Advertisement

ದೇಶದ ಕಾರ್ಮಿಕರು ಈಗಲೂ ಅತಂತ್ರ

03:45 AM May 01, 2018 | |

ಪ್ರಪಂಚದಾದ್ಯಂತ ಮೇ 1ನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು ಕಾರ್ಮಿಕರ ಕ್ಷೇಮಾಭಿವೃದ್ಧಿ ಹಾಗೂ ಹಕ್ಕು ಬಾಧ್ಯತೆಗಳ ಬಗ್ಗೆ ಗಹನವಾಗಿ ಚರ್ಚಿಸಲಾಗುತ್ತದೆ. ಇತ್ತೀಚೆಗಷ್ಟೇ ಅಂಗನವಾಡಿ ಕಾರ್ಯಕರ್ತೆಯರು ಬೀದಿಗಿಳಿದು ತಮ್ಮ ಹಕ್ಕುಗಳಿಗಾಗಿ ಅಹೋರಾತ್ರಿ ಧರಣಿ ನಡೆಸಿದ್ದರು, ಬಿಸಿ ಊಟ ಕಾರ್ಯಕರ್ತೆಯರು ಬೇಡಿಕೆ ಈಡೇರಿಸಲು ಉಪವಾಸ ಸತ್ಯಾಗ್ರಹ ನಡೆಸಿದರು. ಹೀಗೆ ಭಾರತದಲ್ಲಿ ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಕುರಿತಾದ ಒಂದು ಕಿರುನೋಟ ಇಲ್ಲಿದೆ. 

Advertisement

ಭಾರತದಲ್ಲಿ ಕಾರ್ಮಿಕರನ್ನು ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು ಎಂದು ವಿಭಾಗಿಸಲಾಗಿದೆ. ದೇಶದಲ್ಲಿ ಸುಮಾರು ಶೇ.15 ಮಾತ್ರ ಸಂಘಟಿತ ಕಾರ್ಮಿಕರು ಇದ್ದು, ಉಳಿದಂತೆ ಶೇ.85ರಷ್ಟು ಅಸಂಘಟಿತ ವಲಯದ ಕಾರ್ಮಿಕರು. ಅತಿಹೆಚ್ಚು ಅಸಂಘಟಿತ ಕಾರ್ಮಿಕರಿರುವುದು ಗ್ರಾಮೀಣ ಪ್ರದೇಶದಲ್ಲಿ. ದಿನಗೂಲಿ ಕಾರ್ಮಿಕರು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಸ್ಥರು, ಚಾಲಕರು ಮುಂತಾದವರೆಲ್ಲ ಅಸಂಘಟಿತ ಕಾರ್ಮಿಕರು. ನೆಮ್ಮದಿಯ ಜೀವನ ಅವರಿಗೆ ಗಗನಕುಸುಮ.

ಬಲಿದಾನದ ನೆನಪು
 ಮೇ 1ರಂದು ಕಾರ್ಮಿಕರ ದಿನವನ್ನಾಗಿ ಆಚರಣೆ ಮಾಡಲು ಒಂದು ಬಲವಾದ ಕಾರ ಣ ವಿ ದೆ; ಬಲಿದಾನದ ಒಂದು ಘಟನೆಯಿದೆ. 1886ರಲ್ಲಿ ಜಿನೇವಾದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕರ ಸಮ್ಮೇಳವನವನ್ನು ಆಯೋಜಿ ಸಲಾಗಿತ್ತು. ಈ ಸಮ್ಮೇಳನದಲ್ಲಿ ಕಾರ್ಮಿಕರ ಕ್ಷೇಮಾಭ್ಯುದಯ ಹಾಗೂ ಜೀವನ ಭದ್ರತೆಯ ಬಗ್ಗೆ ಬಲವಾಗಿ ಪ್ರತಿಪಾದಿ ಸಲಾಯಿತು. ಇನ್ನು ಕಾರ್ಲ್ ಮಾಕ್ಸ್‌ ಪ್ರತಿಪಾದಿಸಿದ್ದ, ಪ್ರತಿ ಯೊಬ್ಬ ಕಾರ್ಮಿಕ ದಿನದಲ್ಲಿ 8 ಗಂಟೆಗಳು ಮಾತ್ರ ಕೆಲಸ ನಿರ್ವಹಿಸಬೇಕೆಂಂಬ ನೀತಿಯನ್ನು ಕಡ್ಡಾಯ ಕಾನೂನಾಗಿ ತರಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು. ಸುಮಾರು 60 ಕಾರ್ಮಿಕ ಸಂಘಟನೆಗಳು ಹಾಗೂ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಇದನ್ನು ಒಪ್ಪಿಕೊಂಡರು. ಅಮೆರಿಕದಂತ ಬಂಡವಾಳಶಾಹಿ ರಾಷ್ಟ್ರದಲ್ಲಿ ಕಾರ್ಮಿಕ ಹಕ್ಕುಗಳನ್ನು ಧಿಕ್ಕರಿಸ ಲಾಗಿತ್ತು. ಕಾರ್ಮಿಕರ ಭದ್ರತೆ ಹಾಗೂ ಕ್ಷೇಮವನ್ನು ಕಡೆಗಣಿ ಸಲಾಗಿತ್ತು. ಅಲ್ಲದೇ 18-20 ತಾಸು ದುಡಿಸಿಕೊಳ್ಳುತ್ತಿದ್ದರು. ಇದರ ವಿರುದ್ಧ ಅಮೆರಿಕದ ಕಾರ್ಮಿಕರು ಬಂಡಾಯವೆದ್ದರು. 1886ರ ಮೇ 1 ರಂದು ಶಿಕಾಗೋದಲ್ಲಿ ಕಾರ್ಮಿಕರು ಬೀದಿಗಿಳಿದು ದಿನಕ್ಕೆ 8 ಗಂಟೆ ಅವಧಿ ಮಾತ್ರ ಕಾರ್ಮಿಕರು ದುಡಿಯುವ ಕಾನೂನಿನ ಜಾರಿಗೆ ಬರಬೇಕೆಂದು ಆಗ್ರಹಿಸಿ ದರು. ಹೋರಾಟ ತೀವ್ರಗೊಂಡಿತು. ಅಲ್ಲಿನ ಬಂಡವಾಳ ಶಾಹಿಗಳು ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಪೊಲೀಸ್‌ ವ್ಯವಸ್ಥೆಯನ್ನು ಬಳಸಿಕೊಂಡರು. ಪೊಲೀಸರ ಗುಂಡೇಟಿಗೆ ನೂರಕ್ಕೂ ಹೆಚ್ಚು ಕಾರ್ಮಿಕರು ಹತರಾದರು. ಕಾರ್ಮಿಕ ಮುಖಂಡರಾದ ಅಲ್ಬರ್ಟ್‌ ಪಾರ್ಸನ್ಸ್‌ ಹಾಗೂ ಆಗಸ್ಟ್‌ ಸ್ಪೈಸ್‌ ಮೇಲೆ ಸರಕಾರ ಸುಳ್ಳು ಕೇಸ್‌ ದಾಖಲಿಸಿ ಅವರಿಗೆ ಜೀವಾವಧಿ ಶಿಕ್ಷೆ‌ ವಿಧಿಸಲಾಯಿತು. ಕಾರ್ಮಿಕರ ಈ ಬಲಿದಾನದ ನೆನಪಿನಲ್ಲಿ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ.

ಭಾರತದಲ್ಲಿ ಕಾರ್ಮಿಕ ಶಕ್ತಿ
ಭಾರತ ದೇಶದಲ್ಲಿ ಒಟ್ಟು 50 ಕೋಟಿಗೂ ಮಿಕ್ಕಿ ಕಾರ್ಮಿಕರಿದ್ದು, ಈ ಪೈಕಿ ಕೇವಲ 3 ಕೋಟಿ ಮಾತ್ರ ಸಂಘಟಿತ ಕಾರ್ಮಿಕರು. ಚೀನವನ್ನು ಹೊರತುಪಡಿಸಿದರೆ, ಅತಿಹೆಚ್ಚು ಕಾರ್ಮಿಕರು ಇರುವ ರಾಷ್ಟ್ರ ಭಾರತ.ಆದರೆ ದೇಶದ ಕಾರ್ಮಿಕರ ಸ್ಥಿತಿ ಮಾತ್ರ ಇನ್ನೂ ಶೋಚನೀಯವಾಗಿದೆ. ದೇಶದಲ್ಲಿ ಕಾರ್ಮಿಕ ಚಳವಳಿಯ ಪರಂಪರೆ ಇದ್ದರೂ ಸ್ವಾತಂತ್ರ್ಯ ಬಳಿಕ ಕಾರ್ಮಿಕ ಹೋರಾಟ ಬಲಗೊಂಡಿತು. ಬಸವಣ್ಣನವರ ಕಾಯಕ ಸಿದ್ಧಾಂತ, ಕಾರ್ಲ್ಮಾರ್ಕ್ಸ್ನ ಸಮಾತಾವಾದದಿಂದ ಸ್ಫೂರ್ತಿಗೊಂಡು ಭಾರತದಲ್ಲಿ ಅನೇಕ ಮುಖಂಡರು ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಏಳಿಗೆಗೆ ಶ್ರಮಿಸಿದರು. ಅದರಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌, ರಾಮ್‌ ಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ, ಶಾಂತವೇರಿ ಗೋಪಾಲಗೌಡ, ಜಾರ್ಜ್‌ ಫೆರ್ನಾಂಡೀಸ್‌ ಅಗ್ರಗಣ್ಯರು. 

ಕಾರ್ಮಿಕ ಸಂಘಟನೆಗಳು ಹಾಗೂ ಕಾನೂನುಗಳು 
ದೇಶದಲ್ಲಿ ಕಾರ್ಮಿಕ ಚಳವಳಿ ಪ್ರಖರಗೊಂಡ ಬಳಿಕ ಅನೇಕ ಸಂಘಟನೆಗಳು ಹುಟ್ಟಿಕೊಂಡವು. ಇಂಡಿಯನ್‌ ನ್ಯಾಶನಲ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌, ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌, ಹಿಂದ್‌ ಮುಜ್ದೂರ್‌ ಸಂಘ, ಭಾರತೀಯ ಮಜ್ದೂರ್‌ ಸಂಘ, ಸಿಐಟಿಯು, ಯುಟಿಟಿಸಿ ಹಾಗೂ ಕರ್ನಾಟಕ ಟ್ರೇಡ್‌ ಯೂನಿಯನ್‌ ಸೆಂಟರ್‌ನಂತ ಹಲವು ಸಂಘಟನೆಗಳು ಕಾರ್ಮಿಕರನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿವೆ. ಹಕ್ಕು ರಕ್ಷಣೆ, ಹಿತಾಸಕ್ತಿ ಕಾಪಾಡುವ ಸಲುವಾಗಿಯೇ ಹಲವಾರು ಕಾಯ್ದೆ ಕಾನೂನು ರಚಿಸಲಾಗಿದೆ. 

Advertisement

ಮುಗಿಯದ ಗೋಳು 
ಸರಕಾರ ಕಾರ್ಮಿಕರ ಕ್ಷೇಮಾಭ್ಯುದಯಕ್ಕಾಗಿ ಅನೇಕ ಕಾನೂನುಗಳನ್ನು ಜಾರಿಗೊಳಿಸಿದರೂ ಇಂದಿಗೂ ಅವರ ಜೀವನ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ವೇತನದಲ್ಲಿ ಅಸಮಾನತೆ, ಆರೋಗ್ಯ ಭದ್ರತೆ, ವಿಮಾ ಸೌಲಭ್ಯ, ಕೆಲಸದಲ್ಲಿ ಸಂಭವಿಸುವ ಆಕಸ್ಮಿಕ ಅವಘಡಗಳಿಗೆ ಪರಿಹಾರ ನೀಡದಿರುವುದು ಇವು ಇಂದಿನ ಕಾರ್ಮಿಕರ ಮೂಲ ಸಮಸ್ಯೆಗಳಾಗಿವೆ. ಕೃಷಿ ಕಾರ್ಮಿಕರು ಸಾಲದ ಹೊರೆಯಲ್ಲಿದ್ದಾರೆ. ಜನಸಂಖ್ಯೆ ಬೆಳೆಯು ತ್ತಿರುವಂತೆ ಉದ್ಯೋಗಾಕಾಂಕ್ಷಿಗಳ ಪ್ರಮಾಣ ಹೆಚ್ಚುತ್ತಿದೆ. ಆದರೆ ಈ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗದೆ ಇರುವುದರಿಂದ ಇದ್ದ ಉದ್ಯೋಗವನ್ನೇ ಹಂಚ‌ಬೇಕಾದ ಪರಿಸ್ಥಿತಿಯಿದೆ. ಸಾಕಷ್ಟು ಉದ್ಯೋಗ ಸೃಷ್ಟಿಯ ಜತೆಗೆ ಕಾರ್ಮಿಕರ ಹಿತ ಕಾಯುವಂತಹ ಕೆಲಸ ಇಂದಿನ ಅಗತ್ಯ. 

ಶಿವ ಸ್ಥಾವರಮಠ 

Advertisement

Udayavani is now on Telegram. Click here to join our channel and stay updated with the latest news.

Next