Advertisement

ಸುಗಂಧ ದ್ರವ್ಯ ಹಚ್ಚಿಕೊಂಡ ಅನುಯಾಯಿಗಳು ರಜನೀಶ್ ಹತ್ತಿರ ಸುಳಿಯಲೂ ಸಾಧ್ಯವಿಲ್ಲ!

03:26 PM Aug 21, 2021 | Team Udayavani |

ನಿಂಗೆ ತುಂಬ ಇಷ್ಟವಾದದ್ದು ಯಾವುದು, ಈಗಲೇ ಬೇಕೆನಿಸುವ ವಸ್ತುಗಳ್ಯಾವವು ಹೇಳು ಅಂತ ಯಾರಾದರೂ ಕೇಳಿದರೆ, ನನ್ನ ಇಷ್ಟದ ವಸ್ತು ಪ್ರೇಮ, ಪ್ರೇಮ ಮತ್ತು ಪ್ರೇಮ ಅಂತೀನಿ. ಎಷ್ಟು ಕೊಟ್ಟರೂ ಮತ್ತಷ್ಟು ಪ್ರೀತಿ ಕೊಡಿ ಅಂತೀನಿ. ಏಕೆಂದರೆ ಪ್ರೇಮ ಮಾತ್ರ ಮನುಷ್ಯನನ್ನು ಪ್ರಾರ್ಥನೆಯೆಡೆಗೆ, ಪ್ರಾರ್ಥನೆಯಿಂದಾಚೆಗಿರುವ ದೇವರೆಡೆಗೆ, ದೇವರಿಂದಲೂ ಆಚೆಗಿರುವ ನಿರ್ವಾಣದೆಡೆಗೆ ಕರೆದೊಯ್ಯಬಲ್ಲದು ಅಂತ ನನಗೆ ಗೊತ್ತಿದೆ…ಎಂದು ಹೇಳಿದವರು ಆಚಾರ್ಯ ರಜನೀಶ್!

Advertisement

ಹೌದು ದೈವಿಕ ಕಾಮ ಎನ್ನುವ ಪದವನ್ನು ಮೊದಲ ಬಾರಿ ಪ್ರಯೋಗಿಸಿದವರು ಬಹುಶಃ ಆಚಾರ್ಯ ರಜನೀಶ್ ಮೊದಲಿಗರಿರಬೇಕು. ಪಾಶ್ಚಿಮಾತ್ಯ ಜಗತ್ತು ರಜನೀಶ್ ಮಾತಿನೆಡೆಗೆ ಆಕರ್ಷಿತಗೊಂಡಿತ್ತು. ಆನಂತರ ಪಾಶ್ಚಿಮಾತ್ಯರು ರಜನೀಶ್ ಅವರ ಬಳಿ ಒಲಿದು ಬಂದಿದ್ದು ಆತನ ಕಣ್ಣಿನಿಂದಾಗಿ ಮತ್ತು ದನಿಯಿಂದಾಗಿ. ಮೊದ, ಮೊದಲು ಸಾಮಾನ್ಯ ಜನ ಬಂದರು. ಆ ನಂತರ ಅಮೆರಿಕದ ಕುಬೇರರೇ ರಜನೀಶ್ ಬಳಿ ನಡೆದು ಬಂದರು. ಖುದ್ದು ರಜನೀಶ್ ಅವರು 1980ರಲ್ಲಿ ಅಮೆರಿಕಕ್ಕೆ ಹೋಗಿ, “ಅಮೆರಿಕ ಕಾದು ಕಾತರಿಸುತ್ತಿದ್ದ ದೇವದೂತ ಇಗೋ ನಾನೇ ಬಂದಿದ್ದೇನೆ” ಎಂದು ಘೋಷಿಸಿದ್ದರು.

1931ರ ಡಿಸೆಂಬರ್ ನಲ್ಲಿ ಸಾಮಾನ್ಯ ಬಟ್ಟೆ ವ್ಯಾಪಾರಿಯ ಹನ್ನೆರಡು ಮಕ್ಕಳ ಪೈಕಿ ಒಬ್ಬರಾಗಿ ಜನಿಸಿದ್ದ ಮೋಹನ ಚಂದ್ರ ರಜನೀಶ್ ಬಾಲ್ಯದಲ್ಲಿಯೇ ಕೆಲವು ವಿಶಿಷ್ಟ ಹಿಪ್ನಾಟೈಸ್ ಟ್ರಿಕ್ಸ್ ಗಳನ್ನು ಕರಗತ ಮಾಡಿಕೊಂಡಿದ್ದ. ತೀರ ನಿರ್ಭಯರಾಗಿದ್ದು, ಸ್ವೇಚ್ಛೆ ಅವರ ದಿನಚರಿಯಾಗಿತ್ತು. ಜಬಲ್ ಪುರದಲ್ಲಿ ಸ್ನಾತಕೋತ್ತರ ಪದವಿಗಾಗಿ ಓದುತ್ತಿದ್ದಾಗ ಅದೊಂದು ಮಧ್ಯರಾತ್ರಿ ಗೆಳೆಯರನ್ನೆಲ್ಲ ಎಬ್ಬಿಸಿ “ನನಗೆ ಜ್ಞಾನೋದಯವಾಯಿತು” ಎಂದು ಹೇಳಿಬಿಟ್ಟಿದ್ದರು. 1965ರ ತನಕ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಮುಂಬಯಿಯಲ್ಲಿ ರಜನೀಶ್ ಅವರ ಬೋಧನೆಗಳಿಗೆ ಕೆಲವು ಶ್ರೀಮಂತರು ಆಕರ್ಷಿತರಾಗಿಬಿಟ್ಟಿದ್ದರು. ಒಂದು ಟ್ರಸ್ಟ್ ರಚಿಸಿದರು. ಆಗ ರಜನೀಶ್ ಅವರು ಸಣ್ಣ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ನಂತರ ರಜನೀಶ್ ಪುಣೆಯ ಐಶಾರಾಮಿ ಪ್ರದೇಶಕ್ಕೆ ಬರುವಷ್ಟು ಶ್ರೀಮಂತರಾಗಿಬಿಟ್ಟಿದ್ದರು. ತಮ್ಮ ಉಚ್ಚ್ರಾಯ ದಿನಗಳಲ್ಲಿ ರಜನೀಶ್ ಅವರ ಆಸ್ತಿ ನೂರು ಮಿಲಿಯನ್ ಡಾಲರ್ ಗಳಷ್ಟಿತ್ತು. ತೊಂಬತ್ತು ರೋಲ್ಸ್ ರಾಯ್ ಕಾರುಗಳಿದ್ದವು. ಐದು ಲಕ್ಷಕ್ಕೂ ಅಧಿಕ ಮಂದಿ ಅನುಯಾಯಿಗಳಿದ್ದರು.

ಜಗತ್ತಿನ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ರಜನೀಶ್ ಅವರ ಕೇಂದ್ರಗಳಿದ್ದವು. ಅಮೆರಿಕದ ಶ್ರೀಮಂತರ ಮನೆಗಳಿಂದ ಬಂದಿದ್ದ ಸಾವಿರಾರು ಮಂದಿ ಪುಣೆಯ ರಜನೀಶ್ ಅವರ ಆಶ್ರಮದಲ್ಲಿ ಕೂಲಿಗಳಂತೆ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಂಡಿದ್ದರಂತೆ. ವಾರಕ್ಕೆ ಕನಿಷ್ಠ ಪಕ್ಷ ಕೆಲವು ತಾಸುಗಳಷ್ಟು ದೇಹಶ್ರಮ ಮಾಡಬೇಕೆಂಬುದು ರಜನೀಶ್ ಅವರ ಕಟ್ಟಪ್ಪಣೆಯಾಗಿತ್ತು. ಉಳಿದ ಸಮಯದಲ್ಲಿ ಅಲ್ಲಿ ಅಕ್ಷರಶಃ ನಡೆಯುತ್ತಿದ್ದದ್ದು ಹಾಡು, ನಗೆ, ನೃತ್ಯ ಮತ್ತು ಸೆಕ್ಸ್! ರಜನೀಶ್ ಅವರಿಗೆ ಮಧುಮೇಹ ರೋಗ ಇತ್ತು. ನಾನಾ ರೀತಿಯ ಅಲರ್ಜಿಗಳಿದ್ದವು.

Advertisement

ರಜನೀಶ್ ಬಳಿ ಭಕ್ತರನ್ನು ಬಿಡುವ ಮುನ್ನ ಅವರ ಅಂಗರಕ್ಷಕರು ಅತಿಥಿಗಳ ತಪಾಸಣೆ ನಡೆಸುತ್ತಿದ್ದರಂತೆ, ಯಾಕೆಂದರೆ ಯಾರಾದರು ಸ್ವಲ್ಪ ಪ್ರಮಾಣದಲ್ಲೂ ಸುಗಂಧದ್ರವ್ಯ ಹಾಕಿಕೊಂಡಿದ್ದರೂ ರಜನೀಶ್ ಬಳಿಗೆ ಭಕ್ತರನ್ನು ಬಿಡುತ್ತಿರಲಿಲ್ಲ. ಯಾಕೆಂದರೆ ಆತನಿಗೆ ಸುಗಂಧವೇ ಅತಿ ದೊಡ್ಡ ಅಲರ್ಜಿಯಾಗಿತ್ತಂತೆ! ಹೀಗೆ ವಿಲಾಸಿ ಬದುಕು ನಡೆಸಿದ್ದ ರಜನೀಶ್ ಅವರ ಮೇಲೆ ಅನೇಕ ಆರೋಪಗಳು ಕೇಳಿಬಂದವು, ಅವರನ್ನು ವಿದೇಶದಿಂದ ಗಡಿಪಾರು ಮಾಡಲಾಯಿತು. ಸಾವಿರಾರು, ಲಕ್ಷಾಂತರ ಸಂಖ್ಯೆ ಅನುಯಾಯಿಗಳನ್ನು ಹೊಂದಿದ್ದ ರಜನೀಶ್ ಅವರು ಉಪನ್ಯಾಸ ನೀಡುತ್ತಿದ್ದ ದೇಶಗಳು ಕೂಡಾ ಪ್ರವೇಶವನ್ನು ನಿರ್ಬಂಧಿಸಿದವು. ಕೊನೆಗೆ ಪುಣೆಯಲ್ಲಿಯಲ್ಲಿಯೇ ತಮ್ಮ ಪ್ರವಚನ, ಹಾಡು, ನೃತ್ಯ ಮುಂದುವರಿಸಿದ್ದ ಆಚಾರ್ಯ ರಜನೀಶ್ ಅವರು 1990ರ ಜನವರಿ 19ರಂದು ವಿಧಿವಶರಾದರು. ಆದರೆ ಇಂದಿಗೂ ಕೂಡಾ ರಜನೀಶ್ ಸಾವು ನಿಗೂಢವಾಗಿಯೇ ಉಳಿದಿದೆ!

ರಜನೀಶ್ ನಗೆಬುಗ್ಗೆ:
ಗರ್ಲ್‌ಫ್ರೆಂಡ್: ನಾನು ಸತ್ತರೆ ಏನು ಮಾಡ್ತೀಯಾ?
ಬಾಯ್‌ಫ್ರೆಂಡ್: ನಾನೂ ಸಾಯ್ತೀನಿ.
ಗರ್ಲ್‌ಫ್ರೆಂಡ್: ಅದ್ಯಾಕೆ?
ಬಾಯ್‌ಫ್ರೆಂಡ್: ನಿನಗಾಗಿ ನಾನು ಮಾಡಿದ ಸಾಲ ಸಿಕ್ಕಪಟ್ಟೆ ಆಗಿದೆ. ಯಾರೂ ನನ್ನ ಬದುಕೋಕೆ ಬಿಡೋಲ್ಲ.

ಚಿಂತೆ ಮಾಡೊ ಪಾಳಿ ಅವಳ ತಾಯಿಗೆ ಇರಲಿ
ನಸ್ರುದ್ದೀನನ ತಾಯಿ ಮಗನ ಮೇಲೆ ರೇಗಿದಳು- ನಾನು ಹೇಳಿಲ್ವಾ ನಿಂಗೆ, ನಿನ್ನ ಗೆಳತಿಯನ್ನು ಒಬ್ಬಳೇ ನಿನ್ನ ರೂಮಿಗೆ ಕರೆದುಕೊಂಡು ಹೋಗಬೇಡ ಅಂತ. ಇಂಥ ವಿಚಾರ ಎಲ್ಲಾ ನನಗೆ ತುಂಬಾ ಚಿಂತೆ ಉಂಟುಮಾಡುತ್ತೆ.

ನಸ್ರುದ್ದೀನ್ ಶಾಂತವಾಗಿ ಹೇಳಿದ- ಅಮ್ಮಾ ನಾನು ಅವಳನ್ನು ನನ್ನ ರೂಮಿಗೆ ಕರೆದುಕೊಂಡು ಬರಲೇ ಇಲ್ಲ. ನಾನೇ ಅವಳ ರೂಮಿಗೆ ಹೋಗಿದ್ದ. ನೀನು ಚಿಂತೆ ಮಾಡಬೇಡ, ಚಿಂತೆ ಮಾಡೊ ಪಾಳಿ ಅವಳ ತಾಯಿಗೆ ಇರಲಿ!

Advertisement

Udayavani is now on Telegram. Click here to join our channel and stay updated with the latest news.

Next