Advertisement

ಅಂಗಳದ ತುಂಬಿತ್ತು ಬಾಂಧವ್ಯದ ಬೆಸುಗೆ

11:42 AM Nov 14, 2019 | mahesh |

ಜಂಜಾಟದ ಬದುಕಿನಿಂದ ಬೇಸತ್ತವರು, ಶ್ರೀಮಂತಿಕೆಯ ಜೊತೆಗೇ ಬದುಕಿದರೂ ನೆಮ್ಮದಿ ಇಲ್ಲದೆ ಸಂಕಟಪಟ್ಟವರು ಮಾತ್ರವಲ್ಲ; ಉದ್ಯೋಗ ನಿಮಿತ್ತ ಪರ ಊರಿಗೆ ಬಂದು ಆಶ್ರಯ ಪಡೆದ ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರೂ ಆಶ್ರಮದಲ್ಲಿದ್ದರು. ಬಾಂಧವ್ಯವೆಂಬುದು ಕಂಡೂಕಾಣದಂತೆ ಅವರನ್ನೆಲ್ಲ ಆವರಿಸಿಕೊಂಡಿತ್ತು…

Advertisement

ಸರ್ಕಾರದ ವತಿಯಿಂದ ಉಪನ್ಯಾಸಕರಿಗೆ ಕಂಪ್ಯೂಟರ್‌ ಟ್ರೇನಿಂಗ್‌ ನಡೆಯುತ್ತಿತ್ತು. ಆ ನಿಮಿತ್ತ, ಕಳೆದ ಸೆಪ್ಟೆಂಬರ್‌ನಲ್ಲಿ ನನಗೆ ಹತ್ತು ದಿನ ಕುಮಟಾದಲ್ಲಿ ಉಳಿಯಬೇಕಾಗಿ ಬಂತು. ದಾಂಡೇಲಿಯಿಂದ ದಿನನಿತ್ಯ ಪ್ರಯಾಣ ಮಾಡುವುದು ಸಾಧ್ಯವಾಗದ ಕಾರಣ, ವಾಸ್ತವ್ಯಕ್ಕಾಗಿ ವಿಚಾರಿಸಿದಾಗ ಕುಮಟಾ ಹೆರವಟ್ಟಾದ ರಾಘವೇಂದ್ರ ಮಠದ ಆಶ್ರಮದಲ್ಲಿ ಉಳಿಯಲು ವ್ಯವಸ್ಥೆ ಮಾಡಿದರು.

ಅದೊಂದು ಮೂರು ಮಹಡಿಯ ಕಟ್ಟಡ. ವಸತಿನಿಲಯ, ಗ್ರಂಥಾಲಯ, ಚಿಕ್ಕ ಸಮಾರಂಭದ ಕೋಣೆ ಎಲ್ಲವನ್ನೂ ಹೊಂದಿರುವ, ತನ್ನ ಆಶ್ರಯಿಸಿ ಬಂದವರನ್ನು ಆದರಿಸುವ ಸ್ಥಳ. ಆ ಕಟ್ಟಡದ ಮುಂಬಾಗಿಲಿನ ನೆತ್ತಿಯತ್ತ ನೋಡಿದರೆ ಶ್ರೀನಿವಾಸ ಗೋಲ್ಡ್‌ ಏಜ್‌ ಹೋಮ್‌ ಎಂಬ ನಾಮಫ‌ಲಕ ಕಾಣಿಸಿತು.

ಅಲ್ಲಿ ಸುಮಾರು ಏಳೆಂಟು ವೃದ್ಧರಿದ್ದರು. ಅವರೆಲ್ಲರೂ ಕಾಲದ ಕೈಯಲ್ಲಿ ಸವೆದವರು. ಬಸವಳಿದವರು. ಆಕೆ ಸುಮಾರು 78 ವರ್ಷದ‌ ಹೆಂಗಸು. ಮಕ್ಕಳಿದ್ದರೂ, ಅವರ್ಯಾರ ಹಂಗು ಕಿರಿಕಿರಿಗಳೇ ಬೇಡವೆಂದು ಆಶ್ರಮವನ್ನು ಆಶ್ರಯಿಸಿ ಬಂದವಳು. ಇನ್ನಿಬ್ಬರು ದಂಪತಿಗಳು. ಶಿಕ್ಷಕನಾಗಿದ್ದ ಪತಿ ನಿವೃತ್ತಿಯಾಗಿ ಎರಡಕ್ಕಿಂತ ಹೆಚ್ಚು ದಶಕಗಳೇ ಸಂದಿವೆ. ಪತ್ನಿಗೆ ಬೆನ್ನು ಬಾಗಿದೆ. ಅಡುಗೆ ಇತ್ಯಾದಿ ಕೆಲಸ ಮಾಡುವ ಸಾಮರ್ಥ್ಯವಿಲ್ಲ. ಕುಮಟಾದ ಸಮೀಪದ ಯಾವುದೋ ಹಳ್ಳಿಯವರು. ಹಳ್ಳಿಯಲ್ಲಿ ವೈದ್ಯಕೀಯ ಸವಲತ್ತುಗಳಿಲ್ಲ. ರಾತ್ರಿ ಹೆಚ್ಚು ಕಡಿಮೆಯಾದರೆ ನೋಡುವವರಿಲ್ಲ. ದೂರದ ಬೆಂಗಳೂರಿನಲ್ಲಿ ಇರುವ ಮಗನ ಮನೆಯಲ್ಲಿ ಕಟ್ಟಿ ಹಾಕಿದಂತಾಗುತ್ತದೆ. ಹಾಗಾಗಿ ಇಲ್ಲೇ ಮಠದ ಆಶ್ರಮದಲ್ಲಿ ಜೊತೆಯಾಗಿ ವಾಸವಿದ್ದೇವೆ ಎಂದರವರು!

ಇನ್ನೊಬ್ಬರು ವಯಸ್ಸಾದವರು. ತಮ್ಮ ಜೀವಿತದ ಸುವರ್ಣ ಯುಗವನ್ನೆಲ್ಲಾ ಮುಂಬೈನಲ್ಲಿ ಕಳೆದವರು. ನಿವೃತ್ತಿಯ ನಂತರ ಅಲ್ಲಿಯ ಜಂಜಾಟದ ಬದುಕಿಗೆ ಬೇಸತ್ತು, ನೆಮ್ಮದಿ ಹುಡುಕಿ ಆಶ್ರಮವನ್ನು ಆಶ್ರಯಿಸಿ ಬಂದವರು. ಹೀಗೆ ಇನ್ನೂ ಐದಾರು ವೃದ್ಧರಿದ್ದರು. ಅವರ ಜೊತೆಗೆ, ದೂರದ ಊರಿನಿಂದ ಉದ್ಯೋಗ ನಿಮಿತ್ತ ಬಂದ ಹೆಣ್ಮಕ್ಕಳು, ಮೂವರು ಕಾಲೇಜು ವಿಧ್ಯಾರ್ಥಿನಿಯರು…ಇವರೆಲ್ಲಾ ಒಂದೇ ಸೂರಿನಡಿ, ಒಂದೇ ಭೋಜನಾಲಯದಲ್ಲಿ ಉಂಡು, ಸುಖವಾಗಿದ್ದಾರೆ.

Advertisement

ಆ ಆಶ್ರಮವನ್ನು ಸ್ಥಾಪಿಸಿದ್ದು ಮೀರಾ ಶ್ರೀನಿವಾಸ ಶಾನಭಾಗ ಎಂಬುವರು. 78 ವರ್ಷದ ಮೀರಾ, ನಿವೃತ್ತ ಖಜಾನೆ ಅಧಿಕಾರಿಣಿ. ಹೆರವಟ್ಟಾದ ಶ್ರೀನಿವಾಸ ಶಾನಭಾಗರ ನಾಲ್ಕು ಪುತ್ರಿಯರಲ್ಲಿ ಕೊನೆಯವರು. ಶಾನಭಾಗರ ಒಬ್ಬ ಮಗಳಿಗೆ ಮಾತ್ರ ವಿವಾಹವಾಗಿದ್ದರೂ, ಅವರು ಬಹುಬೇಗ ವಿಧವೆಯಾದರು. ಹೀಗಾಗಿ ಉಳಿದ ಹೆಣ್ಣುಮಕ್ಕಳು ವಿವಾಹದ ಕುರಿತಾಗಿ ಯಾವ ಕನಸುಗಳನ್ನೂ ಇಟ್ಟುಕೊಳ್ಳದೇ ಶಿಕ್ಷಣ, ವೃತ್ತಿ ಜೀವನ, ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡರು. ಅವರಲ್ಲಿ ಮೀರಾ ಶಾನಭಾಗರು ಬಹಳ ಮಹತ್ವಾಕಾಂಕ್ಷೆಯ ಹೆಣ್ಣುಮಗಳು. ಹುಬ್ಬಳ್ಳಿಯಲ್ಲಿ ನೌಕರಿ ಮಾಡುವ ಸಂದರ್ಭದಲ್ಲಿ ಹಾಸ್ಟೆಲ್‌ ಒಂದರಲ್ಲಿ ಉಳಿದುಕೊಳ್ಳುವ ಅನಿವಾರ್ಯತೆ ಬಂತು. ಆ ಹಾಸ್ಟೆಲ್‌ನ ಸಮೀಪವೇ ರಾಘವೇಂದ್ರ ಮಠವೂ ಇತ್ತು. ಅದಾಗಲೇ ನಿವೃತ್ತಿಗೆ ಸಮೀಪ ಬಂದ ಅವರಿಗೆ, ತಂದೆಯ ಆಸ್ತಿ ಹಾಗೂ ಜಮೀನಿನಲ್ಲಿ ಏನನ್ನಾದರೂ ಸಮಾಜಮುಖಿ ಕೆಲಸಕ್ಕೆ ಬಳಸಬೇಕೆಂಬ ತುಡಿತ ಬಲವಾಗಿತ್ತು. ಆಗಲೇ ಮೀರಾ ತಲೆಯಲ್ಲಿ ಹೊಳೆದದ್ದು ಮಠವನ್ನು ನಿರ್ಮಿಸುವುದು ಮತ್ತು ಆಶ್ರಮವೊಂದನ್ನು ಸ್ಥಾಪಿಸುವ ಆಸೆ. ಪೆನ್ಸ್ ನ್‌ ಬರುತ್ತಿತ್ತು. ಮತ್ತೆ ಏನಾದರೂ ಮಾಡಬೇಕೆಂಬ ಹಂಬಲ ತುಡಿಯುತ್ತಿತ್ತು. ಆಗಲೇ ಅವರ ಮನಸ್ಸಿಗೆ ಬಂದದ್ದು ವೃದ್ಧಾಶ್ರಮದ ಸ್ಥಾಪನೆ. ಅಕ್ಕಂದಿರೊಂದಿಗೆ ಸಮಾಲೋಚಿಸಿ, ನಿವೃತ್ತಿ ಹೊಂದುತ್ತಲೇ ತಂದೆಯ ಹೆಸರಿನಲ್ಲಿ ಟ್ರಸ್ಟ್‌ವೊಂದನ್ನು ಸ್ಥಾಪಿಸಿ, ಮಠ ಹಾಗೂ ಗೋಲ್ಡ ಏಜ್‌ ಹೋಮ್‌ ಎಂಬ ಆಶ್ರಮವನ್ನು ಸ್ಥಾಪಿಸಿಯೇ ಬಿಟ್ಟರು.

ಹನ್ನೆರಡು ವರ್ಷಗಳಿಂದ, ದೇಗುಲ ಹಾಗೂ ಆಶ್ರಮದ ನಿತ್ಯ ಕಾಯಕಗಳು ಸರಾಗವಾಗಿ ನಡೆಯುತ್ತವೆ. ಅದರ ಜೊತೆಜೊತೆಗೆ ಭಾರತೀಯ ಸಂಸ್ಕೃತಿಗೆ ಪೂರಕವಾಗಿ ದೇವಾಲಯದಲ್ಲಿ ಕೀರ್ತನೆ, ಪ್ರವಚನ ಕಾರ್ಯಕ್ರಮಗಳು, ರಜಾ ದಿನಗಳಲ್ಲಿ ಮಕ್ಕಳಿಗೆ ಯೋಗ ಶಿಬಿರ, ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಅದಕ್ಕೆಲ್ಲ ಪ್ರತ್ಯೇಕ ಕೊಠಡಿಗಳು ಅಲ್ಲಿವೆ. ಶಾರದಾ ಗ್ರಂಥಾಲಯವಿದೆ. ಒಳ್ಳೊಳ್ಳೆಯ ಪುಸ್ತಕಗಳ ಸಂಗ್ರಹವಿದೆ. ಹಲವು ದಾನಿಗಳು ಧನಸಹಾಯ ಮಾಡುತ್ತಾರೆ. ಪ್ರತಿ ವರ್ಷ ಜನವರಿ 22 ರಂದು ತಮ್ಮ ತಂದೆಯ ದಿನವನ್ನು ಆಚರಿಸಿ, ಸಂಬಂಧಿಕರನ್ನೆಲ್ಲಾ ಒಂದೆಡೆ ಕಲೆಹಾಕಿ ಬಾಂಧವ್ಯದ ಬೆಸುಗೆ ಏರ್ಪಡಿಸುತ್ತಾರೆ. ಜುಲೈ 29ರಂದು ತಾಯಿ ದಿನವನ್ನು ಆಚರಿಸಿಲಾಗುತ್ತದೆ. ಆ ದಿನ ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಹಾಲು ಹಣ್ಣು ಸಿಹಿ ಕೊಟ್ಟು ದಿನವನ್ನು ಸಾರ್ಥಕವಾಗಿಸುತ್ತಾರೆ. ಅಗಸ್ಟ 28 ರಂದು ಗತಿಸಿದ ಒಬ್ಬ ಸಹೋದರಿಯ ಹೆಸರಿನಲ್ಲಿ ಸಾಧಕರ ದಿನವನ್ನು ಆಚರಿಸಲಾಗುತ್ತದೆ. ಸಮಾಜದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುತ್ತದೆ. ಸೆಪ್ಟೆಂಬರ್‌ 28ರಂದು ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅದೂ ಕೂಡಾ ದಿವಂಗತ ಸಹೋದರಿಯೊಬ್ಬಳ ಸ್ಮರಣೆಯ ಆಚರಣೆ.

ಎಲೆ ಮರೆಯ ಕಾಯಿಯಂತೆ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುತ್ತಿರುವ ಮೀರಾ ಶಾನಭಾಗರ ಪ್ರಯತ್ನಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಲ್ಲಿಕಾರ್ಜುನ ಮನ್ಸೂರ ರಾಜ್ಯ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳು ಸಂದಿವೆ. ಅವರ ಈ ಪ್ರಯತ್ನಕ್ಕೆ ಅನೇಕರು ಕುಹಕವಾಡಿದ್ದನ್ನು ಮೀರಾ ಶಾನಭಾಗ ನೆನಪಿಸಿಕೊಳ್ಳುತ್ತಾರೆ. “ಹೆಣ್ಣು ಹೆಂಗಸು ಏನು ಮಾಡಿಯಾಳು?’ ಎಂದಿದ್ದರು. ಅದೇ ಹೆಣ್ಣು ಹೆಂಗಸು ಖಜಾನೆ ಅಧಿಕಾರಿಣಿಯಾಗಿ, ಆಶ್ರಮದ ಸ್ಥಾಪಕಿಯಾಗಿ ದುಡಿದಿದ್ದೇನೆ ಎಂದು ಮುಗ್ಧವಾಗಿ ಹೇಳುವ ಅವರಿಗೆ, ದೇವರು ಇನ್ನಷ್ಟು ಶಕ್ತಿ, ಸಹಕಾರ ನೀಡಲಿ.

-ನಾಗರೇಖಾ ಗಾಂವಕರ

Advertisement

Udayavani is now on Telegram. Click here to join our channel and stay updated with the latest news.

Next