Advertisement

ಎತ್ತರಕ್ಕೇರಿದ ಉತ್ತರದವರ ನಿರೀಕ್ಷೆ

02:16 PM Apr 14, 2019 | Team Udayavani |
ಬೆಳಗಾವಿ: ಸಂಪೂರ್ಣ ನಗರ ಪ್ರದೇಶದಿಂದಲೇ ಕೂಡಿರುವ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಸಿಲಿನ ತಾಪದೊಂದಿಗೆ ಲೋಕ ಚುನಾವಣೆಯ ಕಾವು ಏರತೊಡಗಿದೆ. ಪ್ರತಿ ಚುನಾವಣೆಯಂತೆ ಈ ಸಲವೂ ಲೋಕದ ಅಭ್ಯರ್ಥಿಯೇ ಗೌಣ. ಏನಿದ್ದರೂ ಮೇಲೆ ನೋಡಿ ಮತ ಹಾಕುವ ಇಲ್ಲಿಯ ಜನ ಲೋಕ ಅಖಾಡಕ್ಕೆ ಅಣಿಯಾಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ಬೆಳಗಾವಿ ಉತ್ತರ ಕ್ಷೇತ್ರ ಈಗ ಮತ್ತೂಂದು ರಣಾಂಗಣಕ್ಕೆ ಸಿದ್ಧಗೊಂಡಿದೆ. ಬೆಳಗಾವಿಯ ಉತ್ತರದ ಜನರು ಜನಪ್ರತಿನಿಧಿಗಳಿಗೆ ಆಗಾಗ ಖಡಕ್‌ ಉತ್ತರ ಕೊಡುತ್ತಲೇ ಬಂದಿದ್ದಾರೆ. ಲೋಕಸಭೆ ಚುನಾವಣೆಗಾಗಿ ಅಖಾಡ ಸಿದ್ಧಗೊಂಡಿದ್ದು, ಮತ ಕೊಡಿಸಲು ಹಾಲಿ-ಮಾಜಿ ಶಾಸಕರು ಪೈಪೋಟಿ ನಡೆಸಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಪ್ರಮುಖ ಬೆಳವಣಿಗೆಗಳಿಗೆ ಉತ್ತರ ಕ್ಷೇತ್ರದ ಜನ ಉತ್ತರ ಕೊಡುತ್ತಾರೆ. ರಾಷ್ಟ್ರೀಯ ವಿಷಯಗಳೇ ಪ್ರಮುಖ ಅಂಶಗಳಾಗಿರುವುದು ಚರ್ಚೆಯ ವಿಷಯ. ಸ್ಮಾರ್ಟ್‌ ಹಣೆಪಟ್ಟಿ ಕಟ್ಟಿಕೊಂಡಾಗಿನಿಂದ ಅಭಿವೃದ್ಧಿಯತ್ತ ದಾಪುಗಾಲಿಕ್ಕುತ್ತಿರುವ ಕ್ಷೇತ್ರದಲ್ಲಿ ಈ ಬಾರಿಯ ಸ್ಪರ್ಧೆಯಲ್ಲಿ ಸ್ಥಳೀಯ ವಿಷಯಗಳಿಗಿಂತ ರಾಷ್ಟ್ರಮಟ್ಟದ ಆಗು ಹೋಗುಗಳೇ ಪ್ರಮುಖ ವಿಷಯವಾಗಿದೆ.
ಆಗ ಜಿದ್ದಾಜಿದ್ದಿ, ಈಗ ಸಪ್ಪೆ ಸಪ್ಪೆ: ಬಿಜೆಪಿ ಶಾಸಕನನ್ನು ಹೊಂದಿರುವ ಉತ್ತರ ಕ್ಷೇತ್ರದಲ್ಲಿ ಲೋಕ ಚುನಾವಣೆಯ ಕಾವು
ದಿನದಿನಕ್ಕೆ ಹೆಚ್ಚಾಗುತ್ತಿದೆ. ಒತ್ತಡದ ಬದುಕಿನ ನಡುವೆಯೂ ಇಲ್ಲಿಯ ಜನ ಚುನಾವಣೆ ವಿಷಯ ಕುರಿತು ಚರ್ಚಿಸುತ್ತಿದ್ದಾರೆ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಮೂಲ ಸೌಕರ್ಯಗಳಿಲ್ಲದೇ ಕೆಲವು ಪ್ರದೇಶಗಳು ಸಮಸ್ಯೆ ಅನುಭವಿಸುತ್ತಿದ್ದು, ಇದೆಲ್ಲವೂ ಈ ಬಾರಿಯ ಚುನಾವಣೆಯಲ್ಲಿ ಗೌಣ ಎನ್ನುವುದಂತೂ ಸತ್ಯ.
ಸ್ಮಾರ್ಟ್‌ ಸಿಟಿ ಆಗಿರುವ ಬೆಳಗಾವಿಯಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಣದಲ್ಲಿ ಗೆದ್ದಿರುವ ಅನಿಲ ಬೆನಕೆ ಜನ ಸಂಪರ್ಕದಲ್ಲಿದ್ದಾರೆ. ಕ್ಷೇತ್ರದೆಲ್ಲೆಡೆ ಹಿಡಿತ
ಸಾಧಿಸಿರುವ ಬೆನಕೆ ಎಲ್ಲ ಪ್ರದೇಶಗಳಲ್ಲೂ ಸುತ್ತುತ್ತಿದ್ದಾರೆ. ವಿಧಾನಸಭೆಯಲ್ಲಿ ಸೋಲು ಕಂಡಿರುವ ಮಾಜಿ ಶಾಸಕ ಫಿರೋಜ ಸೇಠ ಕೂಡ ಜನರ ಮಧ್ಯೆ ಇದ್ದರೂ ಅದು ಅಷ್ಟಕ್ಕಷ್ಟೇ ಎಂಬಂತಾಗಿದೆ.
ಜಾತಿಗಿಂತ ದೇಶದತ್ತ ಗಮನ: ಜಾತಿ ಲೆಕ್ಕಾಚಾರದ ಮೇಲೆಯೇ ಇಲ್ಲಿ ಚುನಾವಣೆ ನಡೆಯುತ್ತದೆ. ಧರ್ಮಗಳ
ಆಧಾರದ ಮೇಲೆ ಮತ ವಿಭಜನೆ ಆಗುತ್ತವೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಇಲ್ಲಿ ಭಿನ್ನ ಆಗಿರುತ್ತವೆ. ಎರಡೂ ಚುನಾವಣೆ ವೇಳೆ ವಿಷಯ ವಸ್ತುಗಳ ಮಧ್ಯೆ ವ್ಯತ್ಯಾಸ ಇರುತ್ತದೆ. ಅದರಂತೆ ಸಾಮಾನ್ಯವಾಗಿ ಜನರು ವಿಧಾನಸಭೆ ಚುನಾವಣೆ ವೇಳೆ ಜಾತಿ ಲೆಕ್ಕಾಚಾರ ಆಧಾರದ ಮೇಲೆ ಮತ ಚಲಾಯಿಸಿದರೆ, ಲೋಕ ಚುನಾವಣೆಗೆ ರಾಷ್ಟ್ರ ಮಟ್ಟದ ಬೆಳವಣಿಗೆ ಆಧಾರದ ಮೇಲೆ ಹಕ್ಕು ಚಲಾಯಿಸುತ್ತಾರೆ.
ಪಾಕಿಸ್ತಾನದ ಬಾಲಾಕೋಟ್‌ ಮೇಲೆ ಭಾರತೀಯ ಸೈನ್ಯದ ಸರ್ಜಿಕಲ್‌ ಸ್ಟೈಕ್‌ ಬಗ್ಗೆ ಹೆಚ್ಚೆಚ್ಚು ಮಾತುಗಳು ನಡೆದಿವೆ.
ಭಾರತದ ಸೈನಿಕರ ದಾಳಿ ಪ್ರಮುಖ ವಿಷಯವಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರೂ
ಮೋದಿ ನೋಡಿ ಮತ ಚಲಾಯಿಸಲು ಬಹುತೇಕ ಜನ ಸಿದ್ಧಗೊಂಡಿದ್ದಾರೆ. ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿದ್ದರೂ
ರಾಷ್ಟ್ರೀಯ ವಿಷಯಗಳು ಇಲ್ಲಿ ಮಹತ್ವದ ಅಂಶಗಳಾಗಿವೆ.
ವ್ಯಾಪಾರಸ್ಥರು, ಮಧ್ಯಮ ವರ್ಗದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಿನನಿತ್ಯದ ಜಂಜಾಟದಲ್ಲಿ ಯಾರು ಗೆದ್ದರೆ
ನಮಗೇನು ಎಂಬ ಮನಸ್ಥಿತಿಯವರೂ ಇದ್ದಾರೆ. ವಿಧಾನಸಭೆ ಚುನಾವಣೆ ವೇಳೆ ನಡೆದ ಕಸರತ್ತು ಲೋಕಸಭೆ ವೇಳೆ ಅಷ್ಟೊಂದು ಕಂಡು ಬರುತ್ತಿಲ್ಲ. ಆದರೆ ಅಭ್ಯರ್ಥಿಗಳ ಓಡಾಟ ಇಲ್ಲದಿದ್ದರೂ ಸ್ಥಳೀಯ ನಾಯಕರಂತೂ ಕ್ಷೇತ್ರದಲ್ಲಿ ಸುತ್ತು ಹಾಕಿ ಮತದಾರರ ಮನವೊಲಿಸುತ್ತಿದ್ದಾರೆ.
ಮೈತ್ರಿ ಪರ ಜೆಡಿಎಸ್‌ ಮೌನ: ಬಿಜೆಪಿ ಮೂರ್‍ನಾಲ್ಕು ತಿಂಗಳಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದರೆ ಕಾಂಗ್ರೆಸ್‌ ಈವರೆಗೂ ಒಂದೇ ಒಂದು ಸಭೆ ನಡೆಸಿಲ್ಲ. ಮೈತ್ರಿ ಪಕ್ಷದ ಅಭ್ಯರ್ಥಿ ವಿ.ಎಸ್‌. ಸಾಧುನವರ ಬೆಂಬಲಕ್ಕೆ ನಿಂತಿರುವ ಮಾಜಿ ಶಾಸಕ ಫಿರೋಜ ಸೇಠ ಅಲ್ಲಲ್ಲಿ ಕೆಲವು ಕಾರ್ಯಕರ್ತರನ್ನು ಭೇಟಿಯಾಗಿ ಚರ್ಚಿಸಿದ್ದು ಬಿಟ್ಟರೆ ಇನ್ನುಳಿದಂತೆ ಯಾವುದೇ ಪ್ರಚಾರ ಕುರುಹುಗಳು ಕಂಡು ಬಂದಿಲ್ಲ. ಜೆಡಿಎಸ್‌ ಅಂತೂ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿರುವುದು ಎಲ್ಲಿಯೂ ಕಾಣ ಸಿಗುತ್ತಿಲ್ಲ.
ಗೆಲುವಿನ ಹಾದಿ ಸುಗಮ ಮಾಡಿಕೊಳ್ಳಲು ಅಭ್ಯರ್ಥಿಗಳು ಪರದಾಡುತ್ತಿದ್ದು, ಇನ್ನೂವರೆಗೆ ಕಾಂಗ್ರೆಸ್‌ ಅಭ್ಯರ್ಥಿ ಇತ್ತ ಸುಳಿದಿಲ್ಲ. ಬಿಜೆಪಿಯವರು ಹಲವಾರು ಬಾರಿ ಸಭೆ ನಡೆಸಿ ಕಾರ್ಯಕರ್ತರನ್ನು ಬೂತ್‌ ಮಟ್ಟದಲ್ಲಿ ಸದೃಢಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸಂಸದ ಅಂಗಡಿ ಅನೇಕ ಸಲ ಭೇಟಿ ಕೊಟ್ಟಿದ್ದಾರೆ. ಆದರೆ ಅಂಗಡಿ ಮಹತ್ವದ ಯಾವುದೇ ಕೆಲಸ ಮಾಡಿಲ್ಲ ಎಂಬ ಬೇಸರ ಜನರದ್ದು.
ಏನಿದೆ ಜನರ ಮೂಡ್‌?
ಪ್ರಚಾರ ಕಣದಲ್ಲಿ ಹಲವು ವಿಚಾರಗಳು ಪ್ರಧಾನವಾಗಿ ಚರ್ಚೆಯಾಗುತ್ತಿವೆ. ಬಿಜೆಪಿಯವರು ರಾಷ್ಟ್ರೀಯ ಭದ್ರತೆಯನ್ನು
ಪ್ರಧಾನ ವಿಚಾರವಾಗಿ ಇಟ್ಟುಕೊಂಡು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್‌ನವರು ಜಿಎಸ್‌ಟಿ, ನೋಟು
ಅಪನಗದೀಕರಣ ವಿಷಯವನ್ನೇ ಪ್ರಸ್ತಾಪಿಸಿ ವೋಟು ಕೇಳುತ್ತಿದ್ದಾರೆ. ಆದರೆ ಪ್ರಾದೇಶಿಕ ವಿಷಯಗಳಿಗಿಂತ ದೇಶದ ಬೆಳವಣಿಗೆಗಳ ಬಗ್ಗೆ ಜನರ ಮೂಡ್‌ ಇರುವುದು ಕಂಡು ಬಂದಿದೆ.
Advertisement

Udayavani is now on Telegram. Click here to join our channel and stay updated with the latest news.

Next