Advertisement

ಬಿಜೆಪಿ ಭದ್ರಕೋಟೆ ಜಯಿಸಲು ಕಾಂಗ್ರೆಸ್‌ ಕಸರತು

05:16 PM Apr 02, 2018 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಒಟ್ಟೂ ಮೂರು ತಾಲೂಕುಗಳು ಹಾಗೂ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯನ್ನು ಒಳಗೊಂಡ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಶೃಂಗೇರಿ ಅಪ್ಪಟ ಮಲೆನಾಡು. ದಟ್ಟ ಕಾನನ, ನದಿ, ಹಳ್ಳ-ಕೊಳ್ಳ, ತೊರೆಗಳನ್ನೊಳಗೊಂಡ ಸುಂದರ ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡ ಈ ಕ್ಷೇತ್ರದಲ್ಲಿ ಕೃಷಿ ಜನರ ಜೀವನದ ಮೂಲಾಧಾರ. ಅಡಿಕೆ, ತೆಂಗು, ಕಾಫಿ ಹಾಗೂ ಭತ್ತ ಇಲ್ಲಿಯ ಪ್ರಮುಖ ಬೆಳೆ.

Advertisement

ಈ ಕ್ಷೇತ್ರ ನಕ್ಸಲ್‌ ಪೀಡಿತ ಪ್ರದೇಶವೂ ಹೌದು. ಒಂದು ಸಮಯದಲ್ಲಿ ನಕ್ಸಲ್‌ ಹೋರಾಟ ಇಡೀ ಕ್ಷೇತ್ರದಲ್ಲಿ ವ್ಯಾಪಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ನಕ್ಸಲ್‌ ಚಟುವಟಿಕೆಗಳು ಕ್ಷೀಣಿಸಿದ್ದರೂ ಸಹ ನಕ್ಸಲ್‌ ಪೀಡಿತ ಪ್ರದೇಶವೆಂಬ ಹಣೆಪಟ್ಟಿ ಮಾತ್ರ ಹಾಗೇ ಉಳಿದುಕೊಂಡಿದೆ. ನಕ್ಸಲ್‌ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಸರಕಾರಗಳು ಹೇಳಿದ್ದರೂ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾರ್ಯ ಕ್ಷೇತ್ರದಲ್ಲಿ ಆಗಿಲ್ಲ.

ಧಾರ್ಮಿಕ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕ್ಷೇತ್ರದಲ್ಲಿ ಸಮಸ್ಯೆಗಳಿಗೇನೂ ಕೊರತೆಯಿಲ್ಲ. ಅತೀ ಹೆಚ್ಚು ಅರಣ್ಯ ಪ್ರದೇಶವಾಗಿದ್ದರಿಂದ ಅಭಿವೃದ್ಧಿಗೂ ಅಡಚಣೆಯಾಗುತ್ತಿದೆ. ಅರಣ್ಯ ಇಲಾಖೆ ಅನುಮತಿ ದೊರೆಯದೆ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ಬಗರ್‌ಹುಕುಂ ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ. ಇದರೊಂದಿಗೆ ಅಡಕೆ ಹಳದಿ ಎಲೆ ರೋಗ ರೈತರನ್ನು
ಕಾಡುತ್ತಿದ್ದು ಇದಕ್ಕೆ ಪರಿಹಾರ ದೊರಕಿಲ್ಲ. ಕಳೆದ ಕೆಲ ವರ್ಷದಿಂದ ಮಳೆಯೂ ಕಡಿಮೆಯಾಗಿದ್ದು ಮಲೆನಾಡು ಪ್ರದೇಶವಾದ ಇಲ್ಲಿಯೂ ಸಹ ನೀರಿನ ಸಮಸ್ಯೆ ತಲೆದೋರಿದೆ. ಅನೇಕ ಹಳ್ಳಿಗಳಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಪ್ರತ್ಯೇಕ ಹಾಲು ಒಕ್ಕೂಟ ಬೇಕೆಂಬ
ಹಲವು ವರ್ಷಗಳ ಬೇಡಿಕೆ ಈವರೆಗೂ ಈಡೇರಿಲ್ಲ. ಅನೇಕ ಪ್ರವಾಸಿ ತಾಣ, ಪುರಾಣ ಪ್ರಸಿದ್ಧ ದೇವಾಲಯಗಳಿದ್ದರೂ ಪ್ರವಾಸೋದ್ಯಮಕ್ಕೆ ಆಧುನಿಕ ಸ್ಪರ್ಶ ನೀಡಿ ಪ್ರವಾಸಿಗರಿಗೆ ಮತ್ತಷ್ಟು ಸೌಕರ್ಯ ನೀಡುವ ಕಾರ್ಯ ಆಗಿಲ್ಲ.

ರಾಜಕೀಯವಾಗಿಯೂ ಗಮನಸೆಳೆದ ಕ್ಷೇತ್ರ ಇದು. ಶಿಕ್ಷಣ ಮಂತ್ರಿಯಾಗಿ ಮಲೆನಾಡ ಗಾಂಧಿ ಎಂಬ ಬಿರುದು ಪಡೆದಿದ್ದ ಎಚ್‌.ಜಿ. ಗೋವಿಂದೇಗೌಡ ಹಾಗೂ ಬೋರ್‌ವೆಲ್‌ ಮಂತ್ರಿ ಎಂದು ಖ್ಯಾತಿಗಳಿಸಿದ್ದ ಮಾಜಿ ಸಚಿವ ಬೇಗಾನೆ ರಾಮಯ್ಯ ಹಾಗೂ ವೀರಪ್ಪಗೌಡ ಪ್ರತಿನಿಧಿಸಿದ ಕ್ಷೇತ್ರ ಇದಾಗಿದೆ. 

 ಈ ಕ್ಷೇತ್ರದಲ್ಲಿ ಒಕ್ಕಲಿಗರು ಹಾಗೂ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹಾಲಿ ಶಾಸಕ ಡಿ.ಎನ್‌. ಜೀವರಾಜ್‌ ಕಳೆದ ಮೂರು ಚುನಾವಣೆಗಳಲ್ಲಿ ಗೆದ್ದು ಹ್ಯಾಟ್ರಿಕ್‌ ಬಾರಿಸಿದ್ದಾರೆ. ಬಿಜೆಪಿಯ ಭದ್ರಕೋಟೆಯನ್ನು ಬೇಧಿಸಿ “ಕೈ’ವಶ ಮಾಡಿಕೊಳ್ಳಲು ಪ್ರಯತ್ನ ನಡೆದಿದೆ. ಈ ಬಾರಿಯಾದರೂ ಕಾಂಗ್ರೆಸ್‌ ಗೆಲ್ಲಿಸಬೇಕೆಂದು ಮುಖಂಡರು ಪಣ ತೊಟ್ಟಿದ್ದಾರೆ. ಇನ್ನೊಂದೆಡೆ ಜೀವರಾಜ್‌ ನಾಲ್ಕನೇ ಬಾರಿಗೆ ಗೆಲ್ಲುವ ತವಕದಲ್ಲಿದ್ದಾರೆ. ಜೆಡಿಎಸ್‌ ಎರಡೂ ಪಕ್ಷಗಳಿಗೆ ಪೈಪೋಟಿ ನೀಡಿದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ನಡೆಯಲಿದೆ. 

Advertisement

ಈ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತದೋ ಅದೇ ಪಕ್ಷ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುತ್ತಿತ್ತು. ಈ ಹಿಂದೆ ಅನೇಕ ಚುನಾವಣೆಗಳಲ್ಲಿ ಹೀಗೆ ನಡೆದಿತ್ತು. ಆದರೆ ಕಳೆದ ಕೆಲ ಚುನಾವಣೆಗಳಲ್ಲಿ ಇದು ತಪ್ಪಿದೆ. ಈ ಬಾರಿ ಕ್ಷೇತ್ರದಲ್ಲಿ ಗೆಲ್ಲುವ ಪಕ್ಷವೇ ಅಧಿಕಾರಕ್ಕೇರಲಿದೆಯೇ ಎಂಬ ಕುತೂಹಲ ಇಲ್ಲಿಯ ಮತದಾರರದ್ದು.

ಕ್ಷೇತ್ರದ ಬೆಸ್ಟ್‌ ಏನು?
ಕ್ಷೇತ್ರದಲ್ಲಿನ ಮುಖ್ಯರಸ್ತೆಗಳನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಎಲ್ಲ ಮುಖ್ಯರಸ್ತೆಗಳೂ ಗುಣಮಟ್ಟದಿಂದ ಕೂಡಿವೆ. ಕೆಲ ರಸ್ತೆಗಳಿಗೆ ಐಟೆಕ್‌ ಸ್ಪರ್ಶ ನೀಡಲಾಗಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ?
ಕ್ಷೇತ್ರವು ಹೆಚ್ಚು ಅರಣ್ಯ ಪ್ರದೇಶ ಹೊಂದಿರುವುದರಿಂದ ಹಲವು ಯೋಜನೆಗಳಿಗೆ ಅನುಮತಿ ದೊರೆತಿಲ್ಲ. ನಿವೇಶನ ರಹಿತರಿಗೆ ನಿವೇಶನಗಳನ್ನು ಕೊಟ್ಟಿಲ್ಲ. ರೈತರ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಪ್ರತ್ಯೇಕ ಹಾಲು ಒಕ್ಕೂಟ ಬೇಕೆಂಬ ಬೇಡಿಕೆ ಈಡೇರದೆ ಹಾಲು ಉತ್ಪಾದಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ

ಕ್ಷೇತ್ರ ಮಹಿಮೆ
ಶೃಂಗೇರಿ ಶಾರದಾ ಪೀಠ, ಬಾಳೆಹೊನ್ನೂರು ರಂಭಾಪುರಿ ಪೀಠ, ಹರಿಹರಪುರ ಮಠ, ಶಕಟಪುರ ದೇವಾಲಯ, ಜ್ವಾಲಮಾಲಿನಿ ದೇವಾಲಯ ಸೇರಿದಂತೆ ಹತ್ತು ಹಲವು ದೇವಾಲಯಗಳು, ಪ್ರವಾಸಿ ತಾಣಗಳು ಈ ಕ್ಷೇತ್ರದಲ್ಲಿವೆ. ಅತೀ ಹೆಚ್ಚು ಭಕ್ತರು ಪ್ರತಿನಿತ್ಯ ಭೇಟಿ ನೀಡುವುದರಿಂದ ಪ್ರವಾಸೋದ್ಯಮವೂ ಬೆಳೆದಿದೆ. 

ಶಾಸಕರು ಏನಂತಾರೆ
 ಶಾಸಕನಾಗಿ ಮೊದಲ 9 ವರ್ಷಗಳಲ್ಲಿ ಶಿಕ್ಷಣ, ವೈದ್ಯಕೀಯ ಕ್ಷೇತ್ರ, ರಸ್ತೆಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಕಳೆದ 4 ವರ್ಷ 11 ತಿಂಗಳಿನಲ್ಲಿ ರಾಜ್ಯ ಸರ್ಕಾರ ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಮಂಜೂರು ಮಾಡಿದ್ದ ಕಾಮಗಾರಿಗಳನ್ನೂ ಬೇರೆಡೆಗೆ ವರ್ಗಾಯಿಸುವ ಮೂಲಕ ಕ್ಷೇತ್ರಕ್ಕೆ ಕಾಂಗ್ರೆಸ್‌ ಸರ್ಕಾರ ಅನ್ಯಾಯ ಮಾಡಿದೆ. ಜನರೊಂದಿಗೆ ನಿರಂತರ ಸಂಪರ್ಕ ಹೊಂದಿ ಸಮಸ್ಯೆಗೆ
ಸ್ಪಂದಿಸಿದ್ದೇನೆ. 
ಡಿ.ಎನ್‌.ಜೀವರಾಜ್‌

ಮುಖ್ಯ ರಸ್ತೆಗಳು ಉತ್ತಮವಿದ್ದರು ಗಾಮೀಣ ರಸ್ತೆಗಳು ಹದಗೆಟ್ಟಿವೆ. ನಿರೋದ್ಯೋಗ ಸಮಸ್ಯೆ ಹೆಚ್ಚಾಗಿವೆ, ವಸತಿರಹಿರಿಗೆ ಮನೆಕೊಡುವ ಕೆಲಸವಾಗಿಲ್ಲ, ಕುಡಿಯುವ ನೀರಿಗೆ ಯಾವುದೇ ಶಾಶ್ವತ ಯೋಜನೆಯಿಲ್ಲ.  ಹರೀಶ್‌ ಎಂ. ನರಸಿಂಹರಾಜಪುರ ಯುವಕರಿಗೆ ಕ್ರೀಡೆಗಳಿಗೆ ಪ್ರೋತ್ಸಾಹವಿಲ್ಲ, ಬಹುದಿನಗಳ ಬೇಡಿಕೆಯಾದ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಯತ್ನವಾಗಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಯುವಜನ ಮೇಳಗಳು ನಡೆಯುತ್ತಿಲ್ಲ.
ರಘು ಆರ್‌. ನರಸಿಂಹರಾಜಪುರ

ಸರ್ಕಾರದ ಸೌಲಭ್ಯಗಳು ಫಲಾನುಭವಿಗಳಿಗೆ ಸರಿಯಾಗಿ ದೊರೆತಿಲ್ಲ. ಅದನ್ನು ಸಮರ್ಪಕವಾಗಿ ತಲುಪಿಸುವ ಕೆಲಸವಾಗಬೇಕಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಮಂಜೂರಾಗಿದ್ದರೂ ಈವರೆಗೂ ಆರಂಭವಾಗಿಲ್ಲ.
ಉಮೇಶ್‌,ಬೆಳಂದೂರು. 

ಬಗರ್‌ಹುಕುಂ ಸಾಗುವಳಿ ಚೀಟಿ ವಿತರಣೆ ಸರಿಯಾಗಿ ಆಗಿಲ್ಲ. ಕೆಲವು ರೈತರಿಗೆ ಮಾತ್ರ ಸಾಗುವಳಿ ಚೀಟಿ ದೊರೆತಿದ್ದು, ಬಹುತೇಕ ಹಾಗೆಯೇ ಉಳಿದುಕೊಂಡಿದೆ. ಕೂಡಲೆ ರೈತರಿಗೆ ಸಾಗುವಳಿ ಚೀಟಿ ದೊರೆಯಬೇಕು. 
ಬಿ.ಎಸ್‌. ಶ್ರೀಧರರಾವ್‌

 ರಮೇಶ್‌ ಕರುವಾನೆ/ಪ್ರಶಾಂತ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next