Advertisement

ಮೋದಿ ಜತೆ ಸಂವಾದ ನಡೆಸಿದ ಪುತ್ತೂರಿನ ಕೃಷಿಕ

01:00 AM Feb 25, 2019 | Harsha Rao |

ಪುತ್ತೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಿಸಾನ್‌ ಸಮ್ಮಾನ್‌ ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ ದೇಶಾದ್ಯಂತ ವೆಬ್‌ಕಾಸ್ಟ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಪುತ್ತೂರಿನ ಪ್ರಗತಿಪರ ಕೃಷಿಕ ಸೇಡಿಯಾಪು ಜನಾರ್ದನ ಭಟ್‌ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ಸಂವಾದ ನಡೆಸುವ ಅವಕಾಶ ಪಡೆದರು.

Advertisement

ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮದ ನೇರ ಪ್ರಸಾರ ದೇಶಾದ್ಯಂತ ನಡೆಯಿತು. ಇದರ ಜತೆಗೆ ಸಂವಾದವನ್ನೂ ಏರ್ಪಡಿಸಿದ್ದು, ರಾಜ್ಯದ ಇಬ್ಬರು ರೈತರಿಗೆ ಮಾತ್ರ ಸಂವಾದದಲ್ಲಿ ಮಾತನಾಡುವ ಅವಕಾಶ ಲಭಿಸಿದೆ. ಒಬ್ಬರು ಜನಾರ್ದನ ಭಟ್ಟರಾದರೆ ಇನ್ನೊಬ್ಬರು ತುಮಕೂರಿನ ರೈತ. ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಜಿಲ್ಲಾ ಮಟ್ಟದ ಸಂವಾದ ಹಾಗೂ ವೆಬ್‌ಕಾಸ್ಟ್‌ ಏರ್ಪಡಿಸಲಾಗಿತ್ತು.

“ನಾನೊಬ್ಬ ಗೇರುಬೀಜ, ಬಾಳೆ, ಪೆಪ್ಪರ್‌, ಅಡಿಕೆ ಬೆಳೆಸುವ ಸಣ್ಣ ರೈತ. ನನ್ನ ಜಮೀನಿನ ಸುತ್ತಮುತ್ತಲಿರುವವರು ಕೂಡ ಸಣ್ಣ ರೈತರೇ ಆಗಿದ್ದಾರೆ. ಪ್ರಧಾನ ಮಂತ್ರಿಗಳೇ ನೀವು ಜಾರಿಗೆ ತಂದಿರುವ ಹಲವು ಯೋಜನೆಗಳು ರೈತರಿಗೆ ಉಪಕಾರಿ ಆಗಿವೆ. ಅದರಲ್ಲೂ ಪ್ರಮುಖವಾಗಿ ನೀಮ್‌ ಕೋಟಿಂಗ್‌ ಇರುವ ಯೂರಿಯಾ ರಸಗೊಬ್ಬರ ಹಾಗೂ ಫಸಲ್‌ ವಿಮಾ ಯೋಜನೆ ತುಂಬಾ ಉಪಯುಕ್ತ. ಈಗ ಜಾರಿಗೆ ತಂದಿರುವ ಕಿಸಾನ್‌ ಸಮ್ಮಾನ್‌ ಯೋಜನೆಯೂ ಸಣ್ಣ ರೈತರಿಗೆ ಉಪಕಾರಿಯಾಗಿದೆ. ಇನ್ನಷ್ಟು ಉಪಕಾರಿ ಯೋಜನೆಗಳನ್ನು ರೈತರಿಗೆ ನೀಡುವಂತಾಗಲಿ’ ಎಂದು ಸಂವಾದದಲ್ಲಿ ಜನಾರ್ದನ ಭಟ್ಟರು ಹಾರೈಸಿದರು. ಕೃಷಿ ಅಭಿವೃದ್ಧಿಗಾಗಿ ತಂದ ಉತ್ತಮ ಯೋಜನೆಗಳಿಗೆ ಅಭಿನಂದನೆ ಸಲ್ಲಿಸಿದರು.

ಕೇಂದ್ರ ಕೃಷಿ ಖಾತೆಯ ರಾಜ್ಯಸಚಿವ ಪುರಷೋತ್ತಮ ರೂಪಾಲ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.

ಮನ್‌ಕಿ ಬಾತ್‌ನಲ್ಲಿ ಉಲ್ಲೇಖ
ಇದೇವೇಳೆ ರವಿವಾರ ತನ್ನ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಓಂಕಾರ್‌ ಶೆಟ್ಟಿ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ದೇಶಕ್ಕಾಗಿ ಪ್ರಾಣವನ್ನರ್ಪಿಸಿದ ಯೋಧರಿಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣವಾಗಿದ್ದು, ಫೆ. 25ರಂದು ದಿಲ್ಲಿಯಲ್ಲಿ ಸೇನೆ, ದೇಶಕ್ಕೆ ಸಮರ್ಪಣೆಯಾಗಲಿದೆ ಎಂದು ಮನ್‌ ಕಿ ಬಾತ್‌ನಲ್ಲಿ ಹೇಳಿದ ಪ್ರಧಾನಿ ಮೋದಿ, “ನರೇಂದ್ರ ಮೋದಿ ಆ್ಯಪ್‌ನಲ್ಲಿ ನ್ಯಾಶನಲ್‌ ವಾರ್‌ ಮೆಮೋರಿಯಲ್‌ ನಿರ್ಮಾಣದ ಬಗ್ಗೆ ಕರ್ನಾಟಕ, ಉಡುಪಿಯ ಶ್ರೀ ಓಂಕಾರ್‌ ಶೆಟ್ಟಿ ಜೀಯವರು ಸಂತಸ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next