Advertisement

ಕೃಷಿ ಯೋಗ್ಯ ಕಾಡು ಸಂಕುಲ

04:37 AM Jan 28, 2019 | |

ಮಲೇಶಿಯಾ, ಇಂಡೋನೇಶಿಯಾ, ದಕ್ಷಿಣ ಅಮೇರಿಕಾ ಮೂಲದ ಹಲವು ಸಸ್ಯಗಳು, ನರ್ಸರಿಗಳ ರಾಯಭಾರಿತ್ವದಲ್ಲಿ ಸಲೀಸಾಗಿ ತೋಟ ತಲುಪುತ್ತಿವೆ. ನಾವು ದುಪ್ಪಟ್ಟು ಹಣ ನೀಡಿ ಸಸ್ಯ ಖರೀದಿಸಿ ಕೃಷಿ, ಮಾರುಕಟ್ಟೆಯ ಅಂದಾಜಿಲ್ಲದೇ ಸೋಲುತ್ತೇವೆ. ನಮಗೆಲ್ಲ ನೆರೆಹೊರೆಯ ಅರಣ್ಯ ಸಸ್ಯಗಳ ಬಳಕೆ ಜ್ಞಾನ ಅಗಾಧವಾಗಿದೆ. ಇವುಗಳಲ್ಲಿ ಹಲವು ಕೃಷಿ ಯೋಗ್ಯ ಸಸ್ಯಗಳಿವೆ. ಇವು, ಪರಿಸರಕ್ಕೆ ಹೊಂದಿಕೊಂಡು, ಸುತ್ತಲಿನ ಜೀವಲೋಕದ ಜೊತೆ ಸಂಬಂಧ ಉಳಿಸಿಕೊಂಡು, ನಮಗೂ ಬದುಕು ನೀಡುತ್ತವೆ.

Advertisement

‘ಜೋರು ಬರಗಾಲ ಬಂದು, ಹುಣಸೆ ಮರ ಪೂರ್ತಿ ಒಣಗಿ ಎಲೆ ಉದುರಿಸಿ ಬಿಸಿಲಿಗೆ ಕಾಯಬೇಕು. ಹೀಗಾದರೆ ಮುಂದಿನ ವರ್ಷ ಮರ ಭರ್ಜರಿ ಹೂವರಳಿಸಿ ಕಾಯಿ ಬಿಡ್ತದೆ ಎಂದು’ ಗದಗದ ಶಿರಹಟ್ಟಿ ರೈತರೊಬ್ಬರು ಹೇಳಿದ್ದರು. ಅಂದರೆ, ಬರ ಈ ಮರಕ್ಕೆ ಇಷ್ಟವೆಂದಾಯ್ತು. ‘ಬಿದಿರುಗಳದಾಗ ಬಡಿದು ಹುಣಸಿ ಕಾಯಿ ಕೊಯ್ಯಬೇಕು, ಟೊಂಗೆಗೆ ಹೊಡೆದು ಗಾಯ ಮಾಡಿದ್ರೆ ಫ‌ಸಲು ಜಾಸ್ತಿ’ ಎಂಬುದು ಕುಷ್ಟಗಿಯ ದೇವೇಂದ್ರಪ್ಪ ಬಲೂಟಗಿಯವರ ಮಾತು. ನಮ್ಮ ಕಡೀ ಮಳೀನೇ ಬಂದಿಲ್ಲ, ದನಕರು ಕುಡಿಯಾಕ ನೀರಿಲ್ಲ, ಹೊಲದಾಗ ಬೆಳೆ ಇಲ್ಲ. ಹುಣಸೆ, ಬೇಲದಲ್ಲಿ ಫ‌ಲ ಚೆನ್ನಾಗಿದೆಯೆಂದು ಬಳ್ಳಾರಿಯ ಕೂಡ್ಲಗಿಯ ಕೃಷಿಕ ವಿಶ್ವೇಶ್ವರ ಸಜ್ಜನ್‌ ಹೇಳುತ್ತಾರೆ. ತುಮಕೂರು ತೋನಕೆರೆ ಪ್ರದೇಶದಲ್ಲಿ ಬರದಲ್ಲಿ ಹುಣಸೆ ಫ‌ಸಲು ಚೆನ್ನಾಗಿದೆ.

ಫ‌ಸಲೇನೋ ಚೆನ್ನಾಗಿ ಬಂದಿದೆ ನಿಜ, ಆದರೆ, ಬೆಲೆ ಕುಸಿದಿದೆ ಎಂಬುದು ಕೃಷಿ ಮಿತ್ರ ಪದ್ಮರಾಜರ ನೋವು. ಒಂದು ಮರದ ಜ್ಞಾನ ಆಲಿಸುತ್ತ ನಾಡು ಸುತ್ತಾಡಿದರೆ ಅನುಭವದ ಕತೆಗಳು ಕೇಳಿಸುತ್ತವೆ. ಐದನೇ ಶತಮಾನದಲ್ಲಿ ಮೈಸೂರು ತಲಕಾಡಿನ ಜಿನ ನಗರ ಗ್ರಾಮದ ಒಡೆಯನಾದ ನಾಗ­ಕುಮಾರನ ಮಗ ಮಾಚಿಮಯ್ಯ ದೇವರು, ರಟ್ಟ ಮತಶಾಸ್ತ್ರವೆಂಬ ವಚನ ಗ್ರಂಥ ಬರೆದಿದ್ದಾರೆ. ಅವರು ಹುಣಸೆ ಮರದಲ್ಲಿ ಫ‌ಲ ಜಾಸ್ತಿಯಾದ ವರ್ಷ ಭತ್ತದ ಬೆಳೆ ಹೆಚ್ಚೆಂದು, ಕಾಡು ಮರದಲ್ಲಿ ಕೃಷಿ ಶಕುನ ಹೇಳಿದವರು. ಕಾಡು ಮರದಲ್ಲಿ ಎಷ್ಟೊಂದು ಕೃಷಿ ಕಲಿಕೆ ಇದೆ!?

ಬರ ಗೆಲ್ಲಲು ಮರ ಬೇಕು. ಹೊಲ, ತೋಟದ ಮರಗಳಿಗೆ ಕಾಡಿನ ಸಂಬಂಧವಿದ್ದರೆ ಪರಿಸರಕ್ಕೆ ಹೊಂದಿ­ಕೊಂಡು ಅವು ಬರ ಗೆಲ್ಲುವ ಶಕ್ತಿ ಪ್ರದರ್ಶಿಸುತ್ತವೆ. ಪರಿಸರಕ್ಕೆ ಸಂಬಂಧವಿಲ್ಲದ ಸಸ್ಯಗಳನ್ನು ನಾಟಿಮಾಡಿದಾಗ ನೀರು, ಗೊಬ್ಬರ, ನಿರ್ವಹಣೆಗೆ ಹಣ ಖರ್ಚಾಗುತ್ತದೆ. ನೇರಳೆ, ಸೀತಾಫ‌ಲ, ಹೆಬ್ಬೇವು, ಬೇವು, ನೆಲ್ಲಿ, ಬೋರೆ, ಎಕನಾಯಕ, ಬಿದಿರು, ಲೋಳೆಸರ… ಹೀಗೆ ಕಾಡು ಮೂಲದ ಸಸ್ಯಗಳಿಗೆ ಕೃಷಿ ಮಾನ್ಯತೆ ಈಗಾಗಲೇ ದೊರಕಿದೆ. ಬಿಸಿಲಿನ ಭಯದಲ್ಲಿ ಗಿಡ ಒಣಗಿ ನಂತರ ನೀರುಣಿಸಿದಾಗ ಚಿಗುರಿ ಹೂವರಳುವುದನ್ನು ದಾಳಿಂಬೆ, ದ್ರಾಕ್ಷಿ, ಮಲ್ಲಿಗೆಯಲ್ಲಿ ನೋಡುತ್ತೇವೆ. ಕಾಡು ಸಸ್ಯಗಳಲ್ಲಿಯೂ ಇಂಥ ಗುಣಗಳಿವೆ. ಅಕ್ಕಪಕ್ಕದ ಕಾಡಲ್ಲಿ ಕಲಿತಿದ್ದನ್ನು ಕೃಷಿ ಜ್ಞಾನ ಶಾಸ್ತ್ರೀಯವಾಗಿ ಸುಧಾರಿಸಿ ಅಳವಡಿಸಿಕೊಂಡಿದೆ. ನಮ್ಮ ಕೃಷಿಯಲ್ಲಿ­ ರುವ ಎಷ್ಟೋ ಸಸ್ಯಗಳ ಮೂಲತಳಿಗಳು ಕಾಡಲ್ಲಿವೆ. ಕೃಷಿ ಹಾಗೂ ಕಾಡಿನಲ್ಲಿ ಕೊಡು- ಕೊಳ್ಳುವಿಕೆಯ ಸಂಬಂಧಗಳಿವೆ. ಕಾಡುಬಾಳೆ, ಕಾಡು ಕಾಳು ಮೆಣಸು, ಕಾಡು ಅಮಟೆ, ಕಾಡುಮಾವು ಮುಂತಾಗಿ ಸಸ್ಯಗಳ ಪಟ್ಟಿ ಮಾಡಬಹುದು.

ಮಳೆಗಾಲ ಶುರುವಾದಾಗ ಹೊಸ ಹೊಸ ಸಸಿ ಬೆಳೆಸುವ ಕನಸು ಕಾಣುತ್ತೇವೆ. ದೂರದ ನರ್ಸರಿಗಳಿಂದ ಸಸಿ ತಂದು ನಾಟಿ ಮಾಡುತ್ತೇವೆ. ಪರಿಸರದಲ್ಲಿ ಸಸ್ಯ ಬೆಳೆಯಬಹುದೇ ? ಎಂಬುದಕ್ಕಿಂತ ನಮ್ಮ ಹೊಲದಲ್ಲಿ ಆ ಸಸ್ಯ ಬೆಳೆಸಬೇಕೆಂಬ ಆಸೆ ಮುಖ್ಯವಿದೆ. ಅತಿಯಾದ ಮಳೆ, ಬಿಸಿಲಿಗೆ ಹೊಂದಿಕೊಂಡು ಸಸಿ ಬೆಳೆದರೆ ಖುಷಿ. ಕಾಡು ತೋಟದ ಸಸ್ಯ ಆಯ್ಕೆಯಲ್ಲಿ ಅಕ್ಕಪಕ್ಕದ ಅರಣ್ಯದ ತಿಳುವಳಿಕೆ ಮುಖ್ಯವೆಂದು ಹಲವು ಸಾರಿ ಗಮನಿಸಿದ್ದೇವೆ. ಊರಿನ ಗುಡ್ಡದಲ್ಲಿ ನೇರಳೆ, ಬೇವು, ಬೇಲ, ಬೋರೆ ಚೆನ್ನಾಗಿ ಬೆಳೆಯುತ್ತದೆಂದರೆ ಅವು ತೋಟದ ಭೂಮಿಗೆ ಬರಲು ಯೋಗ್ಯವೆಂದು ಭಾವಿಸಬಹುದು. ಮುಖ್ಯವಾಗಿ ನೀರಿಲ್ಲದೇ ಒಣ ಮಣ್ಣಿನಲ್ಲಿ ಬೆಳೆಯುತ್ತದೆಂದು ಗಮನಿಸಬೇಕು. ಕಾಡಿನ ಫ‌ಲಗಳಿಗೆ ವಾಣಿಜ್ಯಕ ಮಹತ್ವ ಇರಲಿಕ್ಕಿಲ್ಲ. ಆದರೆ ಅದರಲ್ಲಿನ ಫ‌ಲ ಗುಣದಲ್ಲಿ ಔಷಧೀಯ ಮಹತ್ವ, ರುಚಿ ಜಾಸ್ತಿ. ಮೌಲ್ಯವರ್ಧನೆಯ ಮೂಲಕ ಇದರ ಮಾರುಕಟ್ಟೆ ವಿಸ್ತರಿಸುವ ಕೆಲಸ ನಡೆದರೆ ಕೃಷಿ ಗೆಲ್ಲಲು ಅನುಕೂಲ.

Advertisement

ಒಮ್ಮೆ ತೀರಾ ಲಾಭದಾಯಕವಾಗಿ ಬೆಳೆಯಲು ಯೋಗ್ಯವಲ್ಲದಿದ್ದರೂ ಅಡಿಕೆ, ತೆಂಗು, ಬಾಳೆ, ಕಾಫಿ, ಮಾವು, ಹಲಸು ಮುಂತಾದ ಸಸ್ಯಗಳ ಜೊತೆ ಕೆಲವಾದರೂ ಕಾಡು ಮೂಲದ ಸಸ್ಯಗಳನ್ನು ಉಳಿಸಿ ಬೆಳೆಸಬೇಕು. ಕಾಡು ಕಾಳು ಮೆಣಸಿನ ಬಳ್ಳಿ ತೋಟದಲ್ಲಿ ಒಂದೆರಡಾದರೂ ಇದ್ದರೆ ಕಸಿ ಮಾಡಿ ರೋಗಸಹಿಷ್ಣು ಬಳ್ಳಿಯನ್ನು ಅಭಿವೃದ್ಧಿಪಡಿಸಲು ಅನುಕೂಲವಾಗಬಹುದು. ಕಾಡಿನ ರಾಮಪತ್ರೆಗೆ ತೋಟದ ಜಾಯಿಕಾಯಿ ಕಸಿ ಮಾಡಬಹುದು. ಕಾಡಿನ ತಂಪು ನೆಲೆಯಲ್ಲಿ ಬೆಳೆಯುವ ಚಕ್ರಾಣಿ ಔಷಧ ಸಸ್ಯ, ಅಡಿಕೆ ತೋಟದ ಜವುಗು ನೆಲೆಯಲ್ಲಿ ಬದುಕಿ ಬಳಕೆಗೆ ಸಿಗುತ್ತದೆ. ಸದಾ ನೀರು ಹರಿಯುವ ನೆಲೆಯಲ್ಲಿ ಊರಿದ ಬಜೆ ಸಸ್ಯ ಯಾವತ್ತೂ ಬದುಕಿದ್ದು ಮದ್ದಿಗೆ ನೆರವಾಗುತ್ತದೆ. ನೇರಳೆ, ಮಾವು, ಹಲಸು, ಹೆಬ್ಬಲಸು, ಬೈನೆ ಮುಂತಾದ ಕಾಡು ಫ‌ಲವೃಕ್ಷಗಳು ತೋಟದ ಸನಿಹದಲ್ಲಿದ್ದರೆ ವನ್ಯಮೃಗಗಳ ಹಾವಳಿ ಕಡಿಮೆಯಾಗುತ್ತದೆ. ಪಶ್ಚಿಮದ ಬಿಸಿಲು ಪ್ರಹಾರಕ್ಕೆ ಮರ ಸಾಯುವುದಿಲ್ಲ.

ಭೂಮಿಯಲ್ಲಿ ಉತ್ತಮ ಫ‌ಲವನ್ನು ಒಂದು ಮರ ನೀಡುತ್ತದೆಂದರೆ ಅದು ಮರದ ತಾಕತ್ತು. ಆ ಫ‌ಲಕ್ಕೆ ಉತ್ತಮ ಮಾರುಕಟ್ಟೆ ವಿಸ್ತರಿಸುವ ಜಾಣ್ಮೆ ನಮಗೆ ಬೇಕು. ಇದಕ್ಕೆ ಅಗತ್ಯ ಸಂಶೋಧನೆ, ಸಂಸ್ಕರಣೆಯ ಪರಿಜ್ಞಾನ, ಆಹಾರ-ವೈವಿದ್ಯ ಜ್ಞಾನದ ನೆರವು ಅಗತ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲರಲ್ಲಿ ಆರೋಗ್ಯದ ಕುರಿತು ಕಾಳಜಿ ಹೆಚ್ಚಿದೆ. ಉತ್ತಮ ಆರೋಗ್ಯ ನೀಡುವ ಫ‌ಲ ಖರೀಸಲು ಎಲ್ಲರೂ ಆಸಕ್ತಿ ವಹಿಸಿದ್ದಾರೆ. ಆದರೆ ಮಾರುಕಟ್ಟೆಯ ಆಹಾರ ಸರಕಿನಲ್ಲಿ, ಆಯುರ್ವೇದ ಮದ್ದಿನಲ್ಲಿ ಎಷ್ಟು ಸತ್ಯ-ಸತ್ವವಿದೆಯೆಂದು ಗೊತ್ತಾಗುತ್ತಿಲ್ಲ. ಜನಜಾಗೃತಿ, ಸರಕಾರದ ನೀತಿಗಳಿಂದಾಗಿ ಸಾವಯವ ಮಾರುಕಟ್ಟೆ ಬೆಳೆದಿದೆ. ನಿಜವಾದ ಸಾಚಾ ಬೆಳೆ ಎಷ್ಟಿದೆಯೆಂದು ಕೃಷಿ ನೆಲೆ ಸುತ್ತಾಡಿದರೆ ಅರ್ಥವಾಗುತ್ತದೆ. ಕಾಡು ಸಸ್ಯದ ಹೂವು, ಫ‌ಲ, ತೊಗಟೆ, ಚಿಗುರು, ಎಲೆ, ಬೇರು, ಬೀಜಗಳು ಔಷಧ ತಯಾರಿಕೆಯಲ್ಲಿ ಮಹತ್ವವಿದೆ. ತಂಬುಳಿ, ಕಷಾಯ, ಚಟ್ನಿ ಮುಂತಾದ ಸತ್ವಯುತ ಸಾವಯವ ಆಹಾರವಾಗಿ ಬೇಡಿಕೆ ಇದೆ. ಜನಪದ ಅಡುಗೆ ಆಹಾರ, ಆರೋಗ್ಯಕ್ಕೆ ಒತ್ತು ನೀಡಿದೆ. ಅದರಕ್ಕೆ ಕಹಿ, ಉದರಕ್ಕೆ ಸಿಹಿಯೆಂದು ಸಾರಿದೆ. ಕೃಷಿಕರು ಕಳೆದುಕೊಂಡಿದ್ದನ್ನು ಬಿದ್ದಲ್ಲಿಯೇ ಹುಡುಕಬೇಕು. ಹೀಗಾಗಿ ಸ್ಥಳೀಯ ಅರಣ್ಯ ಸಸ್ಯಗಳಿಗೆ ತೋಟದಲ್ಲಿ ಸ್ವಲ್ಪ ಆಶ್ರಯ ನೀಡಿದರೆ ಕೃಷಿಕರ ಬದುಕು ಬದಲಿಸಬಹುದು.

ಮಲೆನಾಡು, ಕರಾವಳಿ, ಅರೆಮಲೆನಾಡಿನ ನೆಲೆಗಳಲ್ಲಿ ಹಳ್ಳಿ ಸುತ್ತಾಡಿ ಪಾರಂಪರಿಕ ಆಹಾರಗಳ ಪಟ್ಟಿ ತಯಾರಿಸಿದರೆ, ನೂರಾರು ಅರಣ್ಯ ಸಸ್ಯಗಳ ಪರಿಚಯವಾಗುತ್ತದೆ. ಇಂಥ ಅಪರೂಪದ ಸಸ್ಯಗಳ ಅರಣ್ಯ, ಕಾಲಾಂತರದಲ್ಲಿ ನಾಶವಾಗುತ್ತ ಇಂದು ಏಕಜಾತಿಯ ಅಕೇಶಿಯಾ, ತೇಗ, ನೀಲಗಿರಿ, ಗಾಳಿ ನೆಡುತೋಪುಗಳು ನಿಂತಿವೆ. ಸ್ಥಳೀಯ ಸಸ್ಯಗಳ ಬಳಕೆ ಜ್ಞಾನ, ಮಹತ್ವದ ಅರಿವಿಲ್ಲದವರು ಅಧಿಕಾರಿಗಳಾಗಿ ಅರಣ್ಯಾಡಳಿತಕ್ಕೆ ನಿಂತಿದ್ದಾರೆ. ಶೀಘ್ರ ಬೆಳೆಯುವ ನೆಡುತೋಪು ಬೆಳೆಸಿ ಕಟಾವು ಮಾಡಿ ಉದ್ಯಮಗಳಿಗೆ ಸಾಗಿಸುವುದು ಸರಳ ಕೆಲಸವಾಗಿದೆ. ಇದು ಕೃಷಿ ನೆಲೆಯಲ್ಲಿ ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ. ಆಹಾರ, ಔಷಧಕ್ಕೆ ಅಗತ್ಯ ಸಸ್ಯ ಕೈಗೆಟುಕದೇ ಅರಣ್ಯವಾಸಿಗಳ ಸಸ್ಯ ಸಂಬಂಧಗಳು ಕುಸಿಯುತ್ತ ಜ್ಞಾನ ಬತ್ತುತ್ತಿದೆ.

ಪಶ್ಚಿಮ ಘಟ್ಟದ ಕಾಡು ಅಮೂಲ್ಯ, ಅದ್ಬುತವೆಂದು ನಗರದಲ್ಲಿ ಕುಳಿತು ಹೇಳಬಹುದು, ಭಾಷಣ ಬಿಗಿಯಬಹುದು. ಆದರೆ ಸ್ಥಳೀಯರಿಗೆ ಹೇಗೆ ಮುಖ್ಯವೆಂದು ಪರಂಪರೆ ಬಳಕೆ ತಿಳುವಳಿಕೆಯ ಮೂಲಕ ಅರಿಯದಿದ್ದರೆ ಕಾಡಿನ ಪ್ರೀತಿ ಹಬ್ಬುವುದಿಲ್ಲ. ಕೃಷಿಯೋಗ್ಯ ಸಸ್ಯಗಳನ್ನು ಗುರುತಿಸಿ, ಉಳಿಸಿ ಬಳಸದಿದ್ದರೆ ಕೃಷಿಕರ ಆಹಾರ ಆರೋಗ್ಯ ಹಾಳಾಗುತ್ತದೆ. ಅರಣ್ಯ ಸಸ್ಯ ಬಳಸಿ ಅಡುಗೆ ತಯಾರಿಸುವ ಅಮ್ಮನ ಅಡುಗೆ ಜ್ಞಾನ ಅಮ್ಮನ ಉಪ್ಪಿನಕಾಯಿಯಂತೆ ಜನಪ್ರಿಯವಾಗುವ ಕಾಲ ಈಗ ಸನ್ನಿಹಿತವಾಗಿದೆ. ಉತ್ತಮ ಪರಿಸರ, ನೆಲಜಲ ಸಂರಕ್ಷಣೆ, ಆರೋಗ್ಯ, ಆರ್ಥಿಕತೆಯ ಜೊತೆ ಕೃಷಿ ಸಂಬಂಧ ವೃದ್ಧಿಯಾಗಲು ಕಾಡು ಸಸ್ಯಗಳು ಕೃಷಿ ನೆಲೆಗೆ ಬರಬೇಕಿದೆ. 

ಮುಂದಿನ ಸಂಚಿಕೆ: ಗುಮ್ಮನ ಗೂಟ ಹಾಗೂ ಸಿವೆಟ್ ಕಾಫೀ

Advertisement

Udayavani is now on Telegram. Click here to join our channel and stay updated with the latest news.

Next