Advertisement

ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟ ಎಚ್ಚರಿಕೆ

04:28 PM May 16, 2019 | Team Udayavani |

ಅಂಕೋಲಾ: ಪುರಸಭೆ ವ್ಯಾಪ್ತಿಯಲ್ಲಿ ತೀವ್ರಗೊಂಡಿರುವ ನೀರಿನ ಸಮಸ್ಯೆಯನ್ನು ಮೇ 20ರೊಳಗೆ ಸಮರ್ಪಕವಾಗಿ ನಿಭಾಯಿಸಿ ಜನರ ನೀರಿನ ಬವಣೆ ನೀಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಅಂಕೋಲಾ ಘಟಕ ಮತ್ತು ಪುರಸಭಾ ಸದಸ್ಯರು ಪುರಸಭೆ ಮುಖ್ಯಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ, ಪುರಸಭೆ ವ್ಯಾಪ್ತಿಯಲ್ಲಿ 90 ಸರಕಾರಿ ಬಾವಿಗಳಿದ್ದು, ಸುಮಾರು 80ರಷ್ಟು ಬಾವಿಗಳಲ್ಲಿ ನೀರು ಸಿಗುತ್ತದೆ. ಅದರಲ್ಲಿನ ಕೆಲವು ಬಾವಿಗಳ ಹೂಳೆತ್ತಿದರೆ ಇನ್ನಷ್ಟು ನೀರು ದೊರಕಬಹುದು. ಅನೇಕ ಬಾವಿಗಳಿಗೆ ಪಂಪ್‌ಸೆಟ್ ಅಳವಡಿಸಿ ನೀರನ್ನು ತೆಗೆಯಲಾಗುತ್ತಿದ್ದು, ಅಂತಹ ಕಡೆ ಸಾರ್ವಜನಿಕರಿಗೆ ನೀರು ಪಡೆಯಲು ಬೆದರಿಕೆಗಳು ಬರುತ್ತಿವೆ. ಇದರ ಕುರಿತು ತನಿಖೆ ನಡೆಸಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ತಾಲೂಕಿನ ಜಲ ಮೂಲವಾದ ಗಂಗಾವಳಿ ನದಿ ನೀರು ಇಂದು ಸಂಪೂರ್ಣವಾಗಿ ಬತ್ತುತ್ತಿದೆ. ಗಂಗಾವಳಿ ನದಿ ನೀರಿನ ಜರಿಮೂಲ ಅರಬೈಲ್ ಮತ್ತು ಗುಳ್ಳಾಪುರ ಭಾಗದಲ್ಲಿ 20ರಿಂದ 50 ಎಚ್ಪಿಗೂ ಅಧಿಕ ಪಂಪ್‌ಸೆಟ್ ಅಳವಡಿಸಿ ನೀರನ್ನು ತೆಗೆಯುತ್ತಿದ್ದಾರೆ. ಮೊದಲು ಪಂಪ್‌ಸೆಟ್ ಅಳವಡಿಸಿದನ್ನು ತೆಗೆದು ಬತ್ತುತ್ತಿರುವ ನೀರನ್ನು ಉಳಿಸಿಕೊಂಡರೆ ಮುಂದಿನ ದಿನದಲ್ಲಿ ತಾಲೂಕಿನ ಜನರಿಗೆ ನೀರಿನ ಅಭಾವವನ್ನು ಕಡಿಮೆ ಮಾಡಬಹುದು. ಜಿಲ್ಲಾಧಿಕಾರಿಗಳು ಪಂಪ್‌ಸೆಟ್ ಅಳವಡಿಸಿ ನೀರನ್ನು ತೆಗೆಯುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಹಿಂದೆಂದು ಕಂಡರಿಯದ ನೀರಿನ ಸಮಸ್ಯೆ ಇಂದು ಬಂದೊದಗಿದೆ. ಈ ಸಮಸ್ಯೆಗೆ ವಾರ್ಡ್‌ವಾರು ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್‌ ಮತ್ತು ಸಿಂಟ್ಯಾಕ್ಸ್‌ ಮೂಲಕ ಸರಬರಾಜು ಮಾಡುವ ನೀರು ಟ್ಯಾಂಕರ್‌ ಭರ್ತಿ ಮಾಡದೆ ಅರ್ಧ ಟ್ಯಾಂಕ್‌ ತುಂಬಿಕೊಂಡು ಹೋಗುತ್ತಿದ್ದಾರೆ ಎನ್ನುವ ಮಾತಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಒಬ್ಬ ಸಿಬ್ಬಂದಿಯನ್ನು ನೇಮಿಸಿ ಪರಿಶೀಲಿಸಿ ನೀರನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಬಾಸ್ಕರ ನಾರ್ವೇಕರ ಮಾತನಾಡಿ, ಏಪ್ರಿಲ್-ಮೇ ತಿಂಗಳಲ್ಲಿ ಮದುವೆ, ಮುಂಜಿ ಹಾಗೂ ಧಾರ್ಮಿಕ ಕಾರ್ಯಕ್ರಮ, ಬಂಡಿಹಬ್ಬಗಳಿಗೆ ಅನೇಕ ಸಂಖ್ಯೆಯಲ್ಲಿ ಬಂಧುಮಿತ್ರರು ತಾಲೂಕಿಗೆ ಆಗಮಿಸುವುದರಿಂದ ನೀರಿನ ಬೇಡಿಕೆ ಹೆಚ್ಚಾಗುತ್ತದೆ. ಇದನ್ನು ಅರ್ಥೈಸಿಕೊಂಡು ಸೂಕ್ತ ಕ್ರಮಕೈಗೊಳ್ಳಿ ಎಂದರು.

Advertisement

ಜಯಾ ನಾಯ್ಕ, ಶಾಂತಲಾ ನಾಡಕರ್ಣಿ, ಹೇಮಾ ಆಗೇರ, ನಾಗರಾಜ ಐಗಳ, ಸೂರಜ ನಾಯ್ಕ, ರೇಖಾ ಗಾಂವಕರ, ತಾರಾ ನಾಯ್ಕ, ತಾರಾ ಗಾಂವಕರ, ಮೊಹ್ಮದ್‌ ಇಕ್ಬಾಲ್, ರಾಮಾ ನಾಯಕ, ರಾಮಚಂದ್ರ ಹೆಗಡೆ, ಸಂಜಯ ನಾಯ್ಕ ಮುಂತಾದವರು ಇದ್ದರು.

ಪುರಸಭೆ ವ್ಯಾಪ್ತಿಯ ಸರಕಾರಿ ಬಾವಿಗಳಿಗೆ ವೈಯಕ್ತಿಕ ಪಂಪ್‌ಸೆಟ್‌ಗಳನ್ನು ಅಕ್ರಮವಾಗಿ ಅಳವಡಿಸಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ 24ಕ್ಕೂ ಅಧಿಕ ಪಂಪ್‌ಸೆಟ್ ತೆಗೆದು ಹಾಕಲಾಗಿದೆ. ಕೆಲವರು ಮತ್ತೆ ಅಳವಡಿಸಿದ್ದಾರೆ ಎಂದು ಮಾಹಿತಿಗಳು ಬರುತ್ತಿವೆ. ಹಾಗೆನಾದರು ಮುಂದುವರೆದಲ್ಲಿ ಅಂತವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು.
•ಬಿ. ಪ್ರಹ್ಲಾದ, ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next