Advertisement

ಭೂಮಿಗೆ ಬಂದ ಜ್ವರ ನಮಗೂ ಬೆವರಿಳಿಸೀತು!

12:19 AM Oct 13, 2023 | Team Udayavani |

ಆಂಥ್ರಾಕ್ಸ್‌, ಹಂದಿ ಜ್ವರ, ಸಾರ್ಸ್‌, ಝೀಕಾ, ನಿಫಾ, ಎಬೋಲಾ, ಕೊರೊನಾ…ಮನುಕುಲವನ್ನು ಕಳೆದ ಕೆಲವು ದಶಕಗಳಲ್ಲಿ ಬಹುವಾಗಿ ಪೀಡಿಸಿದ ಕೆಲವು ಸಾಂಕ್ರಾಮಿಕ ರೋಗಗಳಿವು. ಕಾಯಿಲೆಗಳಲ್ಲಿ ಎರಡು ಬಗೆ: ಒಂದು, ಕ್ಯಾನ್ಸರ್‌, ಮಧುಮೇಹ, ಅಧಿಕ ರಕ್ತ ದೊತ್ತಡದಂತಹ ದೇಹದ ಒಳಗಿನಿಂದ ಉದ್ಭವಿಸುವ ಅನಾರೋಗ್ಯಗಳು. ಹೊರಗಿನಿಂದ ವೈರಾಣುಗಳು, ಬ್ಯಾಕ್ಟೀರಿಯಾಗಳು, ಫ‌ಂಗಸ್‌ಗಳು ದೇಹವನ್ನು ಆಕ್ರಮಿಸಿಕೊಂಡು ಉಂಟುಮಾಡುವ ರೋಗಗಳು ಇನ್ನೊಂದು ವರ್ಗದವು. ಇವುಗಳನ್ನು ಸೋಂಕು ರೋಗಗಳೆನ್ನುತ್ತಾರೆ. ಇಂತಹ ರೋಗಗಳಿಗೆ ಚಿಕಿತ್ಸೆ ನೀಡುವಾಗ ವೈದ್ಯಕೀಯವು 2 ಬಗೆಯ ಸವಾಲನ್ನು ಎದುರಿಸುತ್ತದೆ. ಒಂದನೆಯದು, ಸೋಂಕಿಗೆ ದೇಹದಲ್ಲಿ ಉಂಟಾಗಿರುವ ಪ್ರತಿಕ್ರಿಯೆ ಅಂದರೆ ರೋಗ ಲಕ್ಷಣಗಳಿಗೆ ಚಿಕಿತ್ಸೆ. ಇನ್ನೊಂದು, ದೇಹವನ್ನು ಆಕ್ರಮಿಸಿಕೊಂಡಿರುವ ಸೋಂಕುಕಾರಕವನ್ನು ನಾಶಪಡಿಸುವುದು.

Advertisement

ಗಮನಾರ್ಹ ಅಂಶವೆಂದರೆ, ಒಂದೆರಡು ವರ್ಷಗಳ ಹಿಂದೆ ಹಾವಳಿ ಉಂಟುಮಾಡಿದ್ದ ಕೊರೊನಾ ಸಹಿತ ಹೊಸ ಹೊಸ ಸೋಂಕುರೋಗಗಳಿಗೆ ಕಾರಣವಾಗುವ ವೈರಾಣುಗಳು, ಬ್ಯಾಕ್ಟೀರಿಯಾ, ಶಿಲೀಂಧ್ರ ಇತ್ಯಾದಿಗಳನ್ನು ನಾಶ ಪಡಿಸುವ ಅಥವಾ ಅವುಗಳು ಬಾರದಂತೆ ತಡೆಯುವ ಲಸಿಕೆಯಂತಹ ವಿಧಾನಗಳು ನಮ್ಮಲ್ಲಿ ಅಲಭ್ಯ ಅಥವಾ ಅವುಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಬೇಕಿರುತ್ತದೆ. ಇದಕ್ಕೆ ಸಾಕಷ್ಟು ಸಮಯ, ಹಣಕಾಸು, ಸಂಶೋಧನೆ ಅಗತ್ಯ. ಹೀಗಾಗಿ ಇಂತಹ ಸೋಂಕುರೋಗಗಳು ಕಂಡು ಬಂದಾಗ ಲಕ್ಷಣಗಳನ್ನು ಆಧರಿಸಿ, ಅವುಗಳನ್ನು ಗುಣ ಪಡಿಸುವ ಮಾರ್ಗೋಪಾಯ ಮಾತ್ರ ವೈದ್ಯಕೀಯ ಜಗತ್ತಿನ ಮುಂದೆ ಇರುತ್ತದೆ. ಕೊರೊನಾ ಸಂದರ್ಭದಲ್ಲಿ ಇವೆಲ್ಲವೂ ನಮಗೆ ಸ್ಪಷ್ಟವಾಗಿ ಅರಿವಿಗೆ ಬಂದಿವೆ.

2019ರ ಕೊನೆಯ ಭಾಗ, 2020ರ ಆದಿಭಾಗದಲ್ಲಿ
ಕೊರೊನಾ ಮನುಕುಲದ ಮೇಲೆ ಎರಗಿದಾಗ ಸಾಮಾಜಿಕ ಮಾಧ್ಯಮದ ಯಾವುದೋ ಒಂದು ಮೂಲೆಯಲ್ಲಿ ಓದಿದ, “ಇದು ಆರಂಭ ಮಾತ್ರ. ಕಂಡುಕೇಳರಿಯದ ಲಕ್ಷಾಂತರ ಹೊಸ ಹೊಸ ರೋಗಕಾರಕ ಸೂಕ್ಷ್ಮಜೀವಿಗಳು ಮನು ಕುಲದ ಮೇಲೆ ದಾಳಿ ಮಾಡಲು ಕಾಯುತ್ತಿವೆ’ ಎಂಬ ಸಂದೇಶವೊಂದು ನೆನಪಾದುದರಿಂದ ಇಷ್ಟನ್ನೆಲ್ಲ ವಿವರಿಸಬೇಕಾಯಿತು. ಕೊರೊನಾ ಹಾಹಾಕಾರ ಎಬ್ಬಿಸುತ್ತಿ ದ್ದಾಗ “ಅಬ್ಬ ಒಮ್ಮೆ ಇದರಿಂದ ಪಾರಾದರೆ ಸಾಕಪ್ಪ!’ ಎಂಬ ಭಾವ ಮೂಡಿದ್ದರೆ ಅಚ್ಚರಿಯಿಲ್ಲ. ಆದರೆ ಅಂತಹ ಅಥವಾ ಅದಕ್ಕಿಂತಲೂ ಅಪಾಯಕಾರಿಯಾದ ಹೊಸ ಸೋಂಕು ರೋಗಗಳು ಧಾಂಗುಡಿ ಇಟ್ಟರೆ ನಮ್ಮ ಗತಿಯೇನು!

ಇವು ವೈಜ್ಞಾನಿಕ ಸಾಕ್ಷ್ಯಾಧಾರಗಳು ಇಲ್ಲದ ಅಂತೆ ಕಂತೆ ಯೇನಲ್ಲ. ನಮ್ಮ ಭೂಮಿಯು ಕೈಗಾರಿಕ ಕ್ರಾಂತಿಯ ಹಿಂದಿನ ಕಾಲಕ್ಕಿಂತ ಈಗ 1.2 ಡಿಗ್ರಿ ಸೆಂಟಿಗ್ರೇಡ್‌ನ‌ಷ್ಟು ಬಿಸಿ ಯೇರಿದೆ. 1.2 ಡಿಗ್ರಿ ಸೆ. ಅಲ್ಲವೆ; ಅದೇನು ಮಹಾ ಎಂದು ಕೊಳ್ಳಬೇಡಿ. ಅದು ಇಡೀ ಭೂಮಿಯ ವಾತಾವರಣದಲ್ಲಿ ಆಗಿರುವ ತಾಪಾಧಿಕ್ಯ. ನಮ್ಮ ಸಹಿತ ಸಕಲ ಜೀವರಾಶಿ ನಳ ನಳಿಸಲು ಆಧಾರವಾಗಿರುವ ಭೂ ಮಾತೆಗೆ ಸಾಸಿವೆ ಕಾಳಿ ನಷ್ಟು ಜ್ವರ ಕಾಣಿಸಿಕೊಂಡರೂ ಆಗಬಹುದಾದ ಅಪಾಯ ಅಷ್ಟಿಷ್ಟಲ್ಲ. ನಾವು ಈಗಾಗಲೇ ಅದರ ಪರಿಣಾಮಗಳನ್ನು ಕಾಣುತ್ತಿದ್ದೇವೆ. ಅಲ್ಲದೆ ಜ್ವರ ಈಗಾಗಲೇ ಆರಂಭವಾಗಿಬಿಟ್ಟಿದೆ; ಹಾಗಾಗಿ ಇನ್ನು ಮುಂದೆಯೂ ಅದರ ದುಷ್ಪರಿಣಾಮಗಳನ್ನು ಅನುಭವಿಸಲಿದ್ದೇವೆ. ವಿಜ್ಞಾನಿಗಳು ಅಂದಾಜು ಮಾಡಿರುವ ಪ್ರಕಾರ ಸಾವಿರಾರು ವರ್ಷಗಳಿಂದ ಮಂ ಜಿನ ಪದರಗಳನ್ನು ಹೊದ್ದು ಕೊಂಡಿರುವ ಆರ್ಕ್‌ಟಿಕ್‌ ಪ್ರದೇಶ 2030ರ ಬೇಸಗೆಯ ವೇಳೆಗೆ ಸಂಪೂರ್ಣವಾಗಿ ಹಿಮ ಮುಕ್ತವಾಗಬಹುದು. ಆಗ ಆ ಮಂ ಜಿನ ಪದರಗಳಲ್ಲಿ, ಅದರಡಿಯ ಮಣ್ಣಿನಲ್ಲಿ ಅಷ್ಟು ಪುರಾತನ ಕಾಲದಿಂದ ಬಂಧಿಯಾಗಿದ್ದ ಮಿಥೇನ್‌ನಂತಹ ಹಸುರು ಮನೆ ಪರಿಣಾಮಕ್ಕೆ ಕಾರಣವಾಗಬಲ್ಲ ಅನಿಲಗಳು ವಾತಾವರಣಕ್ಕೆ ಬಿಡುಗಡೆಗೊಳ್ಳಬಹುದು. ಆಗ ಪರಿಸ್ಥಿತಿ ತುಂಬಾ ಕೆಟ್ಟ ದಾಗಿರುತ್ತದೆ ಎಂಬೆಲ್ಲ ಪ್ರತಿಪಾದನೆಗಳನ್ನು ವಿಜ್ಞಾನಿಗಳು ಸಾಕ್ಷ್ಯ ಸಹಿತ ಮಾಡಿದ್ದಾರೆ.

ಹಿಮಪದರಗಳು ಕರಗುವುದರಿಂದ ಉಂಟಾಗಬಲ್ಲ, ಹೆಚ್ಚು ಅಧ್ಯಯನ ನಡೆಯದ ಇನ್ನೊಂದು ಪರಿಣಾಮ ಎಂದರೆ ಅಲ್ಲಿ ಸಾವಿರಾರು ವರ್ಷಗಳಿಂದ ಹಿಮದಲ್ಲಿ, ಹಿಮದಡಿಯ ಮಣ್ಣಿನಲ್ಲಿ ಸುಷುಪ್ತ ಸ್ಥಿತಿಯಲ್ಲಿದ್ದ ಸೂಕ್ಷ್ಮಜೀವಿಗಳು ಮರಳಿ ಸಕ್ರಿಯವಾಗುವುದು. ಇದು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಬಹಳ ದೊಡ್ಡ ಅಪಾಯವನ್ನು ಉಂಟು ಮಾಡಬಲ್ಲ ವಿದ್ಯಮಾನ ಎಂಬುದಾಗಿ ಈ ವಿಚಾರದಲ್ಲಿ ಹಲವು ದಶಕಗಳಿಂದ ಸಂಶೋಧನೆ ನಡೆಸುತ್ತಿರುವ ವೈರಾಲಜಿಸ್ಟ್‌ ಜೀನ್‌ ಮೈಕೆಲ್‌ ಕ್ಲಾವರೀ ಹೇಳುತ್ತಾರೆ. ಸೈಬೀರಿಯಾದಲ್ಲಿ ಸಾವಿರಾರು ವರ್ಷಗಳಿಂದ ಮಂಜುಗಡ್ಡೆಯ ಪದರಗಳ ಅಡಿಯಲ್ಲಿ ಸುಷುಪ್ತ ಸ್ಥಿತಿಯಲ್ಲಿರುವ ಮಣ್ಣು “ಪರ್ಮಾಫ್ರಾಸ್ಟ್‌’ ಬೆಚ್ಚಗಾದಾಗ ಅವುಗಳಲ್ಲಿ ಹುದುಗಿರುವ ಸೂಕ್ಷ್ಮಜೀವಿಗಳು ಕೂಡ ಮರುಜೀವ ಪಡೆದುಕೊಳ್ಳಬಲ್ಲವು ಎಂಬುದನ್ನು ಈ ಫ್ರೆಂಚ್‌ ವೈರಾಣು ತಜ್ಞ ಪ್ರಯೋಗಸಹಿತ ಕಂಡು ಕೊಂಡಿದ್ದಾರೆ. ಈ ಅಪಾಯ ಸುಳ್ಳಲ್ಲ ಎಂಬುದಕ್ಕೆ 2016ರ ಬೇಸಗೆಯಲ್ಲಿ ಸೈಬೀರಿಯಾದಲ್ಲಿ ಶಾಖದಲೆಗಳ ಪರಿ ಣಾಮವೇ ಸಾಕ್ಷಿ. ಆಗ ಅಂಥ್ರಾಕ್ಸ್‌ ಕಾಯಿಲೆ ಉಂಟು ಮಾಡುವ ಸೂಕ್ಷ್ಮಜೀವಿ ಸಕ್ರಿಯಗೊಂಡು ನೂರಾರು ಮಂದಿ ಸೋಂಕಿಗೀಡಾದರು, ಒಂದು ಮಗು ಮತ್ತು ಸಾವಿ ರಾರು ರೈನ್‌ ಡೀರ್‌ ಎಂಬ ಜಿಂಕೆ ಪ್ರಭೇದದ ಪ್ರಾಣಿಗಳು ಅಸುನೀಗಿದವು.

Advertisement

ಕ್ಲಾವರೀ ಪ್ರಾಯೋಗಿಕವಾಗಿ 48 ಸಾವಿರ ವರ್ಷಗಳಷ್ಟು ಹಿಂದಿನ ವೈರಾಣುವೊಂದು ಯಶಸ್ವಿಯಾಗಿ ಮರು ಜೀವ ಗೊಳ್ಳುವುದನ್ನು ಕಂಡುಕೊಂಡಿದ್ದಾರೆ. 48 ಸಾವಿರ ವರ್ಷ ಗಳು ಅಂದರೆ ನಿಯಾಂಡರ್‌ಥಾಲ್‌ ಆದಿ ಮಾನವರು ಜೀವಿಸಿದ್ದ ಕಾಲ. ಆಗ ಆದಿಮಾನವರು ಯಾವುದೋ ವೈರಾ ಣು ಸೋಂಕಿನ ಹಾವಳಿಯಿಂದಾಗಿ ನಾಶವಾಗಿದ್ದರು ಎಂದಿ ಟ್ಟುಕೊಳ್ಳೋಣ. ಅದೇ ವೈರಾಣು ಭವಿಷ್ಯದಲ್ಲಿ ಸಕ್ರಿಯಗೊಂಡರೆ ನಮಗೂ ಬಾಧೆ ಉಂಟು ಮಾಡಲೇಬೇಕಲ್ಲವೆ?!

~ ಸತ್ಯ

Advertisement

Udayavani is now on Telegram. Click here to join our channel and stay updated with the latest news.

Next