Advertisement

ನಗರದಲ್ಲಿ ನೆರೆ ಹಾವಳಿ ತಡೆಗೆ ಕ್ರಮ; 30 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ

06:44 PM Dec 13, 2021 | Team Udayavani |

ಮಹಾನಗರ: ನಗರದಲ್ಲಿ ಭಾರೀ ಮಳೆ ಸುರಿದ ಸಂದರ್ಭ ಸೃಷ್ಟಿಯಾಗುವ ಕೃತಕ ನೆರೆ ತಡೆಯುವ ಉದ್ದೇಶದಿಂದ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆ, ತೋಡುಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿದೆ.

Advertisement

ನಗರ ವ್ಯಾಪ್ತಿಯ ರಾಜ ಕಾಲುವೆ ಮತ್ತು ತೋಡು ಗಳಿಗೆ ತಡೆಗೋಡೆ ಅಭಿವೃದ್ಧಿ ಕಾಮಗಾರಿಗಳು ಶೀಘ್ರವೇ ಹಂತ ಹಂತವಾಗಿ ಆರಂಭವಾಗಲಿದೆ. ಒಟ್ಟಾರೆ ಕಾಮಗಾರಿಯ ಬಗ್ಗೆ ಮಾಸ್ಟರ್‌ ಪ್ಲಾನ್‌ ತಯಾರಿಸಲು ಮಹಾನಗರ ಪಾಲಿಕೆ ಸಿದ್ಧತೆ ನಡೆಸುತ್ತಿದೆ. ಮಳೆ ನೀರು ಸಮ ರ್ಪಕವಾಗಿ ಹರಿಯುವ ಉದ್ದೇಶದಿಂದ ನಗರದ ಹಲವು ಕಡೆಗಳಲ್ಲಿರುವ ತೋಡು ಮತ್ತು ರಾಜಕಾಲುವೆಗೆ ತಡೆಗೋಡೆ ರಚನೆ ಯಾಗಿಲ್ಲ. ಜೋರಾಗಿ ಮಳೆ ಬಂದರೆ ರಾಜ ಕಾಲುವೆಯಿಂದ ನೀರು ಉಕ್ಕಿ ಅಕ್ಕ ಪಕ್ಕದ ಮನೆಗಳಿಗೆ ಪ್ರವೇಶಿಸುತ್ತಿದೆ. ಇದರಿಂದಾಗಿ ಹಲವಾರು ಮನೆ ಮಂದಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ಎಲ್ಲೆಲ್ಲಿ ಕಾಮಗಾರಿ?
ನಗರದ 35 ಕಡೆಗಳಲ್ಲಿ ಕಾಮಗಾರಿ ನಡೆ ಸಲು ಅಂದಾಜಿಸಲಾಗಿದೆ. ಅದ ರಂತೆ ಚಂದ್ರಿಕಾ ಬಡಾವಣೆ ಬಳಿ ತೋಡಿನ ಅಭಿವೃದ್ಧಿ ಕಾಮಗಾರಿ, ಭಾರತಿ ನಗರ ಬಲಿಪ ತೋಟ ಬಳಿ ರಾಜ ಕಾಲುವೆ ಆಯ್ದ ಭಾಗಗಳಲ್ಲಿ ಕಾಮಗಾರಿ, ಬಲ್ಲಾಳ್‌ಬಾಗ್‌ ಪತ್ತುಮುಡಿಯಿಂದ ಪ್ರಗತಿ ಸರ್ವಿಸ್‌ ಸ್ಟೇಶನ್‌ ವರೆಗೆ ರಾಜಕಾಲುವೆ ಆಯ್ದ ಭಾಗಗಳಲ್ಲಿ ಕಾಮಗಾರಿ, ಕಂಡೆಟ್ಟುವಿ ನಿಂದ ಕುಂಟಲ್ಪಾಡಿವರೆಗೆ ತೋಡಿನ ಆಯ್ದ ಭಾಗಗಳಲ್ಲಿ ಕಾಮಗಾರಿ ನಡೆಯಲಿದೆ.

ಕಟ್ಟಪುಣಿ ರಾಜಕಾಲುವೆಯ ಆಯ್ದ ಭಾಗ, ಎಕ್ಕೂರು ಸೇತುವೆ ಬಳಿ ರಾಜಕಾಲುವೆ ಆಯ್ದ ಭಾಗ, ಹೊಗೆರಾಶಿ ಬಳಿ ರಾಜಕಾಲುವೆ ಆಯ್ದ ಭಾಗ, ಚಿಂತನ ಬಳಿಯ ರಾಜ ಕಾಲುವೆ ಆಯ್ದ ಭಾಗ, ಕುಡುಪಾಡಿ ಬಳಿ, ಭೋಜರಾವ್‌ ಸೇತುವೆ ಬಳಿಯಿಂದ ಕುದ್ರೋಳಿ ಸೇತುವೆವರೆಗೆ, ಕುದ್ರೋಳಿ ಕಂಡತ್‌ಪಳ್ಳಿ ಬಳಿ ರಾಜಕಾಲುವೆಯ ಆಯ್ದ ಭಾಗ, ನಾಗುರಿಯ ಗರೋಡಿ ಸ್ಟೀಲ್‌ ಬಳಿ, ಭೂವೈಜ್ಞಾನಿಕ ಸರ್ವೇ ಆಫ್‌ ಇಂಡಿಯಾ ಕಚೇರಿ ಬಳಿ, ಅತ್ತಾವರ ಶಾಲೆ ಬಳಿ, ಶಿವನಗರ ಬಳಿ, ಅಳಪೆ ಆತ್ಮಶಕ್ತಿ ಬಳಿ ಯಿಂದ ಹೊಗೆಕೋಡಿವರೆಗೆ, ಪಂಪ್‌ವೆಲ್‌ನಿಂದ ಕಂಕನಾಡಿ ಮಹಾಲಿಂಗೇಶ್ವರ ದೇಗುಲದವರೆಗೆ, ಚಿಲಿಂಬಿಯಿಂದ ಹೊಗೆ ಬೈಲುವರೆಗೆ, ಶೇಡಿಗುರಿ ಇರಿ ಪ್ರದೇಶ, ಕದ್ರಿ ಹಿಂದೂ ರುದ್ರಭೂಮಿ ಬಳಿ, ಮಿಷನ್‌ಗೋರಿಯಿಂದ ಬರ್ಕೆವರೆಗೆ, ಸದಾಶಿವನಗರ, ಇಎಸ್‌ಐ ಆಸ್ಪತ್ರೆ ಬಳಿ, ಸಿಲ್ವರ್‌ಗೇಟ್ ನಿಂದ ಕೋಂಗುರು ವೆಟ್‌ವೆಲ್‌, ಕಣ್ಣೂರು ವಾರ್ಡ್‌ನ ಬಿಎಂಡಬ್ಲ್ಯೂ ಶೋರೂಂ ಬಳಿ, ಕಣ್ಣೂರು ಗಣೇಶೋತ್ಸವ ಸಮಿತಿ, ನಂದಿನಿ ಡೈರಿ ಬಳಿ, ಕೊಡಕ್ಕಲ್‌ ಬಳಿ, ಸರೋಶ್‌ ಕಾಲೇಜು ಬಳಿ, ಯೇನಪೊಯ ಆಸ್ಪತ್ರೆ ಹಿಂಬದಿ, ಸೂಟರ್‌ಪೇಟೆ, ಕಕ್ಕೆಬೆಟ್ಟು ಕಾರ್ಮಿಕ ಕಾಲನಿ, ಭಾರತೀನಗರ ಬಳಿ, ಶಿವನಗರ ಬಳಿ, ಅಡು ಮರೋಳಿಯ ಚಾಮುಂಡಿಗುಡಿ, ಪಾಂಪು ಮನೆ ಬಳಿ, ಅಳಪೆ ಉತ್ತರ ವಾರ್ಡ್‌ನ ಪ್ರವೀಣ್‌ ನಿಡ್ಡೇಲ್‌ ಮನೆ ಬಳಿಯ, ಮುಲ್ಲ ಗುಡ್ಡೆ ಬಳಿ ಸೇರಿ ಒಟ್ಟಾರೆ 30 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.

ಸಮಸ್ಯೆಗೆ ಪರಿಹಾರ
ಭಾರೀ ಮಳೆಯಾಗುವ ಸಂದರ್ಭ ನಗರದ ಕೆಲವೊಂದು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗುವುದು ಸಾಮಾನ್ಯವಾಗಿದೆ. ನಗರದ ಕೆಲವೊಂದು ರಾಜಕಾಲುವೆ, ತೋಡುಗಳಿಂದ ನೀರು ಉಕ್ಕಿ ಅಕ್ಕ ಪಕ್ಕದ ಮನೆಗಳಿಗೆ ಆವೃತವಾಗುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ನಗರದ 35 ಕಡೆಗಳಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ. ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದೆ.
-ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next