Advertisement

ಬಿಜೆಪಿ ವಿರುದ್ಧ 10 ಅಂಶಗಳ ಪಟ್ಟಿ ಬಿಡುಗಡೆ

12:00 PM Mar 13, 2018 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಕನ್ನಡಿಗ ಅಭ್ಯರ್ಥಿಗೆ ಆದ್ಯತೆ ನೀಡದೆ ಬೇರೆ ರಾಜ್ಯದವರಿಗೆ ಮಣೆ ಹಾಕಿರುವ ಸಂಬಂಧ, ಬಿಜೆಪಿ ಮಾಡಿರುವ ಅನ್ಯಾಯ ಕುರಿತು ಕಾಂಗ್ರೆಸ್‌ ಹತ್ತು ಅಂಶಗಳ ಪಟ್ಟಿ ಮಾಡಿದೆ. ನಮೋ ಎಂದರೆ ನಮಗೆ ಮೋಸ ಎಂಬ ಟ್ಯಾಗ್‌ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದೆ.

Advertisement

ರಾಜ್ಯಸಭೆಗೆ ನಿರಂತರವಾಗಿ ಕನ್ನಡೇತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ. ಇವರು ಕರ್ನಾಕಟದ ಹಿತಾಸಕ್ತಿಗೆ ನ್ಯಾಯ ಒದಗಿಸಿಕೊಡುವರೇ ? ಮಹದಾಯಿ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಮೌನ ವಹಿಸಿ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ. 

ಹಿಂದಿ, ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಬ್ಯಾಂಕಿಂಗ್‌ ಪರೀಕ್ಷೆ ಬರೆಯಲು ಅವಕಾಶ ನೀಡಿ, ಕನ್ನಡಿಗರು ಉದ್ಯೋಗ ವಂಚಿತರಾಗುವಂತೆ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟಿಯವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಬೆಂಗಳೂರಿನ ಹೊರ ವಲಯದ ತರಳು ಗ್ರಾಮದಲ್ಲಿರುವ ಸಿಆರ್‌ಪಿಎಫ್ ಕಚೇರಿಯನ್ನು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ತವರು ರಾಜ್ಯಕ್ಕೆ ಸ್ಥಳಾಂತರಿಸಲಾಗಿದೆ. 

45 ವರ್ಷಗಳಿಂದ ನಿರಂತರ ಬರಕ್ಕೆ ತುತ್ತಾಗುತ್ತಿರುವ ರಾಜ್ಯಕ್ಕೆ 2017 ರಲ್ಲಿ 1435 ಕೋಟಿ ರೂ. ಪರಿಹಾರ ನೀಡಿ, ಬಿಜೆಪಿ ಆಳ್ವಿಕೆಯ ಮಹಾರಾಷ್ಟ್ರಕ್ಕೆ 8,195 ಕೋಟಿ, ಗುಜರಾತ್‌ 3894 ಕೋಟಿ ಹಾಗೂ ರಾಜಸ್ತಾನಕ್ಕೆ 2153 ಕೋಟಿ ಬಿಡುಗಡೆ ಮಾಡಲಾಗಿದೆ. ಸಂಕಷ್ಟದಲ್ಲಿರುವ ರಾಜ್ಯದ ರೈತರ ಸಾಲ ಮನ್ನಾ ಮಾಡದೇ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ.

ಕನ್ನಡದ ಕಂಪು ಸೂಸುವ ನಾಡ ಧ್ವಜಕ್ಕೆ ರಾಜ್ಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿ ಕನ್ನಡ ವಿರೋಧಿ ಧೋರಣೆ ಅನುಸರಿಸಿದ್ದಾರೆ. ಭಾರತದ ವೈಮಾನಿಕ ಕ್ಷೇತ್ರಕ್ಕೆ 70 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಎಚ್‌ಎಎಲ್‌ಗೆ ವೈಮಾನಿಕ ಗುತ್ತಿಗೆ ನೀಡದೇ ಅನಿಲ್‌ ಅಂಬಾನಿ ಸಂಸ್ಥೆಗೆ ನೀಡಿ, ಕನ್ನಡಿಗರಿಗೆ ಉದ್ಯೋಗ ವಂಚಿತರನ್ನಾಗಿ ಮಾಡಲಾಗಿದೆ.

Advertisement

ಅಲ್ಲದೇ ಬಲವಂತವಾಗಿ ಮೆಟ್ರೋ ರೈಲಿನಲ್ಲಿ ಹಿಂದಿ ಹೇರಿಕೆ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಹಾಗೂ ಸಂಸದರು ಸರ್ವ ಪಕ್ಷ ಸಭೆಗೆ ಹಾಜರಾಗದೇ ನಾಡು-ನುಡಿ ಸಂರಕ್ಷಣೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪ ಪಟ್ಟಿ ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next