Advertisement

ಕರಾವಳಿಯಲ್ಲಿ ಬಿಜೆಪಿ ಶಾಸಕರ ಸಚಿವ ಸ್ಥಾನ ಲೆಕ್ಕಾಚಾರ ಬಿರುಸು

02:58 AM Jul 24, 2019 | sudhir |

ಮೈತ್ರಿ ಸರಕಾರ ಪತನವಾಗಿದೆ. ಮುಂದೆ ಬಿಜೆಪಿ ಸರಕಾರ ರಚಿಸಲು ಆಹ್ವಾನ ಪಡೆಯಬಹುದು ಎಂಬುದು ನಿರೀಕ್ಷೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಸಿಂಹಪಾಲು ಪಡೆದಿದೆ. ಇಲ್ಲಿ ಜೆಡಿಎಸ್‌ ಒಂದೂ ಸ್ಥಾನ ಗಳಿಸಿಲ್ಲವಾದರೆ, ಕಾಂಗ್ರೆಸ್‌ ಒಂದು ಕ್ಷೇತ್ರವನ್ನು ಮಾತ್ರ ಗಳಿಸಿತ್ತು. ಹೀಗಾಗಿ ಹನ್ನೆರಡು ಶಾಸಕರನ್ನು ಕೊಟ್ಟಿರುವ ಕರಾವಳಿಗೆ ಹೊಸ ಸರಕಾರದಲ್ಲಿ ಎಷ್ಟು ಸಚಿವ ಸ್ಥಾನ ಸಿಗಬಹುದು ಎಂಬುದೇ ಸದ್ಯ ಚರ್ಚೆಯ ವಸ್ತು.

Advertisement

ಮಂಗಳೂರು/ ಉಡುಪಿ: ಮೈತ್ರಿ ಸರಕಾರವು ಮಂಗಳವಾರ ಸಂಜೆ ವಿಶ್ವಾಸ ಮತ ಗಳಿಸಲು ವಿಫಲವಾಗಿ ಅಧಿಕಾರ ಕಳೆದು ಕೊಳ್ಳುತ್ತಿದ್ದಂತೆ ಅತ್ತ ಅಧಿಕ ಸಂಖ್ಯಾಬಲವನ್ನು ಹೊಂದಿರುವ ಬಿಜೆಪಿ ಪಾಳೆಯದಲ್ಲಿ ಹೊಸ ಸರಕಾರ ರಚನೆಯ ರಾಜಕೀಯ ಗರಿಗೆದರಿದೆ. ಇತ್ತ ಕರಾವಳಿಯ ಬಿಜೆಪಿ ಶಾಸಕರಲ್ಲಿಯೂ ಸಚಿವ ಸ್ಥಾನದ ಆಸೆ-ನಿರೀಕ್ಷೆ ಚಿಗುರೊಡೆದಿದೆ.
ಬಿಜೆಪಿಯಿಂದ ಯಾರು ಸಚಿವರಾಗಬಹುದು, ಅದೃಷ್ಟ ಒಲಿಯಲಿದೆ ಎಂಬ ಚರ್ಚೆ ಬಿರುಸು ಗೊಂಡಿದೆ.

ದಕ್ಷಿಣ ಕನ್ನಡ, ಉಡುಪಿಯ 13 ಶಾಸಕ ಸ್ಥಾನಗಳ ಪೈಕಿ ಬಿಜೆಪಿಯ 12 ಮಂದಿ ಶಾಸಕರು ಮತ್ತು ಓರ್ವ ಹಿರಿಯ ವಿಧಾನ ಪರಿಷತ್‌ ಸದಸ್ಯರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ 7 ಶಾಸಕರಲ್ಲಿ ಆರು ಮಂದಿ ಹೊಸದಾಗಿ ಆಯ್ಕೆಯಾದವರು. ಸುಳ್ಯ ಕ್ಷೇತ್ರದಿಂದ 6 ಬಾರಿ ಆಯ್ಕೆಯಾಗಿರುವ ಎಸ್‌. ಅಂಗಾರ ಪ್ರಸ್ತುತ ಬಿಜೆಪಿಯ ಹಿರಿಯ ಶಾಸಕರು. ಪುತ್ತೂರು ಶಾಸಕ ಸಂಜೀವ ಮಠಂದೂರು ಹೊಸ ಶಾಸಕರಾದರೂ ಜಿಲ್ಲೆಯ ಮಟ್ಟಿಗೆ ಹಿರಿಯ ನಾಯಕರು.

ಉಡುಪಿ ಜಿಲ್ಲೆಯಲ್ಲಿ ಸುಕುಮಾರ ಶೆಟ್ಟಿ ಹೊರತುಪಡಿಸಿದರೆ ಉಳಿದ ನಾಲ್ವರೂ ಹಿರಿಯ ಶಾಸಕರು. 5 ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಇವರ ಪೈಕಿ ಅತ್ಯಂತ ಹಿರಿಯರು. ಉಳಿದಂತೆ ಸುನಿಲ್‌ ಕುಮಾರ್‌, ರಘುಪತಿ ಭಟ್‌, ಲಾಲಾಜಿ ಮೆಂಡನ್‌ ತಲಾ 3 ಬಾರಿ ಶಾಸಕರಾಗಿ ಆಯ್ಕೆಯಾದವರು.

ದೋಸ್ತಿ ಸರಕಾರದ ಅವಧಿ ಯಲ್ಲಿ ಸುನಿಲ್‌ ಕುಮಾರ್‌ ವಿಧಾನಸಭೆಯಲ್ಲಿ ವಿಪಕ್ಷ ಮುಖ್ಯ ಸಚೇತಕರಾಗಿದ್ದರು. ಕೋಟ ಶ್ರೀನಿವಾಸ ಪೂಜಾರಿಯವರು ವಿಪಕ್ಷ ನಾಯಕರಾಗಿದ್ದಾರೆ. ದೋಸ್ತಿ ಸರಕಾರ ಪತನ ಗೊಳ್ಳುವುದರೊಂದಿಗೆ ಈ ಎರಡೂ ಸ್ಥಾನಗಳು ಬಿಜೆಪಿಯಿಂದ ವಿಪಕ್ಷಕ್ಕೆ ಹೋಗುತ್ತವೆ.

Advertisement

ಕೋಟ ಶ್ರೀನಿವಾಸ ಪೂಜಾರಿಯವರು 2008-13ರ ಅವಧಿಯ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದರು. ಅದೇ ಅವಧಿಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸಚಿವ ಸ್ಥಾನ ಕೊನೆಯ ಕ್ಷಣದಲ್ಲಿ ಕೈತಪ್ಪಿ ಹೋಗಿತ್ತು ಮತ್ತು ಇದೇ ಕಾರಣದಿಂದ ಪಕ್ಷದಿಂದ ಕೆಲವು ವರ್ಷ ದೂರವುಳಿದಿದ್ದರು. ಇದೇ ಅವಧಿಯಲ್ಲಿ ಹಿರಿಯ ಶಾಸಕ ಎಸ್‌. ಅಂಗಾರ ಅವರ ಹೆಸರು ಕೇಳಿಬಂದಿತ್ತು.

ಸುನಿಲ್‌ ಕುಮಾರ್‌ ಪಕ್ಷ ವರಿಷ್ಠ ವಲಯದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡವರು. ರಘುಪತಿ ಭಟ್‌, ಲಾಲಾಜಿ ಮೆಂಡನ್‌ ಹಿರಿಯ ಶಾಸಕರು. ಹಿರಿಯ ನಾಯಕರಿಗೆ ಪ್ರಾತಿನಿಧ್ಯ ಕೊಡುವುದಾದರೆ ಇವರ ನಡುವೆ ಯಾರಿಗಾದರೂ ಅವಕಾಶ ಲಭಿಸುವ ಸಾಧ್ಯತೆಗಳಿವೆ. ಇನ್ನು ಹೊಸ ಮುಖಗಳಿಗೆ ಮಣೆ ಹಾಕುವುದಾದರೆ ಸಂಜೀವ ಮಠಂದೂರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಪರಿಮಿತಿಗಳು
ರಾಜ್ಯ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಇರುವ ಒಟ್ಟು ಸಚಿವ ಸ್ಥಾನಗಳು 34. ಆದರೆ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಸೀಮಿತ ಸಚಿವ ಸ್ಥಾನಗಳನ್ನು ಮಾತ್ರ ಪಕ್ಷದ ಸದಸ್ಯರಿಗೆ ನೀಡುವ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಲುಕಲಿದೆ. ಕೆಲವು ಸಚಿವ ಸ್ಥಾನಗಳನ್ನು ಪ್ರಸ್ತುತ ಕಾಂಗ್ರೆಸ್‌ನಿಂದ ಸಿಡಿದಿರುವ ಮತ್ತು ಇಬ್ಬರು ಪಕ್ಷೇತರ ಶಾಸಕರಿಗೆ ಮೀಸಲಿರಿಸಬೇಕಾಗುತ್ತದೆ. ಕಾಂಗ್ರೆಸ್‌ನಿಂದ ಸಿಡಿದಿರುವ ಶಾಸಕರು ಮತ್ತು ಜೆಡಿಎಸ್‌ನ ಎಸ್‌. ವಿಶ್ವನಾಥ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸದಾಗಿ ಚುನಾವಣೆಯಲ್ಲಿ ಗೆದ್ದು ಬರಬೇಕು. ಪ್ರಜಾಪ್ರತಿನಿಧಿ ಕಾಯ್ದೆಯಂತೆ ಖಾಲಿ ಇರುವ ಶಾಸಕ ಸ್ಥಾನಗಳಿಗೆ 6 ತಿಂಗಳೊಳಗೆ ಚುನಾವಣೆ ನಡೆಯಬೇಕು. ಇದರ ಮೊದಲು ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುವುದಿದ್ದರೆ ಆದರ ಜತೆಗೆ ಈ ಸ್ಥಾನಗಳಿಗೂ ಚುನಾವಣೆ ನಡೆಯುವ ಸಾಧ್ಯತೆಗಳಿರುತ್ತವೆ. ಈ ಎಲ್ಲ ಅಂಶಗಳು ಸಚಿವ ಸ್ಥಾನ ಹಂಚಿಕೆಯ ವೇಳೆ ಸಚಿವ ಸಂಪುಟದಲ್ಲಿ ಕರಾವಳಿಗೆ ಪ್ರಾತಿನಿಧ್ಯದ ಮೇಲೆಯೂ ಪರಿಣಾಮ ಬೀರಬಹುದು.

ಬಿಜೆಪಿಯಲ್ಲಿ ಸಚಿವರಾಗಿದ್ದವರು
ರಾಜ್ಯದಲ್ಲಿ ಬಿಜೆಪಿ ಸರಕಾರಗಳು ಅಧಿಕಾರಕ್ಕೆ ಬಂದ ಅವಧಿಗಳಲ್ಲಿ ಒಟ್ಟು ಬಿಜೆಪಿಯ ನಾಲ್ವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಸಚಿವರಾಗಿದ್ದರು. ಬಿಜೆಪಿಯಲ್ಲಿ ಹಿರಿಯ ನಾಯಕರಾಗಿದ್ದ ಡಾ| ವಿ.ಎಸ್‌. ಆಚಾರ್ಯ ಅವರು ಗೃಹಖಾತೆ ಸೇರಿದಂತೆ ಉನ್ನತ ಖಾತೆಗಳನ್ನು ಪಡೆದಿದ್ದರು. ಬಿ. ನಾಗರಾಜ ಶೆಟ್ಟಿ ಅವರು 2004 ರಲ್ಲಿ ಬಿಜೆಪಿ -ಜೆಡಿಎಸ್‌ ಮೈತ್ರಿ ಸರಕಾರದಲ್ಲಿ ಮೀನುಗಾರಿಕೆ ಸಚಿವರಾಗಿದ್ದರು. ಕೃಷ್ಣ ಪಾಲೆಮಾರ್‌ 2008 ರಲ್ಲಿ ಬಿಜೆಪಿ ಸರಕಾರದಲ್ಲಿ ಬಂದರು, ಮೀನುಗಾರಿಕೆ ಮತ್ತು ಪರಿಸರ ಖಾತೆ ಸಚಿವರಾಗಿದ್ದರು. ಕೋಟ ಶ್ರೀನಿವಾಸ ಪೂಜಾರಿಯವರು ಕೂಡ 2008ರ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದರು.

ಬಿಜೆಪಿಗೆ ಕಗ್ಗಂಟು
ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಈ ಹಿಂದೆ ಸಚಿವ ಸ್ಥಾನ ದೊರಕುವ ಸ್ಥಿತಿಯಲ್ಲಿದ್ದರೂ ಕೈತಪ್ಪಿತ್ತು. ವಿಧಾನ ಸಭೆಯ ಮುಖ್ಯ ಸಚೇತಕರಾಗಿರುವ ವಿ. ಸುನಿಲ್‌ಕುಮಾರ್‌ ಪ್ರಸ್ತುತ ನಾಯಕತ್ವದಲ್ಲಿ ಮುಂಚೂಣಿಯಲ್ಲಿರುವವರು. ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತುತ ಮೇಲ್ಮನೆ ಯಲ್ಲಿ ವಿಪಕ್ಷ ನಾಯಕರು. ಕ್ಷೇತ್ರದ ಹಲವು ಸಮಸ್ಯೆಗಳ ಬಗೆಗೆ ಟೊಂಕ ಕಟ್ಟಿ ಹೋರಾಟಕ್ಕೆ ನಿಲ್ಲುವ ರಘುಪತಿ ಭಟ್‌, ಏಕೈಕ ಮೊಗವೀರ ಶಾಸಕ ಲಾಲಾಜಿ ಮೆಂಡನ್‌ ಅವರನ್ನು ಜಾತಿ ಸಮೀಕರಣದಲ್ಲಿ ನಿರ್ಲಕ್ಷಿಸುವಂತಿಲ್ಲ. ಸುಕುಮಾರ ಶೆಟ್ಟಿಯವರು ಜಿಲ್ಲೆಯ ಅತಿ ಹಿಂದುಳಿದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದೂ ಗಮನಾರ್ಹ. ಉಡುಪಿ ಜಿಲ್ಲೆಯ ಎಲ್ಲ ಶಾಸಕರೂ ಒಂದಲ್ಲ ಒಂದು ರೀತಿ ಅರ್ಹತೆ ಉಳ್ಳವರಾಗಿದ್ದು ಬಿಜೆಪಿಗೆ ಸಚಿವರನ್ನು ಆರಿಸುವಾಗ ಕಗ್ಗಂಟು ಆಗುವುದು ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next