Advertisement

ನಶಿಸುತ್ತಿರುವ ರಂಗಕಲೆಗೆ ಪ್ರೋತ್ಸಾಹ ಅಗತ್ಯ

12:59 PM Mar 27, 2019 | Lakshmi GovindaRaju |

ದೇವನಹಳ್ಳಿ: ಆಧುನಿಕತೆ ಮತ್ತು ದೃಶ್ಯ ಮಾಧ್ಯಮಗಳ ಹಾವಳಿಯಿಂದ ನಶಿಸಿಹೋಗುತ್ತಿರುವ ರಂಗಕಲೆಯನ್ನು ಜೀವಂತವಾಗಿಡುವಲ್ಲಿ ಅಂತಾರಾಷ್ಟ್ರೀಯ ರಂಗಸಂಸ್ಥೆ(ಐಟಿಐ)1962ರಿಂದ ಪ್ರತಿ ವರ್ಷ ಜಗತ್ತಿನಾದ್ಯಂತ ವಿಶ್ವ ರಂಗ ದಿನ ಆಚರಿಸುತ್ತಿರುವುದು ಸ್ಮರಣೀಯ ಕಾರ್ಯವಾಗಿದೆ. ಅಲ್ಲದೇ, ಆ ಮೂಲಕ ಕಲೆಗೆ ತನ್ನದೇ ಆದ ಗೌರವ ನೀಡುತ್ತಿರುವುದು ಹೆಮ್ಮೆಯ ಸಂಗತಿಯೂ ಎನ್ನಬಹುದಾಗಿದೆ.

Advertisement

ರಂಗಭೂಮಿ ಕಲೆ ಕಲಾವಿದರನ್ನು ತಯಾರು ಮಾಡಿ ಅವರ ಪ್ರತಿಭೆ ಅನಾವರಣಗೊಳಿಸುವ ಮಹತ್ತರ ವೇದಿಕೆಯಾಗಿದೆ. ಹಲವಾರು ಕಲಾವಿದರು ಗ್ರಾಮೀಣ ಭಾಗದಲ್ಲಿ ನಾಟಕ ಪ್ರದರ್ಶನಗಳನ್ನು ಮಾಡುತ್ತಾ ಕುರುಕ್ಷೇತ್ರ, ಸಂಪೂರ್ಣ ರಾಮಾಯಣ, ಶನಿ ಪ್ರಭಾವ ಮತ್ತಿತರೆ ನಾಟಕಗಳಲ್ಲಿ ಬರುವ ಪಾತ್ರಗಳಿಗೆ ಕಲಾವಿದರು ಜೀವ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.

ಬಣ್ಣ ಹಚ್ಚಿ ಸಮಾಜಕ್ಕೆ ಬೇಕಾದ ಸಂದೇಶಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ, ಒಂದು ಕಡೆ ಕಲಾವಿದರಿಗೆ ಸರಿಯಾದ ಅವಕಾಶಗಳಿಲ್ಲದೇ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಗಳಿಂದ ಕುಗ್ಗಿಹೋಗಿದ್ದಾರೆ ಎಂಬುದು ತೀರಾ ನೋವಿನ ಸಂಗತಿ.

ಇಂದು ರಂಗಭೂಮಿ ಕಲಾವಿದರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಂಗಭೂಮಿಗೆ ಎಲ್ಲಾ ರಂಗ ದಿಗ್ಗಜರೂ ನೀಡಿರುವ ಕೊಡುಗೆಗಳು ಇಂದು ನೇಪಥ್ಯಕ್ಕೆ ಸರಿದಿವೆ. ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ದಿ.ಡಾ.ರಾಜ್‌ಕುಮಾರ್‌ ಅವರ ತಂದೆ ಪುಟ್ಟಸ್ವಾಮಪ್ಪ, ಹಾರ್ಮೋನಿಯಂ ಮಾಸ್ಟರ್‌ ಆಗಿ ಕೆಲಸ ಮಾಡುತ್ತಿದ್ದರು.

ಆ ವೇಳೆ ಡಾ.ರಾಜಕುಮಾರ್‌ ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಸಣ್ಣ ಪಾತ್ರಗಳನ್ನು ಮಾಡುತ್ತಾ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತದನಂತರ ಬೇಡರ ಕಣ್ಣಪ್ಪ ಎಂಬ ಪಾತ್ರದಲ್ಲಿ ಹೆಚ್ಚು ಹೆಸರು ಮಾಡಿ ಚಲನಚಿತ್ರಗಳಲ್ಲಿ ಅವಕಾಶ ಒದಗಿಬಂದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Advertisement

ರಂಗಭೂಮಿಯೇ ಮೂಲತಃ ಡಾ.ರಾಜಕುಮಾರ್‌ರಿಗೆ ಮೇರು ನಟನಾಗುವ ಅವಕಾಶ ಕಲ್ಪಿಸಿದ ಕೀರ್ತಿ ರಂಗಭೂಮಿಗೆ ಸಲ್ಲುತ್ತದೆ. ಗುಬ್ಬಿ ವೀರಣ್ಣ ಕಂಪನಿಯ ಮತ್ತೂಂದು ನಕ್ಷತ್ರ ಹಿರಿಯ ಹಿನ್ನೆಲೆ ಗಾಯಕಿ ಬಿ.ಜಯಶ್ರೀ ಅವರ ಹಾಡುಗಾರಿಕೆಯ ಪ್ರತಿಭೆಯನ್ನು ಮೆಚ್ಚಿ ಸರ್ಕಾರ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದು ನಾಟಕ ಕಲಾವಿಧರ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಮುಚ್ಚಿಹೋದ ಕಂಪನಿಗಳು: ಆಗಿನ ಕಾಲದಲ್ಲಿ ಗುಬ್ಬಿ ವೀರಣ್ಣ ನಾಟಕ ಮಂಡಳಿ, ನಾಟಕ ಶಿರೋಮಣಿ ವರದರಾಜ ಕಲಾಸಂಘದಂತಹ ಸಾವಿರಾರು ಕಲಾವಿದರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಹತ್ತುಹಲವು ನಾಟಕ ಕಂಪನಿಗಳು ಸರ್ಕಾರದ ಪ್ರೋತ್ಸಾಹ ಸಿಗದೇ ಮುಚ್ಚಿಹೋಗಿವೆ ಎಂಬುದು ಕನ್ನಡ ಕಲಾಕ್ಷೇತ್ರದ ಬಹುದೊಡ್ಡ ದುರಂತ ಎನ್ನದೇ ವಿಧಿಯಿಲ್ಲ.

ಒಂದೊತ್ತಿನ ಊಟಕ್ಕೂ ಪರದಾಟ: ಈ ನಾಟಕ ಕಂಪನಿಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ಧನ ನೀಡಿದ್ದರೆ ಖಂಡಿತಾ ಅವು ಮರೆಯಾಗುತ್ತಿರಲಿಲ್ಲ. ಮತ್ತಷ್ಟು ಕಲಾವಿದರ ಸೃಷ್ಟಿಯಾಗುತ್ತಿತ್ತು. ಕಲಾವಿದರ ಜೀವನವನ್ನು ಒಂದು ಬಾರಿ ನೆನಪಿಸಿಕೊಂಡರೆ ಆರೋಗ್ಯದ ಸಮಸ್ಯೆಯಿಂದ ಸರ್ಕಾರ ನೀಡುತ್ತಿರುವ ಒಂದೂವರೆ ಸಾವಿರ ರೂ. ಮಾಸಾಶನ ಅವರ ಔಷಧಿಗೂ ಸಾಲದಂತಾಗಿದೆ.

ಕಲೆಯನ್ನೇ ಉಸಿರಾಗಿಸಿಕೊಂಡಿರುವ ಕಲಾವಿದರು ಮನೆ ಬಾಡಿಗೆ, ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುವಂತಹ ದಾರುಣ ಸ್ಥಿತಿ ತಲುಪಿಸಿದ್ದಾರೆ. ಪ್ರಸ್ತುತ ಮಾಸ್ಟರ್‌ ಹಿರಣ್ಣಯ್ಯ ಮಿತ್ರ ಮಂಡಳಿ, ಕೆಬಿಆರ್‌ ಡ್ರಾಮಾ ಕಂಪನಿ, ಕರ್ನಾಟಕ ಕಲಾ ವೈಭವ ಕಂಪನಿ, ಕುಮಾರೇಶ್ವರ ನಾಟಕ ಸಂಘ, ಎಲ್‌.ಬಿ.ಶೇಖ್‌ ಮಾಸ್ಟರ್‌ ಕಲಾಸಂಘ ಮತ್ತು ಉತ್ತರ ಕರ್ನಾಟಕದಲ್ಲಿ ಇಂದಿಗೂ ಸಾಕಷ್ಟು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಹವ್ಯಾಸಿ ಕಲಾ ಸಂಘಗಳು ಪ್ರತಿ ಊರಿಗೊಂದು ಇವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಹಿರಿಯ ಕಲಾವಿದರನ್ನು ಹೊಂದಿರುವ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅನೇಕ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಮಾತ್ರ ನಶಿಸುತ್ತಿರುವ ರಂಗಕಲೆಯ ಸಂರಕ್ಷಣೆಗೆ ಚೇತೋಹಾರಿಯಾಗಿದೆ ಎನ್ನಬಹುದಾಗಿದೆ. ದೇವನಹಳ್ಳಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಫೆಬ್ರವರಿ, ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನಗಳು ನಡೆಯುತ್ತವೆ. ಹೊಸಕೋಟೆ, ನೆಲಮಂಗಲದಲ್ಲೂ ಸಾಕಷ್ಟು ಕಲಾವಿದರಿದ್ದಾರೆ.

ದೇವನಹಳ್ಳಿ ತಾಲೂಕಿನಲ್ಲಿ ಕಲಾಮಂದಿರ ನಿರ್ಮಾಣಕ್ಕಾಗಿ ಒತ್ತಾಯಗಳು ಕೇಳಿಬರುತ್ತಿವೆ. ಸುಸಜ್ಜಿತ ಕಲಾಮಂದಿರವಿಲ್ಲದೇ ನಾಟಕ ಪ್ರದರ್ಶನಕ್ಕೆ ತೊಂದರೆಯಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿರುವ ತಾಲೂಕಿನಲ್ಲಿ ಭೂಮಿಯ ಕೊರತೆ ಹಾಗೂ ಭೂಮಿ ಬೆಲೆ ಗಗನಕ್ಕೇರಿರುವುದರಿಂದ ಭೂಮಿ ಸಿಗುವುದೇ ಕಷ್ಟಕರವಾಗಿದೆ. ಸರ್ಕಾರ ಒಂದು ಸೂಕ್ತ ಜಾಗ ಒದಗಿಸಿ ಕಲಾಭವನ ನಿರ್ಮಾಣ ಮಾಡಬೇಕೆಂಬುದು ಸ್ಥಳೀಯ ಕಲಾವಿದರ ಒತ್ತಾಯವಾಗಿದೆ.

ಪಾತ್ರಕ್ಕೆ ಜೀವ ನೀಡಿದ ಕಲಾವಿದರು: ಹೊಸಕೋಟೆ ತಾಲೂಕಿನ ಮೂಲತಃ ಶಿಕ್ಷಕರಾಗಿರುವ ನಾಟಕಾರ ಜಗದೀಶ್‌ ಕೆಂಗನಾಳ್‌ ಅವರಿಗೆ ನಾಟಕ ಅಕಾಡೆಮಿಯಿಂದ ರಂಗ ಪ್ರಶಸ್ತಿ ಲಭಿಸಿದೆ. 1982 ರಿಂದ ಸಂಗೊಳ್ಳಿ ರಾಯಣ್ಣ, ಕರ್ನಾಟಕ ರಮಾರಮಣ, ಮನೆ ಅಳಿಯ, ವಿದೂಷಕ, ಚಿನ್ನದ ಗೊಂಬೆ, ಶೋಕಚಕ್ರ, ನಗೆ ಬರುತ್ತಿದೆ ಮುಂತಾದ ನಾಟಕಗಳಲ್ಲಿ ಬಣ್ಣ ಹಚ್ಚಿದ ಹಿರಿಮೆ ಅವರಿಗೆ ಸಲ್ಲುತ್ತದೆ. ದೇವನಹಳ್ಳಿ ನಗರದ ಮರಳುಬಾಗಿಲಿನ ನಿವಾಸಿ ಹಾಗೂ ತಾಲೂಕು ಶಾರದಾಂಬ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುನಿನಂಜಪ್ಪ 1985 ರಿಂದ ನಾಟಕ ಮಾಡಲು ಪ್ರಾರಂಭಿಸಿದರು. ಮೊದಲು ಸೈಂಧವ ಪಾತ್ರ, ಬಣ್ಣ ಹಚ್ಚಿ ನಂತರ ದುಶ್ಯಾಸನ, ದುರ್ಯೋಧನ ಮತ್ತಿತರೆ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ದೇವನಹಳ್ಳಿ ತಾಲೂಕಿನ ಗಡಿಭಾಗದ ಕುಂದಾಣ ಹೋಬಳಿ ರಬ್ಬನಹಳ್ಳಿ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ ಕೃಷ್ಣ ಪಾತ್ರಧಾರಿಯಾಗಿ, ಈಶ್ವರನ ಪಾತ್ರಧಾರಿಯಾಗಿ ಹಲವಾರು ನಾಟಕಗಳನ್ನು ಪ್ರದರ್ಶಿಸಿ ಪ್ರಶಸ್ತಿಗಳನ್ನು ಪಡೆದು ರಂಗಭೂಮಿಗೆ ತನ್ನದೇ ಆದ ಕೊಡುಗೆ ಕೊಡುತ್ತಾ ಬಂದಿದ್ದಾರೆ.

ಕಲಾಭವನ ನಿರ್ಮಿಸಲು ಮನವಿ: ಶಾರದಾಂಬ ಕಲಾವಿದರ ಕ್ಷೇಮಾಭಿವೃದ್ಧಿ ಸಂಘ ತಾಲೂಕಿನಲ್ಲಿ 5 ಸಾವಿರ ಕಲಾವಿದರನ್ನು ನೋಂದಣಿ ಮಾಡಿಸಿ,400 ಜನರಿಗೆ ಮಾಸಾಶನ ಕೊಡಿಸುತ್ತಿದೆ.ದೇವನಹಳ್ಳಿ ನಗರದಲ್ಲಿ ಕಲಾಭವನ ನಿರ್ಮಿಸಲು ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಮನವಿ ಮಾಡಲಾಗಿದೆ ಎಂದು ದೇವನಹಳ್ಳಿ ತಾಲೂಕು ಶಾರದಾಂಬ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುನಿನಂಜಪ್ಪ ಹೇಳಿದ್ದಾರೆ.

ವಿಮಾ ಯೋಜನೆ ಕಲ್ಪಿಸಿ: ಪ್ರತಿವರ್ಷ ಮಾರ್ಚ್‌, ಏಪ್ರಿಲ್‌ ತಿಂಗಳಿನಲ್ಲಿ ಚುನಾವಣಾ ನೀತಿ ಸಂಹಿತೆ ಬರುವುದರಿಂದ ಸುಮಾರು 8-10 ನಾಟಕಗಳು ನಿಂತುಹೋಗಿ ಸುಮಾರು 5-6 ಲಕ್ಷ ರೂ.ಆದಾಯ ನಷ್ಟವಾಗಿದೆ. ರಂಗಸಜ್ಜಿಕೆಯಲ್ಲಿ ಸುಮಾರು 30 ಜನ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರ ದುಡಿಮೆ ನಷ್ಟವಾಗಿದೆ. ರಂಗಸಜ್ಜಿಕೆ ಮಾಡುವಾಗ ಲೈಟಿಂಗ್‌, ವಿದ್ಯುತ್‌ ದೀಪಾಲಂಕಾರದ ಖರ್ಚು ಇರುತ್ತದೆ.

ಕಲಾವಿದರಿಗೆ ಯಾವುದೇ ಭದ್ರತೆ ಇರಲ್ಲ. ಏನಾದರೂ ಅನಾಹುತವಾದರೆ ಮಾಲಿಕರೇ ಅವರ ಆಸ್ಪತ್ರೆಯ ಖರ್ಚು ಭರಿಸುವಂತಾಗಿದೆ. ಸರ್ಕಾರ ಇಂತಹ ಕಲಾವಿದರಿಗೆ ಭದ್ರತೆ ಮತ್ತು ವಿಮಾ ಯೋಜನೆ ಒದಗಿಸಿದರೆ ಅನುಕೂಲವಾಗುತ್ತದೆ ಎಂದು ಕುಂದಾಣ ಗಜೇಂದ್ರ ರಂಗ ಸಜ್ಜಿಕೆ ಮಾಲಿಕ ರವಿಕುಮಾರ್‌ ಹೇಳುತ್ತಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 280 ಜನ ರಂಗಭೂಮಿ ಕಲಾವಿದರು ಮಾಸಾಶನ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 4000 ಕಲಾವಿದರಿದ್ದಾರೆ. ಸುಮಾರು 5 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ದೊಡ್ಡಬಳ್ಳಾಪುರದಲ್ಲಿ ಹೆಚ್ಚು ಕಲಾವಿದರಿದ್ದಾರೆ. ಸುಮಾರು 10 ತಂಡಗಳು ನಮ್ಮ ಸಂಪರ್ಕದಲ್ಲಿವೆ.
-ಮಂಜುನಾಥ್‌ ಆರಾಧ್ಯ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂ.ಗ್ರಾ. ಜಿಲ್ಲೆ

ನನ್ನ ಜೀವನ ಶಿಕ್ಷಣ ಹಾಗೂ ರಂಗಕಲೆಗೆ ಮೀಸಲಾಗಿದ್ದು ಈ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇಂತಹ ಸಾಧನೆಗೆ ಕಾರಣೀಭೂತರಾದ ಜನಪದ ವೇದಿಕೆಗೆ ಅಭಿನಂದನೆ ಸಲ್ಲಿಸುತ್ತೇನೆ.
-ಜಗದೀಶ್‌ ಕೆಂಗನಾಳ್‌, ಪ್ರಶಸ್ತಿ ವಿಜೇತ ನಾಟಕಕಾರ, ಹೊಸಕೋಟೆ

ಕಲಾವಿದರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹಲವಾರು ಕಲಾವಿದರಿದ್ದಾರೆ. ಒಂದು ನಾಟಕ ಮಾಡಬೇಕಾದರೆ ಸುಮಾರು 2 ಲಕ್ಷ ರೂ.ವರೆಗೆ ಖರ್ಚು ಬರುತ್ತದೆ. ಕಲಾ ಪೋಷಕರ ಕೊರತೆ ಕಾಡುತ್ತದೆ. ಕಲಾವಿದರಿಗೆ ಸರ್ಕಾರ ಒಂದೂವರೆ ಸಾವಿರ ರೂ.ಮಾಸಾಶನ ನೀಡುತ್ತಿದೆ. ಅದು ಸಾಕಾಗುತ್ತಿಲ್ಲ. ಕಲೆಯನ್ನು ನಂಬಿ ಜೀವನ ನಡೆಸುತ್ತಿರುವವರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು.
-ರಬ್ಬನಹಳ್ಳಿ ಕೆಂಪಣ್ಣ, ಜಿಲ್ಲಾಧ್ಯಕ್ಷರು, ರಂಗಭೂಮಿ ಕಲಾವಿದರ ಸಂಘ

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next