Advertisement

ನಕ್ಸಲ್‌ ಬಾಧಿತ ಪ್ರದೇಶದ ಬೇಡಿಕೆಯೆಂದರೆ ಮೊಬೈಲ್‌ ನೆಟ್‌ವರ್ಕ್‌

04:48 PM May 07, 2019 | Team Udayavani |

ಕುಂದಾಪುರ: ನಕ್ಸಲ್‌ ಬಾಧಿತ ಪ್ರದೇಶದ ಜನ ಸದಾ ಸಂಪರ್ಕಕ್ಕೆ ಸಿಗಲಾರರು (ನಾಟ್‌ ರೀಚಬಲ್‌.) ಇವರಿಗೆ ಮೊಬೈಲ್‌ ನೆಟ್‌ವರ್ಕ್‌ ಇಲ್ಲ, ರಸ್ತೆಯೂ ಇಲ್ಲ. ಉಳಿದಂತೆ ಸೌಕರ್ಯದ ಕೊರತೆ ಇಲ್ಲ. ಇಬ್ಬರೂ ಸಂಸದರು ಇಲ್ಲಿಗೆ ಮತಯಾಚನೆಗೂ ಹೋಗಿಲ್ಲ.

Advertisement

ಉಡುಪಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಂದಾಪುರ, ಬೈಂದೂರು ತಾಲೂಕಿನ ಒಟ್ಟು 5 ಗ್ರಾಮಗಳು ನಕ್ಸಲ್‌ ಬಾಧಿತ ಎಂದು ಗುರುತಿಸಲ್ಪಟ್ಟಿದ್ದವು. ಇವುಗಳಿಗೆ ಸರಕಾರ ಜಿಲ್ಲೆಗೆ ನಕ್ಸಲ್‌ ಬಾಧಿತ ಪ್ರದೇಶಾಭಿವೃದ್ಧಿ ನಿಧಿ 5 ಕೋಟಿ ರೂ. ಗಳನ್ನು ನೀಡಿತ್ತು. ನಂತರ ಈ ಅನುದಾನಕ್ಕೆ ಬಹು ದೂರದ ಮತ್ತು ಒಳನಾಡು ಪ್ರದೇಶಾಭಿವೃದ್ಧಿ ನಿಧಿ ಎಂದು ಮರುನಾಮ ಕರಣ ಮಾಡಲಾಯಿತು.

ಅಭಿವೃದ್ಧಿಯಾಗಿದೆ
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮೂಲಕ ಗಿರಿಜನ ಕಲ್ಯಾಣ ನಿಧಿಯಿಂದ ರಸ್ತೆಯಾಗಿದೆ. ಎ.ಜಿ. ಕೊಡ್ಗಿಯವರ ಅಮಾಸೆಬೈಲು ಚಾರಿ
ಟೇಬಲ್‌ ಟ್ರಸ್ಟ್‌ ಮೂಲಕ ಅಮಾಸೆಬೈಲು ಸಂಪೂರ್ಣ ಸೋಲಾರ್‌ ಗ್ರಾಮವಾಗಿದೆ.

ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆಯವರಿಂದ ಹವಾದಿ ಕಲ್ಲು ಹೊಳೆ ಯಿಂದ ಕೆಳಸುಂಕಶಾಲೆ, ಬಳ್ಮನೆ ಶಾಲೆವರೆಗೆ ಪ್ರಧಾನಮಂತ್ರಿ ಸಡಕ್‌ ಯೋಜನೆಯ ರಸ್ತೆಯಾಗಿದೆ. ವಿ.ಪ. ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರ ಮೂಲಕ ಕೆಳಸುಂಕದಲ್ಲಿ ಸೇತುವೆ ಮಂಜೂರಾಗಿದೆ. ವಿದ್ಯುತ್‌, ರಸ್ತೆ ದೊರೆತಿದೆ. ಆದರೆ ಅರಣ್ಯ ಇಲಾಖೆ ತಗಾದೆ ಬಗೆಹರಿದಿಲ್ಲ.

ದೇವರಬಾಳಿನ ಗೋಳು
ಹಳ್ಳಿಂಬುಳ, ಅಂಡೆಹೊಳೆ ಎಂಬ 2 ಹೆಸರು ಸೇರಿ ಉಂಟಾದ ಹಳ್ಳಿಹೊಳೆ ಪಂ.ವ್ಯಾಪ್ತಿಯಲ್ಲಿದೆ ದೇವರಬಾಳು. ಇಲ್ಲಿ ಅವಳಿ ನಕ್ಸಲರ ಎನ್‌ಕೌಂಟರ್‌ ನಡೆದಿತ್ತು. ಶುಕ್ರವಾರ ಪತ್ರಿಕೆ ಇಲ್ಲಿಗೆ ಭೇಟಿ ನೀಡಿದಾಗ ಜನರ ಪ್ರಶ್ನೆ ರಸ್ತೆ, ನೆಟ್‌ವರ್ಕ್‌ ಕುರಿತಾಗಿದ್ದೇ ಆಗಿತ್ತು. ಇದು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು ಕಮ್ಮಾರಪಾಲುವರೆಗೆ ಡಾಮರು ರಸ್ತೆಯಿದ್ದು, ದುರಸ್ತಿಯಾಗಬೇಕಿದೆ. ಅನಂತರ ಕಚ್ಛಾರಸ್ತೆಯಿದೆ. ಈ ಪ್ರದೇಶದ ಸೇತುವೆಯ ಹಳೆ ಬೇಡಿಕೆ ಈಡೇರುತ್ತಿದೆ. ಕಟ್ಟಿನಡೆ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದರೂ ಹಲಗೆ ಹಾಕದ ಕಾರಣ ಉಪಯೋಗ ವಾಗಿಲ್ಲ ಎನ್ನುತ್ತಾರೆ ಚಂದ್ರ ನಾಯ್ಕ. ದೇವರಬಾಳು, ಕಬ್ಬಿನಾಲೆಗೆ ಚಕ್ರಾನದಿಯೇ ಅಡ್ಡ.

Advertisement

ಚಕ್ರಾನದಿಯ ಇನ್ನೊಂದು ಭಾಗದಲ್ಲಿ ಕಟ್ಟಿನಡೆ ಇದ್ದು ಸುಮಾರು 200 ಮನೆ ಗಳಿದ್ದು, ಮಳೆಗಾಲದಲ್ಲಿ ದ್ವೀಪದಂತಾಗುತ್ತದೆ. ಶ್ಯಾಡೆಬೇರು, ಮೂಡಿತ್ಲು ಬಳಿ ಜಲ್ಲಿ ಹಾಕಿ ಹಲವು ತಿಂಗಳುಗಳಾದರೂ ಡಾಮರಾಗಿಲ್ಲ. ಇಲ್ಲಿನವರು ಆಸ್ಪತ್ರೆಗಾಗಿ ಕಿ.ಮೀ. ದೂರದ ಶೆಟ್ಟಿಪಾಲುವಿಗೆ ಹೋಗಬೇಕು. 3 ಕಿ.ಮೀ. ದೂರದ ಚಕ್ರಾಮೈದಾನದಿಂದ ವಾಹನ ಬಾಡಿಗೆ 300 ರೂ.!

ಸಂಸದರಿಲ್ಲ
ನಕ್ಸಲ್‌ ಬಾಧಿತ ಪ್ರದೇಶಗಳಿಗೆ ಶಾಸಕರು, ವಿಧಾನಪರಿಷತ್‌ ಸದಸ್ಯರ ಮೂಲಕ ಸಾಕಷ್ಟು ಯೋಜನೆ, ಅನುದಾನ ಮಂಜೂರಾಗಿ ಅಭಿವೃದ್ಧಿಯಾಗಿದೆ. ಶಿವಮೊಗ್ಗ, ಉಡುಪಿ ಸಂಸದರು ಈ ಭಾಗದ ಯಾವುದೇ ಗ್ರಾಮಗಳಿಗೆ ಭೇಟಿ ನೀಡಿ ಅಹವಾಲು ಆಲಿಸಿಲ್ಲ. ಮತಯಾಚನೆಗೂ ಬಂದಿಲ್ಲ!. ಕೆರಾಡಿ ನಕ್ಸಲ್‌ ಬಾಧಿತ ಎಂದು ಗುರುತಿಸಲ್ಪಟ್ಟಿದ್ದು ಶಿವಮೊಗ್ಗ ಸಂಸದರ ಆದರ್ಶ ಗ್ರಾಮವಾಗಿ 25 ಲಕ್ಷ ರೂ.ಗೂ ಅಧಿಕ ಅನುದಾನದ ಕೆಲಸವಾಗಿದೆ.

ಅಮಾವಾಸ್ಯೆ ಕಳೆದ ಅಮಾಸೆಬೈಲು
ಅಮಾಸೆಬೈಲು, ಜಡ್ಡಿನಗದ್ದೆ, ಶ್ಯಾಮಿಹಕ್ಲು, ಹರ್ಲಕ್ಕು, ನಿಡ್ಜಲ್‌, ಕೆಳಸುಂಕ, ಬಳ್ಮನೆ, ಗೋಳಿಕಾಡು ಪ್ರದೇಶಗಳಲ್ಲಿ ಅಭಿವೃದ್ಧಿಯಾಗಿದೆ. ಈಡೇರಬೇಕಾದ ಪ್ರಮುಖ ಬೇಡಿಕೆಯೆಂದರೆ ಮೊಬೈಲ್‌ ನೆಟ್‌ವರ್ಕ್‌ ಎನ್ನುತ್ತಾರೆ ತಮ್ಮಯ ನಾಯ್ಕ ಕೆಳಸುಂಕ. ಇವರು ಮಾತಿಗೆ ಸಿಕ್ಕಾಗ ದೂರವಾಣಿ ಕರೆಗೆಂದೇ ಮನೆಯಿಂದ 4 ಕಿ.ಮೀ. ದೂರ ಬಂದಿದ್ದರು. ಹರ್ಲಕ್ಕು, ಶ್ಯಾಮೆಹಕ್ಲು, ಗೋಳಿಕಾರು ಎಂಬಲ್ಲಿ ಕಿಂಡಿ ಅಣೆಕಟ್ಟುಗಳಿದ್ದು ಕಾಲುವೆ ಆಗಬೇಕಿದೆ. ಶ್ಯಾಮಿಹಕ್ಲು ರಸ್ತೆ ಅರಣ್ಯ ಇಲಾಖೆ ತಗಾದೆಯಿಂದ 1 ಕಿ.ಮೀ. ದೂರ ಕಾಂಕ್ರೀಟ್‌ ಆಗ ಬೇಕಿದೆ ಎನ್ನುತ್ತಾರೆ ಕಾಳುನಾಯ್ಕ.

Advertisement

Udayavani is now on Telegram. Click here to join our channel and stay updated with the latest news.

Next