Advertisement

ಕೋಟೆರಾಯನ ಬೆಟ್ಟ ಕುಸಿತ; 3 ಕಿ.ಮೀ ದೂರ ಜರಿದ ಗುಡ್ಡ; ಹಳ್ಳ ನಿರ್ಮಾಣ

01:19 AM Sep 22, 2020 | mahesh |

ಸಿದ್ದಾಪುರ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ರವಿವಾರ ರಾತ್ರಿ ಕೋಟೆರಾಯನ ಬೆಟ್ಟ ಕುಸಿದು ಘಟ್ಟದ ಪರಿಸರದಲ್ಲಿ ಆತಂಕಕ್ಕೆ ಕಾರಣವಾಗಿವೆ. ಪಶ್ಚಿಮ ಘಟ್ಟದ ಮಧ್ಯಭಾಗದಿಂದ ಸುಮಾರು 3 ಕಿ.ಮೀ. ತನಕ ಗುಡ್ಡ ಜರಿದು ಹಳ್ಳ ನಿರ್ಮಾಣಗೊಂಡಿದೆ.

Advertisement

ಕೋಟೆರಾಯನ ಬೆಟ್ಟವು ಉಡುಪಿ ಮತ್ತು ಶಿವಮೊಗ್ಗ ಗಡಿ ಭಾಗದಲ್ಲಿರುವ ದುರ್ಗಮವಾದ ಕಾಡಿನ ಪ್ರದೇಶವಾಗಿದೆ. ಮಡಾಮಕ್ಕಿಯಿಂದ 5 ಕಿ.ಮೀ. ಮತ್ತು ಶೇಡಿಮನೆ ಗ್ರಾಮದ ಅಗಳಿಬೈಲಿನಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಬೆಟ್ಟದ ಬುಡದಲ್ಲಿ ಮನ್ನಾಡಿ ಮತ್ತು ಅಗಳಿಬೈಲು ಹಳ್ಳಿಗಳಿವೆ. ಗುಡ್ಡದ ಮಣ್ಣು ಮನ್ನಾಡಿಯ ತನಕ ಜರಿದು ಬಂದಿದೆ. ಇನ್ನಷ್ಟು ಕುಸಿತ ಸಂಭವಿಸಿದರೆ ಮನ್ನಾಡಿ ಭಾಗದ ಸುಮಾರು 50 ಮನೆಗಳಿಗೆ ಹಾಗೂ ಕೃಷಿ ಭೂಮಿ ಮತ್ತು ತೋಟಗಳಿಗೆ ಹಾನಿಯಾಗುವ ಸಾಧ್ಯತೆಗಳು ಇವೆ.

ಬೆಟ್ಟದ ಮೇಲೆ ಕೋಟೆರಾಯನ ವಿಗ್ರಹ, ದೇವಸ್ಥಾನ, ಕೋಟೆಗಳು ಮುಂತಾದ ಕುರುಹುಗಳಿವೆ. ಹಿಂದಿನ ಕಾಲದಲ್ಲಿ ವಾಹನಗಳ ಸಂಪರ್ಕ ವ್ಯವಸ್ಥೆ ಇಲ್ಲದ ಕಾಲದಲ್ಲಿ ಘಟ್ಟದ ಮೇಲಿನವರು ಹಾಗೂ ಕೆಳಗಿನವರು ಸಂಪರ್ಕಿಸುವ ಕಾಲು ದಾರಿ ಇದಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅನೇಕ ಕುರುಹುಗಳು ಇಲ್ಲಿವೆ. ಕುಸಿತದಿಂದ ಐತಿಹಾಸಿಕ ಕುರುಹುಗಳಿಗೆ ಹಾಗೂ ದೇವಸ್ಥಾನಕ್ಕೆ ಹಾನಿ ಸಂಭವಿಸಿಲ್ಲ. ಕೋಟೆರಾಯನ ಬೆಟ್ಟದಲ್ಲಿ ಹಿಂದೆ ಢಕ್ಕೆಬಲಿ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next