Advertisement

ಕಾನೂನುಬಾಹಿರ ಕೃತ್ಯಕ್ಕೆ ಮುಲಾಜಿಲ್ಲದೆ ಕ್ರಮ

01:00 AM Feb 24, 2019 | Team Udayavani |

ಉಡುಪಿ: ಕಾನೂನು ಬಾಹಿರ ಕೃತ್ಯ ಎಸಗುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಉಡುಪಿಯ ನೂತನ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಹೇಳಿದ್ದಾರೆ.

Advertisement

ಶನಿವಾರ ನಿರ್ಗಮನ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಅವರಿಂದ ಅಧಿಕಾರ ವಹಿಸಿಕೊಂಡ ಅನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಿಶಾ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಮುಖ್ಯ ಕರ್ತವ್ಯ. ಉಡುಪಿ ಅಭಿವೃದ್ಧಿಗೊಂಡ ಜಿಲ್ಲೆ. ಇಲ್ಲಿನ ಜನರು ಒಳ್ಳೆಯವರು ಎಂದು ತಿಳಿದುಕೊಂಡಿದ್ದೇನೆ. ರೌಡಿಸಂ, ಕೋಮು ಸಂಘರ್ಷ ಇತರ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಕಾನೂನನ್ನು ಪೂರ್ಣವಾಗಿ ಬಳಸುತ್ತೇನೆ. ಪ್ರಾಮಾಣಿಕತೆಯಿಂದ ನಿಷ್ಪಕ್ಷವಾಗಿ ಕೆಲಸ ಮಾಡುವೆ. ಅಧಿಕಾರಿ-ಸಿಬಂದಿ ಜತೆಗೂಡಿ ಕೆಲಸ ಮಾಡುತ್ತೇವೆ’ ಎಂದರು.

ಜನರ ಸಹಕಾರ ಬೇಕು: ಜನರಿಗೆ ಪೊಲೀಸ್‌ ಇಲಾಖೆಯ ಬಗ್ಗೆ ಭಯವಿದೆ. ಆದರೆ ಪೊಲೀಸರು ಸಮರ್ಥವಾಗಿ ಕಾರ್ಯನಿರ್ವಹಿಸಲು ಜನರ ಸಹಕಾರ ಅಗತ್ಯ. ಯಾವುದೇ ಘಟನೆಗಳಾದರೆ ಹೇಳಿಕೆ, ಸಾಕ್ಷ್ಯ ಮೊದಲಾದ ಸಂದರ್ಭ ಜನರ ಸಹಕಾರ ಬೇಕು ಎಂದು ನಿಶಾ ಜೇಮ್ಸ್‌ ತಿಳಿಸಿದರು.

ಮಹಿಳೆಯರಿಗಾಗಿಯೂ ಕೆಲಸ: ನಾನೋರ್ವ ಮಹಿಳೆ ಆಗಿರುವುದರಿಂದ ಮಹಿಳೆಯರಿಗಾಗಿಯೂ ಕೆಲಸ ಮಾಡುತ್ತೇನೆ. ಚಿತ್ರದುರ್ಗದಲ್ಲಿದ್ದ ಓಬವ್ವ ಪಡೆಯಿಂದ ಪ್ರೇರಣೆಗೊಂಡು ಸಾಗರದಲ್ಲಿ “ಕೆಳದಿ ಪಡೆ’ ಮಾಡಿದ್ದೆ ಉಡುಪಿಯಲ್ಲಿಯೂ ಇಂತಹುದೇ ಪಡೆಯ ಆವಶ್ಯಕತೆ ಇದ್ದರೆ ಮಾಡುತ್ತೇನೆ. ಈ ಹಿಂದಿನ ಎಸ್‌ಪಿಯವರು ಜಾರಿಗೆ ತಂದಿರುವ ಪೊಲೀಸ್‌ ಫೋನ್‌-ಇನ್‌ನಂತಹ ಉತ್ತಮ ಕೆಲಸಗಳನ್ನು ಮುಂದುವರಿಸುತ್ತೇನೆ ಎಂದರು.

ಶ್ರೇಯಸ್ಸು ತಂಡಕ್ಕೆ: ನಿಂಬರಗಿ: ನಿರ್ಗಮನ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಮಾತನಾಡಿ, ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದೇನೆ. ಇದರ ಶ್ರೇಯಸ್ಸು ಎಲ್ಲ ಅಧಿಕಾರಿ ಮತ್ತು ಸಿಬಂದಿಗೆ ಸಲ್ಲುತ್ತದೆ. ಇಲ್ಲಿ ಪಡೆದ ಅನುಭವ ಮುಂದಿನ ವೃತ್ತಿ ಜೀವನಕ್ಕೆ ತುಂಬ ಅನುಕೂಲವಾಗಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next