Advertisement

ಥೈಲಂಡ್‌ ದೇಶದ ಕತೆ: ಮಾತನಾಡುವ ಗಿಣಿ

12:30 AM Jan 27, 2019 | |

ಸುನನ್‌ ಎಂಬ ರೈತ ಹೊಲ ಉಳಲು ಕೋಣಗಳ ಖರೀದಿಗೆ  ಸಂತೆಗೆ ಹೋಗಿದ್ದ. ಅಲ್ಲಿ ಒಬ್ಬನು ನಾನಾ ಜಾತಿಯ ಪಕ್ಷಿಗಳನ್ನು ಪಂಜರದಲ್ಲಿರಿಸಿ ಮಾರಾಟ ಮಾಡುತ್ತ ಇದ್ದ. ಸುನನ್‌ ಕುತೂಹಲದಿಂದ ಅವುಗಳನ್ನು ನೋಡುತ್ತ ನಿಂತುಕೊಂಡ. ಒಂದು ಗಿಣಿ ಅವನ ಗಮನ ಸೆಳೆಯಿತು. ಅದು ಮನುಷ್ಯರ ಹಾಗೆ ಬಹು ಚಂದವಾಗಿ ಮಾತನಾಡುತ್ತಿತ್ತು. ಅದನ್ನು ಕೇಳಿದವರೆಲ್ಲರೂ ಗಿಣಿಯ ಬೆಲೆ ವಿಚಾರಿಸುತ್ತಿದ್ದರು. ಆದರೆ, ಮಾತು ಬರುವ ಗಿಣಿಯಾದ ಕಾರಣ ಮಾರಾಟಗಾರ ಹೇಳುವ ದುಬಾರಿ ಬೆಲೆ ತೆರಲಾಗದೆ ಹೊರಟುಹೋಗುತ್ತಿದ್ದರು.

Advertisement

ಸುನನ್‌ ಕೂಡ ಗಿಣಿಯ ಬೆಲೆ ವಿಚಾರಿಸಿದ. “”ಜೋಡಿ ಕೋಣಗಳಿಗೆ ಎಷ್ಟು ಬೆಲೆಯಾಗುವುದೋ ಅಷ್ಟು ಹಣ ಕೊಡಿ” ಎಂದು ಮಾರಾಟಗಾರ ಹೇಳಿದ. ಗಿಣಿಗೆ ಮನಸೋತಿದ್ದ ಸುನನ್‌ ತನ್ನಲ್ಲಿರುವ ಹಣವನ್ನೆಲ್ಲ ಕೊಟ್ಟು ಗಿಣಿಯನ್ನು ಕೊಳ್ಳಲು ಮುಂದಾದ. ಆಗ ಅವನ ಮನೆಯ ಪಕ್ಕದ ಗೆಳೆಯ ಅವನನ್ನು ಕಂಡು ಬಳಿಗೆ ಬಂದ. “”ನಿನಗೇನು ಹುಚ್ಚು ಹಿಡಿದಿಲ್ಲವಷ್ಟೆ? ಒಂದು ಗಿಣಿಗೆ ಜೋಡಿ ಕೋಣಗಳ ಬೆಲೆ ಸುರಿದು ಖರೀದಿ ಮಾಡುತ್ತಿರುವೆಯಲ್ಲ, ಇದರಿಂದ ಏನು ಲಾಭ ಸಿಗುತ್ತದೆಂದು ಲೆಕ್ಕ ಹಾಕಿರುವೆ ಹೇಳು? ಗಿಣಿಯಿಂದ ಹೊಲ ಉಳಲು ಸಾಧ್ಯವಿಲ್ಲ. ವ್ಯವಸಾಯ ಮಾಡದಿದ್ದರೆ ಜೀವನ ನಡೆಸಲು ಕಷ್ಟವಾಗಬಹುದು” ಎಂದು ಆಕ್ಷೇಪಿಸಿದ.

ಆದರೂ ಸುನನ್‌ ತನ್ನ ನಿರ್ಧಾರದಿಂದ ಹಿಂದೆಗೆಯಲಿಲ್ಲ. “”ಸುಮ್ಮನಿರೋ. ಈ ಗಿಣಿಯ ಮೌಲ್ಯ ಎಷ್ಟು ಕೊಟ್ಟರೂ ಕಡಮೆಯೇ. ಮಾತನಾಡುವ ಗಿಣಿ ಇದೆಯೆಂಬುದು ಆಳುವ ರಾಜನಿಗೆ ತಿಳಿದರೆ ಸಾಕು, ಹುಡುಕಿಕೊಂಡು ಬರುತ್ತಾನೆ. ಎಷ್ಟು ಬೆಲೆ ಹೇಳಿದರೂ ಮರು ಮಾತಾಡದೆ ಕೊಟ್ಟು ಖರೀದಿ ಮಾಡುತ್ತಾನೆ. ಆ ಹಣದಿಂದ ಕೋಣಗಳನ್ನು ಕೊಳ್ಳಬಹುದು, ಒಳ್ಳೆಯ ಮನೆ ಕಟ್ಟಿಸಬಹುದು, ಮೈತುಂಬ ಒಡವೆ ಧರಿಸಬಹುದು. ಕೋಣ ಕೊಂಡುಹೋಗಿ ಹೊಲ ಉತ್ತು ಶ್ರಮಪಟ್ಟರೆ ಸಿಗುವ ಪ್ರತಿಫ‌ಲ ವರ್ಷವಿಡೀ ಊಟ ಮಾಡಲೂ ಸಾಲುವುದಿಲ್ಲ” ಎಂದು ಹೇಳಿ ಗೆಳೆಯನ ಬಾಯಿ ಮುಚ್ಚಿಸಿದ.

ತನ್ನಲ್ಲಿರುವ ಹಣದಿಂದ ಮಾತನಾಡುವ ಗಿಣಿಯನ್ನು ಸುನನ್‌ ಕೊಂಡುಕೊಂಡ. ಪಂಜರದೊಂದಿಗೆ ಮನೆಗೆ ಬಂದ. ಹೆಂಡತಿಗೆ ಗಿಣಿಯನ್ನು ತೋರಿಸಿದ. ಅದರ ಮಾತುಗಳನ್ನು ಕೇಳಿ ಅವಳು ಖುಷಿಪಡಬಹುದೆಂದು ಅವನು ಭಾವಿಸಿದ್ದರೆ ಅವಳಿಗೆ ಸಿಟ್ಟು ಬಂದಿತು. “”ಸುಮ್ಮನೆ ಇದರಿಂದ ಶ್ರೀಮಂತನಾಗುವೆನೆಂಬ ಕನಸು ಕಾಣಬೇಡ. ಇದೇ ಗಿಣಿಯಿಂದ ಅಪಾಯವೂ ಬರಬಹುದು. ಹೋಗಲಿ, ಒಳಗೆ ಕಾಳುಕಡಿಗಳೆಲ್ಲ ಖಾಲಿಯಾಗಿವೆ. ಸಂತೆಯಿಂದ ಬರುವಾಗ ನೀನು ಜಿನಸಿಗಳನ್ನು ತಂದಿಲ್ಲ. ರಾತ್ರೆ ಉಪವಾಸವಿರಲು ನನ್ನಿಂದಾಗುವುದಿಲ್ಲ. ಆಹಾರಕ್ಕೆ ಏನಾದರೂ ವ್ಯವಸ್ಥೆ ಮಾಡು” ಎಂದು ಹೇಳಿದಳು.

ಸುನನ್‌ ಕೈಯಲ್ಲಿ ಸ್ವಲ್ಪವೂ ಹಣವಿರಲಿಲ್ಲ. ರಾತ್ರೆಯ ಊಟಕ್ಕೆ ಏನು ಮಾಡಲಿ ಎಂದು ಯೋಚಿಸಿದ. ಆಗ ತನ್ನ ಹಿತ್ತಲಿನಲ್ಲಿ ಮೇಯುತ್ತಿದ್ದ ಒಂದು ಎಮ್ಮೆಯನ್ನು ನೋಡಿದ. ಅದು ಅದೇ ಊರಿನ ಕ್ಲನನ್‌ ಎಂಬ ಹಾಲಿನ ವ್ಯಾಪಾರಿಗೆ ಸೇರಿತ್ತು. ಸುನನ್‌ ಬೇರೆ ಏನೂ ಯೋಚಿಸಲಿಲ್ಲ. ಮೆಲ್ಲಗೆ ಹೋಗಿ ಎಮ್ಮೆಯನ್ನು ಹಿಡಿದುಕೊಂಡ. ಮನೆಯೊಳಗೆ ತಂದು ಕತ್ತರಿಸಿದ. ಅಂದಿನ ರಾತ್ರೆಗೆ ಬೇಕಾದಷ್ಟು ಮಾಂಸವನ್ನು ಉಪಯೋಗಿಸಿದ. ಉಳಿದ ಮಾಂಸ, ಚರ್ಮ ಎಲ್ಲವನ್ನು ಅಲ್ಲಿಯೇ ಮುಚ್ಚಿಟ.

Advertisement

ಬೆಳಗಾಯಿತು. ಮಾತನಾಡುವ ಗಿಣಿ, “”ನಾನು ಹೊರಗೊಮ್ಮೆ ಹೋಗಿ ಈ ಊರಿನ ಜನರೆಲ್ಲ ಹೇಗಿದ್ದಾರೆಂದು ಮಾತನಾಡಿಸಿ ಬರುತ್ತೇನೆ” ಎಂದು ಹಾರಿಹೋಯಿತು. ಸ್ವಲ್ಪ ಹೊತ್ತು ಕಳೆದಾಗ ವ್ಯಾಪಾರಿ ಕ್ಲನನ್‌ ಭುಸುಗುಡುತ್ತ ಸುನನ್‌ ಮನೆಗೆ ಬಂದ. “”ನಿನ್ನೆ ರಾತ್ರೆ ನೀನು ನನ್ನ ಎಮ್ಮೆಯನ್ನು ಕತ್ತರಿಸಿ ಮಾಂಸವನ್ನು ಭಕ್ಷಿಸಿದೆಯಂತೆ. ನಿನಗೆ ಗೊತ್ತಿದೆ ತಾನೆ, ಬೇರೊಬ್ಬರ ವಸ್ತುಗಳನ್ನು ಅಪಹರಿಸಿದವರಿಗೆ ದೇಶದ ಪ್ರಭುಗಳು ಮರಣದಂಡನೆ ವಿಧಿಸುತ್ತಾರೆ. ನೀನೀಗ ನನ್ನ ಎಮ್ಮೆ ಬೆಲೆಯನ್ನು ಕೊಡುವುದಾದರೆ ದೂರು ಕೊಡಲು ಹೋಗುವುದಿಲ್ಲ. ಬೇಗ ಕೊಟ್ಟುಬಿಡು” ಎಂದು ಕೈಚಾಚಿ ನಿಂತ.

ಸುನನ್‌ ತನಗೇನೂ ತಿಳಿಯದೆಂದೇ ಹೇಳಿದ. “”ನಿನ್ನ ಎಮ್ಮೆಯನ್ನು ನಾನು ಕಣ್ಣಿನಲ್ಲಿಯೂ ನೋಡಿಲ್ಲ. ತುಂಬ ಅಮಾಯಕನಾದ ನನ್ನ ಮೇಲೆ ನಿನಗೆ ಇಂತಹ ಸುಳ್ಳು ದೂರು ಹೇಳಿದವರಾದರೂ ಯಾರು?” ಎಂದು ಕೇಳಿದ.

“”ದೂರು ಹೇಳಿದವರು ಹೊರಗಿನವರು ಯಾರೂ ಅಲ್ಲ. ನಿನ್ನೆ ಒಂದು ಪಂಜರದಲ್ಲಿ ಗಿಣಿಯೊಂದನ್ನಿರಿಸಿಕೊಂಡು ಬಂದೆಯಲ್ಲವೆ? ಮಾತನಾಡುವ ಗಿಣಿ, ಇಂತಹ ಗಿಣಿ ಬೇರೆ ಯಾರ ಬಳಿಯೂ ಇಲ್ಲ ಎಂದು ಜಂಭ ಬೇರೆ ಕೊಚ್ಚಿಕೊಳ್ಳುತ್ತ ಇದ್ದೆ. ಅದೇ ಗಿಣಿ ಹಾರುತ್ತ ನನ್ನ ಮನೆಗೆ ಬಂತು. ನೀನು ಮಾಡಿದ ಕಳ್ಳತನವನ್ನು ನನಗೆ ಹೇಳಿಹೋಯಿತು” ಎಂದ ಕ್ಲನನ್‌.

ಅಷ್ಟು ಹಣ ಕೊಟ್ಟು ತಂದ ಗಿಣಿ ಪ್ರಾಣಾಪಾಯ ತಂದಿರುವುದು ಕಂಡು ಸುನನ್‌ ಭಯಗೊಂಡರೂ ತನಗೆ ಎಮ್ಮೆಯ ವಿಚಾರ ತಿಳಿಯದೆಂದೇ ವಾದಿಸಿದ. ಕ್ಲನನ್‌ ಅವನ ಮನೆಯಲ್ಲಿಡೀ ಹುಡುಕಿ ಮುಚ್ಚಿಟ್ಟ ಎಮ್ಮೆ ಮಾಂಸವನ್ನು ಕಂಡುಹಿಡಿದ. “”ಅದು ನಿನ್ನ ಎಮ್ಮೆಯ ಮಾಂಸವಲ್ಲ. ನನ್ನ ಮನೆಯಲ್ಲೊಂದು ಮುದಿ ಕೋಣವಿತ್ತಲ್ಲ, ಅದರಿಂದ ಏನೂ ಉಪಯೋಗವಿಲ್ಲವೆಂದು ಕೊಂದುಬಿಟ್ಟೆ” ಎಂದು ಸುನನ್‌ ಸುಳ್ಳನ್ನು ಮುಚ್ಚಿಡಲು ಪ್ರಯತ್ನಿಸಿದ. ಆದರೂ ಕ್ಲನನ್‌ ಅವನ ಮಾತನ್ನು ಒಂದಿಷ್ಟೂ ನಂಬಲಿಲ್ಲ. ನೇರವಾಗಿ ರಾಜನ ಬಳಿಗೆ ಹೋಗಿ ಸುನನ್‌ ಮೇಲೆ ದೂರು ಸಲ್ಲಿಸಿದ. ಸುನನ್‌ ತನ್ನ ಸಭೆಗೆ ಬರುವಂತೆ ರಾಜನಿಂದ ಕರೆ ಬಂತು.

ಸುನನ್‌ ರಾಜನ ಬಳಿಗೆ ಹೋದ. “”ಕ್ಲನನ್‌ಗೆ ಸೇರಿದ ಎಮ್ಮೆಯನ್ನು ಕೊಂದಿರುವೆ ಎಂದು ನೀನು ಸಾಕಿದ ಗಿಣಿ ಅವನಿಗೆ ಹೇಳಿದೆಯಂತೆ. ಇದು ನಿಜವೆ?” ಎಂದು ಕೇಳಿದ. ಸುನನ್‌ ಜೋರಾಗಿ ನಕ್ಕುಬಿಟ್ಟ. “”ಗಿಣಿಯೊಂದು ಚೆನ್ನಾಗಿ ಮಾತನಾಡುತ್ತಿದೆ ಎಂಬುದು ನಿಜವಾದರೂ  ಸತ್ಯವನ್ನೇ ಹೇಳುತ್ತಿದೆ ಎಂಬುದರಲ್ಲಿ ಪ್ರಭುಗಳಿಗೆ ವಿಶ್ವಾಸವಿದೆಯೆ? ಅದು ತಲೆ ಕೆಟ್ಟವರಂತೆ ಸುಳ್ಳನ್ನೇ ಹೇಳುತ್ತದೆ. ತಾವು ವೃಥಾ ನನ್ನನ್ನು ತಪ್ಪಿತಸ್ಥನೆಂದು ಭಾವಿಸಕೂಡದು” ಎಂದು ಹೇಳಿದ.

“”ಸತ್ಯವೋ ಅಸತ್ಯವೋ ನೋಡಿದ ಮೇಲೆ ಗೊತ್ತಾಗುತ್ತದೆ. ನಾಳೆ ನಿನ್ನ ಗಿಣಿಯನ್ನು ನನ್ನ ಬಳಿಗೆ ತೆಗೆದುಕೊಂಡು ಬಾ. ನಾನು ಅದನ್ನು ಮಾತನಾಡಿಸಿ ನಿಜವನ್ನು ಅರಿತುಕೊಳ್ಳುತ್ತೇನೆ” ಎಂದು ರಾಜನು ಆಜಾnಪಿಸಿದ.

ಗಿಣಿಯನ್ನು ರಾಜನ ಬಳಿಗೆ ತೆಗೆದುಕೊಂಡು ಹೋದರೆ ಅದು ನಿಜವೇ ಹೇಳುತ್ತದೆ, ತನಗೆ ಮರಣದಂಡನೆಯಾಗುತ್ತದೆಂದು ಸುನನ್‌ ಕಂಗಾಲಾದ. ತನ್ನ ಗೆಳೆಯನ ಬಳಿಗೆ ಹೋಗಿ ನಡೆದ ವಿಷಯವನ್ನು ಹೇಳಿದ. “”ಗಿಣಿಯನ್ನು ಕೊಳ್ಳುವುದು ಬೇಡ ಎಂದು ನೀನು ಎಷ್ಟು ಹೇಳಿದರೂ ನಾನು ಕೇಳಲಿಲ್ಲ. ರಾಜನಿಂದ ದೊಡ್ಡ ಸಂಪತ್ತು ಬರಬಹುದೆಂದು ಕನಸು ಕಂಡು ಹಾಳಾಗಿ ಹೋದೆ. ಈಗ ಗಿಣಿ ನನ್ನ ಕುತ್ತಿಗೆಯ ತನಕ ಕತ್ತಿ ತಂದಿಟ್ಟಿದೆ. ಇದರಿಂದ ಪಾರಾಗಲು ಏನಾದರೂ ದಾರಿ ಇದ್ದರೆ ಹೇಳಿಬಿಡು” ಎಂದು ಕೇಳಿದ.

ಗೆಳೆಯ, “”ಈಗಲಾದರೂ ನಿನಗೆ ಬುದ್ಧಿ ಬಂದಿತು ತಾನೆ? ಚಿಂತಿಸಬೇಡ, ಒಂದು ಉಪಾಯ ಮಾಡು” ಎಂದು ಹೇಳಿ ಮಾಡಬೇಕಾದ ವಿಷಯವನ್ನು ತಿಳಿಸಿದ. ಸುನನ್‌ ಒಂದು ಮಡಕೆಯಲ್ಲಿ ಸೆಗಣಿಯನ್ನು ಕರಗಿಸಿದ ನೀರನ್ನು ತುಂಬಿಸಿದ. ಮೇಲಿನಿಂದ ಪಟಾಕಿಗಳನ್ನು ಜೋಡಿಸಿದ. ಮಡಕೆಯನ್ನು ಗಿಣಿಯ ಪಂಜರದ ಮೇಲಿನಿಂದ ಕಟ್ಟಿದ. ಮಧ್ಯರಾತ್ರೆಯ ವೇಳೆ ಪಟಾಕಿಗಳಿಗೆ ಬೆಂಕಿ ಹಚ್ಚಿದ. ಆಗ ಬರುವ ಸದ್ದಿಗೆ ಹೆಂಡತಿಯನ್ನು ಕೂಗಿ, “”ಗುಡುಗು ಸಿಡಿಲು ಬರುತ್ತಿದೆ. ಮಳೆ ಬರುವ ಹಾಗೆ ಕಾಣುತ್ತಿದೆ’ ಎಂದು ಕೂಗಿದ. ಆಗ ಮಡಕೆ ಒಡೆದು ಅದರಲ್ಲಿರುವ ಸೆಗಣಿ ನೀರು ಗಿಣಿಯ ಮೈಮೇಲೆ ಬಿದ್ದಿತು. ರೈತನ ಹೆಂಡತಿ, “”ಹೌದಲ್ಲವೆ, ಸೆಗಣಿನೀರಿನ ಮಳೆ ಬಂದಿದೆ!” ಎಂದಳು.

ಮರುದಿನ ಗಿಣಿಯೊಂದಿಗೆ ಸುನನ್‌ ರಾಜನ ಬಳಿಗೆ ಹೋದ. ಗಿಣಿ ರಾಜನೊಂದಿಗೆ, “”ಪ್ರಭುಗಳೇ, ನಿನ್ನೆ ರಾತ್ರೆ ಭಾರೀ ಗುಡುಗು, ಸಿಡಿಲು! ಜೊತೆಗೆ ಸೆಗಣಿನೀರಿನ ಮಳೆಯೂ ಬಂದಿತ್ತಲ್ಲವೆ?” ಎಂದು ಕೇಳಿತು. ಈ ಮಾತು ಕೇಳಿ ರಾಜನು ಹುಬ್ಬೇರಿಸಿದ. “”ನಿನ್ನೆ ರಾತ್ರೆ ಗುಡುಗೂ ಇರಲಿಲ್ಲ, ಸಿಡಿಲೂ ಇರಲಿಲ್ಲ. ಅದಲ್ಲದೆ ಸೆಗಣಿನೀರಿನ ಮಳೆ ಬರುವುದುಂಟೆ? ಈ ಮೂರ್ಖ ಗಿಳಿ ಏನೇನೋ ಸುಳ್ಳು ಹೇಳುತ್ತಿದೆ. ರೈತ ಸುನನ್‌ ಎಮ್ಮೆ ಕೊಂದಿರುವುದಾಗಿ ಅದು ಹೇಳಿರುವುದು ಕೂಡ ಸತ್ಯವಲ್ಲ” ಎಂದು ಹೇಳಿ ಸುನನ್‌ ಮೇಲಿನ ದೂರನ್ನು ಖುಲಾಸೆಗೊಳಿಸಿದ.

ಸುನನ್‌ ಗಿಣಿಯನ್ನು ಮನೆಗೆ ತಂದ. “”ಇನ್ನು ನಿನ್ನ ಮಾತಿನಿಂದ ಯಾರಿಗೂ ಅಪಾಯ ಬರಬಾರದು. ನೀನು ಸರಿಯಾಗಿ ಮಾತನಾಡಬಾರದು” ಎಂದು ಹೇಳಿ ಒಂದು ಉಂಗುರವನ್ನು ಅದರ ಗಂಟಲಿನಲ್ಲಿ ತುರುಕಿ ಹೊರಗೆ ಹಾರಲು ಬಿಟ್ಟ. ಅಂದಿನಿಂದ ಗಿಣಿಗಳಿಗೆ ಸರಿಯಾದ ಮಾತು ಬಾರದಂತಾಯಿತು. ಸುನನ್‌ ಜೀವ ಉಳಿಸಿದ ಗೆಳೆಯನಿಗೆ ಕೃತಜ್ಞತೆ ಸಲ್ಲಿಸಿದ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next