Advertisement

ಶಿಕ್ಷಕರಿಗೂ ಪರೀಕ್ಷೆ; ಫೇಲಾದ್ರೆ ಗೇಟ್‌ಪಾಸ್‌?

02:19 PM Oct 16, 2018 | Team Udayavani |

ಬೆಂಗಳೂರು: “ಬಿಬಿಎಂಪಿ ರೋಷಿಣಿ’ ವಿದ್ಯಾರ್ಥಿಗಳ ಕಲಿಕಾ ಸಾಮಥ್ಯಊ ಹೆಚ್ಚಿಸುವುದರ ಜತೆಗೆ ಶಿಕ್ಷಕರ ಮುಂದೊಂದು ಅಗ್ನಿ ಪರೀಕ್ಷೆ ಇಟ್ಟಿದೆ. ಇದರಲ್ಲಿ ಅನುತ್ತೀರ್ಣರಾದವರಿಗೆ ಗೇಟ್‌ಪಾಸ್‌ ಗ್ಯಾರಂಟಿ! ಬಿಬಿಎಂಪಿ ಒಡೆತನದ ಶಾಲಾ-ಕಾಲೇಜುಗಳನ್ನು ದತ್ತು ಪಡೆದು ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಗೊಳಿಸಲು ಪಾಲಿಕೆಯ ಸಹಯೋಗದಲ್ಲಿ ಮೈಕ್ರೋಸಾಫ್ಟ್ ಹಾಗೂ ಟೆಕ್‌ ಅನಂತ್‌ ಗಾರ್ಡ್‌ ಸಂಸ್ಥೆಗಳು ಯೋಜನೆ ರೂಪಿಸಿವೆ. ಅದರಂತೆ ಯೋಜನೆ ಜಾರಿಗೆ ಈಗಾಗಲೇ ಪಾಲಿಕೆ ಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸಂಸ್ಥೆಗಳು, ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿವೆ.

Advertisement

ಬಿಬಿಎಂಪಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದರ ಜತೆಗೆ, ಅಲ್ಲಿನ ವಿದ್ಯಾರ್ಥಿಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಅವರಿಗೂ ಅರ್ಹತಾ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ. 

ಅದರಂತೆ ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಮೈಕ್ರೋಸಾಫ್ಟ್ ಹಾಗೂ ಟೆಕ್‌ ಅನಂತ್‌ ಗಾರ್ಡ್‌ ಸಂಸ್ಥೆಗಳು 21ನೇ ಶತಮಾನದ ಕಲಿಕಾ  ಲಭ್ಯಗಳು, ಸ್ಯಾಟಲೈಟ್‌ ಹಾಗೂ ಡಿಜಿಟಲ್‌ ಶಿಕ್ಷಣ ಮತ್ತು ಬೋಧನಾ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ನಡೆಸುತ್ತವೆ. ಅದಾದ ಬಳಿಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ.

ಅರ್ಹತಾ ಪರೀಕ್ಷೆ ಅನಿವಾರ್ಯ: ಶಿಕ್ಷಕರನ್ನು ಕೆಲಸದಿಂದ ತೆಗೆಯುವ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ವಿಭಾಗದ ಅಧಿಕಾರಿಯೊಬ್ಬರು, ಪಾಲಿಕೆಯ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗಿಲ್ಲ ಎಂಬ ಕಾರಣದಿಂದಲೇ ಪೋಷಕರು ಮಕ್ಕಳನ್ನು ಬಿಬಿಎಂಪಿ ಶಾಲೆಗಳಿಗೆ ಸೇರಿಸುವುದಿಲ್ಲ. ಇನ್ನು ಶಾಲೆಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದಾಗ ಆಂಗ್ಲ ಭಾಷೆಯ ಶಿಕ್ಷಕರಿಗೆ ಆಂಗ್ಲ ವ್ಯಾಕರಣವೇ ಸರಿಯಾಗಿ ಗೊತ್ತಿಲ್ಲದಿರುವುದು, ಗಣಿತ ಶಿಕ್ಷರಿಗೆ ಲೆಕ್ಕವೇ ಬಾರದಿರುವುದು ಕಂಡುಬಂದಿದೆ. ಇನ್ನು ಪಾಲಿಕೆಯ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಉತ್ತಮ ಶಿಕ್ಷಕರು ಇರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ ಎಂದು ಮಾಹಿತಿ ನೀಡಿದರು.

ಡಿಸೆಂಬರ್‌ ವೇಳೆಗೆ 6 ಮಾದರಿ ಶಾಲೆಗಳು ಪಾಲಿಕೆಯ ಶಾಲೆಗಳನ್ನು ದತ್ತು ಪಡೆದಿರುವ ಸಂಸ್ಥೆಗಳು ಡಿಸೆಂಬರ್‌ ವೇಳೆಗೆ ಪಾಲಿಕೆಯ ಆರು ಶಾಲಾ-ಕಾಲೇಜುಗಳಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಿವೆ. ಅದರಂತೆ ವರ್ಷಾಂತ್ಯದೊ ವೇಳೆಗೆ ಆರು ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪು ಗೊಳಿಸುವ ಮೂಲಕ ವಿದ್ಯಾರ್ಥಿಗಳನ್ನು ಪಾಲಿಕೆಯ ಶಾಲೆಗಳ ಕಡೆಗೆ ಆಕರ್ಷಿಸುವುದು ಬಿಬಿಎಂಪಿ ರೋಷಿಣಿ ಯೋಜನೆಯ ಉದ್ದೇಶವಾಗಿದೆ. 

Advertisement

ಏನಿದು ಬಿಬಿಎಂಪಿ ರೋಷಿಣಿ ಯೋಜನೆ?
ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವ ರೀತಿಯಲ್ಲೇ ಪಾಲಿಕೆ ಶಾಲೆ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಪ್ರಮುಖ ಉದ್ದೇಶದಿಂದ “ಬಿಬಿಎಂಪಿ ರೋಷಿಣಿ’ ಯೋಜನೆ ಜಾರಿಗೆ ತರಲಾಗಿದೆ. ಮಕ್ಕಳು ಶಿಕ್ಷಣದ ಜತೆ ಜತೆಗೆ ಸಾಂಸ್ಕೃತಿಕ, ಕ್ರೀಡೆ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಕಂಪ್ಯೂಟರ್‌ ಹೀಗೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಕೂಡ ಯೋಜನೆಯ ಭಾಗವಾಗಿದೆ. ಆ ನಿಟ್ಟಿನಲ್ಲಿ ದತ್ತು ಪಡೆದ ಸಂಸ್ಥೆಗಳು ಪಾಲಿಕೆಯ ಶಾಲಾ-ಕಾಲೇಜುಗಳ ಚಿತ್ರಣವನ್ನು ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಬದಲಿಸಲಿವೆ.

“ಮಾದರಿ’ ಆಗಲಿರುವ „ ಶಾಲಾ-ಕಾಲೇಜುಗಳು
„ ಅಸ್ಟಿನ್‌ಟೌನ್‌ ಬಾಲಕಿಯರ ಪ್ರೌಢಶಾಲೆ 
„ ಗಾಂಧಿನಗರ ಪ್ರೌಢಶಾಲೆ
„ ಜಯನಗರ 1ನೇ ಬ್ಲಾಕ್‌ ಪ್ರೌಢಶಾಲೆ
„ ಮೂಡಲಪಾಳ್ಯ ಪ್ರೌಢಶಾಲೆ
„ ಕ್ಲೀವ್‌ಲ್ಯಾಂಡ್‌ಟೌನ್‌, ಪ್ರೌಢಶಾಲೆ ಹಾಗೂ ಕಾಲೇಜು
„ ಭೈರಸಂದ್ರ ಪ್ರೌಢಶಾಲೆ ಹಾಗೂ ಕಾಲೇಜು

ಯೋಜನೆ ಅನುಕೂಲವೇನು?
„ ಶಿಕ್ಷಕರಲ್ಲಿ 21ನೇ ಶತಮಾನ ಶಿಕ್ಷಣ ಶೈಲಿಯನ್ನು ರೂಪಿಸಬಹುದು
„ ವಿದ್ಯಾರ್ಥಿಗಳಿಗೆ ಡಿಜಿಟಲ್‌ ವಿಷಯಗಳ ಕುರಿತು ತಿಳಿಯುತ್ತದೆ
„ ಸ್ಯಾಟಲೈಟ್‌ ಹಾಗೂ ಆನ್‌ಲೈ ಶಿಕ್ಷಣ
„ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೌಲ್ಯಮಾಪನ
„ ಶಿಕ್ಷಣ ಗುಣಮಟ್ಟ ಹೆಚ್ಚಾಗಲು ರ್‍ಯಾಂಕಿಂಗ್‌ ವ್ಯವಸ್ಥೆ ಅನುಕೂಲ

ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next