ಧಾರವಾಡ: ಸಂಗೀತ, ಸಾಹಿತ್ಯ ಮತ್ತು ಕಲೆಗಳು ಸತ್ಯ ಸೌಂದರ್ಯದ ಮೀಮಾಂಸೆಗಳಾಗಿವೆ ಎಂದು ಕವಿವಿಕುಲಪತಿ ಪ್ರೊ| ಕೆ.ಬಿ. ಗುಡಸಿ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಶ್ರೀಬಸವೇಶ್ವರ ಅಧ್ಯಯನ ಪೀಠವು ಅಲ್ಲಮಪ್ರಭು ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಡಾ| ನಂದಾ ಪಾಟೀಲ ವಚನ ಸಂಗೀತ ಕಛೇರಿಯ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತವು ಒಂದು ಶಾಸ್ತ್ರೀಯ ಅಧ್ಯಯನವಾಗಿದ್ದು, ಶರಣರ ವಚನ ಸಾಹಿತ್ಯವನ್ನು ಸಾಮಾನ್ಯ ಜನರಿಗೆ ತಿಳಿಸಲು ಸಂಗೀತದ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಈ ದಿಸೆಯಲ್ಲಿ ನಂದಾ ಪಾಟೀಲ ಅವರಂತಹ ದತ್ತಿ ಕಾರ್ಯಕ್ರಮಗಳು ಇಂತಹ ಸಂದರ್ಭದಲ್ಲಿ ಅರ್ಥಪಡೆದುಕೊಳ್ಳುತ್ತವೆ. ಇಂದು ವಿಜ್ಞಾನ ತಂತ್ರಜ್ಞಾನಗಳ ಜೊತೆಗ ಸಂಗೀತವು ಒಂದು ಅನ್ವಯಿಕ ವಿಜ್ಞಾನ ಆಗಿದೆ ಎಂದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ಪ್ರಸ್ತುತ ಶರಣ ಸಾಹಿತ್ಯ ಮತ್ತು ವಚನಗಳು ಇಂದಿಗೂ ತನ್ನದೇ ಆದ ಪ್ರಾಮುಖ್ಯತೆ ಪಡೆದಿದ್ದು, ಬಸವಣ್ಣನವರ ತತ್ವಗಳು ಸಮಾಜಕ್ಕೆ ತಲುಪಲು ಇಂತಹ ದತ್ತಿ ಕಾರ್ಯಕ್ರಮ ಸಹಾಯಕವಾಗಿವೆ. ಹಿಂದಿನಿಂದಲೂ ಕರ್ನಾಟಕ ರಾಜ್ಯದಅನೇಕ ರಾಜಕೀಯ ನಾಯಕರು ಬಸವಣ್ಣನವರ ತತ್ವಗಳನ್ನು ಪ್ರಚಾರ ಮಾಡಲು ಸಾಕಷ್ಟು ಶ್ರಮಿಸಿದ್ದು, ಇಂದಿನ ಯುವ ಜನಾಂಗಕ್ಕೆ ಶರಣ ಮತ್ತು ವಚನ ಸಂಸ್ಕೃತಿ ಬಗ್ಗೆ ತಿಳಿಸಿಕೊಡುವ ಬಹಳ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ:ಟ್ರ್ಯಾಕ್ಟರ್ ರ್ಯಾಲಿ ಯಶಸ್ಸಿಗೆ ಸಹಕರಿಸಿ
ಬಸವೇಶ್ವರ ಪೀಠದ ಸಂಯೋಜಕ ಡಾ| ಸಿ.ಎಂ. ಕುಂದಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕ ಅಯ್ಯಪ್ಪಯ್ಯ ಹಲಗಲಿಮಠ ಶರಣರ ವಚನಗಳನ್ನು ಹಾಡಿದರು. ದತ್ತಿ ದಾನಿ ಪ್ರೊ| ಮಲ್ಲಿಕಾರ್ಜುನ ಪಾಟೀಲ, ಸದಾನಂದ ಪಾಟೀಲ, ಡಾ| ನಂದಾ ಪಾಟೀಲ, ಜೆ.ಎಂ.ಚಂದುನವರ್ ಇದ್ದರು.