ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರ ಹಾಗೂ 198 ವಾರ್ಡ್ ಗಳಲ್ಲಿ ಹದಿನೈದು ದಿನಗಳಲ್ಲಿ ಬೂತ್ ಕಮಿಟಿ ರಚಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ನಗರ ಘಟಕಕ್ಕೆ ಸೂಚಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಬಿಬಿಎಂಪಿ ವ್ಯಾಪ್ತಿಯ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಬೂತ್ ಗಳಲ್ಲಿ ಹದಿನೈದು ದಿನಗಳಲ್ಲಿ ಸಮಿತಿ ರಚನೆಯಾಗಬೇಕು. ಆ ನಂತರ ವಿಧಾನಸಭೆ ಕ್ಷೇತ್ರಾವಾರು ಸಮಾವೇಶ ನಡೆಸಬೇಕು ಎಂದು ಹೇಳಿದರು. 28 ವಿಧಾನಸಭೆ ಕ್ಷೇತ್ರಗಳ ಪೈಕಿ ಕನಿಷ್ಠ ಹತ್ತು ಕ್ಷೇತ್ರ ಗೆಲ್ಲುವ ಅವಕಾಶ ಜೆಡಿಎಸ್ಗಿದೆ.
ಇದಕ್ಕೆ ಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
28 ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಕಚೇರಿ ತೆರೆಯುವುದು ಕಡ್ಡಾಯ. ನಂತರ ಪ್ರತಿ ವಾರ್ಡ್ನಲ್ಲೂ ಮನೆ ಮನೆಗೆ ಜೆಡಿಎಸ್ ಅಭಿಯಾನ ಹಮ್ಮಿಕೊಂಡು, ಪಕ್ಷದ ಸಾಧನೆ ಮತ್ತು ಕಾರ್ಯಕ್ರಮಗಳನ್ನು ಮತದಾರರಿಗೆ ತಲುಪಿಸಬೇಕು ಎಂದು ತಿಳಿಸಿದರು. ಪ್ರಮುಖವಾಗಿ ಸಂಚಾರ ದಟ್ಟಣೆ, ಕಸ ವಿಲೇವಾರಿ, ಮೂಲಸೌಕರ್ಯ ಕೊರತೆ ವಿಚಾರಗಳನ್ನು ಪಟ್ಟಿ ಮಾಡಿ ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿ ತ ವೈಫಲ್ಯಗಳ ಸಮೇತ ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಕುಮಾರಸ್ವಾಮಿ ನಿರ್ಧಾರವೇ ಅಂತಿಮ: ಬಿಬಿಎಂಪಿಯಲ್ಲಿ ಮೈತ್ರಿ ಸಂಬಂಧ ಗೃಹ ಸಚಿವ ರಾಮಲಿಂಗಾರೆಡ್ಡಿ ಮನೆಗೆ ಬಂದು ಮಾತನಾಡಿದ್ದಾರೆ. ಆದರೆ, ನಾನು ಕುಮಾರ ಸ್ವಾಮಿ ಜತೆ ಮಾತನಾಡಲು ಸೂಚಿಸಿರುವೆ. ಮೈತ್ರಿ ವಿಚಾರದಲ್ಲಿ ಅವರದೇ ಅಂತಿಮ ತೀರ್ಮಾನ ಎಂದು ಸ್ಪಷ್ಟಪಡಿಸಿದರು.