Advertisement

ಮಹದಾಯಿ ಹೋರಾಟಗಾರರ ಧರಣಿ ಅಂತ್ಯ

10:45 AM Oct 21, 2019 | Lakshmi GovindaRaju |

ಬೆಂಗಳೂರು: ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಬೇಕೆಂದು ಆಗ್ರಹಿಸಿ ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಕರ್ನಾಟಕ ರೈತ ಸೇನೆಯ ಹೋರಾಟಗಾರರು ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದು ಹುಬ್ಬಳ್ಳಿಗೆ ಮರಳಿದ್ದಾರೆ. ಇದೇ ವೇಳೆ, ರಾಜ್ಯಪಾಲರಿಗೆ ನೇರವಾಗಿ ಮನವಿ ಸಲ್ಲಿಸಲು ಸಾಧ್ಯವಾಗದ ಕಾರಣಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಬಿಸಿಲು, ಮಳೆಗೆ ಜಗ್ಗದೆ ಧರಣಿ: ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸೇನೆಯವರು ಕಳೆದ ಮೂರು ದಿನಗಳಿಂದ ನಗರದಲ್ಲಿ ಅಹೋರಾತ್ರಿ ಹೋರಾಟ ನಡೆಸಿದ್ದರು. ಬಿಸಿಲು, ಮಳೆ, ಚಳಿಗೆ ಜಗ್ಗದೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲೇ ಧರಣಿ ಮುಂದುವರಿಸಿದ್ದರು. ಈ ವೇಳೆ, ಕೆಲವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಶನಿವಾರ ಬೆಳಗ್ಗೆ 11ಗಂಟೆವರೆಗೆ ಪ್ರತಿಭಟನಾಕಾರರು ಗಡುವು ನೀಡಿದ್ದರು. ಈ ವಿಷಯ ತಿಳಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸಿದ್ದರು. ಗೋವಿಂದ ಕಾರಜೋಳ ಅವರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ, ಫ‌ಲಪ್ರದವಾಗಲಿಲ್ಲ. ನಂತರ, ರಾಜಭವನದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ, ರಾಜ್ಯಪಾಲರ ಭೇಟಿಗೆ ಅನುಮತಿ ಸಿಗಲಿಲ್ಲ.

ರಾಜ್ಯಪಾಲರ ಭೇಟಿಯಾಗದೇ ತಾವಿಲ್ಲಿಂದ ಕದಲುವುದಿಲ್ಲ. ನಮ್ಮ ಹಕ್ಕಿನ ನೀರನ್ನು ಕೊಡಲು ದೊಣ್ಣೆನಾಯಕನ ಅಪ್ಪಣೆ ಯಾಕೆ ಬೇಕು? ರಾಜ್ಯಪಾಲರ ಭೇಟಿಗೆ ಅವಕಾಶ ಮಾಡಿಕೊಡದಿರುವ ನಿಮಗೆ ನಾಚಿಕೆಯಾಗಬೇಕು. ಅನರ್ಹಗೊಂಡ ಶಾಸಕರ ಭೇಟಿಗೆ ಕ್ಷಣಾರ್ಧದಲ್ಲಿ ಅನುಮತಿ ಸಿಗುತ್ತದೆ. ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ಮಾಡುವ ನಮಗೆ ಅನುಮತಿ ಸಿಗಲಿಲ್ಲ ಎಂದು ಪ್ರತಿಭಟನಾನಿರತರು ಗೋವಿಂದ ಕಾರಜೋಳ ಅವರ ಬಳಿ ಅಸಮಾಧಾನ ತೋಡಿಕೊಂಡರು.

ಬಳಿಕ, ಗೋವಿಂದ ಕಾರಜೋಳ ಅಲ್ಲಿಂದ ತೆರಳಿದರು. ಈ ಮಧ್ಯೆ, ಅಂತರ್‌ರಾಜ್ಯ ಜಲ ವಿವಾದ ನದಿ ರಕ್ಷಣಾ ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌ ಅವರು ಪ್ರತಿಭಟನಾಕಾರರನ್ನು ಭೇಟಿಯಾಗಿ, ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಿದರು.

Advertisement

ಗೌರ್ನರ್‌ ಭೇಟಿಗೆ ಅವಕಾಶ ನೀಡಬೇಕಿತ್ತು
ಕಲಬುರಗಿ: ಮಹದಾಯಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಭೇಟಿಗೆ ರಾಜ್ಯಪಾಲರು ಅವಕಾಶ ನೀಡಬೇಕಿತ್ತು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಡಾ| ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಮಹದಾಯಿ ಸಮಸ್ಯೆ ಬರೀ ಉತ್ತರ ಕರ್ನಾಟಕದ ಸಮಸ್ಯೆಯಲ್ಲ. ಇಡೀ ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆ ಆಗಿದೆ. ಅದನ್ನು ಪಕ್ಷಾತೀತವಾಗಿ ಬಗೆಹರಿಸಬೇಕಿದೆ. ಪ್ರತಿಭಟನಾ ನಿರತ ರೈತರ ಭೇಟಿಗೆ ರಾಜ್ಯಪಾಲರು ಅವಕಾಶ ನೀಡಬೇಕಿತ್ತು ಎಂದರು. ಈ ಹಿಂದೆ ಕಾಂಗ್ರೆಸ್‌ ಅಧಿ ಕಾರದಲ್ಲಿದ್ದಾಗಲೂ ಮಹದಾಯಿ ವಿಷಯದ ಬಗ್ಗೆ ಚರ್ಚೆ ಮಾಡಿದ್ದೇವೆ. ಗೋವಾಗೆ ಬಹಳಷ್ಟು ನೀರು ಹರಿದು ಹೋಗುತ್ತದೆ. ರಾಜ್ಯಕ್ಕೆ ಎಂಟು ಟಿಎಂಸಿ ಅಡಿ ನೀರು ಹರಿಸಬೇಕೆಂದು ಕೇಳಿದ್ದೇವೆ. ಆದರೆ, ಗೋವಾದವರು ಗಮನ ಹರಿಸುತ್ತಿಲ್ಲ ಎಂದರು.

ರಾಜ್ಯಪಾಲರ ಭೇಟಿಗೆ ಸಿಗದ ಅವಕಾಶ: ಕೆಲ ಹೋರಾಟಗಾರರು, ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ರವಾನಿಸಿ, ರಾಜ್ಯಪಾಲರ ಭೇಟಿಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ, ಲಿಖೀತವಾಗಿ ನಮಗೆ ಉತ್ತರ ಕೊಡಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರ ಮಾರ್ಗದರ್ಶನದಂತೆ ಪೊಲೀಸರು ಮಧ್ಯಾಹ್ನ 12.30ರ ಸುಮಾರಿಗೆ ಐದು ರೈತ ಮಹಿಳೆಯರನ್ನು ಪೊಲೀಸ್‌ ಜೀಪ್‌ನಲ್ಲಿ ರಾಜಭವನಕ್ಕೆ ಕರೆದೊಯ್ದರು.

ಅವರಿಗೂ ರಾಜ್ಯಪಾಲರ ಭೇಟಿಗೆ ಅವಕಾಶ ಸಿಗಲಿಲ್ಲ. ರಾಜಭವನದ ಮುಖ್ಯದ್ವಾರದ ಬಳಿಯೇ ರಾಜಭವನದ ವಿಶೇಷ ಕರ್ತವ್ಯಾಧಿಕಾರಿಯವರು ಮಹಿಳಾ ಮುಖಂಡರಿಂದ ಮನವಿ ಸ್ವೀಕರಿಸಿ, ಕಳುಹಿಸಿದರು. ಇದರಿಂದ ಬೇಸತ್ತ ಮಹಿಳೆಯರು ರಾಜಭವನದ ಮುಂದೆ ಕಣ್ಣೀರು ಹಾಕಿ, ಪ್ರತಿಭಟನಾ ಸ್ಥಳಕ್ಕೆ ವಾಪಸ್ಸಾದರು. ಬಳಿಕ, ಹೋರಾಟವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿ, ಹುಬ್ಬಳ್ಳಿಗೆ ವಾಪಸ್ಸಾಗಿದ್ದಾರೆ.

ಪ್ರತಿಭಟನೆಗೆ 3 ದಿನ, ಆಸ್ಪತ್ರೆಗೆ 9 ಜನ: ಗುರುವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರೈತ ಸೇನೆಯ 9 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಶುಕ್ರವಾರ ಐವರು ಮತ್ತು ಶನಿವಾರ ನಾಲ್ಕು ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ.

ಕಳಸಾ-ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಲು ಪ್ರಧಾನಿ ಮೋದಿಗೆ ಮನವಿ ಮಾಡಿದ್ದೇವೆ. ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜತೆ ಸಮನ್ವಯತೆ ಸಾಧಿಸುತ್ತಿದ್ದಾರೆ. ಶೀಘ್ರವೇ ರೈತರ ಬೇಡಿಕೆ ಈಡೇರಲಿದೆ. ಬಿಜೆಪಿ ಸರ್ಕಾರ ರೈತರ ಪರವಿದೆ.
-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಈಗಾಗಲೇ ಮಹದಾಯಿ ನ್ಯಾಯಾಧಿಕರಣದ ತೀರ್ಪು ಬಂದಿದ್ದು, ಕೇಂದ್ರ ಸರ್ಕಾರವೇ ಅಧಿಸೂಚನೆ ಹೊರಡಿಸಬೇಕಿದೆ. ರಾಜ್ಯ ಸರ್ಕಾರದಿಂದ ಮೂರು ಬಾರಿ ಪತ್ರ ಬರೆಯಲಾಗಿದ್ದು, ಈವರೆಗೂ ಮಾಹಿತಿ ಬಂದಿಲ್ಲ. ಪ್ರತಿಭಟನಾ ಕಾರರು ರಾಜ್ಯಪಾಲರಿಗೆ ಮನವಿ ನೀಡಿದರೂ, ಅದು ಕೇಂದ್ರಕ್ಕೆ ಹೋಗುತ್ತದೆ. ರಾಜ್ಯಪಾಲರಿಗಿಂತ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ವಿದೆ. ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿದೆ.
-ಕೆ.ಎಲ್‌.ಮಂಜುನಾಥ್‌, ಅಂತರ್‌ರಾಜ್ಯ ಜಲವಿವಾದ ನದಿ ರಕ್ಷಣಾ ಆಯೋಗದ ಅಧ್ಯಕ್ಷ

ಎಲ್ಲ ಸರ್ಕಾರಗಳು ಮಹದಾಯಿ ಹೆಸರಿನಲ್ಲಿ ರಾಜಕಾರಣ ಮಾಡಿದ್ದು, ಹಣ ಲೂಟಿ ಹೊಡೆದಿವೆ. ಹಾಗಾಗಿ, ರಾಜ್ಯ ಸರ್ಕಾರಗಳು ಮತ್ತು ರಾಜಕಾರಣಿಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದೇವೆ. ಅದಕ್ಕಾಗಿ ರಾಜ್ಯಪಾಲರ ಭೇಟಿಗೆ ಆಗ್ರಹಿಸಲಾ ಯಿತು. ತಾತ್ಕಾಲಿಕವಾಗಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ. ಮೂರು ದಿನದ ಪ್ರತಿಭಟನೆ ಭಾಗಶಃ ಯಶಸ್ವಿಯಾಗಿದೆ. ರೈತ ಮುಖಂಡರ ಜತೆ ಚರ್ಚಿಸಿ, ಮತ್ತೂಮ್ಮೆ ಬೆಂಗಳೂರಿಗೆ ಆಗಮಿಸಿ, ರಾಜ್ಯಪಾಲ ರನ್ನು ಭೇಟಿ ಮಾಡಲಾಗುವುದು.
-ವೀರೇಶ್‌ ಸೊಬರದಮಠ, ಕರ್ನಾಟಕ ರೈತ ಸೇನೆಯ ಅಧ್ಯಕ್ಷ

ಹೊಲದಲ್ಲಿ ಕೆಲಸ ಮಾಡಬೇಕಾದ ನಾವು ಮೂರು ದಿನ ರೈಲು ನಿಲ್ದಾಣದ ರಸ್ತೆಯಲ್ಲಿಯೇ ಮಲಗಿದ್ದೇವೆ. ಸರ್ಕಾರ ಯಾವುದೇ ವ್ಯವಸ್ಥೆ ಕಲ್ಪಿಸಲಿಲ್ಲ. ಮಕ್ಕಳನ್ನು ಜತೆಗೆ ಕರೆದುಕೊಂಡು ಬಂದ ಮಹಿಳೆಯರು ಆತಂಕದಲ್ಲಿಯೇ ಇರಬೇಕಾಯಿತು. ಎಲ್ಲರಿಗೂ ಅನ್ನ ನೀಡುವ ನಾವು, ರಸ್ತೆ ಮಧ್ಯೆ ಊಟ ಮಾಡಬೇಕಾದ ಪರಿಸ್ಥಿತಿಗೆ ಸರ್ಕಾರ ತಂದಿದೆ. ನಮ್ಮ ಹಕ್ಕು ಕೇಳಲು ಬೀದಿಗೆ ಬಂದರೂ ರಾಜ್ಯಪಾಲರು ಭೇಟಿ ಯಾಗಲಿಲ್ಲ. ಇಷ್ಟೆಲ್ಲಾ ಸಮಸ್ಯೆ ಅನುಭವಿಸಿದರೂ, ಬರಿಗೈಲೇ ಹಿಂತಿರುಗಬೇಕಾಯಿತು.
-ಬಸಪ್ಪ, ಅಸ್ವಸ್ಥ ರೈತ

ನಾವು ರೈತರ ನಿರ್ಲಕ್ಷ ಮಾಡುವ ಪ್ರಶ್ನೆಯೇ ಇಲ್ಲ. ಮಹದಾಯಿ ಹೋರಾಟ ಮಾಡುವ ರೈತರ ಭಾವನೆಗಳ ಜತೆ ಇದ್ದೇವೆ. ಆದರೆ, ಕಾನೂನಾತ್ಮಕ ತೊಡಕು ಬಗೆಹರಿಸುವ ಕೆಲಸ ಮಾಡುತ್ತೇವೆ. ರಾಜಕೀಯ ಹೋರಾಟ ಬೇರೆ, ರೈತರ ಹೋರಾಟ ಬೇರೆ. ರೈತರ ಹೋರಾಟದ ಜತೆ ನಾವಿದ್ದೇವೆ.
-ಸಿ.ಟಿ.ರವಿ, ಸಚಿವ

ರಾಜ್ಯಪಾಲರು ಉತ್ತರ ಕರ್ನಾಟಕ ಭಾಗದ ರೈತರನ್ನು ಕಡೆಗಣಿಸುವ ಉದ್ದೇಶ ಹೊಂದಿಲ್ಲ. ಕೆಲಸದ ಒತ್ತಡ ಹಿನ್ನೆಲೆಯಲ್ಲಿ ಮಹಾದಾಯಿ ಹೋರಾ ಟಗಾರರನ್ನು ಭೇಟಿ ಆಗಲು ಸಾಧ್ಯವಾಗಿರಲಿಕ್ಕಿಲ್ಲ.
-ಎಂ.ಪಿ.ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next