Advertisement

ಅಪಪ್ರಚಾರದಿಂದ ಕಾಂಗ್ರೆಸ್‌ಗೆ ಸೋಲಾಯ್ತು

11:12 AM Sep 25, 2018 | |

ಕೆ.ಆರ್‌.ನಗರ: ತಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ವರ್ಗದ ಬಡವರಿಗಾಗಿ ಕೈಗೊಂಡ ಜನಪರ ಕೆಲಸಗಳು ವಿರೋಧ ಪಕ್ಷಗಳ ಅಪಪ್ರಚಾರದಿಂದ ಅವುಗಳನ್ನು ಮರೆಮಾಚಿದ್ದರಿಂದ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲು ಆಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

Advertisement

ಪಟ್ಟಣದ ಕಾಗಿನೆಲೆ ಕನಕಗುರು ಪೀಠದ ಆವರಣದಲ್ಲಿ ತಾಲೂಕು ಕುರುಬರ ಸಂಘದಿಂದ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪಕ್ಷ ಸೋತಿದ್ದಕ್ಕೆ ತನಗೆ ಯಾವುದೇ ಬೇಸರವಿಲ್ಲ, ಜನರಿಗೆ ಉತ್ತಮ ಕಾರ್ಯಕ್ರಮ ನೀಡಿದ್ದೇನೆ ಎಂಬ ತೃಪ್ತಿ ಇದೆ ಎಂದರು.  

ದೇವರಾಜು ಅರಸು ನಂತರ 5 ವರ್ಷ ಪೂರ್ಣ ಅಧಿಕಾರ ನಡೆಸಿದ ಮತ್ತು ಜನಪರ ಕೆಲಸ ಮಾಡಿದ ತೃಪ್ತಿ ಇದ್ದು, ಅಧಿಕಾರ ಶಾಶ್ವತವಲ್ಲ. ಕಾಲ ಚಕ್ರ ಉರುಳಿದಂತೆ, ಮೇಲಿದ್ದವರು ಕೆಳಗೆ ಇಳಿಯಲೇ ಬೇಕು. ಕೆಳಗಿದ್ದವರು ಮೇಲೆರಬೇಕು ಎಂದು ಮಾರ್ಮಿಕವಾಗಿ ನುಡಿದರು. 

ಅಹಿಂದ ಪರ: ಕೆಲವರು ತನ್ನನ್ನು ಅಹಿಂದ ಪರ ಮತ್ತು ಮೇಲ್ವರ್ಗದ ವಿರೋಧಿ ಎಂದು ಟೀಕಿಸುತ್ತಾರೆ. ಅಹಿಂದ ಪರ ಎಂಬುದರಲ್ಲಿ ಯಾವುದೇ ಮುಲಾಜಿಲ್ಲ. ಅದರ ಜತೆಗೆ ಅವಕಾಶ ವಂಚಿತರು ಹಾಗೂ ರಾಜಕೀಯವಾಗಿ ಹಿಂದುಳಿದವರಿಗೆ ಸಮಾನ ಅಧಿಕಾರ ಸಿಗಬೇಕು ಎಂಬ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು. 

89 ಸಾವಿರ ಕೋಟಿ ವ್ಯಯ: ರಾಜ್ಯದ ಹಿಂದುಳಿದ ವರ್ಗಗಳ 11 ಮಹನೀಯರ ಜಯಂತಿ ಆಚರಿಸುವಂತೆ ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಇದರ ಜತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅನುಕೂಲಕ್ಕೆ ಹೊಸ ಕಾಯ್ದೆಗೆ ಜಾರಿಗೆ ತಂದು 5 ವರ್ಷಗಳ ಅವಧಿಯಲ್ಲಿ 89 ಸಾವಿರ ಕೋಟಿ ರೂ.ಗಳನ್ನು ಆ ಸಮುದಾಯದ ಅಭಿವೃದ್ಧಿಗೆ ವ್ಯಯಿಸಲಾಗಿದೆ ಎಂದರು.

Advertisement

ಕೆ.ಆರ್‌.ನಗರಕ್ಕೆ ಅನುದಾನ: ರಾಜ್ಯದ ವಿವಿಧ ಸಮಾಜದ 2800 ಸಮುದಾಯಗಳ ಭವನಗಳ ಕಾಮಗಾರಿಗೆ 413 ಕೋಟಿ ರೂ. ಬಿಡುಗಡೆ ಮಾಡಿದ್ದು, ಕೆ.ಆರ್‌.ನಗರ ತಾಲೂಕಿನ ವಿವಿಧ ಸಮುದಾಯ ಭವನಗಳಿಗೆ 6 ಕೋಟಿ ರೂ. ಮತ್ತು ವಿವಿಧ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗೆ 30 ಕೋಟಿ ವಿಶೇಷ ಅನುದಾನ ನೀಡಿದ್ದೇನೆ.

ಅಲ್ಲದೆ ಕೆ.ಆರ್‌.ನಗರ ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆಗೆ 40 ಕೋಟಿ ರೂ. ನೀಡಿದ್ದೇನೆ ಎಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ವಿರುದ್ಧ ಕಡಿಮೆ ಅಂತರದಿಂದ ಸೋಲು ಕಂಡಿರುವ ಡಿ.ರಶಂಕರ್‌ ಅವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಗಾವಡಗೆರೆ ಗುರುಲಿಂಗ ಜಂಗಮ ದೇವರ ಮಠದ ನಟರಾಜ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶಿವಾನಂದಪುರಿಸ್ವಾಮೀಜಿ, ಕಾಗಿನೆಲೆ ತಿಂಥ‌ಣಿ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌, ಸಚಿವರಾದ ಆರ್‌.ಶಂಕರ್‌, ಪುಟ್ಟರಂಗಶೆಟ್ಟಿ, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಸಿ.ಎಚ್‌.ಜಯಶಂಕರ್‌,

ಶಾಸಕ ಅನಿಲ್‌ಚಿಕ್ಕಮಾಧು, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌, ಜಿಪಂ ವಿಪಕ್ಷ ನಾಯಕ ಡಿ.ರಶಂಕರ್‌, ಸದಸ್ಯರಾದ ಅಚ್ಚುತಾನಂದ, ಅಮಿತ್‌ವಿ ದೇವರಹಟ್ಟಿ, ನಾಗರತ್ನ, ತಾಪಂ ಅಧ್ಯಕ್ಷ ಎಚ್‌.ಟಿ.ಮಂಜುನಾಥ್‌, ಸ್ಥಾಯಿಸಮಿತಿ ಅಧ್ಯಕ್ಷ ಕೆ.ಪಿ.ಯೋಗೀಶ್‌, ಸದಸ್ಯರಾದ ಜಿ.ಎಸ್‌.ಮಂಜುನಾಥ್‌, ಮಹದೇವ್‌, ಪುರಸಭೆ ಅಧ್ಯಕ್ಷೆ ಹರ್ಷಲತಾ ಇತರರಿದ್ದರು.

ವೇದಿಕೆಯಲ್ಲಿ ಮಾತನಾಡದ ಸಿದ್ದು, ವಿಶ್ವನಾಥ್‌: ಕಳೆದ 2 ವರ್ಷಗಳಿಂದ ರಾಜಕೀಯವಾಗಿ ಪರಸ್ಪರ ದೂರವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಒಂದೇ ವೇದಿಕೆಯಲ್ಲಿ 2 ಗಂಟೆಗೂ ಹೆಚ್ಚು ಹೊತ್ತು ಕೂತಿದ್ದರೂ ಪರಸ್ಪರ ಮಾತನಾಡದೆ ಮುಖವನ್ನೂ ನೋಡದ ಘಟನೆ ನಡೆಯಿತು. 

ಸಂಗೊಳ್ಳಿ ರಾಯಣ್ಣ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಬ್ಬರು ನಾಯಕರು ಬಹುದಿನಗಳ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರಿಂದ ಇಬ್ಬರೂ ಮಾತನಾಡಬಹುದು ಎಂದು ಜನತೆ ನಿರೀಕ್ಷಿಸಿದ್ದು ಸುಳ್ಳಾಯಿತು.

ಮಾಜಿ ಮುಖ್ಯಮಂತ್ರಿಗಳು ಸಭೆಗೆ ಆಗುಮಿಸುವ ಮುನ್ನ ಎಚ್‌.ವಿಶ್ವನಾಥ್‌ ಮಾತನಾಡಿ, ವೇದಿಕೆಯಲ್ಲಿ ಆಸಿನರಾಗಿದ್ದರು. ನಂತರ ಬಂದ ಸಿದ್ದರಾಮಯ್ಯನವರು ಮಾತು ಆರಂಭಿಸಿದಾಗ  ವೇದಿಕೆಯಲ್ಲಿ ಆಸನರಾಗಿದ್ದ ಯಾರ ಹೆಸರನ್ನೂ ಹೇಳದೆ ನೇರವಾಗಿ ಭಾಷಣ ಆರಂಭಿಸಿದರು. ಆನಂತರವೂ ಇಬ್ಬರು ಮಾತನಾಡಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next