Advertisement

ಸಮಾಜದ ಋಣ ನಮ್ಮ ಮೇಲಿದೆ

11:57 PM Apr 09, 2021 | Team Udayavani |

ನವ ಸಮಾಜ ಜೀವಿ. ಇದು ಒಪ್ಪತಕ್ಕ ಮಾತು. ನಮ್ಮ ದೈನಂದಿನ ಜೀವನಕ್ಕೆ ಅದೆಷ್ಟು ಮಂದಿಯ ಸಹಾಯಹಸ್ತ ಬೇಕು ಅಂತ ನಾವು ಎಂದಾದರೂ ಯೋಚಿಸಿದ್ದೇವಾ?

Advertisement

ಒಂದು ರಿಕ್ಷಾ ಅಥವಾ ಬಸ್‌ನಲ್ಲಿ ಸಂಚಾರಿಸುವ ವೇಳೆ ಯಾರೋ ಒಬ್ಬರ ಸಹಾಯ ಇಲ್ಲದೆ ಸಾಧ್ಯವೇ? ಒಂದು ಹೊಟೇಲಿಗೆ ತೆರಳಿ ಒಂದು ಲೋಟ ಕಾಫಿ, ಒಂದು ದೋಸೆ, ಇಡ್ಲಿ ತಿಂದು ದುಡ್ಡು ಕೊಟ್ಟು ಬಂದಾಗ ಅದೆಷ್ಟು ಮಂದಿ ರೈತರು ನಿಮಗಾಗಿ ದುಡಿದಿದ್ದರು, ಹೊಟೇಲಿನ ನೌಕರ ಹಾಗೂ ಅಡುಗೆ ಮಾಣಿ ಶ್ರಮಿಸಿದ್ದರು ಎಂಬ ಯೋಚನೆ ನಮಗೆ ಹೊಳೆದದ್ದು ಉಂಟೆ? ಕಾಯಿಲೆ ಬಿದ್ದು ಆಸ್ಪತ್ರೆ ಸೇರಿದಾಗ ನಾವು ಎಷ್ಟೊಂದು ಮಂದಿಯಿಂದ ಸೇವೆ, ಶುಶ್ರೂಷೆ ಪಡೆದಿ ದ್ದನ್ನು ಗಮನಿಸಿದ್ದೇವೆಯೇ?..ಈ ಎಲ್ಲ ಸಂದರ್ಭಗಳಲ್ಲಿ ನಾವು ಅಂದುಕೊಳ್ಳ ಬಹುದು ಧರ್ಮಾರ್ಥ ಏನೂ ಪಡೆದಿಲ್ಲ. ಪ್ರತಿಯೊಂದನ್ನೂ ಹಣ ಪಾವತಿಸಿಯೇ ಸೇವೆ ಪಡೆದಿದ್ದೇವೆ ಎಂದು.

ಆದರೆ ನಾವು ಇಷ್ಟೆಲ್ಲ ಸೇವೆ ಪಡೆ ಯುವ ಸಂದರ್ಭ ಸಮಾಜದ ಋಣ ವನ್ನು ಅಲ್ಲಗಳೆಯಲಾಗದು. ನಮ್ಮ ದುಡಿ ಮೆಗೆ ಪಡೆಯುವ ಸಂಬಳ, ಪ್ರತಿಫ‌ಲ ನೀಡಿದ್ದು ಸಮಾಜ. ನಾವಾಗಿ ನಮ್ಮಷ್ಟಕ್ಕೆ ಕಸರತ್ತು ಮಾಡಿದರೆ ನಮ್ಮದು ಶೂನ್ಯ ಸಂಪಾದನೆ. ಹಾಗಿದ್ದರೆ ನಾವು ಸಮಾಜದ ಋಣಕ್ಕೆ ನಮಗೆ ಅರಿವಿದ್ದರೂ ಇಲ್ಲದೇ ಇದ್ದರೂ ಒಳಗಾಗಿ ಬಿಟ್ಟದ್ದು ನಮ್ಮ ಗಮನಕ್ಕೆ ಬರಬೇಡವೆ?
ಇದು ಹೌದು ಎಂದಾದರೆ ನಾವು ಕೆರೆಯ ನೀರನ್ನು ಯಥೇಷ್ಟ ಬಳಸಿಕೊಂಡು ಬದುಕಿದ್ದೇವೆ. ಹಾಗಿದ್ದರೆ ಕೆರೆಯ ನೀರನ್ನು ಮತ್ತೆ ಕೆರೆಗೆ ಚೆಲ್ಲಿ ಇತರರಿಗೂ ಅದು ಸಿಗುವಂತೆ ಮಾಡಬೇಡವೇ? ನಮಗೆ ದೇವರು ಅದೇನೋ ಸಂಪತ್ತು ನೀಡುವಾಗ ಸ್ವಲ್ಪ ಹೆಚ್ಚೇ ನೀಡಿದ್ದಾನೆ ಅಂತ ನಮಗೆ ತೋಚಿದ್ದು ಹೌದೇ? ಹಾಗಾದರೆ ಸಮಾಜಕ್ಕೆ ಸಾಧ್ಯವಿದ್ದಷ್ಟು ಋಣ ತೀರಿಸಲು ನಾವು ಬದ್ಧರು.
ಅದೆಷ್ಟೋ ಅಸಮತೋಲನಗಳು ಸಮಾಜದಲ್ಲಿ ತಾಂಡವ ಆಡುತ್ತಿವೆ. ಹೊಟ್ಟೆ ಬಟ್ಟೆಗೆ ಇಲ್ಲದ, ಸದಾ ರುಗ್ನ ಶಯ್ಯೆಯಲ್ಲೆ ನರಕಯಾತನೆ ಅನುಭವಿಸುವ, ಮಾನ ಸಿಕ ರೋಗದಿಂದ ರಸ್ತೆ ಬೀದಿಗಳಲ್ಲಿ ಹುಚ್ಚರಾಗಿ ಅಲೆದಾಡುವ, ಅಂಗವೈಕಲ್ಯಕ್ಕೆ ಒಳಗಾಗಿ ನರಳುವ ಮಂದಿ ನಮ್ಮ ಸುತ್ತ ಮುತ್ತ ಎಷ್ಟಿಲ್ಲ ಹೇಳಿ? ಅವರೂ ನಮ್ಮ ಸಮಾಜದ ಅಂಗವಲ್ಲವೆ? ನಮ್ಮ ರಕ್ತ ಸಂಬಂಧಿಗಳು ಅಲ್ಲದೇ ಇರಬಹುದು ನಿಜ. ಎಲ್ಲಿಂದಲೋ ನಮ್ಮ ಪರಿಸರ ಸೇರಿದ ಅನಾಥರು.

ನಾವು ಮಾನವತೆಯ ಬಗ್ಗೆ ಕಾಳಜಿ ಉಳ್ಳವರು ಹೌದಾದರೆ ನಮಗೆ ಋಣ ತೀರಿಸಲು ಅದೆಷ್ಟೋ ಅವಕಾಶ, ಸಂದ ರ್ಭಗಳು ಇವೆ. ಅದಕ್ಕಾಗಿಯೇ ಪಣ ತೊಟ್ಟು ಯಾವುದೇ ಲಾಭದ ಆಸೆ ಇಲ್ಲದ ಜೀವಗಳು. ಆನಾಥರು, ವಂಚಿತರು, ಸಂಕಷ್ಟಕ್ಕೀಡಾದವರಿಗೆ ಸಹಾಯ ಹಸ್ತ ಚಾಚಲು ಕಷ್ಟವೇನಿಲ್ಲ. ತನು-ಮನ-ಧನ ಯಾವುದಾದರೂ ಸರಿ. ನಾವು ಸ್ಪಂದಿಸಿದರೆ ಈ ಜಗತ್ತು ಸ್ವಲ್ಪ ಬದಲಾಗಲು ಸಾಧ್ಯ.

ಇವೆಲ್ಲವನ್ನು ಮಾಡಲು ಸರಕಾರ ಇದೆಯಲ್ಲ ಎಂದು ನಮಗನಿಸದಿರದು. ಸರಕಾರದ ಬೊಕ್ಕಸದಲ್ಲಿರುವುದೂ ನಮ್ಮ ತೆರಿಗೆಯ ಹಣವಲ್ಲವೇ? ಅದಿ ರುವುದು ಜನರ ಸೇವೆಗಾಗಿಯೇ ಅಲ್ಲವೇ. ಸರಕಾರ ತನ್ನ ಆಡಳಿತ ವ್ಯವಸ್ಥೆ ಅಂದರೆ ಅಧಿಕಾರಿಗಳು, ನೌಕರರ ಮೂಲಕ ಇವೆಲ್ಲವನ್ನು ಮಾಡಲಿ. ಎಲ್ಲವನ್ನು ನಾವೇ ಮಾಡುವುದಾದರೆ ಸರಕಾರ, ಆಡಳಿತ ವ್ಯವಸ್ಥೆಗಳೆಲ್ಲವೂ ಇದ್ದಾದರೂ ಏನು ಪ್ರಯೋಜನ ಎಂಬ ಪ್ರಶ್ನೆ ನಿಮ್ಮನ್ನು ಕಾಡದಿರದು. ಆದರೆ ವಾಸ್ತವ ಬೇರೆಯದೇ ಇದೆ. ಇಷ್ಟೊಂದು ಜನಸಂಖ್ಯೆ ಇರುವ ಈ ದೇಶದಲ್ಲಿ ಸರಕಾರ ಏನೆಲ್ಲ ಮಾಡಲು ಸಾಧ್ಯ ಎಂದು ನಾವು ಒಂದಿಷ್ಟು ಯೋಚಿಸಲೇ ಬೇಕು. ಹಾಗಾದರೆ ಈಗಿನಿಂದಲೇ ಕಾರ್ಯೋನ್ಮು ಖರಾಗೋಣ. ಮುಹೂರ್ತಕ್ಕೆ ಕಾಯುವ ಅಗತ್ಯ ಏನಿಲ್ಲ.

Advertisement

– ಬಿ. ನರಸಿಂಗ ರಾವ್, ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next