Advertisement

ಅಂಬೇಡ್ಕರ್‌ ಭವನ ನಿರ್ಮಾಣ ಪ್ರಕ್ರಿಯೆಗೆ ವೇಗ ನೀಡುವಂತೆ ಸೂಚನೆ

07:25 AM Jul 31, 2017 | |

ಕಾರ್ಕಳ: ಪ. ಜಾತಿ. ಪ. ಪಂಗಡದ ಕುಂದು ಕೊರತೆ ಸಭೆ ಶನಿವಾರ ತಹಶೀಲ್ದಾರ್‌ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಅಂಬೇಡ್ಕರ್‌ ಭವನದ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬ, ಗ್ರಾಮಾಂತರ ಪ್ರದೇಶದ ವಿದ್ಯುತ್‌ ಸಮಸ್ಯೆ, ಗ್ರಾಮಾಂತರ ಪ್ರದೇಶದಲ್ಲಿ ಹಕ್ಕುಪತ್ರ ವಿತರಣೆಗೆ ಆಗುತ್ತಿರುವ ವಿಳಂಬ, ಎಪಿಎಂಸಿ ಅವ್ಯವಹಾರ, ಮೊದಲಾದವುಗಳ ಬಗ್ಗೆ ಪ್ರಸ್ತಾವವಾಯಿತು.

Advertisement

ಪ್ರತ್ಯೇಕ ಕುಂದು ಕೊರತೆ ಸಭೆ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್‌ ಟಿ. ಜಿ. ಗುರುಪ್ರಸಾದ್‌, ದಲಿತ ಏಳಿಗೆಗಾಗಿ ಇಂತಹ ಸಭೆಗಳನ್ನು ತಾಲೂಕಿನ ವಿವಿಧೆಡೆಗಳಲ್ಲಿ ಆಯೋಜಿಸುವ ಅಗತ್ಯ ಇದೆ. ಪುರಸಭಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಸಭೆಯನ್ನು ಕರೆಯುವ ಬಗ್ಗೆ ನಿರ್ಧರಿಸಲಾಗಿದೆ. ಸದ್ಯದಲ್ಲಿಯೇ ಸಭೆ ನಡೆಸಲಾಗುವುದು ಎಂದರು.

ದರ್ಪದ ಮಾತು
ಇದೇ ಸಂದರ್ಭದಲ್ಲಿ ಮಾತನಾಡಿದ ಪ. ಜಾತಿಯ ಮುಖಂಡರು ಮಾತನಾಡಿ, ಪುರಸಭೆಯ ಕೆಲ ಸಿಬಂದಿ ಕೆಲಸಕ್ಕೆ ಮನ ಬಂದಂತೆ ಬರುತ್ತಿದ್ದಾರೆ. ಕಚೇರಿಗೆ ಹೋದರೆ ದರ್ಪದ ಮಾತಾಡುತ್ತಾರೆ ಇಂಥವರನ್ನು ಕೆಲಸದಿಂದ ತೆಗೆದು ಹಾಕಬೇಕು ಎಂದರು.

ಅಂಬೇಡ್ಕರ್‌ ಭವನ ನಿರ್ಮಾಣ
ಅಂಬೇಡ್ಕರ್‌ ಭವನ ನಿರ್ಮಾಣದ ಕುರಿತು ಜಿಲ್ಲಾ  ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹಾಗೂ ಶಾಸಕ ಸುನಿಲ್‌ ಕುಮಾರ್‌ ಅವರಲ್ಲಿ ವಿಷಯ ಪ್ರಸ್ತಾವಿಸಲಾಗಿದ್ದು, ಗುದ್ದಲಿಪೂಜೆಗೆ ದಿನಾಂಕ ಕೇಳಲಾಗಿದೆ ಎಂದು ತಹಶೀಲ್ದಾರ್‌ ಗುರುಪ್ರಸಾದ್‌ ತಿಳಿಸಿದರು.

ತಾ.ಸ. ಆಸ್ಪತ್ರೆ ಹೊಸ ಕಟ್ಟಡ ಕಳಪೆ 
ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನಿರ್ಮಾಣವಾದ ಹೊಸ ಕಟ್ಟಡ ಕಳಪೆಯಾಗಿದೆ. ಮಳೆ ನೀರು ಸೋರಿಕೆಯಾಗಿ ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಜನಪ್ರತಿನಿಧಿ ಗಳಿಗೆ, ವಿವಿಧ ಇಲಾಖಾ ಧಿಕಾರಿಗಳಿಗೆ ದೂರು ಸಲ್ಲಿಸಿ ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ  ಎಂದು ಅಣ್ಣಪ್ಪ ನಕ್ರೆ ಆಕ್ರೋಶ ವ್ಯಕ್ತಪಡಿಸಿದರು.

Advertisement

ರಿಕ್ಷಾ ನಿಲ್ದಾಣಕ್ಕೆ ಸರ್ವೇ
ಪುರಸಭಾ ವ್ಯಾಪ್ತಿಯಲ್ಲಿ ಪ್ರತ್ಯೇಕ ರಿಕ್ಷಾ ನಿಲ್ದಾಣ ಬೇಕು ಎನ್ನುವ ಬೇಡಿಕೆ ಬಂದಿದೆ. ಈ ಕುರಿತು ಜಾಗದ ಸರ್ವೇ ನಡೆಸಲಾಗುವುದು ಆ ಬಳಿಕ ರಿಕ್ಷಾ ನಿಲ್ದಾಣ ನಿರ್ಮಾಣದ ಬಗ್ಗೆ ಪುರಸಭೆಗೆ ಮಾಹಿತಿ ನೀಡಲಾಗುವುದು ಎಂದು ತಹಶೀಲ್ದಾರ್‌ ಭರವಸೆ ನೀಡಿದರು.

ಅಂಬೇಡ್ಕರ್‌ಗೆ ಅಗೌರವ: ಆರೋಪ
ಅಂಬೇಡ್ಕರ್‌ ಅವರ ಹೆಸರಿನಲ್ಲಿ ಹಲವು ಭವನಗಳನ್ನು ನಿರ್ಮಿಸಿದ್ದರೂ ಅದರ ನಿರ್ವಹಣೆ ಆಗಿಲ್ಲ. ಇದು ಅಂಬೇಡ್ಕರ್‌ ಅವರಿಗೆ ತೋರಿದ ಅಗೌರವ, ಎಂದು ಮೈಸೂರು ವಿಭಾಗ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದದ ಸಂಘಟನಾ ಸಂಚಾಲಕ ಹೂವಪ್ಪ ಮಾಸ್ತರ್‌ ಆರೋಪಿಸಿದರು. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಅವ್ಯವಹಾರ: ಪ್ರಸ್ತಾವ
ಎಪಿಎಂಸಿಯಲ್ಲಿ  ಅವ್ಯವಹಾರ ನಡೆದಿದ್ದು ಇದರ ಬಗ್ಗೆ ಈ ಹಿಂದಿನ ಸಭೆಗಳಲ್ಲೂ ಪ್ರಸ್ತಾವಿಸಲಾಗಿದೆ. 2015ರ ಬಳಿಕದ ದಾಖಲೆಗಳನ್ನು ಮಾತ್ರ ಪರಿಶೀಲನೆ ನಡೆಸಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬ ವರದಿಯನ್ನು ಸಭೆಗೆ ನೀಡಲಾಗಿದೆ.  ಇದು ಸರಿ ಅಲ್ಲ.  2012, 2013, 2014ರ ಬಗ್ಗೆ ತನಿಖೆ ನಡೆದಾಗ ಮಾತ್ರ ಎಲ್ಲಾ ಅವ್ಯವಹಾರ ಬೆಳಕಿಗೆ ಬರಲು ಸಾಧ್ಯ ಎಂದು ಶ್ರೀನಿವಾಸ ಕಾರ್ಲ  ಆಗ್ರಹಿಸಿದರು.

ಸವಲತ್ತುಗಳು
ತಹಶೀಲ್ದಾರ್‌ ಮಾತನಾಡಿ, 94ಸಿ ಅಡಿಯಲ್ಲಿ ಬಂದಿರುವ ಅರ್ಜಿ ಒಟ್ಟು 1,165. ವಿಲೇವಾರಿಯಾಗಿರುವ ಅರ್ಜಿಗಳು 188 .ಇದರಲ್ಲಿ ಕಡತ ತಯಾರಿಗೆ 320 ಬಾಕಿ ಉಳಿದಿವೆ. 94ಸಿಸಿಯಲ್ಲಿ 462 ಅರ್ಜಿಗಳು ಬಂದಿರುತ್ತವೆೆ. ಅವುಗಳಲ್ಲಿ 128 ವಿಲೇವಾರಿಯಾಗಿವೆ. 264 ಕಡತ ಆಗಿದೆ. 30 ಬಾಕಿ ಉಳಿದಿದೆ. ನಮೂನೆ 50ರಲ್ಲಿ 1,253 ಅರ್ಜಿಗಳು ಬಂದಿವೆ. 638 ಮಂಜೂರಾತಿಯಾಗಿವೆ. 324 ಅರ್ಜಿಗಳು ಬಾಕಿ ಉಳಿದಿವೆ. ಕುಮ್ಕಿ ಜಮೀನು 53ರಲ್ಲಿ 1277 ಅರ್ಜಿಗಳು ಬಂದಿವೆ. 560 ಅರ್ಜಿಗಳು ಮಂಜೂರಾತಿ ಆಗಿವೆ ಎಂದರು.

ದೈವಸ್ಥಾನಗಳಿಗೆ ಅನುದಾನ
ಚಾರ ಶ್ರೀ ನಾಗಬ್ರಹ್ಮ ಹೈಗುಳಿ ದೈವಸ್ಥಾನ ರೂ. 2 ಲಕ್ಷ, ಹೆಬ್ರಿ ಶ್ರೀ ಮಾರಿ ಅಮ್ಮನವರ ದೇವಸ್ಥಾನ ರೂ. 2.00 ಲಕ್ಷ, ಮುಡಾರು ಶ್ರೀ ಮುಗೇರ ಮತ್ತು ಪಂಜುರ್ಲಿ ಹಲೇರ ದೈವಸ್ಥಾನ ರೂ. 2.00 ಲಕ್ಷ ಬಿಡುಗಡೆಗೊಂಡಿರುತ್ತದೆ ಎಂದು ತಹಶೀಲ್ದಾರ್‌ ಮಾಹಿತಿ ನೀಡಿದರು.

ಸಮರ್ಪಕ ವಿದ್ಯುತ್‌ ನೀಡಿ
ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸೋಲಾರ್‌ ದೀಪಗಳನ್ನು ಎಸ್‌ಸಿ, ಎಸ್‌ಟಿ ಮನೆಗಳಿಗೆ ನೀಡಬೇಕು ವಿದ್ಯುತ್‌ ಸರಿಯಾಗಿ ಇಲ್ಲದೇ ಎಲ್ಲ ಕೆಲಸಗಳಿಗೂ ತೊಂದರೆಯಾಗಿದೆ,ವಿದ್ಯಾರ್ಥಿಗಳ ಓದಿಗೆ ಹಿನ್ನಡೆಯಾಗಿದೆ ಎಂದು ಶ್ರೀಧರ್‌ ಗೌಡ ಒತ್ತಾಯಿಸಿದರು.ಸಭೆಯಲ್ಲಿ ತಹಶೀಲ್ದಾರ್‌ ಗುರುಪ್ರಸಾದ್‌, ವಿವಿಧ ಇಲಾಖಾ ಸಿಬಂದಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next