Advertisement

ನಿಶ್ಚಿತಾರ್ಥಕ್ಕೂ ನೀತಿ ಸಂಹಿತೆ ಬಿಸಿ: ಮನೆಯೊಡೆಯ ಜೈಲಿಗೆ

06:00 AM Apr 15, 2018 | Team Udayavani |

ಮಂಗಳೂರು: ಚುನಾವಣ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಅಧಿಕಾರಿಗಳು ಶನಿವಾರ ಬಂಟ್ವಾಳ ತಾಲೂಕು ಇರಾ ಗ್ರಾಮದ ಮನೆ ಯೊಂದರಲ್ಲಿ ವಿವಾಹ ನಿಶ್ಚಿತಾರ್ಥ ನಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿ ಮದ್ಯ ಶೇಖರಣೆಯ ಹಿನ್ನೆಲೆಯಲ್ಲಿ ಮನೆಯೊಡೆಯನನ್ನು ಬಂಧಿಸಿ ಜೈಲಿಗಟ್ಟಿದ ಘಟನೆ ನಡೆದಿದೆ. ಇರಾ ಗ್ರಾಮದ ಸ್ಟೀವನ್‌ ಡಿ’ಸಿಲ್ವ ಅವರು ನ್ಯಾಯಾಂಗ ಬಂಧನಕ್ಕೊಳಗಾಗಿದ್ದು, ಶನಿವಾರ ರಾತ್ರಿ 9 ಗಂಟೆ ವೇಳೆಗೆ ಅವರನ್ನು ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. 

Advertisement

ಶನಿವಾರ ಮಧ್ಯಾಹ್ನ ಸ್ಟೀವನ್‌ ಅವರ ಮನೆಯಲ್ಲಿ ಅಣ್ಣನ ಪುತ್ರಿಯ ವಿವಾಹ ನಿಶ್ಚಿತಾರ್ಥ ನಿಗದಿಯಾಗಿತ್ತು. ಕಾರ್ಯ ಕ್ರಮ ನಡೆಯುತ್ತಿದ್ದಂತೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಮದ್ಯ ಶೇಖರಣೆ ಇರುವುದನ್ನು ಪತ್ತೆ ಹಚ್ಚಿ ಸ್ಟೀವನ್‌ ಅವರ ಮೇಲೆ ಪ್ರಕರಣ ದಾಖಲಿಸಿದರು. ಬಳಿಕ ಅವರನ್ನು ಬಂಧಿಸಲಾಯಿತು. ನ್ಯಾಯಾ ಲಯದಲ್ಲಿ ಅವರಿಗೆ ಜಾಮೀನು ಕೂಡ ನಿರಾಕರಿಸಲಾಯಿತು. ಈ ಹಿನ್ನೆಲೆಯಲ್ಲಿ ಅವರು ಅನಿವಾರ್ಯವಾಗಿ ಜೈಲು ಸೇರುವಂತಾಯಿತು. 

ಚುನಾವಣ ನೀತಿ ಸಂಹಿತೆಯ ಬಗ್ಗೆ ಜನರಿಗೆ ಸಾಕಷ್ಟು ಮಾಹಿತಿ ಇಲ್ಲದೆ ಇರುವುದರಿಂದ ಹಾಗೂ ಮಾಹಿತಿಯನ್ನು ಅಧಿಕಾರಿಗಳು ನೀಡ ದಿರುವುದು ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ ಎಂದು ಬಂಟ್ವಾಳ ತಾ. ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸ್‌ ಠಾಣೆಗಳಲ್ಲಿ ಯಾವುದೇ ಮಾಹಿತಿಯಿಲ್ಲ. ಚುನಾವಣ ನೀತಿ ಸಂಹಿತೆ ಜಾರಿಗೆ ಸಂಬಂಧಿಸಿ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಚುನಾವಣ ನೀತಿ ಸಂಹಿತೆ ಸಂದರ್ಭ ವಿವಾಹ ನಿಶ್ಚಿತಾರ್ಥ ಸಮಾರಂಭಕ್ಕೆ ಸಂಬಂಧಿಸಿ ಮನೆಯ ಯಜಮಾನ ಜೈಲಿಗೆ ಹೋಗಿರುವುದು ಜಿಲ್ಲೆಯಲ್ಲಿ ಪ್ರಥಮ ಘಟನೆ. 

ಘಟನೆಯ ಕುರಿತಂತೆ ತನಗೆ ಯಾವುದೇ ಮಾಹಿತಿ ಇಲ್ಲ. ಈಗಲೇ ನಾನು ಏನೂ ಹೇಳುವಂತಿಲ್ಲ. ಘಟನೆಯ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಶಶಿಕಾಂತ್‌ ಸೆಂಥಿಲ್‌, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next