ಮಹಾನಗರ: ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಸಮಾಜದ ಜವಾಬ್ದಾರಿ ಎಂದು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಹೇಳಿದರು.
ಮಂಗಳೂರು ಐಎಂಎ ಘಟಕದ ವತಿಯಿಂದ ಶನಿವಾರ ಜರಗಿದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ವೈದ್ಯ ವೃತ್ತಿಯು ಪವಿತ್ರವಾದ ವೃತ್ತಿಯಾಗಿದೆ. ರೋಗಿಗಳು ಮತ್ತು ವೈದ್ಯರ ಸಂಬಂಧ ಆಧುನಿಕ ವ್ಯವಸ್ಥೆಯಲ್ಲಿ ಶಿಥಿಲವಾಗುತ್ತಿದ್ದು, ಇದನ್ನು ಉಳಿಸಿಕೊಂಡಲ್ಲಿ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.
ವೈದ್ಯರಿಗೆ ಡಾ| ಬಿ.ಸಿ.ರಾಯ್ ಅವರ ಆದರ್ಶಗಳು ಅನುಕರಣೀಯ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ವೃತ್ತಿ ಘನತೆ ಎತ್ತಿ ಹಿಡಿಯಬೇಕು. ವೈದ್ಯ ವೃತ್ತಿಯು ಇತರ ವೃತ್ತಿಗಳಂತೆ ಕೇವಲ ಜೀವನ ನಿರ್ವಹಣೆಯ ವೃತ್ತಿಯಲ್ಲ. ಇಡೀ ಸಮಾಜದ ಭವಿಷ್ಯವೇ ತಮ್ಮ ಕೈಯಲ್ಲಿದೆ ಎಂಬ ಹೊಣೆಯರಿತು ವೈದ್ಯರು ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ಹಿರಿಯ ವೈದ್ಯರಿಗೆ ಸಮ್ಮಾನ
ವೈದ್ಯರ ದಿನಾಚರಣೆ ಅಂಗವಾಗಿ ನಗರದ ಹಿರಿಯ ವೈದ್ಯರಾದ ಎಂ. ಎಸ್. ಪುತ್ರನ್, ಭಾಸ್ಕರ್ ಆಳ್ವ, ಡಾ| ಸಿ.ಕೆ.ಬಲ್ಲಾಳ್, ಸಂತೋಷ್ ಕುಮಾರ್ ಶಾಸಿŒ ಮತ್ತು ಮಾಧವಿ ವಿಜಯ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಡಾ| ಬಿ.ಸಿ.ರಾಯ್ ಅವರ ಜೀವನ ಹಾಗೂ ಸಾಧನೆ ಬಗ್ಗೆ ಡಾ| ರೀಟಾ ಭಗವಾನ್ ಉಪನ್ಯಾಸ ನೀಡಿದರು.
ಐಎಂಎ ಅಧ್ಯಕ್ಷ ಡಾ| ರಾಘವೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕದ್ರಿ ಯೋಗೀಶ್ ಬಂಗೇರ, ಖಜಾಂಚಿ ಡಾ | ಜಿ.ಕೆ.ಭಟ್ ಸಂಕಬಿತ್ತಿಲು, ನಿಯೋಜಿತ ಅಧ್ಯಕ್ಷ ಡಾ| ಕೆ.ಆರ್.ಕಾಮತ್, ಐಎಂಎ ಟ್ರಸ್ಟ್ ಅಧ್ಯಕ್ಷ ಡಾ | ಹಬೀಬ್ ರೆಹಮಾನ್ ವೇದಿಕೆಯಲ್ಲಿದ್ದರು.