Advertisement

ನಾಗತಿಹಳ್ಳಿ ಶಿಷ್ಯರ ಸಿನಿಯಾನ

09:24 AM Apr 23, 2019 | Team Udayavani |

ನಿರ್ದೇಶಕ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಶಿಷ್ಯಂದಿರ ನಾಲ್ಕು ಚಿತ್ರಗಳು ಈಗ ಬಿಡುಗಡೆಗೆ ಸಜ್ಜಾಗಿವೆ. ನಾಗತಿಹಳ್ಳಿ ಚಂದ್ರಶೇಖರ್‌ ಅವರ ಜೊತೆಗೆ ಕೆಲಸ ಕಲಿತ, ಅವರ ಚಿತ್ರಗಳಲ್ಲಿ ದುಡಿದ, ಅವರ ಟೆಂಟ್‌ ಶಾಲೆಯಲ್ಲಿ ತರಬೇತಿ ಪಡೆದ ಶಿಷ್ಯಂದಿರು ಸದ್ದಿಲ್ಲದೆಯೇ ಸಿನಿಮಾ ಮಾಡಿ ಅದನ್ನು ಪ್ರೇಕ್ಷಕರ ಮುಂದೆ ತರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Advertisement

ನಾಗತಿಹಳ್ಳಿ ತಮ್ಮ ಶಿಷ್ಯಂದಿರ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಹೊಸಬರ ಚಿತ್ರಗಳಿಗೆ ಬೆಂಬಲ ಬೇಕು ಎಂಬುದನ್ನೂ ಸಾರಿದ್ದಾರೆ. ಈಗಿನ ಪ್ರತಿಭಾವಂತರ ಆಸೆಗಳು, ಅವರ ಸಿನಿಮಾಗಳ ಮಾರುಕಟ್ಟೆ ಕುರಿತು ನಾಗತಿಹಳ್ಳಿ ಮಾತನಾಡಿದ್ದಾರೆ. “ಈಗಂತೂ ಕನ್ನಡ ಚಿತ್ರರಂಗದಲ್ಲಿ ಹೊಸಬರೇ ಹೆಚ್ಚಾಗಿದ್ದಾರೆ.

ಆ ಹೊಸಬರ ಸಾಲಲ್ಲಿ ನನ್ನ ಶಿಷ್ಯಂದಿರ ಚಿತ್ರಗಳೂ ಸೇರಿವೆ ಎಂಬುದು ಸಂತಸದ ವಿಷಯ. ಹೊಸಬರಲ್ಲಿ ಪ್ರತಿಭೆ ಇದೆ. ಆದರೆ, ಜನರು ಯಾವುದನ್ನು ಸ್ವೀಕರಿಸುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗೆ ಹೇಳ್ಳೋಕೆ ನಾನು ಜ್ಯೋತಿಷಿಯೂ ಅಲ್ಲ. ಒಬ್ಬ ಗುರುವಾಗಿ, ಒಂದು ಶಾಲೆ ನಡೆಸುವವನಾಗಿ ಅದೊಂದು ರೀತಿಯ ಧರ್ಮ ಸಂಕಟ ನನಗೆ.

ಆದರೂ, ನನ್ನ ಶಿಷ್ಯಂದಿರ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿರುವುದು ಖುಷಿಯನ್ನು ಹೆಚ್ಚಿಸಿದೆ. “ಕಾರ್ಮೋಡ ಸರಿದು’, “ರತ್ನ ಮಂಜರಿ’, ಡೈಮೆಂಡ್‌ ಕ್ರಾಸ್‌’ ಮತ್ತು “ಮೈಸೂರು ಮಸಾಲ’ ಈ ನಾಲ್ಕು ಚಿತ್ರಗಳು ನನ್ನ ಶಿಷ್ಯಂದಿರಿಂದ ಮೂಡಿಬಂದ ಚಿತ್ರಗಳು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. “ರತ್ನಮಂಜರಿ’ ಚಿತ್ರದ ನಾಯಕ, ನಾಯಕಿ ನನ್ನ ಶಾಲೆಯಲ್ಲಿ ಓದಿದವರು.

ಹಾಗೆಯೇ, “ಕಾರ್ಮೋಡ ಸರಿದು’ ಚಿತ್ರದ ನಿರ್ದೇಶಕ ಉದಯ್‌ ಮತ್ತು ನಾಯಕ ಮಂಜು ಕೂಡ ನನ್ನ ಚಿತ್ರದಲ್ಲಿ ಕೆಲಸ ಮಾಡಿದವರು. ಇವರಷ್ಟೇ ಅಲ್ಲ, ಇಲ್ಲಿ ಅನೇಕ ಹೊಸ ಪ್ರತಿಭೆಗಳ ಚಿತ್ರಗಳೂ ಬರುತ್ತಿವೆ. ಅವರಿಗೆಲ್ಲಾ ಒಂದು ಕಿವಿಮಾತು. ಇಲ್ಲಿ ಯಾರೂ ಕೈ ಹಿಡಿದು ನಡೆಸಲ್ಲ. ನಿಮ್ಮ ಕಾಲುಗಳ ಮೇಲೆ ನೀವೆ ನಡೆಯಬೇಕು. ನಾವು ಕೂಡ ಆರಂಭದಲ್ಲಿ ಶುರುಮಾಡಿದ್ದು ಹಾಗೇನೆ.

Advertisement

ಇಲ್ಲಿ ಮುಖ್ಯವಾಗಿ ಕೈ ಹಿಡಿಯಬೇಕಿದ್ದು ಪ್ರೇಕ್ಷಕ. ಜೊತೆಗೆ ಪೂರಕವಾಗಿ ಉದ್ಯಮ ಮತ್ತು ಮಾಧ್ಯಮ ಬೆಂಬಲವೂ ಬೇಕು’ ಎನ್ನುತ್ತಾರೆ ನಾಗತಿಹಳ್ಳಿ ಚಂದ್ರಶೇಖರ್‌. ಹೊಸಬರು ತುಂಬಾ ಚೆನ್ನಾಗಿ ಕಥೆ ಹೇಳುತ್ತಾರೆ. ಆದರೆ, ಅವರಿಗೆ ಯಾರು ಹಣ ಹಾಕುತ್ತಾರೆ? ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ ಕುಟುಂಬದ ಬೆಂಬಲ ಇರುತ್ತೆ, ಶ್ರೀಮಂತ ಅಪ್ಪ, ಅಮ್ಮ ಇರುತ್ತಾರೆ.

ಗಾಡ್‌ಫಾದರ್‌ ಕೂಡ ಇರುತ್ತಾರೆ. ಆದರೆ, ಮಿಕ್ಕವರ ಕನಸುಗಳ ಗತಿ ಏನು? ಆ ಕನಸುಗಳನ್ನು ಪೋಷಿಸುವುದಾದರೂ ಹೇಗೆ? ಎನ್ನುವುದು ನಾಗತಿಹಳ್ಳಿ ಚಂದ್ರಶೇಖರ್‌ ಅವರ ಪ್ರಶ್ನೆ. “ಒಂದು ಕಾಲ ಘಟ್ಟದಲ್ಲಿ ಕನಸುಗಳು ನಿಜ ಆಗದಿದ್ದರೆ, ಅವರ ಬದುಕಿನ ಮುಖ್ಯವಾದ ಕ್ಷಣ, ತಾರುಣ್ಯ ಎಲ್ಲವೂ ಹೊರಟು ಹೋಗುತ್ತೆ. ಹೀಗಾಗಿ ಅದೊಂದು ಧರ್ಮ ಸಂಕಟದ ಪ್ರಶ್ನೆ.

ಬೇಡ ಎನ್ನುವುದಕ್ಕೆ ಮನಸ್ಸು ಆಗಲ್ಲ. ಬೇಕು ಅನ್ನುವುದಕ್ಕೆ ಭಯ ಆಗುತ್ತೆ’ ಎನ್ನುವನಾಗತಿಹಳ್ಳಿ, “ಇಲ್ಲಿ ಹತ್ತು ಕೋಟಿ ಖರ್ಚು ಮಾಡೋರಿಗೂ ಸಿನಿಮಾ ಒಂದು ಜೂಜು. ಅದೇ ಒಂದು ಕೋಟಿ ಖರ್ಚು ಮಾಡೋರಿಗೂ ಜೂಜೇ. ಜೂಜು ಅನ್ನೋದು ಕಾಮನ್‌ ಪದವಾಗಿದೆ. ಎಲ್ಲರೂ ಅವರದೇ ಆತಂಕದಲ್ಲಿರುತ್ತಾರೆ.

ಚಿತ್ರ ಮಾಡುವಾಗಿನಿಂದ ಹಿಡಿದು, ಬಿಡುಗಡೆಗೆ ಚಿತ್ರಮಂದಿರಗಳ ಹುಡುಕಾಟ, ಆ ತಯಾರಿ ಎಲ್ಲವೂ ಒಂದು ರೀತಿ ಒತ್ತಡ, ಗೊಂದಲದಲ್ಲೇ ಕೆಲಸ ಮಾಡಬೇಕು. ಇವೆಲ್ಲವನ್ನು ಒಪ್ಪಿಕೊಂಡೇ ಇಲ್ಲಿ ಕೆಲಸ ಮಾಡಬೇಕು. ಇಂತಹ ಜಟಿಲವಾದ ಪ್ರಯಾಣದ ಮೊದಲ ಹೆಜ್ಜೆ ಇಟ್ಟುಕೊಂಡು ಹೊರಟಿರುವ ಪ್ರತಿಭೆಗಳಿಗೆ ಒಳ್ಳೆಯದಾಗಲಿ’ ಎಂದು ಶುಭಹಾರೈಸುತ್ತಾರೆ ನಾಗತಿಹಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next