Advertisement

ವರ್ಷದಿಂದ ವರ್ಷಕ್ಕೆ ಮಲೇರಿಯಾ ಪ್ರಕರಣಗಳ ಕುಸಿತ

11:05 PM Jun 12, 2020 | Sriram |

ಉಡುಪಿ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಲೇರಿಯಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು, ಆರೋಗ್ಯ ಇಲಾಖೆ 2022ರಲ್ಲಿ ಮಲೇರಿಯಾ ಮುಕ್ತ ಜಿಲ್ಲೆಯತ್ತ ಹೆಜ್ಜೆ  ಇಡುವಲ್ಲಿ ಪ್ರಥಮ ಹಂತದಲ್ಲಿ ಯಶಸ್ವಿಯಾಗಿದೆ.

Advertisement

ಶೇ.50ರಷ್ಟು ಇಳಿಕೆ
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ.50ರಷ್ಟು ಪ್ರಕರಣ ಕಡಿಮೆಯಾಗುತ್ತಿದೆ. 2020ನೇ ಸಾಲಿನ ಜೂನ್‌ 11 ವರೆಗೆ 4,574 ಶಂಕಿತ ವ್ಯಕ್ತಿಗಳ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ 21 ಮಂದಿಗೆ ಮಲೇರಿಯಾ ಪಾಸಿಟಿವ್‌ ಬಂದಿದೆ. 2017ರಲ್ಲಿ 1,96,499 ಮಲೇರಿಯಾ ಶಂಕಿತ ವ್ಯಕ್ತಿಗಳ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ 513 ಜನರಲ್ಲಿ ಮಲೇರಿಯಾ ಕಂಡುಬಂದಿದೆ. 2018 ಮತ್ತು 2019ರಲ್ಲಿ ಕ್ರಮವಾಗಿ 1,82,724 ಹಾಗೂ 2,02,110 ಮಲೇರಿಯಾ ಶಂಕಿತ ವ್ಯಕ್ತಿಗಳ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ ಕ್ರಮ
ವಾಗಿ 221 ಹಾಗೂ 150 ಜನರಿಗೆ ಮಲೇರಿಯಾ ಪತ್ತೆಯಾಗಿತ್ತು.

ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮ
ಜಿಲ್ಲಾ ಆರೋಗ್ಯ ಇಲಾಖೆ ಮಲೇರಿಯಾ ಹಿಡಿತಕ್ಕೆ ತರಲು ವಿಶೇಷ ಯೋಜನೆ ಹಾಕಿಕೊಂಡಿದ್ದು, ಅದರ ಅನ್ವಯ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಆರೋಗ್ಯ ಇಲಾಖೆಯಿಂದ ಎನ್‌ಒಸಿ ಪಡೆಯ ಬೇಕಾಗಿದೆ. ಈ ಸಂದರ್ಭದಲ್ಲಿ ಇಲಾಖೆಯು ಕಟ್ಟಡ ಕಾರ್ಮಿಕರಿಗೆ ಕಡ್ಡಾಯ ಆರೋಗ್ಯ ತಪಾಸಣೆ, ಅವರು ವಾಸಿಸುವ ಸ್ಥಳದಲ್ಲಿ ನೀರು ನಿಲ್ಲದಂತೆ ಹಾಗೂ ಮೂಲ ಅವಶ್ಯಕತೆ ಪೂರೈಸುವಂತೆ ಮಾಲಕರಿಗೆ ಷರತ್ತು ವಿಧಿಸಿದೆ. ಜತೆಗೆ ಆರೋಗ್ಯ ಇಲಾಖೆ ಸಿಬಂದಿ ಕಾಲ ಕಾಲಕ್ಕೆ ಸ್ಥಳಕ್ಕೆ ಪರಿಶೀಲನೆ ಮಾಡಿದ್ದಾರೆ. ಜತೆಗೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಪತ್ತೆಯಾಗುವ ಸಂಶಯಾಸ್ಪದ ಮಲೇರಿಯಾ ಪ್ರಕರಣಗಳ ವರದಿಯನ್ನು ಆರೋಗ್ಯ ಇಲಾಖೆಗೆ ನೀಡುವಂತೆ ಆದೇಶ ಹೊರಡಿಸಲಾಗಿದೆ.

65,000 ಪರದೆ ವಿತರಣೆ
ಸೊಳ್ಳೆ ಉತ್ಪತ್ತಿಯನ್ನು ತಡೆಯಲು ಜನರಲ್ಲಿ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಪ್ರದೇಶದ ಜನರಿಗೆ ಸೊಳ್ಳೆ ಪರದೆ ವಿತರಿಸಲು ಕ್ರಮ ಕೈಗೊಂಡಿದ್ದು, ಈ ಬಾರಿ 65,000 ಸೊಳ್ಳೆ ಪರದೆ ಜಿಲ್ಲೆಗೆ ಸರಬರಾಜು ಆಗಿದೆ.

ರೋಗಕ್ಕೆ ಕಾರಣವೇನು?
ವಿವಿಧ ಕಡೆಯ ಕಟ್ಟಡ ಕಾರ್ಮಿಕರು ಉಡುಪಿಯಲ್ಲಿ ವಸತಿ ನಿರ್ಮಾಣದ ಹಂತದಲ್ಲಿ ಕಾಮಗಾರಿ ಕಟ್ಟಡಗಳ ಪಕ್ಕದಲ್ಲೇ ಜೋಪಡಿ ನಿರ್ಮಿಸಿಕೊಳ್ಳುತ್ತಾರೆ. ಈ ಸ್ಥಳದಲ್ಲಿ ನಿಂತ ನೀರಿನಲ್ಲಿ ಮಲೇರಿಯಾ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು, ಅವುಗಳು ಕಾರ್ಮಿಕರ ಮೇಲೆ ದಾಳಿ ಇಡುತ್ತವೆ. ಇದರ ಪರಿಣಾಮ ಬಹಳಷ್ಟು ಮಂದಿ ಮಲೇರಿಯಾ ರೋಗಕ್ಕೆ ತುತ್ತಾಗುತ್ತಾರೆ .

Advertisement

65 ಸಾವಿರ ಸೊಳ್ಳೆ ಪರದೆ ವಿತರಣೆ
ವರ್ಷದಿಂದ ವರ್ಷಕ್ಕೆ ಮಲೇರಿಯಾ ಪ್ರಕರಣ ಗಣನೀಯವಾಗಿ ಕಡಿಮೆಯಾಗಿದೆ. ನಿರ್ಮಾಣ ಹಂತದಲ್ಲಿ ಇರುವ ಕಟ್ಟಡಗಳಿಗೆ ಭೇಟಿ ನೀಡಿ ಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ಪರಿಸರ ಸ್ವತ್ಛತೆಯ ಕಡೆಗೆ ಗಮನ ಹರಿಸಲಾಗುತ್ತಿದೆ. 2019ರ ನವೆಂಬರ್‌ನಿಂದ 2020 ಮೇ ವರೆಗೆ ಸುಮಾರು 65 ಸಾವಿರ ಸೊಳ್ಳೆ ಪರದೆ ವಿತರಿಸಲಾಗಿದೆ.
 ಡಾ. ಪ್ರಶಾಂತ್‌ ಭಟ್‌, ಮಲೇರಿಯಾ ಅಧಿಕಾರಿ, ಉಡುಪಿ

ಮಲೇರಿಯಾ ಪ್ರಕರಣ
ಇಸವಿ            ಪ್ರಕರಣ
2012            2,217
2013            2,205
2014            1,639
2015            1,366
2016           1,168
2017            513
2018            221
2019            150

Advertisement

Udayavani is now on Telegram. Click here to join our channel and stay updated with the latest news.

Next