Advertisement
ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ನಡೆದ ಸಂವಿಧಾನ ಕುರಿತ ಚರ್ಚೆಯ ಬಗ್ಗೆ ಪ್ರಕಟವಾದ ವರದಿಯೊಂದು ಮನಸ್ಸಿಗೆ ಮುದ ನೀಡುವ ರೀತಿಯಲ್ಲಿತ್ತು. ವಿಪಕ್ಷೀಯ ನಾಯಕರಲ್ಲಿ ಕೆಲವರು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ 40 ಪುಟಗಳ ಸಿದ್ಧ ಹೇಳಿಕೆಯಲ್ಲಿ ಕೆಲ ತಿದ್ದುಪಡಿಗಳನ್ನು ಮಾಡುವಂತೆ ಅವರನ್ನು ಒತ್ತಾಯಿಸಿದ ಪ್ರಸಂಗ ಅದು.
Related Articles
Advertisement
ಮಂಗಳೂರು ಮೂಲದ ಈ ಪ್ರತಿಭಾನ್ವಿತ ವ್ಯಕ್ತಿಯ ಬಗ್ಗೆ ಅಮೆರಿಕ ಸುಪ್ರೀಂಕೋರ್ಟಿನ ನ್ಯಾಯಾಧೀಶ ಫೆಲಿಕ್ಸ್ ಫ್ರಾಂಕ್ಫರ್ಟರ್ ಅವರು ಹೀಗೆ ಉದ್ಗರಿಸಿದ್ದರು. “ಇತಿಹಾಸದ ಜ್ಞಾನ ಹಾಗೂ ಅಮೆರಿಕನ್ ಸಂವಿಧಾನದ ಕಾರ್ಯನಿರ್ವಹಣೆಯ ಬಗೆಗಿನ ತಿಳಿವಳಿಕೆಯ ಆಧಾರದಲ್ಲಿ ನಮ್ಮ ಸುಪ್ರೀಂಕೋರ್ಟಿಗೆ ನ್ಯಾಯಾಧೀಶರಾಗ ತಕ್ಕವರೊಬ್ಬರನ್ನು ಶಿಫಾರಸು ಮಾಡುವಂತೆ ಅಮೆರಿಕದ ಅಧ್ಯಕ್ಷರು ನನ್ನನ್ನು ಕೇಳಿದರೆ ನಾನು ತಯಾರಿಸುವ ಅರ್ಹರ ಯಾದಿಯಲ್ಲಿ ಬಿ. ಎನ್. ರಾವ್ ಅವರ ಹೆಸರು ಮೊದಲಿಗೇ ಇರುತ್ತದೆ’.
ಸ್ವಾತಂತ್ರ್ಯಪೂರ್ವ ದಿನಗಳಲ್ಲಿ ಹಿಂದೂ ನಾಗರಿಕ ಸಂಹಿತೆ ಮಸೂದೆಯ ಕರಡು ತಯಾರಿಸಿದವರು ಯಾರೆಂಬ ಪ್ರಶ್ನೆ ಬಂದಾಗಲೂ ನಾವು ಬಿ. ಎನ್. ರಾವ್ ಅವರನ್ನೇ ನೆನಪಿಸಿಕೊಳ್ಳಬೇಕು. ಕೇಂದ್ರೀಯ ಶಾಸನ ಸಭೆಯಲ್ಲಿ ಕೆಲ ಸಂಪ್ರದಾಯವಾದಿಗಳಿಂದ ವಿರೋಧ ವ್ಯಕ್ತವಾದ್ದರಿಂದ ಭಾರತ ಸರಕಾರ ಈ ಮಸೂದೆಯ ಅಂಗೀಕಾರಕ್ಕೆ ಹೆಚ್ಚು ಒತ್ತು ನೀಡಲಿಲ್ಲ. ಬಿ. ಎನ್. ರಾವ್ ಅವರ ಶಿಫಾರಸುಗಳು ಮುಂದೆ ಹಿಂದೂ ವಿವಾಹ ಕಾಯ್ದೆ (1955) ಹಾಗೂ ಹಿಂದೂ ಉತ್ತರಾಧಿಕಾರ ಕಾಯ್ದೆ (1956) ಎಂಬ ಹೆಸರಿನಲ್ಲಿ ಅಂಗೀಕೃತಗೊಂಡು ಜಾರಿಗೆ ಬಂದವು.
ಸಂವಿಧಾನದ ಮೂಲ ಕರಡನ್ನು ರೂಪಿಸಿದವರು ನರಸಿಂಗ ರಾವ್ ಅವರೇ ಎಂಬ ವಾಸ್ತವವನ್ನು ಅಲ್ಲಗಳೆಯುವಂತಿಲ್ಲ. ಈ ಮೂಲ ಕರಡಿನಲ್ಲಿ 243 ವಿಧಿಗಳು ಹಾಗೂ 13 ಪರಿಚ್ಛೇದಗಳಿದ್ದವು. ಮೊನ್ನೆ ಸ್ಪೀಕರ್ ಕಾಗೇರಿಯವರು ಸರಿಯಾಗಿಯೇ ಉಲ್ಲೇಖೀಸಿರುವಂತೆ ಈ ಕರಡನ್ನು ಅಂದಿನ ಸಂವಿಧಾನ ಶಾಸನ ಸಭೆಗೆ ಹಾಗೂ ಅಂಬೇಡ್ಕರ್ ನೇತೃತ್ವದ ಕರಡು ಸಮಿತಿಗೆ ಒಪ್ಪಿಸಲಾಯಿತು. 1949ರ ನವೆಂಬರ್ 26ರಂದು ಶಾಸನ ಸಭೆಯನ್ನುದ್ದೇಶಿಸಿ ಮಾಡಿದ ಸಮಾಪನ ಭಾಷಣದಲ್ಲಿ ಸಭಾಧ್ಯಕ್ಷ ಡಾ| ರಾಜೇಂದ್ರ ಪ್ರಸಾದ್ ಅವರು ಹೀಗೆಂದಿದ್ದರು – “ಸಂವಿಧಾನ ಕರಡು ಸಮಿತಿ ಬಿ. ಎನ್. ರಾವ್ ಅವರ ಮೂಲ ಕರಡನ್ನು ಪರಿಶೀಲನೆಗೊಳಪಡಿಸಿ ಸಂವಿಧಾನದ ಪ್ರತಿ ಯನ್ನು ಸಿದ್ಧಪಡಿಸಿದ ಶಾಸನ ಸಭೆಯು ಇದನ್ನು ಸ್ವೀಕರಿಸಿ ಅದರ ದ್ವಿತೀಯ ಅವಗಾಹನೆಯ ಹಂತದಲ್ಲಿ ರಾವ್ ಅವರು ತಯಾರಿಸಿಕೊಟ್ಟ ಮೂಲ ಕರಡನ್ನು ಸ್ವೀಕರಿಸಿ ಸಂವಿಧಾನದ ಆವೃತ್ತಿಯನ್ನು ಸಿದ್ಧಪಡಿಸಿದೆ. ಶಾಸನ ಸಭೆ ಇದನ್ನು ಪರಿಗಣನೆಗೆ ತೆಗೆದುಕೊಂಡು, ಇದರ ದ್ವಿತೀಯ ಹಂತದ ಪರಿಶೀಲನೆಯ ವೇಳೆ ದೀರ್ಘ ಕಾಲ ಚರ್ಚೆ – ವಿಶ್ಲೇಷಣೆ ನಡೆಸಿದೆ’.
ಶಾಸನ ಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಸಂವಿಧಾನ ಕರಡು ಸಮಿತಿಯ ಬಗೆಗೊಂದು ಟೀಕೆ ಕೇಳಿಬಂತು. ಸಮಿತಿಯ ಸದಸ್ಯರು ಅದರ ಸಭೆಯಲ್ಲಿ ನಿಯತವಾಗಿ ಪಾಲ್ಗೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ಅದು (ಸಮಿತಿ) ಡಾ| ಅಂಬೇಡ್ಕರ್ ಅವರ ಏಕ ವ್ಯಕ್ತಿ ಪ್ರದರ್ಶನದ ಅವಸ್ಥೆಯನ್ನು ತಲುಪುವಂತಾಯಿತು ಎನ್ನುವುದೇ ಈ ಟೀಕೆ. ವಾಸ್ತವ ಬೇರೆಯೇ ಆಗಿತ್ತು. ಕರಡು ಸಮಿತಿಯ ಸದಸ್ಯರು, ಹಾಗೆಯೇ ಸಂವಿಧಾನ ಶಾಸನ ಸಭೆಯ ಸದಸ್ಯರು ಕೂಡ ಸಂವಿಧಾನದ ಕರಡಿನಲ್ಲಿದ್ದ ಎಲ್ಲ ವಿವರಗಳನ್ನು ಎಚ್ಚರದಿಂದ ಗಮನಿಸಿದ್ದಲ್ಲದೆ, ಕರಡನ್ನು ಕೂಲಂಕಷವಾಗಿ ವಿಶ್ಲೇಷಿಸಿದ್ದರು. ಡಾ| ರಾಜೇಂದ್ರ ಪ್ರಸಾದರು ತಮ್ಮ ಸಮಾರೋಪ ಭಾಷಣದಲ್ಲಿ ಇದನ್ನು ಉಲ್ಲೇಖೀಸಿ, ಕರಡು ಸಮಿತಿಯ ಹಾಗೂ ಶಾಸನ ಸಭೆಯ ಸದಸ್ಯರು° ಶ್ಲಾ ಸಿದ್ದರು. ಶಾಸನ ಸಭೆಯ 318 ಸದಸ್ಯರು ಎಷ್ಟೊಂದು ಅಗಾಧ ರೀತಿಯಲ್ಲಿ ಸಂವಿಧಾನ ಕರಡಿನ ಸಂಬಂಧವಾಗಿ ಕಾರ್ಯಶೀಲರಾಗಿದ್ದರೆಂದರೆ, ಅವರು 7635 ತಿದ್ದುಪಡಿ ಸೂಚನೆಗಳನ್ನು ಶಾಸನಸಭೆಯಲ್ಲಿ ಮಂಡಿಸಿದ್ದರು; ಈ ಪೈಕಿ 2473 ತಿದ್ದುಪಡಿಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ವಸ್ತು ಸ್ಥಿತಿಯೇನೆಂದರೆ ಕರಡು ಸಮಿತಿಯ ಮೂವರು ಸದಸ್ಯರು – ಸರ್ ಅಲ್ಲಾದಿ ಕೃಷ್ಣ ಸ್ವಾಮಿ ಅಯ್ಯರ್, ಸರ್ ಮಹಮ್ಮದ್ ಸಾದುಲ್ಲಾ ಹಾಗೂ ಸರ್ ಮಾಧವ ರಾವ್ – ಡಾ| ಅಂಬೇಡ್ಕರ್ ಅವರೊಂದಿಗೆ ಶಾಸನಸಭೆಯಲ್ಲಿ ನಡೆದ ಚರ್ಚೆಗಳಿಗೆ ಉತ್ತರ ನೀಡಿದ್ದರು. ಸಮಿತಿಯಲ್ಲಿದ್ದ ಇತರ ಸದಸ್ಯರೆಂದರೆ ಕೆ.ಎಂ. ಮುನ್ಸಿ, ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಹಾಗೂ ಟಿ.ಟಿ. ಕೃಷ್ಣಮಾಚಾರಿ. ಈ ಪೈಕಿ ಮಾಧವ ರಾವ್ ಅವರು, ಅನಾರೋಗ್ಯದ ಕಾರಣದಿಂದ ಸಮಿತಿಗೆ ರಾಜೀನಾಮೆ ನೀಡಿದ್ದ ಸದಸ್ಯರಾದ (ಭಾರತದ ಭೂತಪೂರ್ವ ಅಡ್ವಕೇಟ್ ಜನರಲ್) ಸರ್ ಬೃಜೇಂದ್ರಲಾಲ್ ಮಿತ್ತರ್ ಅವರ ಬದಲಿಗೆ ಸಮಿತಿಗೆ ಸೇರ್ಪಡೆಗೊಂಡಿದ್ದವರು. ಟಿ.ಟಿ. ಕೃಷ್ಣಮಾಚಾರಿಯವರು ಸಮಿತಿ ತನ್ನ ಕಾರ್ಯವನ್ನು ಮುಕ್ತಾಯಗೊಳಿಸುವ ಮೊದಲೇ ತೀರಿಕೊಂಡ ಇನ್ನೋರ್ವ ಸದಸ್ಯ ಡಿ.ಪಿ. ಖೈತಾನ್ ಅವರ ಬದಲಿಗೆ ಸೇರ್ಪಡೆಗೊಂಡವರು.
ಅಂದಿನ ಶಾಸನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ್ದ ಡಾ| ಅಂಬೇಡ್ಕರ್ ಅತ್ಯಂತ ವಿನಮ್ರರಾಗಿ ಹೀಗೆ ಹೇಳಿದ್ದರು – “ಈ ಕಾರ್ಯದ ಯಶಸ್ಸನ್ನು ನನ್ನ ಹೆಸರಿಗೆ ಜೋಡಿಸಲಾಗಿದೆ. ಆದರೆ ಈ ಕೀರ್ತಿ ನನಗೆ ಸೇರತಕ್ಕದ್ದಲ್ಲ. ಈ ಕೀರ್ತಿಯ ಅರ್ಧಭಾಗ ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿದ ಶಾಸನಸಭೆಯ ಸಂವಿಧಾನ ಸಂಬಂಧಿ ಸಲಹೆಗಾರರಾದ ಬಿ.ಎನ್.ರಾವ್ ಅವರಿಗೆ ಸೇರತಕ್ಕದ್ದು. ಇನ್ನರ್ಧ ಭಾಗ 141 ದಿನಗಳ ಕಾಲ ಸಭೆ ನಡೆಸಿ ಸಹಕರಿಸಿದ ಸಮಿತಿಯ ಸದಸ್ಯರಿಗೆ ಸಲ್ಲತಕ್ಕದ್ದು. ಸಂವಿಧಾನದಲ್ಲಿನ ವಿವಿಧ ಅಂಶಗಳನ್ನು ಪರಿಶೀಲಿಸುವುದು, ಸಂವಿಧಾನದ ಪಠ್ಯವನ್ನು ರೂಪಿಸುವುದು, ಒಟ್ಟು ಕಾರ್ಯವನ್ನು ಯಶಸ್ವಿಯಾಗಿ ಸಂಪನ್ನಗೊಳಿಸುವುದು ಇವರಿಲ್ಲದಿದ್ದಲ್ಲಿ ಸಾಧ್ಯವಾಗುತ್ತಿರಲಿಲ್ಲ.’
ಸಂವಿಧಾನದ ಮುಖ್ಯ ಕರಡು ಲಿಪಿಗಾರರಾಗಿ ಸಹಕರಿಸಿದ ಶಾಸನಸಭೆಯ ಅಧಿಕಾರಿ ಸುರೇಂದ್ರನಾಥ ಮುಖರ್ಜಿಯವರ ಕೊಡುಗೆಯನ್ನೂ ಅಂಬೇಡ್ಕರ್ ಈ ಸಂದರ್ಭದಲ್ಲಿ ಉಲ್ಲೇಖೀಸಿದ್ದರು.
ಈಚೆಗಿನ ಹಲವಾರು ವರ್ಷಗಳಿಂದ ನಮ್ಮ ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಕಲಾಪಕ್ಕೆ ಅಡ್ಡಿ ಪಡಿಸುವ ಆಟ ಮುಂದುವರಿದಿದ್ದು, ಇಂಥ ಚೇಷ್ಟೆಗಳಿಂದ ನಮ್ಮ ಬೊಕ್ಕಸಕ್ಕೆ ಆಗುವ ಹೊರೆಯನ್ನು “ನಿಮಿಷಕ್ಕೆ ಇಂತಿಷ್ಟು ಮೊತ್ತ’ ಎಂಬ ರೀತಿಯಲ್ಲಿ ಲೆಕ್ಕ ಹಾಕುವುದು ನಡೆದೇ ಇದೆ. ಇಂಥ ಉಪದ್ವಾéಪಗಳ ಬಗೆಗಿನ ಹೇಳಿಕೆಗಳು ಚರ್ವಿತಚರ್ವಣ ಎಂಬಂತಾಗಿವೆ. ಆದರೆ ಅಂದು ಮೂರು ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದ ಸಾಂವಿಧಾನಿಕ ಶಾಸನಸಭೆಯನ್ನು ನಡೆಸಲು ಅಂದಿನ ಸರಕಾರದ ಬೊಕ್ಕಸಕ್ಕೆ ತಗುಲಿದ ವೆಚ್ಚ 63, 96, 729 ರೂ.ಗಳು. ಸಂವಿಧಾನ ಸಭೆಯನ್ನು ರೂಪಿಸಲು ಕಾರಣವಾದ ಮಹಣ್ತೀದ ಅಂಶಗಳನ್ನು ಪರಿಗಣಿಸಿದರೆ ಇದೇನೂ ದೊಡ್ಡ ಮೊತ್ತವಲ್ಲ ಎಂದು ಡಾ| ರಾಜೇಂದ್ರ ಪ್ರಸಾದ್ ಹೇಳಿದ್ದರು. ಭಾರತದ ರೂಪಾಯಿಯ ಖರೀದಿ ಸಾಮರ್ಥ್ಯ ಇಂದಿಗಿಂತ ಅಂದು ಅಧಿಕವಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು.
ವಿಧಾನಸಭೆಯಲ್ಲಿ ಮೊನ್ನೆ ನಡೆದ ಸಂವಿಧಾನ ಕುರಿತ ಚರ್ಚೆಯ ಕಲಾಪ, ಸಂವಿಧಾನಕ್ಕೆ ಸಂಬಂಧಿಸಿದ ನಮ್ಮ ಮಂತ್ರಿಗಳು ಹಾಗೂ ಶಾಸಕರ ಜ್ಞಾನವೆಷ್ಟೆಂಬುದನ್ನು ತೋರಿಸಿಕೊಟ್ಟಿತು. ಆದರೆ ಅವರು ನಮ್ಮ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ವ್ಯಕ್ತಪಡಿಸಿದ ಎರಡು “ವಿಷಾದ’ಗಳ ಬಗ್ಗೆ ಯೋಚಿಸಬೇಕು; ಈಗಾಗಲೇ ಯೋಚಿಸಿಲೂಬಹುದು. ರಾಜೇಂದ್ರ ಪ್ರಸಾದ್ ಅವರು ಹೀಗೆಂದಿದ್ದರು: “ಶಾಸನಸಭೆಗಳ ಸದಸ್ಯರಿಗೆ ಕೆಲವೊಂದು ಅರ್ಹತೆಗಳನ್ನು ನಿಗದಿಪಡಿಸಿದ್ದರೆ ಚೆನ್ನಾಗಿರುತ್ತಿತ್ತು. (ಎಂಬುದು ನನ್ನ ಬಯಕೆ). ಆಡಳಿತಾತ್ಮಕ ಹುದ್ದೆಗಳಲ್ಲಿರುವವರು ಅಥವಾ ಕಾಯ್ದೆ – ಕಾನೂನು ಜಾರಿಗೊಳಿಸುವ ಪ್ರಕ್ರಿಯೆಗೆ ನೆರವಾಗುವವರು ಉನ್ನತಮಟ್ಟದ ಯೋಗ್ಯತೆ ಹೊಂದಿರಬೇಕೆಂದು ಒತ್ತಿ ಹೇಳುತ್ತೇವೆ. ಆದರೆ ಯಾರು ಕಾನೂನನ್ನು ರೂಪಿಸುತ್ತಾರೋ ಅವರು ಆಯ್ಕೆಯಾಗಿ ಬಂದವರೆಂಬ ಅರ್ಹತೆಯನ್ನು ಬಿಟ್ಟರೆ ಉನ್ನತ ಮಟ್ಟದ ಅರ್ಹತೆ ಇರಬೇಕೆಂದು ನಾವು ಯಾರೂ ಪ್ರತಿಪಾದಿಸುತ್ತಿಲ್ಲ. ಇದು ತೀರಾ ಅಸಂಗತ.’ ಕಾನೂನು ನಿರ್ಮಾಪಕರು (ಶಾಸನ ಸಭೆಯ ಸದಸ್ಯರು) ಬುದ್ಧಿಮತ್ತೆಯ ಗುಣ ಉತ್ತಮ ಚಾರಿತ್ರ್ಯ ಹಾಗೂ ನೈತಿಕ ಗುಣಗಳನ್ನು ಹೊಂದಿರಬೇಕು ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದರು. ಎಲ್ಲಿಯವರೆಗೆ ಇದು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ “ನಮ್ಮ ಸಂವಿಧಾನ ದೋಷಪೂರಿತವಾಗಿ ಉಳಿಯುತ್ತದೆ’ ಎಂದು ಅವರು ಎಚ್ಚರಿಸಿದ್ದರು. ರಾಜೇಂದ್ರ ಪ್ರಸಾದ್ ಅವರು ವ್ಯಕ್ತಪಡಿಸಿದ ಇನ್ನೊಂದು “ವಿಷಾದ’ದ ಸಂಗತಿಯೆಂದರೆ, ಸ್ವತಂತ್ರಭಾರತದ “ಪ್ರಥಮ ಸಂವಿಧಾನ’ ಭಾರತೀಯ ಭಾಷೆಯಲ್ಲಿರದೆ ಇಂಗ್ಲಿಷ್ನಲ್ಲಿದ್ದುದು. ರಾಜೇಂದ್ರ ಪ್ರಸಾದ್ ಓರ್ವ ಹಿಂದಿ ಪ್ರತಿಪಾದಕರಾಗಿದ್ದವರು.
ಇಲ್ಲೇ ನೆನಪಿಸಿಕೊಳ್ಳಬೇಕಾದ ಇನ್ನೊಂದು ಅಂಶವಿದೆ. ಬೆನಗಲ್ ನರಸಿಂಗ ರಾವ್ ಅವರ ತಮ್ಮ ಖ್ಯಾತ ಪರ್ತಕರ್ತ ಬೆನಗಲ್ ಶಿವರಾವ್ ಅವರು “ದ ಮೇಕಿಂಗ್ ಆಫ್ ದ ಕಾನ್ಸ್ಟಿಟ್ಯೂಶನ್ ಆಫ್ ಇಂಡಿಯಾ’ ಎಂಬ ಸ್ಮಾರಕಸದೃಶ ಗ್ರಂಥವೊಂದನ್ನು ರಚಿಸಿದ್ದರು. ಕರ್ನಾಟಕ ವಿಧಾನಸಭಾ ಸದನಕ್ಕೆ ತಾಗಿಕೊಂಡೇ ಇರುವ ಗ್ರಂಥಾಲಯದಲ್ಲಿ ಈ ಪುಸ್ತಕ ಇಲ್ಲದೇ ಇರಲಿಕ್ಕಿಲ್ಲ. ಹಲವಾರು ಸಂಪುಟಗಳಲ್ಲಿರುವ ಈ ಗ್ರಂಥ, ವಾಚನಕ್ಕೆ ಹಾಗೂ ಪರಿಶೀಲನೆಗೆ ಸುಲಭದಲ್ಲೇ ಲಭ್ಯವಾಗಿರುತ್ತದೆ. ಇದೇ ವಿಷಯದ ಮೇಲೆ ಇನ್ನೊಬ್ಬ ಬೆನಗಲ್ ಅರ್ಥಾತ್ ಶ್ಯಾಮ್ ಬೆನಗಲ್ ಅವರು ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸುವ ಅಗತ್ಯವೇನಿತ್ತು?