Advertisement

ಕರಾವಳಿಯಲ್ಲಿ  ಫಾಸ್ಟ್ಯಾಗ್ ಸಂಚಾರ ಮುಗಿಯದ ಗೊಂದಲ

01:39 AM Dec 17, 2019 | Team Udayavani |

ಫಾಸ್ಟ್ಯಾಗ್ ಸಂಚಾರ ಆರಂಭವಾದ ದ್ವಿತೀಯ ದಿನ ಸೋಮವಾರ ನಿರೀಕ್ಷೆಯಂತೆಯೆ ಕರಾವಳಿಯ ಐದು ಟೋಲ್‌ಗೇಟ್‌ಗಳ ಪೈಕಿ ಹೆಚ್ಚಿನ ಕಡೆ ಸಂಚಾರ ದಟ್ಟಣೆ ಉಂಟಾಯಿತು. ಸಮಸ್ಯೆಗೆ ಕಾರಣಗಳಲ್ಲಿ ಸರ್ವರ್‌ ವಿಳಂಬವೂ ಸೇರಿತ್ತು. ಒಂದೆರಡು ಟೋಲ್‌ಗ‌ಳಲ್ಲಿ ಸಿಬಂದಿ – ಟೋಲ್‌ ನಿರ್ವಾಹಕರ ನಡುವೆ ವಾಗ್ವಾದ ನಡೆದರೆ ತಲಪಾಡಿಯಲ್ಲಿ ಸ್ಥಳೀಯರು ಭಾರೀ ಪ್ರತಿಭಟನೆ ನಡೆಸಿದರು.
ಈ ನಡುವೆ ಸ್ಟಿಕರ್‌ ದಾಸ್ತಾನು ಇಲ್ಲದ ಗೊಂದಲ ಮುಂದುವರಿದಿದೆ. ಸುಗಮ ಸಂಚಾರ ನಡೆದದ್ದು ಕೆಲವೆಡೆ, ದಿನದ ಕೆಲವು ಹೊತ್ತು ಮಾತ್ರ.

Advertisement

ಹೆಜಮಾಡಿ: ಹಲವಾರು ವಿಘ್ನ ; ನಗದು ಕೌಂಟರ್‌ಗಳಲ್ಲೇ ಸಾಲು
ಪಡುಬಿದ್ರಿ: ಪ್ರಾಥಮಿಕ ಹಂತದಲ್ಲಿ ರುವ ಫಾಸ್ಟಾಗ್‌ ವ್ಯವಸ್ಥೆಗೆ ಹಲವಾರು ವಿಘ್ನಗಳು ಎದುರಾಗುತ್ತಿವೆ. ಟ್ಯಾಗ್‌ ಸ್ಕ್ಯಾನ್‌ ಆಗದಿರುವುದರಿಂದ ಹಿಡಿದು ನಿಮ್ಮ ಟ್ಯಾಗ್‌ ಬ್ಲ್ಯಾಕ್‌ ಲಿಸ್ಟ್‌ ಆಗಿದೆ ಎನ್ನುವ ಉತ್ತರವೂ ಸವಾರರಿಗೆ ದೊರಕುತ್ತಿದೆ. ಪೇಟಿಎಂ ಟ್ಯಾಗ್‌ ಗ್ರಾಹಕರ ಖಾತೆಯಿಂದ ಹಣ ಪಾವತಿ ಯಾದರೂ ಹಲವು ತಾಸುಗಳ ಬಳಿಕ ಮೆಸೇಜ್‌ ಲಭ್ಯವಾಗುತ್ತಿದೆ. ಹಣ ಕಡಿತವಾಗಿದ್ದರೂ ಸಂದೇಶ ಬರದೇ ಇರುವ ಸಮಸ್ಯೆಯೂ ಹೆಜಮಾಡಿ ಟೋಲ್‌ ಗೇಟಲ್ಲಿ ಎದುರಾಗಿದೆ.

ಸೋಮವಾರವೂ ಇಲ್ಲಿ ಲಾರಿ ಸಹಿತ ಘನ ವಾಹನಗಳನ್ನು ಮ್ಯಾನುವೆಲ್‌ ಸ್ಕ್ಯಾನ್‌ ಮಾಡಿಯೇ ಬಿಡಲಾಗುತ್ತಿತ್ತು. ನಗದು ಕೌಂಟರ್‌ಗಳಲ್ಲಿ ಆಗಾಗ್ಗೆ ಉದ್ದನೆಯ ಸರತಿಯ ಸಾಲು ಕಂಡುಬರುತ್ತಿತ್ತು.

ಆಗಬೇಕಾದ್ದೇನು?
ಸರ್ವರ್‌ ಸಮಸ್ಯೆಯನ್ನು ನಿವಾರಿಸಲು ಟೋಲ್‌ ಅಧಿಕಾರಿಗಳು ಪ್ರಾಶಸ್ತÂ ನೀಡಬೇಕಿದೆ. ಚಾಲಕರ ಬದಿಯಲ್ಲಿರಬೇಕಾದ ಫಾಸ್ಟಾಗ್‌ ಕೆಲವು ವಾಹನಗಳಲ್ಲಿ ಎಡಬದಿಯಲ್ಲಿ, ಕೆಲವು ಘನ ವಾಹನಗಳಲ್ಲಿ ಮೂಲೆಯಲ್ಲಿ ಇದ್ದು, ಸರಿಯಾಗಿ ಸ್ಕ್ಯಾನ್‌ ಆಗುತ್ತಿಲ್ಲ. ಈ ಗೊಂದಲವನ್ನೂ ನಿವಾರಿಸಬೇಕಿದೆ.

ಸುಮಾರು 60 ಸ್ಟಿಕರ್‌ ವಿತರಣೆ
ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಎನ್‌ಎಚ್‌ಎಐ ಮೂಲಕ 22 ಮತ್ತು ಪೇಟಿಎಂ ಮೂಲಕ ಸುಮಾರು 40ರಷ್ಟು ಸ್ಟಿಕರ್‌ ವಿತರಣೆಯಾಗಿದೆ. ಪೇಟಿಎಂ ತನ್ನ ವಿಕ್ರಯಿತ ಮತ್ತು ಬ್ಲ್ಯಾಕ್‌ ಲಿಸ್ಟ್‌ ಆಗಿರುವ ಟ್ಯಾಗ್‌ಗಳನ್ನು ಸರ್ವರ್‌ಗೆ ಮತ್ತೆ ಹೊಂದಿಸುವ ಕಾರ್ಯವನ್ನು ಇಂದು ನಡೆಸಿದೆ.

Advertisement

ಸುರತ್ಕಲ್‌: ಸ್ಥಳೀಯರಿಗೆ 3 ದಿನ ರಿಯಾಯಿತಿ, 160 ವಾಹನಗಳಿಗೆ ದುಪ್ಪಟ್ಟು ಶುಲ್ಕ
ಸುರತ್ಕಲ್‌: ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ 2 ದಿನಗಳಲ್ಲಿ ಫಾಸ್ಟಾಗ್‌ ಅಳವಡಿಸದೆ ಫಾಸ್ಟ್ಯಾಗ್ ಲೇನ್‌ನಲ್ಲಿ ಬಂದ 160ಕ್ಕೂ ಅಧಿ ಕ ವಾಹನಗಳಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗಿದೆ. ಸೋಮವಾರ ಇಲ್ಲಿ ಹೆಚ್ಚಿನ ವಾಹನ ಸಂಚಾರವಿದ್ದು, ನಗದು ಪಾವತಿಸಿ ಹೋಗುವ ವಾಹನಗಳು ಕಾಯುವ ಸ್ಥಿತಿಯಿತ್ತು. ಹ್ಯಾಂಡ್‌ ಹೆಲ್ಡ್‌ ಯಂತ್ರದ ಮೂಲಕ ವಾಹನವಿದ್ದಲ್ಲಿಗೆ ತೆರಳಿ ಟೋಲ್‌ ಸಿಬಂದಿ ಸುಂಕ ವಸೂಲಿ ಮಾಡಿದ್ದರಿಂದ ಹೆಚ್ಚು ಸಮಸ್ಯೆಯಾಗಲಿಲ್ಲ.

ಹಲವು ವಾಹನಗಳಲ್ಲಿ ಫಾಸ್ಟ್ಯಾಗ್ ಸ್ಟಿಕ್ಕರ್‌ ಎಡಬದಿಗೆ ಅಂಟಿಸಿದ್ದರಿಂದ ಸ್ಕ್ಯಾನಿಂಗ್‌ಗೆ ತೊಡಕುಂಟಾಯಿತು. ಆರ್‌ಟಿಒ ಕಚೇರಿಗಳಲ್ಲಿ ಬಲ ಬದಿಗೆ ಅಂಟಿಸುವಂತೆ ಕೇಳಿಕೊಳ್ಳಲಾಗಿದೆ. ಕೆಲವು ಟ್ಯಾಗ್‌ ಹಾಕಿದ್ದರೂ ಆ್ಯಕ್ಟಿವೇಟ್‌ ಆಗದ ಕಾರಣ ದುಪ್ಪಟ್ಟು ದರ ನೀಡಬೇಕಾಯಿತು.

ಉಚಿತ ಓಡಾಟಕ್ಕೆ ಸಚಿವ, ಶಾಸಕರ ಪತ್ರ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಡಾ| ಭರತ್‌ ಶೆಟ್ಟಿ ಅವರು ಸ್ಥಳೀಯರಿಗೆ ಉಚಿತ ಓಡಾಟಕ್ಕೆ ಅನುವು ಮಾಡಿಕೊಡುವ ಸಲು ವಾಗಿ ಕೇಂದ್ರದ ಜತೆ ಮಾತುಕತೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಪತ್ರ ಬರೆದು ಸೂಚಿಸಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಸ್ಥಳೀಯರ ಲಘು ಖಾಸಗಿ ವಾಹನಗಳಿಗೆ ಉಚಿತ ಓಡಾಟಕ್ಕೆ ಅವಕಾಶ ನೀಡುವಂತೆ ವಿನಂತಿಸಿದರು. ಹೆದ್ದಾರಿ ಇಲಾಖೆ ಅ ಧಿಕಾರಿಗಳು ಸಂಸದರ ಜತೆ ಮಾತುಕತೆ ನಡೆಸುವವರೆಗೆ ಮೂರು ದಿನ ರಿಯಾಯಿತಿ ನೀಡುವಂತೆ ಮನವಿ ಮಾಡಿದ ಮೇರೆಗೆ ಗುರುವಾರದವರೆಗೆ ಸ್ಥಳೀಯರಿಗೆ ಉಚಿತ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಸ್ಥಳೀಯ ಬಾಡಿಗೆ ಕಾರು, ವಾಹನಗಳಿಗೆ ಶುಲ್ಕ ನೀಡಬೇಕಿದೆ.ಸೋಮವಾರ ಸುಮಾರು 200 ಫಾಸ್ಟ್ಯಾಗ್ ಸ್ಟಿಕರ್‌ ಮಾರಾಟವಾಗಿವೆ.

ಸಾಸ್ತಾನ: ಬೇಡಿಕೆಯಷ್ಟಿಲ್ಲ ಸ್ಟಿಕ್ಕರ್‌
ಕೋಟ: ರಾಷ್ಟ್ರೀಯ ಹೆದ್ದಾರಿಯಲ್ಲಿ ಫಾಸ್ಟ್ಯಾಗ್ ಪ್ರಾಯೋಗಿಕವಾಗಿ ಆರಂಭಗೊಂಡ 2ನೇ ದಿನ ಸಾಸ್ತಾನ ಟೋಲ್‌ನಲ್ಲಿ ಶಾಂತಿಯುತವಾಗಿ ಶುಲ್ಕ ಸಂಗ್ರಹಣೆ ನಡೆಯಿತು. ಒಂದಷ್ಟು ಲಘು ಟ್ರಾಫಿಕ್‌ ಜಾಮ್‌ ಹೊರತುಪಡಿಸಿದರೆ ಹೆಚ್ಚಿನ ಕಂಡುಬರಲಿಲ್ಲ. ತುರ್ತು ಗೇಟ್‌ ಪ್ರವೇಶಿಸಿದ ವಾಹನಗಳಿಗೆ ಎರಡು ಪಟ್ಟು ಟೋಲ್‌ ಸ್ವೀಕರಿಸುವ ಸಂದರ್ಭ ವಾಹನ ಚಾಲಕರು ಟೋಲ್‌ ಸಿಬಂದಿಯ ನಡುವೆ ಆಗಾಗ ವಾಗ್ವಾದ ನಡೆಯಿತು.

ಸ್ಟಿಕ್ಕರ್‌ ಕೊರತೆ
ಫಾಸ್ಟ್ಯಾಗ್ ಸ್ಟಿಕ್ಕರ್‌ಗೆ ಸಾಕಷ್ಟು ಬೇಡಿಕೆ ಇದ್ದರೂ ಸ್ಟಿಕ್ಕರ್‌ ಪೂರೈಕೆಯಾಗುತ್ತಿಲ್ಲ. ಪೇಟಿಎಂ ಕಂಪೆನಿಯಿಂದ ಮಾತ್ರ ದಿನದ 2-3 ತಾಸು ಸ್ಟಿಕ್ಕರ್‌ ವಿತರಣೆ ನಡೆಯುತ್ತಿದೆ. ಡಿ.14ರಂದು 230, ಡಿ.15ರಂದು 100 ಮತ್ತು ಡಿ.16ರಂದು 120 ಸ್ಟಿಕ್ಕರ್‌ ವಿತರಣೆಯಾಗಿವೆ. ಆದರೆ ಬೇಡಿಕೆ ಸಾವಿರಾರು ಸಂಖ್ಯೆಯಲ್ಲಿದೆ.

ಬ್ರಹ್ಮರಕೂಟಿÉನಲ್ಲಷ್ಟೇ ಸಂಚಾರ ನಿರಾತಂಕ
ಬಂಟ್ವಾಳ: ಬಿ.ಸಿ. ರೋಡ್‌ ಸಮೀಪದ ಬ್ರಹ್ಮರಕೂಟ್ಲು ಟೋಲ್‌ ಪ್ಲಾಝಾದಲ್ಲಿ ಸೋಮವಾರ ಯಾವುದೇ ಆತಂಕವಿಲ್ಲದೆ ವಾಹನಗಳು ಸಂಚಾರ ನಡೆಸಿವೆ.

ಇಲ್ಲಿ ಎರಡೂ ರಸ್ತೆಗಳಲ್ಲಿ ತಲಾ ಎರಡೆರಡು ಬೂತ್‌ಗಳಿದ್ದು, ತಲಾ ಒಂದರಲ್ಲಿ ಫಾಸ್ಟ್ಯಾಗ್ ಮತ್ತು ನಗದು ಪಾವತಿಸಿ ತೆರಳುವುದಕ್ಕೆ ಅವಕಾಶ ನೀಡಲಾಗಿತ್ತು. ಇಲ್ಲಿ ಚತುಷ್ಪಥ ರಸ್ತೆಯಿದ್ದರೂ ಬ್ರಹ್ಮ ಸನ್ನಿಧಿಯ ಬಳಿ ದ್ವಿಮುಖ ರಸ್ತೆ ಇರುವುದರಿಂದ ಟ್ರಾಫಿಕ್‌ ಜಾಮ್‌ ತಪ್ಪಿಸಲು ಮಂಗಳೂರು ಕಡೆಗೆ ತೆರಳುವ ವಾಹನಗಳಿಗೆ ಎರಡೂ ಬೂತ್‌ಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ವಾಹನ ಚಾಲಕರ ಸಣ್ಣಪುಟ್ಟ ಚರ್ಚೆಗಳನ್ನು ಹೊರತುಪಡಿಸಿದರೆ ಯಾವುದೇ ಅಡಚಣೆ ಇಲ್ಲದೆ ವಾಹನಗಳು ಸಂಚರಿಸಿವೆ. ಟೋಲ್‌ಫ್ಲಾಝಾದಲ್ಲಿ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಸೋಮವಾರ ಎನ್‌ಎಚ್‌ಎಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕಿನ ಕೌಂಟರ್‌ಗಳು ಕಾರ್ಯಾಚರಿಸಿವೆ.

ಮಧ್ಯಾಹ್ನ ಬಳಿಕ ಸರ್ವರ್‌ ಸ್ಲೋ ಆಗಿ ಕೊಂಚ ನಿಧಾನವಾಗಿದ್ದರೂ ಹೆಚ್ಚಿನ ವಾಹನದವರು ಫಾಸ್ಟ್ಯಾಗ್ ಅಳವಡಿಸಿಕೊಂಡಿದ್ದಾರೆ ಎಂದು ಟೋಲ್‌ ಫ್ಲಾಝಾ ಮ್ಯಾನೇಜರ್‌ ನವೀನ್‌ ಶೆಟ್ಟಿ ತಿಳಿಸಿದ್ದಾರೆ.

ತಲಪಾಡಿ: ಪ್ರತಿಭಟನೆಯ ಬಳಿಕ ಸ್ಥಳೀಯ ಖಾಸಗಿ ಬಸ್‌ಗಳಿಗೆ ದೊರಕಿದ ತಾತ್ಕಾಲಿಕ ವಿನಾಯಿತಿ
ಉಳ್ಳಾಲ: ತಲಪಾಡಿ ಟೋಲ್‌ಗೇಟ್‌ನಲ್ಲಿ ಫಾಸ್ಟ್ಯಾಗ್ ವಿಚಾರದ ಗೊಂದಲ ಸೋಮವಾರ ತಾರಕಕ್ಕೇರಿತ್ತು. ಬೆಳಗ್ಗೆ ಪ್ರತಿಭಟನೆ, ಮಾತಿನ ಚಕಮಕಿ, ಹೊಡೆದಾಟ ನಡೆಯಿತು. ಬಳಿಕ ಎರಡೂ ಕಡೆಯವರ ಸಮಾಲೋಚನೆಯ ಬಳಿಕ ತಾತ್ಕಾಲಿಕವಾಗಿ ಸ್ಥಳೀಯ ಖಾಸಗಿ ಬಸ್‌ಗಳು ಟೋಲ್‌ ವಿನಾಯಿತಿಯೊಂದಿಗೆ ಸಂಚರಿ ಸಲು ಮತ್ತು ನಗದು ಶುಲ್ಕ ಸ್ವೀಕಾರಕ್ಕೆ ಎರಡು ಟೋಲ್‌ ಲೈನ್‌ ವ್ಯವಸ್ಥೆ ಮಾಡಿದ ಬಳಿಕ ಪ್ರತಿಭನೆಯ ಕಾವು ಕಡಿಮೆಯಾಯಿತು.

ಸೋಮವಾರ ಬೆಳಗ್ಗೆ ಗಡಿನಾಡು ರಕ್ಷಣ ವೇದಿಕೆ, ಸಾರ್ವಜನಿಕ ಹಿತರಕ್ಷಣ ವೇದಿಕೆ ಮತ್ತು ಖಾಸಗಿ ಬಸ್‌ ಮಾಲಕರು ಪ್ರತಿಭಟನೆ ನಡೆಸಿದ್ದು, ಕೆಲವು ದಿನ ಸ್ಥಳೀಯ ಖಾಸಗಿ ಬಸ್‌ ಗಳಿಗೆ ವಿನಾಯಿತಿ ಮತ್ತು 2 ಲೇನ್‌ಗಳಲ್ಲಿ ನಗದು ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಯಿತು.

ಹೊಡೆದಾಟ; ಪೊಲೀಸ್‌ ಠಾಣೆಗೆ‌
ಪ್ರತಿಭಟನೆ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಸುರೇಶ್‌ ಆಳ್ವ ಅವರತ್ತ ಟೋಲ್‌ ಸಿಬಂದಿ ಉಡಾಫೆಯಾಗಿ ಮಾತನಾಡಿದ ವಿಚಾರವಾಗಿ ಗಡಿನಾಡ ರಕ್ಷಣ ವೇದಿಕೆಯ ಸಿದ್ಧಿಕ್‌ ತಲಪಾಡಿ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಸಂದರ್ಭ ಅವರ ತಲೆ ಸಿಬಂದಿಯ ಮುಖಕ್ಕೆ ಬಡಿದು ಗಾಯವಾಗಿತ್ತು. ಸಿದ್ಧಿಕ್‌ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸ್‌ ಅಧಿಕಾರಿಗಳು, ಸಂಘಟನೆಯ ಮುಖಂಡರು ಮತ್ತು ಟೋಲ್‌ ಮೇಲ್ವಿಚಾರಕರನ್ನು ಕರೆಸಿ ಸಭೆ ನಡೆಸಿದ್ದು, ಪ್ರಕರಣ ಇತ್ಯರ್ಥವಾಗಿಲ್ಲ.

ಮಂಗಳವಾರ ಸಭೆ?
ವಿನಾಯಿತಿ ವಿಚಾರದಲ್ಲಿ ಮಂಗಳವಾರ ಟೋಲ್‌ ಅಧಿಕಾರಿಗಳು ಮತ್ತು ಖಾಸಗಿ ಬಸ್‌ ಮಾಲಕರ ನಡುವೆ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

ಎರಡೂ ಲೇನ್‌ಗಳಲ್ಲೂ ಸರತಿ ಸಾಲು
ಪೇಟಿಎಂನಿಂದ ಸ್ಟಿಕ್ಕರ್‌ ಮಾರಾಟ ನಡೆದಿದೆ. ಸೋಮವಾರ ವಾಹನಗಳ ಸಂಖ್ಯೆ ದುಪ್ಪಟ್ಟಾಗಿದ್ದು, ನಗದು ಸ್ವೀಕಾರಕ್ಕೆ ಎರಡು ಲೇನ್‌ ವ್ಯವಸ್ಥೆ ಮಾಡಿದ್ದರೂ ಪೀಕ್‌ ಅವರ್‌ನಲ್ಲಿ ಸರತಿ ಕಂಡುಬಂತು. ಹ್ಯಾಂಡ್‌ ಹೆಲ್ಡ್‌ ಮಶಿನ್‌ಗಳ ಮೂಲಕವೂ ವಾಹನಗಳಿಂದ ಶುಲ್ಕ ಸ್ವೀಕಾರ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next