Advertisement

ಹಾವು ಕಡಿದು ಅಂಗನವಾಡಿಯಲ್ಲಿ ಮಗು ಸಾವು

06:50 AM Nov 24, 2018 | Team Udayavani |

ರಿಪ್ಪನ್‌ಪೇಟೆ (ಶಿವಮೊಗ್ಗ): ಅಂಗನವಾಡಿಯಲ್ಲಿ ಮಲಗಿದ್ದ ಸಮಯದಲ್ಲಿ ಹಾವು ಕಡಿದು ಮಗುವೊಂದು ಮೃತಪಟ್ಟ ಘಟನೆ ಹೊಸನಗರ ತಾಲೂಕಿನ ಹೊಟ್ಟಾಳಪುರದಲ್ಲಿ ನಡೆದಿದೆ.

Advertisement

ಅಂಗನವಾಡಿಯಲ್ಲಿ ಮಧ್ಯಾಹ್ನದ ಊಟ ಮಾಡಿ ಮಲಗಿದ್ದ ಐದೂವರೆ ವರ್ಷದ ಮಗು ರಿಶಿತ್‌ಸುಮುಖ್‌ಗೆ ಹಾವು ಕಡಿದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದೆ.

ಹೊಟ್ಟಾಳಪುರದಲ್ಲಿ ಸಂಪೂರ್ಣ ಶಿಥಿಲಗೊಂಡ ಬಾಡಿಗೆ ಕಟ್ಟಡದಲ್ಲಿ ಮಿನಿ ಅಂಗನವಾಡಿ ಇದ್ದು, ಊರಿನ 9 ಮಕ್ಕಳು ಈ ಅಂಗನವಾಡಿಗೆ ಬರುತ್ತಿದ್ದಾರೆ.ಎಂದಿನಂತೆ ಗುರುವಾರ ಬೆಳಗ್ಗೆ ಅಂಗನವಾಡಿಗೆ ಆಗಮಿಸಿದ್ದ ಮಕ್ಕಳು,ಆಟ, ಪಾಠದಲ್ಲಿ ತೊಡಗಿದ್ದರು. ನಂತರ,ಅಂಗನವಾಡಿ ಕಾರ್ಯಕರ್ತೆ ಮಕ್ಕಳಿಗೆ ಊಟ ಬಡಿಸಿ ಮಕ್ಕಳನ್ನು ಮಲಗಿಸಿದ್ದರು.

ಆದರೆ, ನಿದ್ರೆ ಮಾಡದ ರಿಶಿತ್‌ಸುಮುಖ್‌ ಮಲಗಿದಲ್ಲೇ ಆಟವಾಡುತ್ತಿದ್ದ. ಈ ವೇಳೆ ಒಳ ಬಂದ ಹಾವನ್ನು ಯಾರೂ ನೋಡಿಲ್ಲ. ಹಾವು ಮಗುವಿನ ಕಾಲ ಬೆರಳಿಗೆ ಕಡಿದಿದೆ. ತಕ್ಷಣ ಮೇಲೆದ್ದ ರಿಶಿತ್‌, “ನನ್ನ ಕಾಲಿಗೆ ಹಾವು ಕಡಿಯಿತು’ ಎಂದು ತೊದಲು ನುಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಸುಧಾಗೆ ಹೇಳಿದ. ಸುಧಾ ಅಕ್ಕಪಕ್ಕದವರನ್ನು ಕೂಗಿ ಕರೆದರು.

ನಂತರ, ಮಗುವಿನ ಕಾಲಿಗೆ ಹಗ್ಗದಿಂದ ಕಟ್ಟು ಬಿಗಿಯಲಾಯಿತು. ಮಗುವಿನ ತಂದೆಗೆ ಫೋನ್‌ ಮಾಡಲಾಯಿತು. ಆದರೆ, ತಂದೆ ಊರಿನಲ್ಲಿ ಇಲ್ಲದ್ದರಿಂದ ಮಗುವಿನ ಚಿಕ್ಕಪ್ಪ ಸ್ಥಳಕ್ಕೆ ಬಂದು ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ
ಮೃತಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next