Advertisement

ಇಂದಿನಿಂದ ವರ್ಷದ ಮೊದಲ ಅಧಿವೇಶನ

06:00 AM Feb 05, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ವಿಧಾನ ಮಂಡಲದ ಪ್ರಸಕ್ತ ಸಾಲಿನ ಮೊದಲ ಅಧಿವೇಶನ ಸೋಮವಾರ ಆರಂಭವಾಗಲಿದ್ದು, ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಚಾಲನೆ ನೀಡಲಿದ್ದಾರೆ.

Advertisement

ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ಇರುವುದರಿಂದ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಈ ಅಧಿವೇಶನ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳೂ ಸಜ್ಜಾಗುತ್ತಿವೆ. ಇನ್ನೊಂದೆಡೆ ಆಡಳಿತ ಪಕ್ಷವೂ ತಿರುಗೇಟು ನೀಡಲು ಸಿದ್ಧವಾಗುತ್ತಿದೆ.

ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ನಂತರ ಸಂತಾಪ ಸೂಚನೆಗೆ ಅವಕಾಶವಿದೆ. ಉಳಿದ 4 ದಿನಗಳಲ್ಲಿ ಪ್ರಶ್ನೋತ್ತರ ಮತ್ತಿತರ ಕಲಾಪಗಳೊಂದಿಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆದು ವಂದನಾ ನಿರ್ಣಯ ಅಂಗೀಕರಿಸಬೇಕಾಗುತ್ತದೆ. ಇದರೊಂದಿಗೆ ಇತರೆ ವಿಚಾರಗಳೂ ಸೇರಿಕೊಳ್ಳುವುದರಿಂದ ಉಳಿದ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ಸಿಗುವುದಿಲ್ಲ.

ಆದರೂ ವಿಧಾನಸಭೆ ಚುನಾವಣೆ ಮತ್ತು ಬಜೆಟ್‌ ಮಂಡನೆಗೆ ಮುನ್ನ ನಡೆಯುವ ಅಧಿವೇಶನವಾಗಿರುವುದರಿಂದ ರಾಜಕೀಯ ಚರ್ಚೆಗಳೇ ಹೆಚ್ಚಾಗುವ ಸಾಧ್ಯತೆ ಇದೆ. ಕಾನೂನು ಸುವ್ಯವಸ್ಥೆಯಲ್ಲಿ ಸರ್ಕಾರದ ವೈಫ‌ಲ್ಯತೆ, ರಾಜ್ಯಾದ್ಯಂತ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಮುಂದಿಟ್ಟಿಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಪ್ರಮುಖ ಪ್ರತಿಪಕ್ಷ ಬಿಜೆಪಿ ಸಜ್ಜಾಗಿದ್ದಾರೆ, ಸರ್ಕಾರದ ಒಟ್ಟಾರೆ ಆಡಳಿತ ವೈಫ‌ಲ್ಯ ಮುಂದಿಟ್ಟುಕೊಂಡು ಮತ್ತೂಂದು ಪ್ರತಿಪಕ್ಷ ಜೆಡಿಎಸ್‌ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸನ್ನದ್ಧವಾಗಿದೆ. ಇನ್ನೊಂದೆಡೆ ಸರ್ಕಾರ ಪ್ರಸ್ತುತ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತಾರೂಢ ಕಾಂಗ್ರೆಸ್‌ ಕೂಡ ಸಿದ್ಧತೆ ನಡೆಸುತ್ತಿದೆ.

ಕಲಾಪದ ದಿನಗಳಲ್ಲಿ ಭೋಜನ ವಿರಾಮದವರೆಗೆ ಪ್ರಶ್ನೋತ್ತರ, ಶೂನ್ಯ ವೇಳೆ ಮುಗಿಯುವವರೆಗೆ ನಿಲುವಳಿ ಸೂಚನೆ ಪ್ರಸ್ತಾವನೆ ಸೇರಿದಂತೆ ಯಾವುದೇ ವಿಷಯ ಪ್ರಸ್ತಾಪಿಸಲು ಅವಕಾಶವಿಲ್ಲ ಎಂಬ ನಿಯಮ ಕಳೆದ ವರ್ಷದಿಂದ ಜಾರಿಗೆ ಬಂದಿದ್ದು, ಈ ವರ್ಷ ಉಭಯ ಸದನಗಳಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸ್ಪೀಕರ್‌ ಮತ್ತು ಸಭಾಪತಿ ನಿರ್ಧರಿಸಿದ್ದಾರೆ. ಹೀಗಾಗಿ ಮಧ್ಯಾಹ್ನದವರೆಗಿನ ಕಲಾಪ ಸುಗಮವಾಗಿ ನಡೆಯಬಹುದು ಎಂಬ ನಿರೀಕ್ಷೆಯಿದೆ.

Advertisement

ಈ ಬಾರಿ ರಾಜಕೀಯ ಪಕ್ಷಗಳು ಮತ್ತು ಶಾಸಕರು ಮುಂಬರುವ ವಿಧಾನಸಭೆ ಚುನಾವಣೆಯತ್ತಲೇ ದೃಷ್ಟಿ ನೆಟ್ಟಿರುವುದರಿಂದ ಅಧಿವೇಶನದಲ್ಲಿ ರಾಜಕೀಯ ಚರ್ಚೆ, ಆರೋಪ-ಪ್ರತ್ಯಾರೋಪಗಳೇ ಪ್ರಮುಖ ಪಾತ್ರವಹಿಸಲಿದ್ದು, ಅಭಿವೃದ್ಧಿಗೆ ಪೂರಕವಾಗುವ ಚರ್ಚೆಗಳು ನಡೆಯುವ ಸಾಧ್ಯತೆ ಕಡಿಮೆ. ಅಲ್ಲದೆ, ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರತಿಪಕ್ಷಗಳು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಸನ್ನದ್ಧವಾಗಿರುವುದರಿಂದ ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಪ್ರತಿಪಕ್ಷಗಳ ಪ್ರಮುಖ ಆಸ್ತ್ರಗಳು
– ಹೆಚ್ಚುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ
– ಕೇಂದ್ರದ ಅನುದಾನ ಬಳಕೆಯಲ್ಲಿ ಸರ್ಕಾರದ ವೈಫ‌ಲ್ಯತೆ
– ಸರ್ಕಾರದ ಕೊನೆಯ ದಿನಗಳಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು
– ಬಜೆಟ್‌ ಅನುದಾನ ಬಳಕೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣದೇ ಇರುವುದು

ಸರ್ಕಾರದ ಸಮರ್ಥನೆಗೆ ಸೀಮಿತ?
ಹಿಂದೆಲ್ಲಾ ರಾಜ್ಯಪಾಲರ ಭಾಷಣವೆಂದರೆ ಅದು ಸರ್ಕಾರ ಮುಂದಿನ ವರ್ಷದ ಆಡಳಿತ ಹೇಗಿರುತ್ತದೆ ಎಂಬ ಮುನ್ಸೂಚನೆ ನೀಡುವ ಒಂದು ದಾರಿಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇವಲ ಸರ್ಕಾರವನ್ನು ಹೊಗಳುವ ಭಾಷಣವಾಗಿ ಸೀಮಿತವಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ವಂದನ ನಿರ್ಣಯ ಕೈಗೊಂಡ ಒಂದೇ ವಾರದಲ್ಲಿ ಬಜೆಟ್‌ ಮಂಡನೆಯಾಗಲಿರುವುದರಿಂದ ಈ ಬಾರಿಯೂ ಭಾಷಣದಲ್ಲಿ ಸರ್ಕಾರದ ಹೊಗಳಿಕೆ ಬಿಟ್ಟರೆ ಉಳಿದ ವಿಷಯಗಳು ಪ್ರಸ್ತಾಪವಾಗುವ ಸಾಧ್ಯತೆ ಕಡಿಮೆ. ಆದರೂ ಮುಂಬರುವ ವಿಧಾನಸಬೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ತನ್ನನ್ನು ಸಮರ್ಥಿಸಿಕೊಳ್ಳಲು ರಾಜ್ಯಪಾಲರ ಭಾಷಣವನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುವುದು ಖಚಿತ.

ಈ ಬಾರಿಯೂ ಮೊದಲ ಅಧಿವೇಶನ ಐದು ದಿನ ಮಾತ್ರ
ವರ್ಷಕ್ಕೆ 60 ದಿನಗಳ ಅಧಿವೇಶನ ಕರೆಯಬೇಕೆಂಬ ನಿಯಮ ಇದ್ದರೂ ಅದು ಜಾರಿಯಾಗುತ್ತಿಲ್ಲ ಎಂಬ ಕೊರಗಿನ ನಡುವೆಯೇ 2018ನೇ ಸಾಲಿನ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದೆ. ಕಳೆದ ವರ್ಷದಂತೆ ಈ ಬಾರಿಯೂ ವರ್ಷದ ಮೊದಲ ಅಧಿವೇಶನದ ಅವಧಿಯನ್ನು ಐದು ದಿನಕ್ಕೆ ಸೀಮಿತಗೊಳಿಸಲಾಗಿದೆ.

ವರ್ಷಕ್ಕೆ 60 ದಿನ ಕಲಾಪ ನಡೆಯಬೇಕು ಎಂಬ ಉದ್ದೇಶವಿದ್ದರೂ 1952ರ ನಂತರ ಒಂದೆರಡು ಬಾರಿ ಬಿಟ್ಟರೆ ಯಾವುದೇ ವರ್ಷ ಉದ್ದೇಶ ಈಡೇರಿರಲಿಲ್ಲ. ಹೀಗಾಗಿ ಕಲಾಪವನ್ನು ವರ್ಷಕ್ಕೆ  ಕನಿಷ್ಠ 60 ದಿನ ನಡೆಸಬೇಕೆಂಬ ಬಗ್ಗೆ ಸರ್ಕಾರ 2005ರಲ್ಲಿ ನಿಯಮ ರೂಪಿಸಿತ್ತು. ಆದರೂ ಅದು ಜಾರಿಯಾಗಲಿಲ್ಲ. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಈ ನಿಯಮವನ್ನು ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಹೇಳಿತ್ತಾದರೂ ಅದು ಭರವಸೆಯಾಗಿಯೇ ಉಳಿದಿತ್ತು.

2015ರಲ್ಲಿ 59 ದಿನ ಕಲಾಪ ನಡೆಸುವ ಮೂಲಕ ಭರವಸೆ ಈಡೇರಿಸುವ ಮುನ್ಸೂಚನೆನ್ನು ಸಿದ್ದರಾಮಯ್ಯ ಸರ್ಕಾರ ನೀಡಿತ್ತಾದರೂ 2016ರಲ್ಲಿ ಭರವಸೆ ಹುಸಿಯಾಗಿ ಕೇವಲ 47 ದಿನ ಮಾತ್ರ ಅಧಿವೇಶನ ಕರೆಯಲಾಗಿತ್ತು. ಅದರಲ್ಲಿ ಗದ್ದಲದಿಂದಾಗಿ ಮಧ್ಯದಲ್ಲೇ ಅಧಿವೇಶನ ಮುಂದೂಡಿದ್ದರಿಂದ ಒಟ್ಟು ಕಲಾಪ ನಡೆದಿದ್ದು 34 ದಿನ ಮಾತ್ರ. ಅದೇ ರೀತಿ 2017ರಲ್ಲೂ ಕೇವಲ 50 ದಿನ ಕಲಾಪ ನಡೆದಿತ್ತು.

ಇತ್ತೀಚಿನ ವರ್ಷಗಳಲ್ಲಿ ಮೊದಲ ಅಧಿವೇಶನ ಅತಿ ಕಡಿಮೆ ಅವಧಿ ನಡೆಸುವ ಸಂಪ್ರದಾಯ ಆರಂಭವಾಗಿದ್ದು 2017ರಲ್ಲಿ. ಆ ವರ್ಷ ರಾಜ್ಯಪಾಲರ ಭಾಷಣ ಸೇರಿದಂತೆ ಒಟ್ಟು ಐದು ದಿನಗಳ ಕಲಾಪ ಮಾತ್ರ ನಡೆದಿತ್ತು. ಈ ಬಾರಿಯೂ ಕೇವಲ ಐದು ದಿನ ಮಾತ್ರ ಕಲಾಪ ನಡೆಯಲಿದೆ. ಫೆ. 16ರಿಂದಲೇ ಬಜೆಟ್‌ ಅಧಿವೇಶನ ಕರೆದಿರುವುದರಿಂದ ಈ ಬಾರಿ ವರ್ಷದ ಮೊದಲ ಅಧಿವೇಶನವನ್ನು ಐದು ದಿನಕ್ಕೆ ಸೀಮಿತಗೊಳಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಈ ಹಿಂದೆ 2012 ಮತ್ತು 2013ರಲ್ಲಿ ತಲಾ ಎಂಟು ದಿನ, 2014ರಲ್ಲಿ ಏಳು ದಿನ, 2016ರಲ್ಲಿ 10 ದಿನ ಮತ್ತು 2016ರಲ್ಲಿ ಆರು ದಿನ ಕಲಾಪ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next