ಗಂಗಾವತಿ: ತಾಲೂಕಿನ ಆನೆಗುಂದಿ ಭಾಗದಲ್ಲಿರುವ ವಿಜಯನಗರ ಪುರಾತನ ಕಾಲುವೆಗಳ ಶಾಶ್ವತ ದುರಸ್ಥಿ ಕಾಮಗಾರಿ ಹನುಮನಹಳ್ಳಿ ಹಿರೇ ಉದ್ದಿ ಹತ್ತಿರ ನಡೆಯುತ್ತಿದ್ದು ಸೂಕ್ತ ಪರವಾನಿಗೆ ಇಲ್ಲ.ರಿಸರ್ವ್ ಫಾರೆಸ್ಟ್ ನಲ್ಲಿದ್ದ ಕಾಮಗಾರಿ ನಡೆಸಿದಂತೆ ಅರಣ್ಯ ಇಲಾಖೆಯ ಎಸಿಎಫ್ ಸೂಚನೆ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಯವರು ಕಾಲುವೆ ದುರಸ್ಥಿ ಕಾರ್ಯ ನಡೆಸದಂತೆ ತಡೆಯೊಡ್ಡಿದ್ದನ್ನು ಖಂಡಿಸಿ ಆನೆಗೊಂದಿ ಭಾಗದ ರೈತರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಷಿಯಾ ಅಭಿವೃದ್ಧಿ ಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ವಿಜಯನಗರ ಕಾಲುವೆಗಳ ದುರಸ್ಥಿ ಕಾಮಗಾರಿ ಕಳೆದ ಒಂದುವರೆ ವರ್ಷದಿಂದ ನಡೆಯುತ್ತಿದೆ.ಈಗಾಗಲೇ ಗಂಗಾವತಿ ಕೆಳ ಮತ್ತು ಮೇಲ್ಭಾಗದಲ್ಲಿರುವ ವಿಜಯನಗರ ಕಾಲುವೆಗಳ ದುರಸ್ಥಿಕಾರ್ಯ ಮುಗಿದಿದ್ದು ಸಾಣಾಪೂರದಿಂದ ಸಂಗಾಪೂರ ವರೆಗಿನ ವಿಜಯನಗರ ಕಾಲುವೆ ದುರಸ್ಥಿ ಕಾರ್ಯಕ್ಕೆ ಅರಣ್ಯ ಇಲಾಖೆಯವರು ಪದೇ ಪದೇ ಆಕ್ಷೇಪಣೆ ಮಾಡುವ ಮೂಲಕ ಕಾಮಗಾರಿ ಪೂರ್ಣಗೊಳ್ಳಲು ಬಿಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸದ್ಯ ಹನುಮನಹಳ್ಳಿ ಹಿರೆ ಉದ್ದಿಯ ಹತ್ತಿರ ಕಾಮಗಾರಿ ನಡೆಯುತ್ತಿದೆ. ಮಂಗಳವಾರ ಕಾಮಗಾರಿ ಸ್ಥಳಕ್ಕೆ ಅರಣ್ಯ ಇಲಾಖೆಯ ಎಸಿಎಫ್ ಮಾರ್ಕಂಡೇಯ ಭೇಟಿ ನೀಡಿ ರಿಸರ್ವ್ ಫಾರೆಸ್ಟ್ ನಲ್ಲಿ ಕಾಮಗಾರಿ ಮಾಡಬಾರದು. ಇಲ್ಲಿ ಗಿಡ,ಮರಗಳು,ಕಲ್ಲು ಮತ್ತು ಮಣ್ಣು ಕಾಮಗಾರಿ ಪರಿಣಾಮ ನಾಶವಾಗುತ್ತಿದೆ. ಕಾಮಗಾರಿ ನಿಲ್ಲಿಸುವಂತೆ ಸೂಚನೆ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಸ್ಥಗಿತ ಮಾಹಿತಿ ಹಿನ್ನೆಲೆಯಲ್ಲಿ ಆನೆಗೊಂದಿ ರೈತರ ಸಂಘದ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಗಿತದಿಂದ ಮುಂದೆ ಭತ್ತ ನಾಟಿ ಕಾರ್ಯಕ್ಕೆ ವಿಳಂಬವಾಗಲಿದೆ.
ಸುಮಾರು 500 ಕೋಟಿ ಸರಕಾರ ಟೆಂಡರ್ ಕರೆದು ಕಾಮಗಾರಿ ನಡೆಸುತ್ತಿದ್ದು ಇನ್ನೂ ಶೇ.20 ರಷ್ಟು ಕಾಮಗಾರಿ ಬಾಕಿ ಇರುವಾಗ ಪರವಾನಿಗೆ ಇಲ್ಲ ಎಂದು ಕಾಮಗಾರಿ ಸ್ಥಗಿತಗೊಳಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಜಲಸಂಪನ್ಮೂಲ ಇಲಾಖೆಯವರು ಅರಣ್ಯ ಇಲಾಖೆಯ ತಗಾದೆ ಕುರಿತು ಸರಕಾರದ ಗಮನಕ್ಕೆ ತಂದು ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತಸಂಘದ ಸುದರ್ಶನ ವರ್ಮಾ,ರಾಮಕೃಷ್ಣ ಇಲ್ಲೂರು,ಮಹೆಬೂಬ ಹುಸೇನ್, ಶರೀಫ್ ಪಟುವಾರಿ, ಹರಿಹರ ದೇವರಾಯಲು ಇದ್ದರು.
ವಿಜಯನಗರ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ರಿಸರ್ವ್ ಫಾರೆಸ್ಟ್ ಇದ್ದು ಅಮೂಲ್ಯ ಗಿಡ,ಮರ,ಮಣ್ಣು ನಾಶ ಮಾಡಲಾಗಿದೆ ಮತ್ತು ಅರಣ್ಯ ಇಲಾಖೆಯ ಪರವಾನಿಗೆ ಪಡೆದಿಲ್ಲ.ಆದ್ದರಿಂದ ಕಾಲುವೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ. ಈ ಕುರಿತು ಅರಣ್ಯ ಇಲಾಖೆಯ ಕಚೇರಿಗೆ ಬಂದರೆ ಕಾಮಗಾರಿಯ ಸ್ಥಗಿತಕ್ಕೆ ಕಾರಣಗಳ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುತ್ತದೆ.
-ಮಾರ್ಕಂಡೇಯ ಎಸಿಎಫ್
ಈಗಾಗಲೇ ಎಲ್ಲಾ ಪರವಾನಿಗೆ ಸಿಕ್ಕ ನಂತರವೇ ಕಾಮಗಾರಿ ಟೆಂಡರ್ ಕರೆದು ಮುಕ್ಕಾಲು ಭಾಗ ಕಾಮಗಾರಿ ಪೂರ್ಣವಾಗಿದೆ.ರೈತರು ಬೇಸಿಗೆ ಬೆಳೆ ಬೆಳೆಯದೇ ಕಾಲುವೆ ದುರಸ್ಥಿಗೆ ಅವಕಾಶ ನೀಡಿದ್ದಾರೆ. ಇದೀಗ ಏಕಾಏಕಿ ಅರಣ್ಯ ಇಲಾಖೆಯವರು ಪರವಾನಿಗೆ ಇಲ್ಲ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ ಇದನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ.
-ಅಮರೇಶ ಜೆಇ ಜಲಸಂಪನ್ಮೂಲ ಇಲಾಖೆ