Advertisement

Karnataka: ರಾಜ್ಯದ ಅನ್ನಭಾಗ್ಯಕ್ಕೆ ಕೇಂದ್ರ ಸರಕಾರದ ಬಿಲ್‌ ಸೆಡ್ಡು !

10:54 PM Jan 03, 2024 | Team Udayavani |

ಬೆಂಗಳೂರು: “ಅನ್ನಭಾಗ್ಯ’ಕ್ಕೆ ಅಕ್ಕಿ ಕೇಳಿದರೆ ಕೊಡಲಿಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲ’ ಎಂದು ರಾಜ್ಯ ಸರಕಾರ ಮಾಡುವ ಆರೋಪಕ್ಕೆ ಕೇಂದ್ರ ಸರಕಾರ ತಿರುಗಿ ಬಿದ್ದಿದ್ದು, ಈಗ ಪಡಿತರ ಚೀಟಿದಾರರಿಗೆ ಆಯಾ ತಿಂಗಳ ಪಡಿತರ ಬಿಲ್‌ ನೀಡಲು ಆದೇಶಿಸಿದೆ. ಅದರಲ್ಲಿ ರಾಜ್ಯದ ಪಾಲು “ಶೂನ್ಯ’ ಎಂದು ನಮೂದಿಸಲಾಗಿದೆ.

Advertisement

ದೇಶಾದ್ಯಂತ ಬಡತನ ರೇಖೆಗಿಂತ ಕೆಳಗಿರುವ ಆದ್ಯತಾ ಕುಟುಂಬ(ಬಿಪಿಎಲ್‌ ಕಾರ್ಡ್‌ದಾರರು)ಗಳ ಪ್ರತಿ ಯೂನಿಟ್‌ಗೆ ತಿಂಗಳಿಗೆ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ 5 ಕೆಜಿ ಅಕ್ಕಿ ನೀಡಲಾಗುತ್ತದೆ. ಆದರೆ ಇದನ್ನು ಕೆಲವು ರಾಜ್ಯ ಸರಕಾರಗಳು ತಮ್ಮ ಯೋಜನೆ ಎಂಬಂತೆ ಬಿಂಬಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಬಿಲ್‌ ಮೂಲಕ ತಾನೇ 5 ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದು, ಇದರಲ್ಲಿ ರಾಜ್ಯ ಸರಕಾರದ ಪಾಲು ಏನೂ ಇಲ್ಲ ಎಂಬ ಸಂದೇಶ ರವಾನಿಸುತ್ತಿದೆ.

ಬಿಲ್‌ ಮಾದರಿಯನ್ನು ಸ್ವತಃ ಕೇಂದ್ರ ಸರಕಾರ ಸಿದ್ಧಪಡಿಸಿ, ಎನ್‌ಐಸಿ ಸಾಫ್ಟ್ವೇರ್‌ನಲ್ಲಿ ಅಳವಡಿಸಿದೆ. ಅದರಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಬಯೋಮೆಟ್ರಿಕ್‌ ನೀಡಿ ಪಡಿತರ ಪಡೆಯುವ ಕಾರ್ಡ್‌ದಾರರಿಗೆ ಬಿಲ್‌ ರೂಪದಲ್ಲಿ ಮುದ್ರಿಸಿ ನೀಡಬೇಕು. ಈಗಾಗಲೇ ಹಲವು ರಾಜ್ಯಗಳು ಕೇಂದ್ರದ ಈ ಆದೇಶವನ್ನು ಜಾರಿಗೊಳಿಸಿವೆ. ರಾಜ್ಯದಲ್ಲೂ 2023ರ ಡಿಸೆಂಬರ್‌ನಲ್ಲಿ ಕೆಲವು ನ್ಯಾಯಬೆಲೆ ಅಂಗಡಿಗಳಿಂದ ಗ್ರಾಹಕರಿಗೆ ಈ ಬಿಲ್‌ ತಲುಪಿದೆ.

ಬಿಲ್‌ನಲ್ಲಿ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್‌ಎಫ್ಎಸ್‌ಎ) ಅಡಿ ನೀಡಲಾಗುತ್ತಿರುವ ಅಕ್ಕಿ ಮತ್ತಿತರ ಪಡಿತರ ಪ್ರಮಾಣ ಎಷ್ಟು? ಅದಕ್ಕೆ ತಗಲುವ ವೆಚ್ಚ ಏನು ಎಂದು ಒಂದು ಕಾಲಂನಲ್ಲಿ ನೀಡಲಾಗಿದೆ. ಮತ್ತೂಂದು ಕಾಲಂನಲ್ಲಿ ರಾಜ್ಯ ಸರಕಾರದ “ಅನ್ನಭಾಗ್ಯ’ದಡಿ ನೀಡಲಾಗುತ್ತಿರುವ ಅಕ್ಕಿ ಎಷ್ಟು, ಅದಕ್ಕೆ ತಗಲುವ ವೆಚ್ಚ ಎಷ್ಟು ಎಂದು ಪ್ರತ್ಯೇಕವಾಗಿ ವಿವರಿಸಲಾಗಿದೆ. ರಾಜ್ಯ ಸರಕಾರದಿಂದ ಯಾವುದೇ ರೀತಿಯ ಅಕ್ಕಿ ನೀಡುತ್ತಿಲ್ಲವಾದ್ದರಿಂದ ಅಕ್ಕಿ ವಿತರಣೆಯಲ್ಲಿ ಅದರ ಪಾಲು “ಶೂನ್ಯ’ ಎಂದು ಸ್ಪಷ್ಟವಾಗಿ ಉಲ್ಲೇಖೀಸಲಾಗುತ್ತಿದೆ.

ಸರಕಾರವೇ ಯಂತ್ರ ನೀಡಲಿ
“ಈ ಹಿಂದೆ ಮಾನ್ಯುವಲ್‌ ಆಗಿ ಬಿಲ್‌ ನೀಡುವ ಪದ್ಧತಿ ಇತ್ತು. ಆದರೆ ಬಯೋಮೆಟ್ರಿಕ್‌ ಬಂದ ಬಳಿಕ ಕಾರ್ಡ್‌ದಾರರು ಬಂದು ಬಯೋಮೆಟ್ರಿಕ್‌ ಕೊಟ್ಟ ಬಳಿಕವೇ ಲಾಕ್‌ ತೆರೆಯುತ್ತದೆ. ಪಡಿತರ ವಿತರಣೆ ವಿವರವೂ ಬಯೋಮೆಟ್ರಿಕ್‌ನಲ್ಲಿ ಕಾಣುತ್ತದೆ. ಹೀಗಾಗಿ ಬಿಲ್‌ ಅಗತ್ಯ ಇಲ್ಲ. ಇದರ ಹೊರತಾಗಿಯೂ ಆಹಾರ ನಿರೀಕ್ಷಕರು ಈಗ ಗ್ರಾಹಕರಿಗೆ ಬಿಲ್‌ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ ಅದಕ್ಕೆ ಪ್ರತ್ಯೇಕ ಪಿಒಎಸ್‌ ಮಾದರಿಯ ಯಂತ್ರ ಹೊಂದಿರಬೇಕು. ಅದಕ್ಕೆ ಸುಮಾರು 10 ಸಾವಿರ ರೂ. ಆಗುತ್ತದೆ. ಅಲ್ಲದೆ, ಪ್ರತಿ 30-40 ಬಿಲ್‌ ನೀಡಿದ ಬಳಿಕ ಥರ್ಮಲ್‌ ಪೇಪರ್‌ ಬದಲಾಯಿಸಬೇಕು. ಈ ಮಧ್ಯೆ ಸರ್ವರ್‌ ತುಂಬಾ ನಿಧಾನವಾಗಿರುತ್ತದೆ. ಗ್ರಾಹಕರು ಎರಡೆರಡು ಕಡೆಗಳಲ್ಲಿ ಬಯೋಮೆಟ್ರಿಕ್‌ ಕೊಡಬೇಕಾಗುತ್ತದೆ. ಈ ಎಲ್ಲ ಜಂಜಾಟದ ಹಿನ್ನೆಲೆಯಲ್ಲಿ ನಾವು ನಿರಾಕರಿಸುತ್ತಿದ್ದೇವೆ’ ಎಂದು ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಟಿ. ಕೃಷ್ಣಪ್ಪ ಸ್ಪಷ್ಟಪಡಿಸಿದರು.

Advertisement

ಸದ್ಯಕ್ಕೆ ಬೆರಳೆಣಿಕೆಯಷ್ಟು ಪಡಿತರ ವಿತರಕರು ಈ ಸೌಲಭ್ಯ ಹೊಂದಿದ್ದಾರೆ. ಆದರೆ ಎಲ್ಲರಿಗೂ ಕಡ್ಡಾಯಗೊಳಿಸಿದರೆ ಕಷ್ಟ ಮತ್ತು ಆರ್ಥಿಕ ಹೊರೆ ಆಗುತ್ತದೆ. ನೆರೆಯ ಗೋವಾದಲ್ಲಿ ಅಲ್ಲಿನ ಸರಕಾರವೇ ಪಿಒಎಸ್‌ ಮಾದರಿಯ ಯಂತ್ರವನ್ನು ಪಡಿತರ ವಿತರಕರಿಗೆ ನೀಡಿದೆ. ಅದಕ್ಕೆ ಬೇಕಾಗುವ ಥರ್ಮಲ್‌ ಪೇಪರ್‌ ಕೂಡ ಪೂರೈಸುತ್ತಿದೆ. ಅದೇ ರೀತಿಯಲ್ಲಿ ನಮ್ಮಲ್ಲೂ ಸರಕಾರವೇ ಯಂತ್ರಗಳನ್ನು ಪೂರೈಸುವುದಾದರೆ ನಮ್ಮ ಅಭ್ಯಂತರ ಇಲ್ಲ. ರಾಜ್ಯದಲ್ಲಿ ಸುಮಾರು 22 ಸಾವಿರ ಪಡಿತರ ವಿತರಕರಿದ್ದೇವೆ. ಎಲ್ಲರಿಗೂ ಇದನ್ನು ನೀಡಬೇಕು ಎಂದು ಆಗ್ರಹಿಸಿದರು.

ವಿಜಯ ಕುಮಾರ ಚಂದರಗಿ

 

Advertisement

Udayavani is now on Telegram. Click here to join our channel and stay updated with the latest news.

Next