Advertisement

ಕಲಾತ್ಮಕ ಚಿತ್ರ ಉದ್ಯಮ ಉಳಿಸೀತು:ತುಳಜಾರಾಮ

10:40 AM Aug 22, 2017 | |

ಕಲಬುರಗಿ: ಮೊಬೈಲ್‌ಗ‌ಳು, ಸಣ್ಣ ಕ್ಯಾಮರಾಗಳು ಮತ್ತು ಡಿಜಿಟಲೀಕರಣ ಬಂದ ಮೇಲೆ ಸ್ಟುಡಿಯೋ ಮತ್ತು ಛಾಯಾಗ್ರಾಹಕರ ಉದ್ಯಮ ಸಂಕಷ್ಟದಲ್ಲಿದೆ ಎನ್ನುವವರು ಸ್ವಲ್ಪ ತಮ್ಮ ಕೆಲಸದಲ್ಲಿ ಕಲಾತ್ಮಕತೆ, ಭಾವನಾತ್ಮಕತೆ
ರೂಢಿಸಿಕೊಂಡರೆ ಚಿತ್ರ ಉದ್ಯಮ ಉಳಿದೀತು ಎಂದು ವಾರ್ತಾ ಇಲಾಖೆ ಛಾಯಾಗ್ರಾಹಕ ತುಳಜಾರಾಮ ಪವಾರ ಅಭಿಪ್ರಾಯಪಟ್ಟರು. ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಛಾಯಾಚಿತ್ರ ತೆಗೆಯುವುದು ಈಚೆಗೆ ತುಂಬಾ ಸುಲಭದ ಕೆಲಸವಾಗಿದೆ. ಆದರೆ, ಭಾವನಾತ್ಮಕ ಮತ್ತು ಕಲಾತ್ಮಕ ಚಿತ್ರ ಸೆರೆ ಹಿಡಿದು ಸೃಷ್ಟಿಯಲ್ಲಿನ ಚೆಲವನ್ನು ನೋಡುಗರಿಗೆ ಉಣಬಡಿಸುವುದು ಪತ್ರಿಕಾ ಛಾಯಾಗ್ರಾಹಕರಿಗೆ ಕಷ್ಟದ ಕೆಲಸ. ಸದಾ ಸುದ್ದಿ
ಹಿಂದೆ ಬೀಳುವ ಪತ್ರಿಕಾ ಛಾಯಾಗ್ರಾಹಕರು ತಾಳ್ಮೆಯಿಂದ ಸಮಯದ ಹಿಂದೆ ಓಡಿಕೊಂಡು ಕಲಾತ್ಮಕ ಚಿತ್ರ ತೆಗೆಯುವುದು ಸವಾಲಿನ ಕೆಲಸ. ಆದರೂ ಅದರ ಮಧ್ಯೆ ಅವರನ್ನು ಹಾಗೂ ಅವರ ಚಿತ್ರಕಲೆಯನ್ನು ಇಂತ
ಚಿತ್ರಗಳೇ ಬಹಳದಿನಗಳ ಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ ಎಂದು ಹೇಳಿದರು. ಒಂದು ವೇಳೆ ಫೋಟೋಗ್ರಫಿ ಎನ್ನುವುದು ಇಲ್ಲದೆ ಇದ್ದರೆ ನಾವು ಕೆಲವು ವಿಷಯ ಮತ್ತು ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲ. 1839ರಲ್ಲಿ ಮೊಟ್ಟ ಮೊದಲ ಬಾರಿಗೆ ಲೀಸ್‌ ಡಬ್ರೆ ಪ್ರಾನ್ಸ್‌ನಲ್ಲಿ ಛಾಯಾಚಿತ್ರ ಸೆರೆ ಹಿಡಿದ ದಿನವನ್ನೇ ಇಂದಿಗೂ ಛಾಯಾಚಿತ್ರಗಾರರ ದಿನವನ್ನಾಗಿ 178 ವರ್ಷಗಳಿಂದ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾಪೌರ ಶರಣಕುಮಾರ ಮೋದಿ, ಫೋಟೋಗ್ರಾಫರ್‌ ಮತ್ತು ಫೋಟೋಗ್ರಫೀ ಎರಡು ತುಂಬಾ ಮುಖ್ಯವಾಗಿವೆ. ಇವತ್ತು ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಫೋಟೋಗ್ರಾಫರ್‌ಗಳ ಶ್ರಮವೂ ಕಾರಣವಾಗಿವೆ. ಅವರು ನನ್ನನ್ನು ಬೆಳೆಸಿದ್ದಾರೆ ಎಂದು ಧನ್ಯವಾದ ಹೇಳಿದ ಅವರು, ಪತ್ರಕರ್ತರ ಸಂಘದಿಂದ ನಿರ್ಮಾಣಗೊಳ್ಳುತ್ತಿರುವ ಪತ್ರಿಕಾಭವನದಲ್ಲಿ 10ಲಕ್ಷ ರೂ. ಅನುದಾನ ನೀಡುವುದಾಗಿ ಹೇಳಿದರು. ಚೈತನ್ಯಮಯೀ ಆರ್ಟ್‌ ಗ್ಯಾಲರಿಯ ಎ.ಎಸ್‌. ಪಾಟೀಲ ಮಾತನಾಡಿ, ಪತ್ರಿಕಾ ಛಾಯಾಗ್ರಾಹಕರ ಉದ್ಯಮ ಈಗ ಕವಲು ದಾರಿಯಲ್ಲಿದೆ. ಒಂದೆಡೆ ವ್ಯವಹಾರ ಇನ್ನೊಂದೆಡೆ ಕಲಾತ್ಮಕತೆ. ಇವರೆಡರ ಮಧ್ಯದಲ್ಲಿ ಛಾಯಾಗ್ರಾಹಕರ ಸಂಕಷ್ಟವೂ ಹೆಚ್ಚುತ್ತಿದೆ. ದೈನಂದಿನ ಚಟುವಟಿಕೆ, ಕರ್ತವ್ಯದ ಮಧ್ಯೆ ಛಾಯಾಗ್ರಾಹಕರು ಒಂದಷ್ಟು ಕಲಾತ್ಮಕತೆ ಚಿತ್ರಗಳನ್ನು ಸೆರೆ ಹಿಡಿದು ಜನರಿಗೆ ಕೊಟ್ಟರೆ, ಚಿತ್ರಾನುಭವ ದಕ್ಕಲಿದೆ. ಇಲ್ಲಿ 60 ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಆದರೆ, 10-15 ಚಿತ್ರಗಳು ಮಾತ್ರವೇ ಸ್ವಲ್ಪ ಗಮನ ಸೆಳೆಯುತ್ತವೆ. ಅದರಂತೆ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಪತ್ರಿಕಾ ಛಾಯಾಗ್ರಾಹಕರು ಕೊಡಲು ಸಾಧ್ಯವಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್‌ ಠಾಕೂರ, ಪತ್ರಿಕಾ ಛಾಯಾಗ್ರಾಹಕರ ಮಹತ್ವ ವಿವರಿಸಿದರು. ಸಂಘದ ಕಾರ್ಯದರ್ಶಿ ಶಿವರಂಜನ ಸತ್ಯಂಪೇಟೆ ಸ್ವಾಗತಿಸಿದರು. ಬಾಬುರಾವ ಕೋಬಾಳ ಪ್ರಾರ್ಥನೆ ಹಾಡಿದರು. ಪತ್ರಿಕಾ ಛಾಯಾಗ್ರಾಹಕ ರಾಜು ಉದನೂರು ಕಾರ್ಯಕ್ರಮ ನಿರೂಪಿಸಿದರು. ಸುರೇಶ ಬಡಿಗೇರ ವಂದಿಸಿದರು. ಈ ವೇಳೆಯಲ್ಲಿ ಛಾಯಾಚಿತ್ರಗಾರರಾದ ತುಳಜಾರಾಮ ಪವಾರ ಅವರನ್ನು ಸನ್ಮಾನಿಸಲಾಯಿತು. ದೇವೇಂದ್ರಪ್ಪ ಕಪನೂರು, ಛಾಯಾಚಿತ್ರಕಾರ ಆಯಾಜ್‌ ಇನ್ನೂಹಲವರು ಇದ್ದರು. ಬಳಿಕ ಜಿಲ್ಲಾಧಿಕಾರಿ ವೆಂಕಟೇಶಕುಮಾರ ಛಾಯಾಚಿತ್ರಗಳನ್ನು ವೀಕ್ಷಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next