Advertisement

ಜಲಪ್ರಳಯ : ಮತ್ತೆ ಬದುಕು ಹೇಗೆ?

12:36 AM Aug 27, 2019 | mahesh |

ಎರಡು ವರ್ಷಗಳಿಂದ ಕರ್ನಾಟಕದಲ್ಲಾಗುತ್ತಿರುವ ಅತಿವೃಷ್ಟಿಗೆ ಅತ್ಯಂತ ಹೆಚ್ಚು ಹಾನಿಗೊಳಗಾದವರು ಕೃಷಿಕರು. ಇವರು ಈ ಭೂಮಿಯ ಮೂಲ ನಿವಾಸಿಗಳು. ಪರಿಪೂರ್ಣ ನೆಲದವರು. ಪ್ರಕೃತಿಯನ್ನು ಹೆಚ್ಚು ಬಡಿದು ಬಗ್ಗಿಸದೆ ಬಗೆಯದೆ ಮೇಲ್ಮಣ್ಣಿಗೆ ಬಿತ್ತಿ ಬೆಳೆದು ಬದುಕುವವರು. ಇಂಥವರನ್ನು ಪ್ರಕೃತಿ ಇತರ ಜೀವಿಗಳಂತೆಯೇ ಕಾಣುತ್ತದೆ. ಭೂಮಿಯೊಂದಿಗೆ ನೂರಾರು ನಂಬಿಕೆ ಆಚರಣೆಯ ಸಂಬಂಧದೊಂದಿಗೆ ಇವರು ಸದಾ ಬೆಸೆದು ಕೊಂಡಿರುತ್ತಾರೆ. ಇವರದ್ದೇ ಪರಿಸರದಲ್ಲಿ ಬೆಳೆಯುವ ಪ್ರಾಣಿ – ಸಸ್ಯಾಧಾರಿತ ಗೊಬ್ಬರ ಬಳಸಿ ಬದುಕುವ ; ಪ್ರಾದೇಶಿಕ ದೇಸಿ ಕೌಶಲ್ಯ ತಂತ್ರಾಧಾರಿತ ಅನುಭವದೊಂದಿಗೆ ಇಂಥವರು ಅನ್ನದ ದಾರಿಯನ್ನು ಕಂಡುಕೊಂಡಿದ್ದಾರೆ. ಇಂಥವರ ಸಾಗುವಳಿ ಎಂದಿಗೂ ನಕಾಶೆ, ಭೂಪಟವನ್ನು ಆಧರಿಸಿ ಇರುವುದಿಲ್ಲ. ಮಳೆ, ಬಿಸಿಲು, ಗಾಳಿ, ನೀರು ಇವೆಲ್ಲಾ ಹೇಗೆ ಭೂಪಟ ನೋಡಿ ಚಲಿಸುವುದಿಲ್ಲವೋ ಹಾಗೆಯೇ ರೈತರು ಇವೆಲ್ಲದರ ಲಭ್ಯತೆಯ ದಾರಿಯಲ್ಲೇ ಬದುಕು ಕಂಡುಕೊಂಡಿದ್ದಾರೆ. ಮಳೆ, ಅಂತರ್ಜಲ, ಸಾರ ಇವು ಆ ಪ್ರದೇಶದ ಜನರಲ್ಲಿ ಉತ್ಪಾದನಾ ಕೌಶಲ್ಯ, ತಂತ್ರ ಸಾಧನಗಳನ್ನು ರೂಪಿಸುತ್ತವೆ. ಈ ಕಾರಣಕ್ಕಾಗಿಯೇ ಬೆಳೆ ಮತ್ತು ಕೃಷಿ ಕ್ರಮಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ.

Advertisement

ಕರಾವಳಿ, ಮಲೆನಾಡು, ಬಯಲುಸೀಮೆ ಯಾವ ಊರೇ ಇರಲಿ ಕೃಷಿಕರ ಜೀವನ ವಿನ್ಯಾಸ ಜಲಮೂಲಕ್ಕೆ ನೇರವಾಗಿ ಬೆಸೆದುಕೊಂಡಿರುತ್ತದೆ. ಈ ಜಗತ್ತಿನ ಯಾವುದೇ ನಾಗರಿಕತೆ ನದಿ, ಹೊಳೆ ರಹಿತವಾಗಿಲ್ಲ. ಕಾಡುವಾಸಿ ಮನುಷ್ಯ ಬೆಟ್ಟಗುಡ್ಡ ಇಳಿದು ನೀರಿನ ಹತ್ತಿರ ಬಂದುದು ಇತಿಹಾಸ. ವಿಜ್ಞಾನ, ತಾಂತ್ರಿಕತೆ ನೀರನ್ನು ಸಾವಿರಾರು ಅಡಿ ಆಳದಿಂದ ಸಾವಿರಾರು ಅಡಿ ಎತ್ತರಕ್ಕೆ ಏರಿಸಿದ್ದು ತೀರಾ ಇತ್ತೀಚೆಗೆ. ಅಲ್ಲಿಯವರೆಗೆ ನೀರು ಮತ್ತು ಮೆಕ್ಕಲು ಮಣ್ಣಿಗೆ ಅಂಟಿಕೊಂಡೇ ಪ್ರಾಚೀನ ಮಾನವ ನದಿ ಬದಿಯಲ್ಲೇ ಇದ್ದ.

ಮಲೆನಾಡು ಅಥವಾ ಕರಾವಳಿಯ ಬಹುಪಾಲು ಊರು, ಕೃಷಿ ಆವಾರಗಳು ಏರಿಳಿಯುವ ಕಾಡುಗುಡ್ಡಗಳ ಸಂದುಗೊಂದಲಗಳಲ್ಲಿ ಬೆಳೆದಿವೆ. ಹೊಳೆ ನದಿಗಳ ಇಕ್ಕೆಡೆಗಳಲ್ಲಿ ಹದವಾಗಿ ಹರವಿ ಭಾಗಶಃ ಹಸಿರು ಸವರಿ ಊರು ಮನೆಗದ್ದೆ ತೋಟಗಳು ಸೃಷ್ಟಿಯಾಗಿವೆ. ಬಯಲು ಸೀಮೆಗಳಿಗೂ ಮಲೆನಾಡಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಘಟ್ಟದ ಮೇಲೆ ರೈತರ ಮನೆಗಳು ಒಂದೇ ಕಡೆ ಅಂಟಿಕೊಂಡಂತೆ ಇದ್ದು, ಅವರ ಹೊಲ ಗದ್ದೆ ತೋಟಗಳು ಮೈಲು ದೂರದಲ್ಲಿರುತ್ತವೆ. ಈ ವ್ಯತ್ಯಾಸಕ್ಕೆ ಭಿನ್ನ ಕಾರಣಗಳಿರಬಹುದು. ಕಾಡು, ಅದರಲ್ಲಿರುವ ಕ್ರೂರ ಮೃಗಗಳು, ಸಂಪರ್ಕ ವ್ಯವಸ್ಥೆ, ಕೃಷಿ ವಿಸ್ತರಣೆ ಹೀಗೆ ಬೇರೆ ಬೇರೆ ಕಾರಣಗಳಿಗೆ ಮಲೆನಾಡು, ಕರಾವಳಿಯ ರೈತರಲ್ಲಿ ಇಂಥ ಹಸಿರು ಸಾಮಿಪ್ಯಇದೆ. ಕಾಡಿನ ನಡುವೆಯೇ ಕೃಷಿ ಅರಳಿಕೊಂಡದ್ದಕ್ಕೆ ಅದೇ ಕಾಡಿನಿಂದ ಬಳಸಬಹುದಾದ ಸೊಪ್ಪು, ಕಟ್ಟಿಗೆ, ಮರಮಟ್ಟುಗಳು, ಬಿದಿರು ಬೆತ್ತಗಳು ಕಾರಣವಾಗಿರಲೂಬಹುದು.

ಪಶ್ಚಿಮ ಘಟ್ಟ ಹೊರತಾಗಿ ಮಲೆನಾಡು, ಕರಾವಳಿಯ ನೆಲದವರ ಬದುಕನ್ನು ವಿವರಿಸಲಾಗದು. ದಟ್ಟ ಕಾಡೊಳಗಡೆ ಊರು ಸೃಷ್ಟಿಸಿಕೊಂಡು ನೂರಾರು ವರ್ಷಗಳ ಹಿಂದಿನಿಂದಲೇ ಬದುಕು ಕಟ್ಟಿಕೊಂಡವರು ಇವರು. ಆ ಕಾಲದಲ್ಲಿ ಇವರ್ಯಾರು ಹೊಲಗದ್ದೆ ತೋಟ ಮನೆ ಕೆರೆ ಬೇಲಿ ಗೋಡೆಗಳಿಗೆಂದು ಜೆಸಿಬಿ ನುಗ್ಗಿಸಿದವರಲ್ಲ. ಬರೀ ಕತ್ತಿ ಕೊಟ್ಟು ಪಿಕಾಸಿ ಹಿಡಿದು ಅಲ್ಲಲ್ಲೇ ಮಣ್ಣು ಜಾರಿಸಿ ಬಂಡೆ ಉರುಳಿಸಿ ಮಟ್ಟಸ ಮಾಡಿ ಭೂಮಿಯನ್ನು ಕೃಷಿಗಾಗಿ ತಯಾರು ಮಾಡಿಕೊಂಡವರು. ಅಡ್ಡವಾಗುವ ತೋಡು ಹೊಳೆ ಕಣಿಗಳಿಗೆ ಅಲ್ಲೇ ಸಿಗುವ ಮರಗಳನ್ನು ಅಡ್ಡ ಮಲಗಿಸಿ ಸಂಕ – ಸೇತುವೆ ಮಾಡಿಕೊಂಡವರು. ಆಗುಂಬೆ ಸಮೀಪ ಕೂಡ್ಲು ಎಂಬಲ್ಲಿ ಇಂಥ ಊರಿಂದ ಒಂದು ಬೆಂಕಿ ಪೆಟ್ಟಿಗೆಗಾಗಿ 12 ಕಿ.ಮೀ. ದೂರದ ಸೋಮೇಶ್ವರಕ್ಕೆ ಬರಬೇಕಾದ ಅನಿವಾರ್ಯತೆ ರೈತರಿಗಿತ್ತು!

ಯಾವಾಗ ಆಡಳಿತ ವಿಕೇಂದ್ರೀಕರಣಗೊಂಡು ಗ್ರಾಮ ಪಂಚಾಯತ್‌ ಜಿಲ್ಲಾ ಪಂಚಾಯತ್‌ಗಳಿಗೆ ಅಧಿಕಾರ, ಅನುದಾನ ಬಂತೋ ಇಂಥ ಕಾಡ ನಡುವಿನ ಊರುಗಳಿಗೆ ಹೆಚ್ಚು ಬಲಬಂತು. ನಾಡು, ನಗರಗಳಿಗೆ ಸಂಪರ್ಕ ಸಾಧ್ಯವಾಯಿತು. ರಸ್ತೆ, ಕರೆಂಟು, ಕುಡಿಯುವ ನೀರು, ಆಶ್ರಯ ಯೋಜನೆಯ ಮನೆಗಳು, ಬಾಲವಾಡಿ ಶಾಲೆಗಳು, ಮೊಬೈಲು ರೇಂಜು ಹೀಗೆ ಮೂಲ ಸೌಲಭ್ಯಗಳು ವಿಸ್ತರಿಸಿದವು. ಕೃಷಿಗೆ ಬೇಕಾಗುವ ಅಗತ್ಯ ನೀರು ಇವರಿಗೆ ಕೈಗೆಟಕುವಂತಿದ್ದರೂ ಅದೊಂದೇ ಕಾರಣಕ್ಕೆ ಇವರ ಬದುಕು ಎಂದಿಗೂ ಸುಗಮವಾಗಿರಲಿಲ್ಲ. ಬೀಜ, ಗೊಬ್ಬರ ಮಾರಾಟಗಳಿಗಾಗಿ ದೂರದ ನಗರಗಳಿಗೆ ಬರಬೇಕು, ಮಕ್ಕಳು ಶಿಕ್ಷಣಕ್ಕಾಗಿ ಹೊರಗುಳಿಯಬೇಕು. ಕಾಡುಪ್ರಾಣಿಗಳ ಉಪಟಳ, ಅರಣ್ಯ ನಿಯಮಗಳ ತೊಂದರೆ, ಒತ್ತುವರಿ, ಅಕ್ರಮ-ಸಕ್ರಮಗಳಲ್ಲಿನ ಗೊಂದಲ – ಇವೆಲ್ಲವನ್ನೂ ಸಹಿಸಿಕೊಂಡು ಬೇಲಿ ಹಾಕಿಕೊಂಡ ಜಾಗವೆಲ್ಲಾ ತಮ್ಮದೇ ಎಂದು ಭ್ರಮಿಸಿ ನಿಸರ್ಗದೊಂದಿಗೆ ಹೋರಾಡಿಕೊಂಡೇ ಬದುಕಿದವರು ಇವರು. ಮತದಾರ ಪಟ್ಟಿಯ ಆಧಾರದಲ್ಲಿ ಇವರ ಲೆಕ್ಕ; ಆ ಲೆಕ್ಕದ ಆಧಾರದಲ್ಲೇ ರಾಜಕಾರಣ, ಅಧಿಕಾರಿಗಳ ಭೇಟಿ, ಸೌಲಭ್ಯ ವಿಸ್ತರಣೆಯ ಅಣಕ ನಡೆಯುತ್ತಿತ್ತು. ಚಾರ್ಮಾಡಿ, ಶಿರಾಡಿ, ಆಗುಂಬೆ, ಕೊಡಗು, ಚಿಕ್ಕಮಗಳೂರು ವ್ಯಾಪ್ತಿಯ ಇಂಥ ನಿಗೂಢ ಹಳ್ಳಿಗಳು ಕಳೆದ ಎರಡು ವರ್ಷಗಳ ಜಲಪ್ರಳಯಕ್ಕೆ ಅತ್ಯಂತ ಹೆಚ್ಚು ತೊಂದರೆ, ನಷ್ಟಗಳಿಗೆ ಒಳಗಾಗಿವೆ.

Advertisement

ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕ ಅಥವಾ ಅಣೆಕಟ್ಟುಗಳಿಂದ ಎತ್ತಂಗಡಿಗೊಂಡು ಹೊಸದಾಗಿ ಸೃಷ್ಟಿಯಾದ ನಗರ, ನವನಗರ, ವಸತಿ ನಿಲಯಗಳು ಮುಳುಗಡೆಯಾದಾಗ ಅದು ಬಹುಬೇಗ ಸುದ್ದಿ ಯಾಗುತ್ತದೆ. ಅಪಾರ್ಟ್‌ ಮೆಂಟುಗಳ ಗೋಡೆಯ ಮೇಲೆ ಒಂದೊಂದು ಅಡಿ ನೀರು ಏರಿದಾಗ ಅದರ ಲೆಕ್ಕ ಹಿಡಿದು ಊರು ಮುಳುಗಿದ ಕಥೆ ಹೇಳುತ್ತೇವೆ. ಅಲ್ಲೆಲ್ಲಾ ಹೆಲಿಕಾಪ್ಟರ್‌ಗಳು ಸುತ್ತಿಸುಳಿದು ಮಹಡಿ ಮೇಲಿಂದ ಜನರನ್ನು ಎತ್ತಿ ಎತ್ತಿ ಸುರಕ್ಷಿತ ಭಾಗಗಳಿಗೆ ಒಯ್ಯಲಾಗುತ್ತದೆ. ಗಂಜಿ ಕೇಂದ್ರದಲ್ಲಿ ಜನ ಉಳಿದು ತಿರುಗಿ ತಮ್ಮ ಮನೆಗೆ ಹೋಗಿ ಕೆಸರು ರಾಡಿ ತೊಳೆದು ಮತ್ತೆ ಅದೇ ಮನೆಯಲ್ಲಿ ಬದುಕುತ್ತಾರೆ. ಗೋಡೆಯ ಮೇಲೆ ಕೆಂಪು ನೀರು ಮೂಡಿಸಿದ ಗೆರೆಯನ್ನು ಹಾಗೆಯೇ ಅಳತೆಗೋಲಾಗಿ ಇರಿಸಿ ಮುಂದಿನ ಪ್ರತಿ ಮಳೆಗಾಲವೂ ಅದೇ ಗೆರೆ ಅವರನ್ನು ಕಾಡಲಾರಂಭಿಸಬಹುದು. ಆದರೆ ಪಶ್ಚಿಮ ಘಟ್ಟದ ನಡುವಿನ ಕಾಡುವಾಸಿಗಳನ್ನೊಮ್ಮೆ ಗಮನಿಸಿ. ಇಲ್ಲಿಯ ಜಲಗೆರೆ ಭಯಾನಕವಾದುದು. ಗೋಡೆ ಬಿಡಿ, ಇವರಿಗೆ ಮನೆ, ಹೊಲ, ಗದ್ದೆ, ತೋಟ, ಸೇತುವೆ ಯಾವುದೂ ಇಲ್ಲ. ನೀರೊಂದಿಗೆ ಎದ್ದೆದ್ದು ಬಂದ ಬಂಡೆ ಬೃಹತ್‌ ಮರ, ಸಿಗಿದು ಬಂದ ಬೆಟ್ಟಗುಡ್ಡಗಳು ಅಲ್ಲೆಲ್ಲಾ ಹಿಂದೆ ಹಳ್ಳ, ಊರು, ಮನೆ ಬದುಕು ಇತ್ತೆಂಬುದಕ್ಕೆ ಯಾವ ಸಾಕ್ಷಿಯನ್ನೂ ಇಟ್ಟಿಲ್ಲ. ಮನೆಯ ಪಾಯಕಿಟ್ಟ ಕಲ್ಲುಗಳು ಎದ್ದು ಮೈಲುದೂರ ಸಂದಿವೆ. ಹಸು, ಮೇಕೆ, ಕೋಳಿಗಳಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಭೂಮಿ ಇತ್ತು ಎಂದು ವಿವರಿಸುವ ಪಹಣಿ ಇಲ್ಲ, ಪಡಿತರ ಕಾರ್ಡು, ಆಧಾರ್‌ ಕಾರ್ಡು, ಕೋವಿ ಲೈಸನ್ಸ್‌, ಮಗಳ ಮಾರ್ಕ್ಸ್ ಕಾರ್ಡು, ಬಸ್ಸು ಪಾಸು ಎಲ್ಲವೂ ಪ್ರವಾಹದ ನೀರಿಗೆ ಆಹುತಿಯಾಗಿದೆ. ಗದ್ದೆಯಲ್ಲಿ ಬೆಳೆದು ನಿಂತ ಭತ್ತ, ತುಂಬಿದ ಅಡಿಕೆ, ತೆಂಗಿನ ಗೊನೆ ಯಾವುದೂ ಇಲ್ಲ. ಕೆಲವು ಕಡೆ ನಾನು ಬದುಕಿ ಬಾಳಿದ ಭೂಮಿಯನ್ನು ಒಮ್ಮೆ ಸ್ಪರ್ಶಿಸಿ ಬರುತ್ತೇನೆ ಎಂದು ಹೊಳೆದಾಟಲು ಸೇತುವೆ ಸಂಕಗಳೇ ಇಲ್ಲ. ನೂರಾರು ಇಂಚು ಮಳೆ ತಿಂಗಳಿಡೀ ಹಂಚಿಕೆಯಾಗಿ ಸಮಾನವಾಗಿ ಸುರಿಯುವುದಕ್ಕೂ ಅಷ್ಟೂ ಮಳೆ ಒಂದೇ ದಿನ ಸುರಿಯುವುದಕ್ಕೂ ವ್ಯತ್ಯಾಸವಿದೆ. ಈ ಸ್ಥಿತ್ಯಂತರ ಕಳೆದ ಎರಡು ವರ್ಷಗಳಲ್ಲಿ ನೆಲದವರನ್ನು ವಿಪರೀತ ಬಾಧಿಸಿದೆ. ಬೇರೆಲ್ಲಾ ದೃಷ್ಟಿಯಿಂದ ಈ ಮೇಲೆ ಉದಾಹರಿಸಿದ ಕಾಡೂರುಗಳು ಪ್ರಾಕೃತಿಕವಾಗಿ ಸುರಕ್ಷಿತವಾಗಿದ್ದರೂ; ಸಾಮಾನ್ಯ ಮಳೆಗೆ ಮೊದಲ ದಿನದಿಂದ ಮಳೆಗಾಲದ ಕೊನೆಯ ಮಳೆಯವರೆಗೆ ಇಲ್ಲೆಲ್ಲಾ ತಿಳಿನೀರೇ ಹರಿದರೂ ಅನಿರೀಕ್ಷಿತ ಮೇಘ ಸ್ಫೋಟಕ್ಕೆ ಪಡೆದು ಕೊಳ್ಳುವ ಯಾವ ಆಯ ಪಾಯವೂ ಈ ಹಳ್ಳಿಗಳಲ್ಲಿಲ್ಲ.

ಇವರ ಹೊಲಗದ್ದೆಗಳ ನಡುವೆ ಹರಿಯುವ ನದಿ -ಹೊಳೆಗಳು ಇವರು ಹುಟ್ಟುವ ಮುಂಚೆಯೇ ಸೃಷ್ಟಿಯಾದುವು. ನೂರಾರು, ಸಾವಿರಾರು ವರ್ಷಗಳ ಅನಂತರ ಇದೀಗ ಆ ಹೊಳೆ, ನದಿಗಳ ಜಲಪಾತ್ರೆಯ ಅಣಕ, ಆಳ, ಅಗಲ ಸ್ವರೂಪ ಬದಲಾಗಿದೆ. ನದಿಯ ಅಂಚಿನಲ್ಲಿ ಮುಂದೆ ಹುಟ್ಟಬಹುದಾದ ಮಗುವಿಗೆ ಆದ ಬದಲಾವಣೆ, ಪ್ರಳಯ, ಹೊಸತು ಅಲ್ಲವೇ ಅಲ್ಲ. ಈ ಹಿಂದೆ ನೋಡಿ ಅಲ್ಲೇ ಬದುಕಿದವರಿಗೆ ಅದು ಭೂ ಪ್ರಳಯ, ಸ್ಥಿತ್ಯಂತರ. ತಮ್ಮ ಕಣ್ಣೆದುರೇ ಘಟಿಸಿದ ನೀರಿನ ಕಥೆ, ನದಿಯಲ್ಲಿ ನೀರು ಹರಿದ ಜಲಗೆರೆ ಅಲ್ಲೆಲ್ಲಾ ಬದುಕಿ ಬಾಳಿದ, ಬಾಳುವ ಎಲ್ಲರ ಮನಸ್ಸಿನಲ್ಲೂ ಸ್ಥಾಯಿಯಾಗಿ ಉಳಿಯುತ್ತದೆ. ಮುಂದಿನ ನೂರು ವರ್ಷಕ್ಕೆ ಈ ಕಥೆಗಳೇ ಸಾಕು. ನದಿಯನ್ನು ಅಗೆದು ಬಗೆದು ಹತ್ತಿರದಲ್ಲೇ ಮನೆ ಮಾಡುವ, ಕೃಷಿ ಮಾಡುವ ಮಂದಿಗೆ ನೀರಿಗೆ ಇಳಿಯುವವರಿಗೆ ಈ ಕಥೆಗಳು ಎಚ್ಚರಿಕೆಗಳಾಗುತ್ತವೆ.

ನರೇಂದ್ರ ರೈ ದೇರ್ಲ

Advertisement

Udayavani is now on Telegram. Click here to join our channel and stay updated with the latest news.

Next