Advertisement

ಗ್ರಾಮ್ಯ ಸೊಗಡನ್ನು ಬಿಚ್ಚಿಟ್ಟ ಕಲಾ ಪ್ರದರ್ಶನ

06:07 PM Oct 31, 2019 | mahesh |

ಉಡುಪಿಯ ದೃಷ್ಟಿ ಆರ್ಟ್‌ ಗ್ಯಾಲರಿಯಲ್ಲಿ ಹುಬ್ಬಳ್ಳಿಯ ಕಲಾವಿದ ಕೆ.ವಿ. ಶಂಕರ್‌ರವರು ತಮ್ಮ ಸುತ್ತಲಿನ ಪರಿಸರದ ಪ್ರಭಾವಕ್ಕೆ ಒಳಗಾಗಿ ರಚಿಸಿರುವ ಸುಮಾರು ಐವತ್ತರಷ್ಟು ಕಲಾಕೃತಿಗಳನ್ನು ಕರಾವಳಿಯ ಆರ್ಟಿಸ್ಟ್‌ ಪೋರಂ ಪ್ರದರ್ಶನಕ್ಕಿರಿಸಿತ್ತು.

Advertisement

ಬಾಹ್ಯ ಪ್ರಭಾವ ಮತ್ತು ಆಂತರಿಕ ಪ್ರಭಾವಗಳೆರಡನ್ನೂ ದುಡಿಸಿಕೊಂಡ ಶಂಕರ್‌ರವರು ಪ್ರಖರ ವರ್ಣದಲ್ಲಿ ತಮ್ಮ ಸುತ್ತಲಿನ ವ್ಯಕ್ತಿಚಿತ್ರಗಳನ್ನು ಚಿತ್ರಿಸಿರುವರು. ಇವರು ರಚಿಸಿರುವ ಕಲಾಕೃತಿಗಳಲ್ಲಿ ಬಸವನನ್ನಾಡಿಸುವ ಕೋಲೆ ಬಸವ, ಡೊಳ್ಳು ಕುಣಿತ, ದುರುಗ ಮುರುಗಿ, ಬಹುರೂಪಿ ವೇಷಗಾರರು, ಜೋಗತಿ ಜೋಗಮ್ಮ, ಗೊರವರು, ಹುಲಿವೇಷ ಇತ್ಯಾದಿಗಳು ಬಹು ಪ್ರಮುಖವಾದವುಗಳು. ಹೀಗೆ ಒಟ್ಟಾರೆಯಾಗಿ ಕಲಾಪ್ರದರ್ಶನದಲ್ಲಿರಿಸಿದ್ದ ಕಲಾಕೃತಿಗಳೆಲ್ಲ ಉತ್ತರ ಕರ್ನಾಟಕದ ಭಾಗದ‌ ವಿಶೇಷತೆಗಳನ್ನೇ ತಮ್ಮ ಅಭಿವ್ಯಕ್ತಿಗೆ ಆಯ್ದುಕೊಂಡಿದ್ದವು. ಇವರ ಕೃತಿಗಳಲ್ಲಿ ಮಕ್ಕಳನೆತ್ತಿಕೊಂಡು ಭಿಕ್ಷೆ ಬೇಡುವ ಜನರು, ಅವರು ಬದುಕಿಗಾಗಿ ಪಡುವ ಕಷ್ಟಗಳು ಇತ್ಯಾದಿಗಳನ್ನು ಬಿಂಬಿಸುವುದರ ಜೊತೆಗೆ ಜನಪದ ಮತ್ತು ಸಾಂಪ್ರದಾ ಯಿಕ ಆಚರಣೆ ಗಳು ಅವುಗಳಲ್ಲಿನ ವೈರುಧ್ಯತೆಗಳು ಜನಜೀವನವೇ ಮುಂತಾದವು ಗಳ ಮನೋಜ್ಞ ಅಭಿವ್ಯಕ್ತಿಯಿದೆ.

ಅಲೆಮಾರಿ ಕುಟುಂಬಗಳು ದೇವಿ- ದೇವರುಗಳನ್ನು ತಲೆ ಮೇಲಿರಿಸಿಕೊಂಡು ವಿವಿಧ ವಾದನಗಳನ್ನು ಬಾರಿಸುತ್ತ ಮನೆ ಮನೆಗೆ ಹೋಗಿ ಧಾನ್ಯ. ಬಟ್ಟೆ, ಹಣವನ್ನು ಸಂಗ್ರಹಿಸುವ ವಿಚಾರಗಳನ್ನೇ ಶಂಕರ್‌ ತಮ್ಮ ಕ್ಯಾನ್‌ವಾಸ್‌ನ ಪರಿಧಿಯೊಳಗೆ ಸೆರೆ ಹಿಡಿದು ಸಾಂಸ್ಕೃತಿಕ ವಿಚಾರಗಳನ್ನು ದಾಖಲಿಸಿರುವರು. ಇವರ ಚಿಕ್ಕ ಗಾತ್ರದ ರೇಖಾಚಿತ್ರಗಳ ಮಾದರಿಯ ಅಭ್ಯಸಿಸಿದ ಕಲಾಕೃತಿಗಳು ಮಾಧ್ಯಮದ ಮೇಲಿನ ಹಿಡಿತ ಮತ್ತು ಪ್ರಯೋಗಶೀಲತೆಯನ್ನು ತೆರೆದಿಡುತ್ತದೆ.

ರಿಯಾಲಿಸ್ಟಿಕ್‌ ಮಾಧ್ಯಮದ ಇವರ ಕಲಾಕೃತಿಗಳಲ್ಲಿ ಬಿರುಸು ಕುಂಚದ ಹೊಡೆತಗಳು ಆಕರ್ಷಕ ನೆರಳು ಬೆಳಕಿನೊಂದಿಗೆ ಸಂಯೋಜಿಸಲ್ಪಟ್ಟಿವೆ. ಬಹುರೂಪಿ ವೇಷ ಗಾರರ ಕಲಾಕೃತಿಗಳು ಥಟ್ಟನೆ ನೋಟಕನಲ್ಲಿ ಕರಾವಳಿಯ ಭಾಗದ ಹುಲಿವೇಷ ಮತ್ತು ಹಬ್ಬದ ಸಂದರ್ಭದಲ್ಲಿ ಧರಿಸುವ ಇತರ ವೇಷಗಳನ್ನು ನೆನಪಿಗೆ ತಂದು ಪ್ರಾದೇಶಿಕ ಚೌಕಟ್ಟನ್ನು ಮುರಿದು ಇಲ್ಲಿನವೇ ಆಗಿಬಿಡುತ್ತದೆ. ವರ್ಣಗಳ ಮಿಶ್ರಣವನ್ನು ಮಾಡಿ ನೆರಳು ಬೆಳಕುಗಳನ್ನು ದರ್ಶಿಸುವ ತಾಂತ್ರಿಕತೆಯನ್ನು ನೆಚ್ಚದೇ ಇಂಪ್ರಷನಿಸ್ಟ್‌ ಕಲಾಕೃತಿಗಳಂತೆ ವರ್ಣಗಳ ನೇರ ಬಳಕೆಯೇ ಇವರ ಕಲಾಕೃತಿಗಳಲ್ಲಿನ ವೈಶಿಷ್ಟ್ಯ.

ಜನಾರ್ದನ ಹಾವಂಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next