Advertisement

ರಾಷ್ಟ್ರವನ್ನು ಏಕತೆಯ ತತ್ತ್ವದಲ್ಲಿ ಸಂರಚಿಸುವ ಆಶಯ

11:59 PM Mar 23, 2021 | Team Udayavani |

ಸ್ವತಂತ್ರ ಭಾರತದಲ್ಲಿ ಚುನಾವಣೆ ಎಂಬುದು ಒಂದು ರಾಷ್ಟ್ರೀಯ ಹಬ್ಬ. ದೇಶದಲ್ಲಿ ಹಂತ ಹಂತದ ಚುನಾವಣೆ ಎಂಬುದು ವಿವಿಧ ವರ್ಗಗಳಿಗೆ ಹಲವು ತೆರನಾದ ಅನುಕೂಲಗಳನ್ನು ಒದಗಿಸಿ ಕೊಡುವ ಒಂದು ಸಾಧನವಾಗಿ ರೂಪುಗೊಂಡಿದೆ. ಚುನಾವಣೆ ಎಷ್ಟೇ ದುಬಾರಿಯಾದರೂ ಸಮಸ್ಯೆಯಿಂದ ಕೂಡಿದ್ದರೂ ಚುನಾವಣೆ ಬೇಕೇ? ಬೇಡವೇ? ಎಂಬ ಚರ್ಚೆಗಳನ್ನು ವಿವಿಧ ದೃಷ್ಟಿಕೋನಗಳಿಂದ ನೋಡಲಾಗಿದೆ. ಯಾವುದೇ ಅಧ್ಯಯನ, ಸಮೀಕ್ಷೆಗಳಿಂದ ಚುನಾವಣೆಯ ಉದ್ದ-ಅಗಲಗಳನ್ನು ಇನ್ನೂ ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗಿಲ್ಲ. ಚುನಾವಣೆಯ ಮುನ್ನ ಮತ್ತು ಅನಂತರ ನಡೆದಿರುವ ಎಲ್ಲ ಚಟುವಟಿಕೆಗಳನ್ನು ಗಮನಿಸಿದರೆ ಕೆಲವೊಂದು ಪರಿಣಾಮಕಾರಿ ಬದಲಾವಣೆಯನ್ನು ತರಲು ಶಕ್ತವಾಗಿದೆ ಹಾಗೂ ದೇಶದ ರಾಜಕೀಯ ಬದುಕಿಗೆ ಅತ್ಯಂತ ಅರ್ಥಪೂರ್ಣವಾದ ಕೊಡುಗೆಯನ್ನು ಇದು ನೀಡಿದೆ.

Advertisement

ಅತೀ ಹೆಚ್ಚು ಸಂದರ್ಭದಲ್ಲಿ ಚುನಾವಣೆಯು ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವ ಏಕೈಕ ಸಾಧನ ಎಂದು ಪರಿಗಣಿಸಿ ಪ್ರಜಾಪ್ರಭುತ್ವ ಉಳಿಯುವುದೇ ಚುನಾವಣೆಯಿಂದ ಎಂದು ತೀರ್ಮಾನಿಸಲಾಗಿದೆ. ನಮ್ಮ ಚುನಾವಣೆಗಳು ತಂದೊಡ್ಡಿರುವ ಪ್ರಜಾಪ್ರಭುತ್ವದ ಬಗ್ಗೆ ಹಲವಾರು ವಿಮರ್ಶೆಗಳು ಈಗಾಗಲೇ ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಅಭಿವೃದ್ದಿ ನೆಲೆಯಲ್ಲಿ ಪ್ರಚಾರಗಿಟ್ಟಿಸಿಕೊಂಡಿವೆ. ಪ್ರತೀ ವರ್ಷ, ಪ್ರತೀ ತಿಂಗಳು ಚುನಾವಣೆಗಳು ನಡೆದಿರುವ, ನಡೆಯುತ್ತಿರುವ ಇವತ್ತಿನ ಸಂದರ್ಭದಲ್ಲಿ “ಒಂದು ರಾಷ್ಟ್ರ -ಒಂದು ಚುನಾವಣೆ’ ವಿಷಯ ವಾಗಿ ಚರ್ಚೆ ಆರಂಭಗೊಂಡು ಮೂರು ಪ್ರಮುಖ ವಿಷಯಗಳನ್ನು ಮುನ್ನೆಲೆಗೆ ತಂದಿದೆ.

ಮೊದಲನೆಯದು ವೈವಿಧ್ಯತೆಯ ಹೆಸರಲ್ಲಿ ನಾವು ಕಳೆದು ಕೊಳ್ಳುತ್ತಿರುವ ಪ್ರೀತಿ ವಿಶ್ವಾಸ, ಸಮಾನತೆ, ಪರಸ್ಪರ ಗೌರವಗಳು ಮತ್ತು ಕೇವಲ ಹಕ್ಕುಗಳಿಗೆ ಕೇಂದ್ರಿತವಾದ ಹೋರಾಟಗಳು ದೇಶದಲ್ಲಿ ಆಂತರಿಕ ಬಿಕ್ಕಟ್ಟುಗಳನ್ನು ಸೃಷ್ಟಿ ಮಾಡುತ್ತಿವೆ. ಆದು ದರಿಂದ ಒಂದು ಚುನಾವಣೆ ಏಕತೆಯನ್ನು ತರುವುದಾದರೆ ಎಲ್ಲ ರಿಗೂ ಸಮಾನವಾದ ಅಸ್ತಿತ್ವವನ್ನು ಕೊಡುವುದಾದರೆ ಈ ಪ್ರಾಜೆಕ್ಟ್ ವಿಶ್ವಕ್ಕೆ ಮಾದರಿಯಾಗುವುದರಲ್ಲಿ ಸಂದೇಹವಿಲ್ಲ. ನಮ್ಮೊಳಗಿನ ಅಸಂತೋಷ, ಪರಸ್ಪರ ದ್ವೇಷ ಮತ್ತು ಅಪನಂಬಿಕೆಗಳು ಮಾಯ ವಾಗುವ ಒಂದು ರಾಜಕೀಯ ಸಂಸ್ಕೃತಿ ಈ ಚುನಾವಣೆಯಿಂದ ಹೊರಹೊಮ್ಮಿದರೆ ಇದಕ್ಕಿಂತಲೂ ಅತೀ ದೊಡ್ಡ ಸಂತೋಷದ ವಿಷಯ ಬೇರೇನಿದೆ. ಚುನಾವಣೆಗಳನ್ನು ತಿರಸ್ಕರಿಸುವವರು ಮತ್ತು ಇದನ್ನು ಅತ್ಯಂತ ಸರಳವಾಗಿ ಪರಿಗಣಿಸುವವರು ಈ ರಾಜಕೀಯ ಸಂಸ್ಕೃತಿಯ ಭಾಗವಾಗುತ್ತಾರೆ ಮತ್ತು ಒಳಗೊಳ್ಳು ವಿಕೆಯ ಸಂಸ್ಕೃತಿಗೆ ದಾರಿಮಾಡಿ ಕೊಡುತ್ತಾರೆ.

ಎರಡನೆಯದು, ಚುನಾವಣೆಯ ಇಲ್ಲಿನ ತನಕದ ಪ್ರಯಾಣವನ್ನು ಪರಿಶೀಲಿಸಿದರೆ ಅದು ರಾಜಕೀಯವಾಗಿ ಸಮಾಜವನ್ನು ಡೋಲಾಯಮಾನ ಸ್ಥಿತಿಗೆ ತಂದೊಡ್ಡಿದೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಚುನಾವಣೆಯ ಪ್ರಕ್ರಿಯೆಗಳು ಮತ್ತು ಗೆಲ್ಲುವ ಭರಾಟೆಯಲ್ಲಿ ಹಾಗೂ ಪ್ರಚಾರದ ಹೆಸರಲ್ಲಿ ಈ ದೇಶದಲ್ಲಿ ನಾವು ಹುಟ್ಟು ಹಾಕಿರುವ ಹಣ, ಜಾತಿ, ಧರ್ಮ ಮತ್ತು ರಾಜ ಕೀಯ ಹಿಂಸೆಗಳು ಲೆಕ್ಕಕ್ಕಿಂತಲೂ ಮಿಗಿಲಾಗಿವೆ. ಭಾರತದಲ್ಲಿ ಚುನಾ ವಣೆ ಯಾಕೆ ಇಷ್ಟು ಆಕರ್ಷಕವಾಗುತ್ತಿದೆ, ಇದರ ಮೂಲ ಭೂತ ಅಂಶವೇನು? ಎಂಬುದನ್ನು ಗಮನಿಸಿದರೆ ಬಹುಶಃ ಜನ ಸೇವೆ ಎನ್ನುವುದಕ್ಕಿಂತಲೂ ವೈಯಕ್ತಿಕ ಆಸಕ್ತಿಗಳೇ ಮುಖ್ಯವಾಗು ತ್ತವೆ. ರಾಷ್ಟ್ರದಲ್ಲಿ ಬದುಕಿ ಬಾಳುತ್ತಿರುವ ಎಲ್ಲ ಸಮುದಾಯಗಳನ್ನು ರಾಷ್ಟ್ರದ ಹೆಸರಲ್ಲಿ ಒಗ್ಗೂಡುವಂತೆ ಮಾಡುವ ಬದಲು ಜನರ ನಡುವೆ, ಧರ್ಮಗಳ ನಡುವೆ ವೈಷಮ್ಯವನ್ನು ಬಿತ್ತಿ ಜಾತಿಗಳನ್ನು ಅಸ್ತ್ರಗಳನ್ನಾಗಿ ಮಾಡಿಕೊಂಡು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಗೆ ಅತ್ಯಂತ ದೊಡ್ಡ ಅಪಾಯವನ್ನು ತಂದೊಡ್ಡಲಾಗಿದೆ. ಪ್ರತೀ ಚುನಾವಣೆಯ ಪ್ರಾರಂಭದಿಂದ ಕೊನೆಯವರೆಗೂ ಜಾತಿ, ಧರ್ಮದ ಲೆಕ್ಕಾಚಾರಗಳು ಚುನಾವಣೆಯ ಉದ್ದೇಶಗಳನ್ನು ಬಹಿ ರಂಗಗೊಳಿಸಿವೆ. ಆದುದರಿಂದ ದಿನಕ್ಕೊಂದು, ತಿಂಗಳಿಗೊಂದು, ವರ್ಷಕ್ಕೊಂದು ಚುನಾವಣೆಯು ರಾಷ್ಟ್ರದ ಅಡಿಗಲ್ಲಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ.

ಮೂರನೆಯದು, ಚಾರಿತ್ರಿಕವಾಗಿ ಭಾರತದಲ್ಲಿ ಚುನಾವಣೆ ಯನ್ನು ಉಳ್ಳವರು ಮತ್ತು ಇಲ್ಲದವರು ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಸೈದ್ಧಾಂತೀಕರಣಕ್ಕೆ ಒಳಪಡಿಸಲಾಗಿದೆ. ಆಳುವವರು ಮತ್ತು ಆಳಿಸಿಕೊಳ್ಳುವವರು ಎಂಬ ಅರ್ಥದಂತೆ ಆಳುವವರು ಮತ್ತು ಮತದಾರರು ಎಂಬ ಎರಡು ಮತ್ತು ಅದಕ್ಕಿಂತ ಆಂತರಿಕ ವಾಗಿ ಹೆಚ್ಚು ವರ್ಗಗಳು ಹುಟ್ಟಿಕೊಂಡಿರುವ ಈ ದೇಶದಲ್ಲಿ ಒಳಗೊಳ್ಳುವಿಕೆಯ ರೂಪದಲ್ಲಿ ಚುನಾವಣೆಗಳು ಈ ಪರಿಸ್ಥಿತಿಯಲ್ಲಿ ಇರಲು ಸಾಧ್ಯವೇ ಇಲ್ಲ. ಈ ದೇಶದ ಅನೇಕ ಸೌಲಭ್ಯಗಳನ್ನು ಆರ್ಥಿಕವಾಗಿರುವ ಸದೃಢವಾಗಿರುವವರೇ ಪಡೆದುಕೊಂಡು ಒಂದು ಪ್ರಬಲ ವರ್ಗವಾಗಿ ಹೊರ ಹೊಮ್ಮುತ್ತಿದ್ದರೆ ಕೇವಲ ಮತದಾರರಾಗಿ ತಲೆತಲಾಂತರದಿಂದ ಅವಕಾಶ ವಂಚಿತರಾಗಿರುವ ಜನರು ಬದಿಗೊತ್ತಲ್ಪಡುತ್ತಾರೆ. ತಿಂಗಳಿಗೊಮ್ಮೆ ನಡೆಯುತ್ತಿರುವ ಚುನಾವಣೆಗಳಿಂದ ಬದಿಗೊತ್ತಲ್ಪಟ್ಟಿರುವ ಜನರು ಮತ್ತೆ ಬದಿಗೊತ್ತಲ್ಪಡುತ್ತಾರೆಯೇ ಹೊರತು ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಮತ್ತು ಬರುವ ರೀತಿಯ ಅವಕಾಶವನ್ನು ಯಾರು ಸೃಷ್ಟಿಸುವುದಿಲ್ಲ. ಈ ಹಿನ್ನೆಲೆಯಲ್ಲಿ “ಒಂದು ದೇಶ- ಒಂದು ಚುನಾವಣೆ’ ದೇಶದ ಯುವಕರಿಗೆ ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಒಗ್ಗೂಡಲು ವಿಶೇಷ ಅವಕಾಶ ಎಂಬುದು ನನ್ನ ಆಶಯ.

Advertisement

ಭಾರತಕ್ಕೆ ಯಾವ ಮಾದರಿಯ ಪ್ರಜಾಪ್ರಭುತ್ವ ಬೇಕು ಎಂದು ಕೇಳುವ ರೀತಿಯಲ್ಲೇ ಯಾವ ರೀತಿಯ ಚುನಾವಣೆ ಬೇಕು ಎಂದು ಕೇಳುವುದೂ ಅಷ್ಟೇ ಮುಖ್ಯ. ಸ್ವಾತಂತ್ರಾéನಂತರ ಸುಮಾರು 60ರ ದಶಕದವರೆಗೂ ಕೇಂದ್ರ ಮತ್ತು ರಾಜ್ಯ ಸರ ಕಾರಗಳಿಗೆ ಒಂದೇ ಕಾಲದಲ್ಲಿ ಚುನಾವಣೆಗಳು ನಡೆದಿವೆ. ಅನಿವಾರ್ಯ ರಾಜಕೀಯ ಕಾರಣಗಳಿಂದ ಅನಂತರದ ಕಾಲದಲ್ಲಿ ಚುನಾವಣೆಗಳು ಬೇರೆ ಬೇರೆ ಕಾಲದಲ್ಲಿ ನಡೆದಿವೆ ಮತ್ತು ಅದರಿಂದ ದೇಶಕ್ಕೆ ಸಾಕಷ್ಟು ನಷ್ಟಗಳು ಸಂಭವಿಸಿವೆ. ಪ್ರತಿಯೊಂದು ಚುನಾವ ಣೆಗೂ ರಾಜ್ಯ ಅಥವಾ ಕೇಂದ್ರ ಸರಕಾರ ಖರ್ಚು ಮಾಡುವ ಹಣದ ಮೊತ್ತವನ್ನು ಅದೆಷ್ಟೋ ಕಾಲದ ರಾಜ್ಯದ ಬಜೆಟ್‌ ಮೊತ್ತಕ್ಕೆ ಸರಿದೂಗಿಸಬಹುದಾಗಿದೆ. ಬೇರೆ ಬೇರೆ ಕಾಲದಲ್ಲಿ ಚುನಾವಣೆಗಳು ನಡೆದರೆ ದೇಶದ ಅಭಿವೃದ್ಧಿಗೆ ಉಂಟಾಗ ಬಹುದಾದ ಅಪಾಯ ಗಳನ್ನು ನಾವು ಕಂಡುಕೊಂಡಿದ್ದೇವೆ. ಪ್ರಾಥಮಿಕ, ಪ್ರೌಢ ಶಿಕ್ಷಣಗಳಿಗೆ ಹೂಡಿಕೆ ಮಾಡಬೇಕಾಗಿರುವ ಹಣವನ್ನು ನಿರಂತರ ನಡೆಯುವ ಚುನಾವಣೆಗಳಿಗೆ ಹೂಡಿಕೆ ಮಾಡಿದರೆ ರಾಷ್ಟ್ರದ ಶಕ್ತಿಯನ್ನು ಭವಿಷ್ಯದ ಜನತೆಯನ್ನು ವೈಚಾರಿಕತೆಯಿಂದ ಬೆಳೆಸಲು ಸಾಧ್ಯವಿಲ್ಲ.

ಒಂದು ಚುನಾವಣೆ ಒಂದು ರಾಷ್ಟ್ರವನ್ನು ವ್ಯಾಖ್ಯಾನಿಸುವಲ್ಲಿ ಸಹಕಾರಿಯಾಗುತ್ತದೆಯೇ? ಅಭಿವೃದ್ಧಿಯು ಒಂದರ್ಥದಲ್ಲಿ ಎಲ್ಲರನ್ನು ಒಳಗೊಳ್ಳುವಂತೆ ಮಾಡಿದರೆ ಎಲ್ಲರನ್ನೂ ಭಾಗವಹಿಸು ವಂತೆ ಮಾಡಿದರೆ ಒಂದು ರಾಷ್ಟ್ರ ಎಂಬ ಪರಿಕಲ್ಪನೆ ಕೇವಲ ಪರಿ ಕಲ್ಪನೆಯಾಗಿರದೆ ಹೃದಯಾಂತರಾಳದಲ್ಲಿ ಬೇರೂರಿ ಪ್ರಶ್ನಾತೀತ ರಾಷ್ಟ್ರೀಯತೆಯ ಮೇಲೆ ಕಟ್ಟುವ ರಾಷ್ಟ್ರವಾಗಿ ಭಾರತ ಹೊಸತನ ವನ್ನು ಕಂಡುಕೊಳ್ಳುವಲ್ಲಿ ಸಂದೇಹವಿಲ್ಲ.

ಇಲ್ಲಿಯ ತನಕದ ಚುನಾವಣೆ ಪೂರ್ವದ ಮತ್ತು ಅನಂತರದ ಬೆಳವಣಿಗೆಗಳು ಚುನಾವಣೆಯ ಕುರಿತ ಆಸಕ್ತಿಯನ್ನು ಕೆರಳಿಸದೆ ಚುನಾವಣೆಯೇ ಬೇಡ ಎಂಬ ತೀರ್ಮಾನಕ್ಕೆ ಬಂದಂಥ ಜನರಿ ರುವ ಅದೆಷ್ಟೋ ಕ್ಷೇತ್ರಗಳು ಇವೆ. ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಭಟಿಸುವವರ ಜತೆಗೆ ಚುನಾವಣೆಯ ಬಗ್ಗೆ ಒಂದಿಷ್ಟು ಆಸಕ್ತಿ ತೋರದೆ ಮತ ಚಲಾವಣೆಯನ್ನು ಮಾಡದೆ ವಿಶಿಷ್ಠ ರೀತಿಯಲ್ಲಿ ಪ್ರತಿಭಟಿಸುವ ಜನರೂ ಇದ್ದಾರೆ. ಬಹುಶಃ ಚುನಾವಣೆಗಳು ಇತ್ತೀಚಿನ ದಿನಗಳವರೆಗೂ ನೀಡಿರುವ ಕುಖ್ಯಾತ ಕೊಡುಗೆಗಳನ್ನು ಗಮನಿಸಿದರೆ ಚುರುಕು ಬುದ್ಧಿಯ ಯುವಕರು ಆಕರ್ಷಿತರಾಗುವ ಬದಲು ದ್ವೇಷ ಸಾಧಿಸುವಂಥ ಜನರಾಗುತ್ತಿದ್ದಾರೆ, ಜನರಾಗ ಬಹುದು. ಇವನ್ನೆಲ್ಲ ತಪ್ಪಿಸುವ ಉದ್ದೇಶದಿಂದ “ಒಂದು ರಾಷ್ಟ್ರ- ಒಂದು ಚುನಾವಣೆ’ ಅತ್ಯಂತ ಪ್ರಸ್ತುತ ಮತ್ತು ಅನಿವಾರ್ಯ.
ನಮ್ಮ ಚುನಾವಣೆಗಳು ಈ ದೇಶದ ಚರಿತ್ರೆಯಾಗಬೇಕು, ಈ ದೇಶದ ಸಂಸ್ಕೃತಿಯಾಗಬೇಕು, ಧಾರ್ಮಿಕ ನಂಬಿಕೆಗಳಂತೆ ಇರಬೇಕು, ಈ ದೇಶದ ಪ್ರಮುಖ ಮೌಲ್ಯಗಳಾಗಬೇಕು, ಪ್ರೀತಿ ವಿಶ್ವಾಸದ ದ್ಯೋತಕವಾಗಬೇಕು, ಎಲ್ಲಕ್ಕಿಂತ ಮಿಗಿಲಾಗಿ ಚುನಾ ವಣೆಯು ಈ ದೇಶದ ವ್ಯಕ್ತಿಯ ಪ್ರತಿಯೊಬ್ಬನ ಕರ್ತವ್ಯದ ಭಾಗ ವಾಗಬೇಕು ಎನ್ನುವ ಆಶಯಗಳನ್ನು “ಒಂದು ರಾಷ್ಟ್ರ-ಒಂದು ಚುನಾ ವಣೆ’ ಎಂಬ ಪರಿಕಲ್ಪನೆ ಒಳಗೊಂಡಿದೆ ಎಂಬುದು ಸಾಬೀತಾಗಿರು ವುದರಿಂದಲೇ ಯುವಜನರ ಪರವಾಗಿ, ಅವರ ಭವಿಷ್ಯದ ಹಿತದೃಷ್ಟಿಯಿಂದ ಈ ರಾಷ್ಟ್ರದ ಹಿತದೃಷ್ಟಿಯಿಂದ ಒಬ್ಬ ಮತದಾರನಾಗಿ ಈ ಪರಿಕಲ್ಪನೆಯೊಡನೆ ನಾನಿದ್ದೇನೆ.

“ಡಿಜಿಟಲ್‌ ಇಂಡಿಯಾದ’ ಪ್ರಾಜೆಕ್ಟ್‌ನ ಒಳಗಡೆ ಈ “ಒಂದು ರಾಷ್ಟ್ರ -ಒಂದು ಚುನಾವಣೆ’ಯನ್ನು ತರಬಹುದುದಾದರೆ ಒಂದು ನಿರ್ದಿಷ್ಟ ಸಮಯದೊಳಗೆ ಮನೆಯಿಂದಲೇ ಅಥವಾ ಕಾರ್ಯನಿರ್ವಹಿಸುವ ಕ್ಷೇತ್ರದಿಂದಲೇ ಮತಹಾಕುವ ಹೊಸ “ಡಿಜಿಟಲ್‌ ವ್ಯವಸ್ಥೆ’ಯನ್ನು ಪರಿಚಯಿಸಿದರೆ ಇನ್ನುಳಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದು. ಮೊಬೈಲ್‌ ಪೋನ್‌ನಲ್ಲಿ ಪ್ರಪಂಚ ಸೃಷ್ಟಿಸುತ್ತಿರುವ ನಮಗೆ “ಒಂದು ರಾಷ್ಟ್ರ-ಒಂದು ಚುನಾವಣೆ’ ಅನಗತ್ಯ ಚರ್ಚೆಗೆ ಒಳಗಾಗುವುದು ಬೇಡ ಎಂಬುದು ನನ್ನ ಆಶಯ. “ನನ್ನ ಭಾರತ ನನ್ನ ಹಕ್ಕು’ ಎಂಬಂತೆ ಅತ್ಯಂತ ಪಾರದರ್ಶಕತೆಯಿಂದ ಮತದಾನ ಮಾಡೋಣ- “ಒಂದು ರಾಷ್ಟ್ರ-ಒಂದು ಚುನಾವಣೆ’ಗೆ ಬೆಂಬಲವಾಗೋಣ.

– ಪ್ರೊ| ಪಿ. ಎಲ್‌. ಧರ್ಮ,
ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ

Advertisement

Udayavani is now on Telegram. Click here to join our channel and stay updated with the latest news.

Next