Advertisement

ವಿಧಾನಸೌಧದಲ್ಲೇ ನಡೆದಿತ್ತು ಡೀಲ್‌

07:07 AM Feb 14, 2019 | Team Udayavani |

ಬೆಂಗಳೂರು: ಸಚಿವ ಪುಟ್ಟರಂಗಶೆಟ್ಟಿ ಪ್ರಕರಣದಲ್ಲೂ ವಿಧಾನಸೌಧದಲ್ಲಿ ನಡೆದ “ಡೀಲ್‌’ ಬೆಳಕಿಗೆ ಬಂದು ರಾಜ್ಯಾದ್ಯಂತ ಚರ್ಚೆಯಾಗಿತ್ತು. ಇದೀಗ ನಕಲಿ ಸಚಿವನ ಮೋಸದ ಡೀಲ್‌ನಿಂದಾಗಿ ಶಕ್ತಿ ಕೇಂದ್ರ ಕೆಟ್ಟ ಹೆಸರು ಹೊತ್ತುಕೊಳ್ಳುವಂತಾಗಿದೆ. ವಿಧಾನಸೌಧದಲ್ಲೇ ಕೆಲಸ ಮಾಡುವ ಸರ್ಕಾರಿ ನೌಕರರ ಸಹಾಯದಿಂದ ಒಂದನೇ ಮಹಡಿಯಲ್ಲಿನ ಖಾಲಿ ಕೊಠಡಿ ಬಳಸಿಕೊಂಡಿರುವ ಮಾಜಿ ಶಾಸಕನ ಪುತ್ರ ಕಾರ್ತಿಕೇಯನ್‌ ಅಲಿಯಾಸ್‌ ಕೆ.ಕೆ.ಶೆಟ್ಟಿ ಶಾಸಕರ ಕಾರುಗಳು, ಪಾಸ್‌ಗಳನ್ನೂ ದುರ್ಬಳಕೆ ಮಾಡಿಕೊಂಡಿದ್ದಾನೆ. ಈ ಮೂಲಕ ತಮಿಳುನಾಡು ಮೂಲದ ಗೋಡಂಬಿ ವ್ಯಾಪಾರಿ ರಮೇಶ್‌ಗೆ 1.12 ಕೋಟಿ ರೂ. ವಂಚಿಸಿದ್ದಾನೆ.

Advertisement

ಬಂಧಿತರು ಯಾರು?: ಶೇಷಾದ್ರಿಪುರ ನಿವಾಸಿ ಪಿ. ಕಾರ್ತಿಕೇಯನ್‌ ಅಲಿಯಾಸ್‌ ಕೆ.ಕೆ.ಶೆಟ್ಟಿ (60), ಈತನ ಪುತ್ರ ಮಣಿಕಂಠ ವಾಸನ್‌ ಅಲಿಯಾಸ್‌ ಅಜಯ್‌ (25), ಕಾರ್ತಿಕೇಯನ್‌ ಸಂಬಂಧಿ ಕೆ.ಸ್ವರೂಪ್‌ (23), ತ್ಯಾಗರಾಜನಗರದ ಕೆ.ವಿ.ಸುಮನ್‌ (27), ಆರ್‌. ಅಭಿಲಾಷ್‌ ಅಲಿಯಾಸ್‌ ರಂಜಿತ್‌ (27), ತಮಿಳುನಾಡಿನ ಆರ್‌.ಕಾರ್ತಿಕ್‌ ಅಲಿಯಾಸ್‌ ಸೆಲ್ವಂ (34), ಎಂ.ಪ್ರಭು ಅಲಿಯಾಸ್‌ ರಾಮಚಂದ್ರನ್‌ (30), ಒಲ್ಡಗೊರಪ್ಪನ ಪಾಳ್ಯದ ಜಾನ್‌ಮೂನ್‌ ಅಲಿಯಾಸ್‌ ಜೋಬಿನ್‌ (49) ಬಂಧಿತರು.

ಆರೋಪಿಗಳಿಗೆ ಸಹಕಾರ ನೀಡುತ್ತಿದ್ದ ವಿಧಾನಸೌಧ ಸಿಬ್ಬಂದಿ ಮಹದೇವಸ್ವಾಮಿ ಹಾಗೂ ತಮಿಳುನಾಡಿನ ಇಳಮದಿರ ಎಂಬುವವರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ. ಈ ಪೈಕಿ ಪ್ರಮುಖ ಆರೋಪಿ ಪಿ.ಕಾರ್ತಿಕೇಯನ್‌ ಮಾಜಿ ಶಾಸಕ ಪಳನಿಯಪ್ಪನ್‌ ಎಂಬುವವರ ಪುತ್ರ. ಹೀಗಾಗಿ ವಿಧಾನಸೌಧ ಹಾಗೂ ಶಾಸಕರ ಭವನದಲ್ಲಿ ಬಹಳಷ್ಟು ಮಂದಿ ಜತೆ ನಿಕಟ ಸಂಪರ್ಕ ಹೊಂದಿದ್ದು, ಸರ್ಕಾರಿ ನೌಕರ ಮಹದೇವಸ್ವಾಮಿ ಸಹಕಾರದಿಂದ ವಿಧಾನಸೌಧದ ಒಂದನೇ ಮಹಡಿಯಲ್ಲಿರುವ ಖಾಲಿ ಕೊಠಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದ ಎಂದು
ಹೇಳಲಾಗಿದೆ.

ಏನಿದು ಘಟನೆ?: ತಮಿಳುನಾಡಿನ ಕೊಯಮತ್ತೂರು ನಿವಾಸಿ, ಬ್ಯಾಂಕ್‌ ಉದ್ಯೋಗಿಯಾಗಿರುವ ಇಂದಿರಾ ಅವರಿಗೆ ಪರಿಚಯವಿದ್ದ ಗೋಡಂಬಿ ವ್ಯಾಪಾರಿ ರಮೇಶ್‌ ಎಂಬುವವರು ತಮ್ಮ ಉದ್ಯಮಕ್ಕಾಗಿ 100 ಕೋಟಿ ರೂ. ಸಾಲ ಕೇಳಿದ್ದರು. ಇಂದಿರಾ, ತನಗೆ ಪರಿಚಯ ಇರುವ ಇಳಮದಿರ ಎಂಬಾತನನ್ನು ಸಂಪರ್ಕಿಸಿ ಸಾಲದ ವಿಚಾರ ತಿಳಿಸಿದ್ದರು. ಆತ ತನ್ನ ಸ್ನೇಹಿತರಾದ ಸುಂದರಂ, ಸೆಲ್ವಂ, ಅಜಯ್‌ ಮತ್ತು ಈತನ ತಂದೆ ಕಾರ್ತಿಕೇಯನ್‌ನನ್ನು ಉದ್ಯಮಿ ರಮೇಶ್‌ಗೆ ಪರಿಚಯಿಸಿಕೊಟ್ಟಿದ್ದ. ನಂತರ ತಾವು ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತೇವೆ ಎಂದ ಆರೋಪಿಗಳು, ಸ್ಟಾಂಪ್‌ ಶುಲ್ಕವಾಗಿ ಸಾಲದ ಮೊತ್ತದಲ್ಲಿ ಶೇ.1.12 ರಷ್ಟು ನೀಡಬೇಕಾಗುತ್ತದೆ ಎಂದು ತಿಳಿಸಿದ್ದರು. 

ವ್ಯವಹಾರ ಹೇಗೆ?: ಸಚಿವರ ನಿಧಿಯಿಂದ 100 ಕೋಟಿ ರೂ. ಸಾಲ ಕೊಡಿಸುವ ವ್ಯವಹಾರದ ಕುರಿತು ಮಾತನಾಡಲು ವಿಧಾನಸೌಧದ ಮೊದಲ ಮಹಡಿಯ ಕೊಠಡಿಗೆ ಬರುವಂತೆ ಆರೋಪಿ ಕಾರ್ತಿಕೇಯನ್‌, ಗೋಡಂಬಿ ವ್ಯಾಪಾರಿ ರಮೇಶ್‌ಗೆ ಸೂಚಿಸಿದ್ದ. ಅದಕ್ಕೆ ಒಪ್ಪಿದ ಅವರು, ಜ.2ರಂದು ಶಕ್ತಿಕೇಂದ್ರದಲ್ಲಿ ಆರೋಪಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಂತರ ಎಂ.ಜಿ.ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್‌ ಒಂದರಲ್ಲಿ ರಮೇಶ್‌ರಿಂದ 100 ರೂ. ಮೌಲ್ಯದ ಐದು ಸ್ಟಾಂಪ್‌ ಪೇಪರ್‌, 20 ರೂ. ಮೌಲ್ಯದ ಐದು ಸ್ಟಾಂಪ್‌ ಪೇಪರ್‌ಗಳ ಮೇಲೆ ಸಹಿ ಮಾಡಿಸಿಕೊಂಡ ಆರೋಪಿಗಳು, ಐದು ಚೆಕ್‌ಗಳು, ಆರು ಭಾವಚಿತ್ರಗಳನ್ನು ಪಡೆದುಕೊಂಡಿದ್ದರು.

Advertisement

ಅಲ್ಲದೆ, ಸಾಲ ಪಡೆಯುವುದಕ್ಕೂ ಮೊದಲು ಸ್ಟಾಂಪ್‌ ಡ್ನೂಟಿ ಶುಲ್ಕವಾಗಿ ತನ್ನ ಮಗನಿಗೆ 1.12 ಕೋಟಿ ರೂ. ಹಣವನ್ನು ಕೊಡುವಂತೆ ಕೆ.ಕೆ.ಶೆಟ್ಟಿ ಹೇಳಿದ್ದ. ಅದರಂತೆ ರಮೇಶ್‌, ಹೋಟೆಲ್‌ ಪಕ್ಕದಲ್ಲಿರುವ ಪಾರ್ಕಿಂಗ್‌ ಸ್ಥಳದಲ್ಲಿ ಅಜಯ್‌ಗೆ ಹಣ ಕೊಟ್ಟಿದ್ದಾರೆ. ಅನಂತರ ಸಾಲವನ್ನೂ ಕೊಡಿಸದೆ,
ಪಡೆದಿದ್ದ 1.12 ಕೋಟಿ ರೂ. ಹಣವನ್ನು ಹಿಂದಿರುಗಿಸದೆ ವಂಚಿಸಿದ್ದರು. ಈ ಸಂಂಬಧ ಇಂದಿರಾ ಅವರು ಜ.17ರಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ವಂಚಕರು ಪೊಲೀಸರ ಬಲೆಗೆ ಬಿದ್ದದ್ದು ಹೇಗೆ?
ವಂಚನೆ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಮೊಬೈಲ್‌ಗ‌ಳನ್ನು ಸ್ವಿಚ್‌ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಆದರೆ, ಪಂಚತಾರ ಹೋಟೆಲ್‌ನಲ್ಲಿ ಉದ್ಯಮಿಯಿಂದ 1.12 ಕೋಟಿ ರೂ. ಹಣ ವರ್ಗಾವಣೆ ಮಾಡಿಕೊಂಡ ಬಳಿಕ, ಈ ಪೈಕಿ 50 ಸಾವಿರ ರೂ. ಹಣವನ್ನು ತಮಿಳುನಾಡಿನ ನಾಗನೇರಿ ತಾಲೂಕಿನ ದೇವಸ್ಥಾನವೊಂದರ ಟ್ರಸ್ಟಿ ಪ್ರಭು ಅಲಿಯಾಸ್‌ ರಾಮಚಂದನ್‌ ಖಾತೆಗೆ ವರ್ಗಾವಣೆ ಮಾಡಿದ್ದರು. ತನಿಖೆ ವೇಳೆ ಈ ಮಾಹಿತಿ ಸಂಗ್ರಹಿಸಿದ ತನಿಖಾಧಿಕಾರಿಗಳು, ಕೂಡಲೇ ಪ್ರಭುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಜಯನಗರದಲ್ಲಿ ವಾಸವಾಗಿದ್ದ ಸುಮನ್‌ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈತನನ್ನು ವಶಕ್ಕೆ ಪಡೆದು, ಮೊಬೈಲ್‌ ಸಿಡಿಆರ್‌ಗಳನ್ನು ಪರಿಶೀಲಿಸಿದಾಗ ಆರೋಪಿಗಳು ತಮಿಳುನಾಡಿನ ಕರೂರಿನ ಮನೆಯೊಂದರಲ್ಲಿರುವ ಮಾಹಿತಿ ಸಿಕ್ಕಿತ್ತು. ಈ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಶಾಸಕರ ಭವನದ ವಾಹನ ದುರ್ಬಳಕೆ
ಆರೋಪಿ ಕಾರ್ತಿಕೇಯನ್‌, ಶಾಸಕರ ಭವನದ ಕೆಲ ಸಿಬ್ಬಂದಿ ಹಾಗೂ ಕಾರು ಚಾಲಕರನ್ನು ಪರಿಚಯಿಸಿಕೊಂಡು, ಅಗತ್ಯ
ಬಿದ್ದಾಗ ಚಾಲಕರು ಅಥವಾ ಸಿಬ್ಬಂದಿಗೆ ಕರೆ ಮಾಡಿ ವಾಹನಗಳನ್ನು ತಾನು ಇರುವಲ್ಲಿಗೆ ಕರೆಸಿಕೊಳ್ಳುತ್ತಿದ್ದ. ಹಣದಾಸೆಗೆ ಸಿಬ್ಬಂದಿಯು ಯಾರಾದರೂ ಶಾಸಕರ ಹೆಸರನ್ನು ಪುಸ್ತಕದಲ್ಲಿ ನಮೂದಿಸಿ ವಾಹನ ಕಳುಹಿಸುತ್ತಿದ್ದರು. ಇದೇ ವಾಹನದಲ್ಲಿ ಆರೋಪಿ ವಿಧಾನಸೌಧದ ಪ್ರವೇಶ ಮಾಡುತ್ತಿದ್ದ. ಸಂದರ್ಶಕರ ಪಾಸ್‌ ಇದ್ದ ಕಾರಣ ಭದ್ರತಾ ಸಿಬ್ಬಂದಿ ಯಾವುದೇ ಪರಿಶೀಲನೆ ಮಾಡದೆ ಪ್ರವೇಶ ನೀಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಹಣ ವರ್ಗಾವಣೆ
ಆರೋಪಿಗಳು ಪಡೆದಿದ್ದ 1.12 ಕೋಟಿ ರೂ. ಪೈಕಿ, ಆರೋಪಿ ಮಣಿಕಂಠ ವಾಸನ್‌ನ ತಾಯಿ 10 ಲಕ್ಷ ರೂ. ನಗದು ಮತ್ತು ಸ್ವರೂಪ್‌ ಪತ್ನಿ ಖಾತೆಯಿಂದ 25 ಲಕ್ಷ ರೂ. ಸೇರಿ ವಿವಿಧ ಮೂಲಗಳಿಂದ ಒಟ್ಟು 40 ಲಕ್ಷ ರೂ.ಗಳನ್ನು ದೂರುದಾರೆ ಇಂದಿರಾ ಅವರಿಗೆ ವಾಪಸ್‌ ನೀಡಿದ್ದಾರೆ. ಇನ್ನುಳಿದ 72 ಲಕ್ಷ ರೂ. ಗಳನ್ನು ವಶಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next