಡೀಪ್‌ಸ್ಟೇಟ್ ಅನ್ನು ಹುಡುಕುವವರು ತಮ್ಮ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರಷ್ಟೆ. ಪಾಕಿಸ್ಥಾನಕ್ಕೆ ಹೇಗೆ ಅರ್ಥಮಾಡಿಸುವುದು – ಪ್ರಧಾನಿಯಾದ ನಂತರ ಮೋದಿಯವರು ಸ್ನೇಹದ ಹಸ್ತ ಚಾಚಿದರೆ, ಪಾಕ್‌ನ ಡೀಪ್‌ಸ್ಟೇಟ್ ನಮ್ಮತ್ತ ಜಿಹಾದಿಗಳನ್ನು ಕಳಿಸಿತೆಂದು. ನವಾಜ್‌ ಷರೀಫ್ ರಾಜಕೀಯ ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಂತೆಯೇ, ಅವರನ್ನು ರಾಜನೀತಿಯಿಂದಲೇ ಕೆಳಕ್ಕುರುಳಿಸಲಾಯಿತು ಎಂದು?

ಅಟಲ್ ಬಿಹಾರಿ ವಾಜಪೇಯಿಯವರು ಸ್ನೇಹ ಹಸ್ತ ಚಾಚಿದಾಗ, ಪಾಕಿಸ್ಥಾನದ ಡೀಪ್‌ ಸ್ಟೇಟ್ ನಮಗೆ ಕೊಟ್ಟದ್ದು ಕಾರ್ಗಿಲ್ ಯುದ್ಧವನ್ನು. ಪಾಕಿಸ್ಥಾನದೊಂದಿಗೆ ಶಾಂತಿ ಸ್ಥಾಪಿಸಬಹುದು ಎಂದು ಭಾವಿಸಿದರೆ, ನಮ್ಮ ಸಮಯ ವ್ಯರ್ಥವಾಗುತ್ತದಷ್ಟೆ!

(ಲೇಖನ ಕೃಪೆ: ಜನಸತ್ತಾ)

ತವ್ಲೀನ್‌ ಸಿಂಗ್‌, ಹಿರಿಯ ಪತ್ರಕರ್ತೆ

Advertisement

Udayavani is now on Telegram. Click here to join our channel and stay updated with the latest news.

Next