Advertisement

ಕೊಳಲು ಮಾಂತ್ರಿಕ ಸೋದರರ ಉಚ್ಛ್ರಾಯ ಕಛೇರಿ

10:13 AM Oct 17, 2019 | mahesh |

ಆರನೆಯ ರಂಜನಿ ಸಂಸ್ಮರಣ ವರ್ಷಾಚರಣೆಯ ಐದನೇ ದಿನದ ಪ್ರಧಾನ ಕಛೇರಿಯನ್ನು ಹೇಮಂತ-ಹೇರಂಭ ಸಹೋದರರು ನಡೆಸಿಕೊಟ್ಟರು. ಅವರಿಗೆ ವಯಲಿನ್‌ನಲ್ಲಿ ಮತ್ತೂರು ಶ್ರೀನಿಧಿ, ಮೃದಂಗದಲ್ಲಿ ನಿಕ್ಷಿತ್‌ ಟಿ. ಮತ್ತು ಘಟಂನಲ್ಲಿ ಶರತ್‌ ಕೌಶಿಕ್‌ ಸಹಕರಿಸಿದರು.

Advertisement

ಈ ಸಹೋದರರ ತುತ್ತುಕಾರಗಳು ಕೊಳಲಿನ ಬಿದಿರಿನ ಮೇಲೆ ತುಟಿಗಳುಜ್ಜುವ ಸದ್ದು ಮಾಡುವುದಿಲ್ಲ. ಹೊರ ಬರುವುದು ನಾದ ಮಾತ್ರ. ಮೂಗಿನ ಉಸಿರೂ ಹೊರಬಾರದು. ಖಮಾಚ್‌, ರಂಜನಿ, ಮನೋರಂಜನಿಗಳಲ್ಲೆಲ್ಲಾ ಗಾಯಕೀ ಅಂಶಗಳು, ತಂತ್ರಗಾರಿಕೆಯ ಉತ್ತಮ ಸ್ವರೂಪಗಳು, ಅದ್ಭುತ ಎಂದೆನಿಸುವ ಮನೋಧರ್ಮ, ಪ್ರತಿಬಾರಿಯೂ ಮುಂದೇನು ಎನ್ನುವ ಕುತೂಹಲವನ್ನು ಹುಟ್ಟಿಸುವ ಕಲ್ಪನಾ ಸ್ವರವಿನ್ಯಾಸ ಈ ಈರ್ವರ ವಿಲಾಸ. ಕಾಂಬೋಧಿಯ ರಾಗರೂಪಕ್ಕೆ ಹೇಮಂತ-ಹೇರಂಭ ಅವರು ಹೊಸ ಹೊಸ ವರಸೆಗಳನ್ನು ನೀಡುತ್ತಾ “ಓ ರಂಗಶಾಯಿ’ಯನ್ನು ಹೊಸೆದರು. ಚಿಕ್ಕ ಗಾತ್ರದ, ಮಧ್ಯಗಾತ್ರದ ಮತ್ತು ಮಾರು ಗಾತ್ರದ ಬಾನ್ಸುರಿ ಕೊಳಲಿನಲ್ಲಿ ಇವರೀರ್ವರ ಕಾಂಬೋಧಿಯು ಲಾಲಿತ್ಯಪೂರ್ಣವಾಗಿ ಸರಸವಾಡಿತು,ಪ್ರೌಢತೆ ಯಿಂದ ಮೆರೆಯಿತು. ಪರಸ್ಪರ ಹೊಂದಾಣಿಕೆಯಿಂದ ಅಪ್ಯಾಯಮಾನವಾಗಿ ಬೆಳಗಿತು.ಒಂದೊಮ್ಮೆ ಇಬ್ಬರು ಸೋದರರು ಪಾಶ್ಚಾತ್ಯ ಮಾದರಿಯ ಕಾರ್ಡ್‌ ಸ್ವರಗಳನ್ನು ಬಳಸಿಕೊಂಡು ಒಂದಿಷ್ಟೂ ಚ್ಯುತಿ ಇಲ್ಲದೆ ಪರಿಪೂರ್ಣ ಹೊಂದಾಣಿಕೆಯೊಂದಿಗೆ ಉಸಿರು ಬಿಗಿಹಿಡಿದಂತೆ ನೀಡಿದ ಕಾಂಬೋಧಿಯನ್ನು ಯಾರೂ ಮರೆಯುವಂತಿಲ್ಲ. ವ್ಯಾಕರಣ ಶುದ್ಧತೆ, ರಾಗರೂಪದ ಸುಂದರತೆ, ಭಾವೋತ್ಕಟತೆಯನ್ನು ಮೇಳೈಸಿಕೊಂಡು ಪ್ರೌಢತೆಯನ್ನು ಪ್ರದರ್ಶಿಸುತ್ತಾ, ಚಮತ್ಕಾರಗಳ ಸರ್ಕಸ್ಸುಗಳಿಲ್ಲದೆ ಸಾಮಾನ್ಯ ಶ್ರೋತೃಗೂ ಸಂಗೀತವನ್ನು ತಲುಪಿಸಬಲ್ಲ ಅಸಾಮಾನ್ಯ ಬಲ ಈ ಸೋದರರಲ್ಲಿದೆ.

ಅತ್ಯಂತ ಸುಶ್ರಾವ್ಯವಾಗಿ ಮೂಡುತ್ತಿರುವ ಈ ಶ್ರಾವ್ಯ ಕಛೇರಿ, ಮುಂದೆ, ಅಚ್ಚರಿ ಮೂಡಿಸಬಲ್ಲ ಸರ್ಕಸ್‌ ಚಮತ್ಕಾರಗಳ ದೃಶ್ಯ ಕಛೇರಿಯಾಗದಂತೆ ನೋಡಿಕೊಳ್ಳುವ ಎಚ್ಚರವನ್ನು ಕಲಾವಿದರು ಕಾಯ್ದುಕೊಳ್ಳಬೇಕು.

ವಯಲಿನ್‌ ಸಹಕಾರದಲ್ಲಿ ಹೇಮಂತ-ಹೇರಂಭರ ಪಡಿಯಚ್ಚೇ ಅನುರಣಿಸಿದೆ. ಅವರ ಹೆಜ್ಜೆಹೆಜ್ಜೆಗೂ ಇವರದು ಸಹ ಹೆಜ್ಜೆ. ನಿಕ್ಷಿತ್‌ ಅವರ ಎಚ್ಚರದ ನಡೆ ನುಡಿಕಾರಗಳು ಸೋದರರಿಬ್ಬರ ವರಸೆಗಳಿಗೆ ಹೇಳಿಮಾಡಿಸಿದಂತಿತ್ತು.ಸಂಗತಿ ಸಂಗತಿಗಳಿಗೆ ನಿಕ್ಷಿತ್‌ ನೀಡುವ ಅನುಸರಣೆ ಉಳಿದವರಿಗೆ ಮಾದರಿ. ತನಿ ಆವರ್ತನ ಅತ್ಯಂತ ಪ್ರೌಢ. ಶರತ್‌ ಕೌಶಿಕರದು ಹಿತಮಿತ ಸಹಕಾರ.

– ಗಾನಮೂರ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next