Advertisement

ಕೊಡಗಿನಲ್ಲಿ ಭೂಕಂಪ ಸಾಧ್ಯತೆ ವದಂತಿ

07:00 AM Aug 19, 2018 | Team Udayavani |

ಬೆಂಗಳೂರು: ಐದು ದಶಕಗಳ ದಾಖಲೆ ಮಳೆಯಿಂದಾಗಿ ಕೊಡಗಿನ ಬಹುಪಾಲು ಜನ ತತ್ತರಿಸಿದ್ದರೆ ಭೂಕಂಪ ಸಂಭವಿಸಲಿದೆ ಎಂಬ ವದಂತಿ ಅವರನ್ನು ಇನ್ನಷ್ಟು ಕಂಗೆಡಿಸಿತ್ತು.

Advertisement

ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಭೂ ಕುಸಿತ ಮುಂದುವರಿದಿದ್ದು, ರಸ್ತೆ, ಗುಡ್ಡಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಭೂಕಂಪ ಸಂಭವಿಸಲಿದೆ ಎಂಬ ವದಂತಿ ಕೇಳಿಬಂತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಮಾಹಿತಿ, ಸಂದೇಶ ವಿನಿಮಯವಾಗಿದ್ದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಲಾರಂಭಿಸಿತು.

ತಕ್ಷಣವೇ ಕೊಡಗು ಜಿಲ್ಲಾಧಿಕಾರಿಗಳು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಸೇರಿದಂತೆ ಇತರೆ ಇಲಾಖೆಗಳನ್ನು ಸಂಪರ್ಕಿಸಿ ಭೂಕಂಪ ಸಂಭವಿಸಲಿದೆ ಎಂಬುದು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಟ್ವೀಟ್‌ ಮೂಲಕ ಭೂಕಂಪ ಸಾಧ್ಯತೆ ಇಲ್ಲ ಎಂಬುದನ್ನು ಪುನರುಚ್ಚರಿಸಿದರು. “ಕೊಡಗು ಜಿಲ್ಲೆಯಲ್ಲಿ ಭೂಕಂಪವಾಗಲಿದೆ ಎಂಬ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಥವಾ ಭೂವಿಜ್ಞಾನ ಇಲಾಖೆ ಯಾವುದೇ ಮುನ್ಸೂಚನೆ ನೀಡಿಲ್ಲ. ಆದ್ದರಿಂದ ಇಂತಹ ಸುಳ್ಳು ಸುದ್ದಿಗೆ ಕಿವಿಗೊಡಬಾರದು ಎಂದು ಕೊಡಗು ಜಿಲ್ಲಾಧಿಕಾರಿ ವಿನಂತಿಸಿಕೊಂಡಿದ್ದಾರೆ’ ಎಂಬುದಾಗಿ ಕುಮಾರಸ್ವಾಮಿ ಟ್ವೀಟ್‌ ಮಾಡಿದರು. ಬಳಿಕ ವದಂತಿಗೆ ತೆರೆಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next