Advertisement

ಟೇಶಿ ಮತ್ತು ಬೆಸ್ಟ್‌ ಫ್ರೆಂಡ್ಸ್‌

01:14 PM Jan 19, 2018 | |

ಐದು ವರ್ಷಗಳ ಹಿಂದೆ “ಒಲವಿನ ಓಲೆ’ ಎಂಬ ಸಿನಿಮಾ ಮಾಡಿದ್ದರು ನಿರ್ದೇಶಕ ಟೇಶಿ. ಆ ನಂತರ ಈಗ ಮತ್ತೂಂದು ಸಿನಿಮಾ ಮೂಲಕ ಅವರು ವಾಪಸ್ಸಾಗಿದ್ದಾರೆ. ಈ ಬಾರಿ ಅವರು “ಬೆಸ್ಟ್‌ ಫ್ರೆಂಡ್ಸ್‌’ ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿ, ಅದನ್ನು ಸೆನ್ಸಾರ್‌ ಮಾಡಿಸಿಯೇ ಮಾಧ್ಯಮದವರ ಮುಂದೆ ಬಂದಿದ್ದಾರೆ ಟೇಶಿ. 

Advertisement

ಹೆಸರು ಕೇಳಿದರೆ, ಇದು ಇನ್ನೊಂದು ಆಪ್ತಮಿತ್ರರ ಕಥೆ ಎನಿಸಬಹುದು. ಆದರೆ, ಟೇಶಿ ಅಲ್ಲೊಂದು ಟ್ವಿಸ್ಟ್‌ ಇಟ್ಟಿದ್ದಾರೆ. ಈ ಬಾರಿ ಅವರು ಸಲಿಂಗಿಗಳ ಕುರಿತ ಒಂದು ಚಿತ್ರ ಮಾಡಿದ್ದಾರೆ. ಹಾಸನದಲ್ಲಿ ನಡೆದ ಒಂದು ನೈಜ ಘಟನೆಯನ್ನು ಬೇಸ್‌ ಮಾಡಿ ಕಥೆ ಮಾಡಿದ್ದಾರೆ. ಆ ಘಟನೆಗೆ ಸಾಮಾಜಿಕ ಕಳಕಳಿ ಸೇರಿಸಿ, ಒಂದಿಷ್ಟು ಕಲ್ಪನೆಯನ್ನು ಬೆರೆಸಿ “ಬೆಸ್ಟ್‌ ಫ್ರೆಂಡ್ಸ್‌’ ಎಂಬ ಸಲಿಂಗಿಯರ ಕುರಿತಾದ ಚಿತ್ರವೊಂದನ್ನು ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು, ಸೆನ್ಸಾರ್‌ ಸಹ ಆಗಿದೆ. “ಯು/ಎ’ ಪ್ರಮಾಣ ಪತ್ರ ಪಡೆದಿರುವ ಈ ಚಿತ್ರವನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವುದು ಟೇಶಿ ಯೋಚನೆ. ಅದಕ್ಕೂ ಮುನ್ನ ಮಾಧ್ಯಮದವರೆದುರು ಬಂದ್ದಿದರು ಟೇಶಿ.

ಅಂದು ಅಲ್ಲಿದ್ದ ಬ್ಯಾನರ್‌ನಲ್ಲಿ “ಬೆಸ್ಟ್‌ ಫ್ರೆಂಡ್ಸ್‌’ ಜೊತೆಗೆ “ಇದು ತೀರ್ಪು ನೀಡಲಾಗದ ಪ್ರೇಮಕಥೆ’, “ಕಾನೂನು ಮತ್ತು ಮಾನವ ಹಕ್ಕುಗಳ ನಡುವಿನ ಸಂಘರ್ಷ’ ಎಂಬ ಅಡಿಬರಹಗಳು ಇದ್ದವು. ಈ ಅಡಿಬರಹಗಳೇ ಈ ಚಿತ್ರದ ಕಥಾವಸ್ತು ಎಂದರೆ ತಪ್ಪಿಲ್ಲ. ಸುಮಾರು ಐದು ವರ್ಷಗಳ ಹಿಂದೆ ಹಾಸನದಲ್ಲಿ ನಡೆದ ಒಂದು ಘಟನೆಯನ್ನಿಟ್ಟುಕೊಂಡು ಟೇಶಿ ಈ ಚಿತ್ರ ಮಾಡಿದ್ದಾರಂತೆ. ಶ್ರುತಿ ಮತ್ತು ರಶ್ಮಿ ಎಂಬ ಹುಡುಗಿಯರು ಪರಸ್ಪರ ಪ್ರೀತಿಸಿ, ಅದು ಸಾಕಷ್ಟು ಸುದ್ದಿಯಾಗಿ, ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿದ ಕಥೆಯನ್ನಿಟ್ಟುಕೊಂಡು ಟೇಶಿ ಸಿನಿಮಾ ಮಾಡಿದ್ದಾರೆ.

“ಇದೊಂದು ವ್ಯಾಪಾರಿ ಅಥವಾ ಫಾರ್ಮುಲ ಚಿತ್ರ ಅಲ್ಲ. ಸಾಮಾಜಿಕ ಕಳಕಳಿ ಇರುವ ಚಿತ್ರ. ಒಬ್ಬ ಮನುಷ್ಯನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ವ್ಯವಸ್ಥೆಯ ಕುರಿತಾದ ಚಿತ್ರ.  ಅಷ್ಟೇ ಅಲ್ಲ, ನಮ್ಮ ಚಟಕ್ಕಾಗಿ ಹೇಗೆ ಕೆಲವು ವರ್ಗದವರನ್ನು ಬಳಸಿಕೊಳ್ಳುತ್ತಿದ್ದೀವಿ ಎಂದು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೀನಿ. ಇವತ್ತು ದೇಶದಲ್ಲಿ ಸುಮಾರು 25 ಲಕ್ಷ ಸಲಿಂಗಿಗಳಿದ್ದಾರೆ. ಆದರೆ, ಅವರಿಗೆ ಬದುಕುವ ಹಕ್ಕು ಇನ್ನೂ ಸರಿಯಾಗಿ ಸಿಕ್ಕಿಲ್ಲ. ಅವರಿಂದ ದೇಶಕ್ಕೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ಆದರೂ ಅವರನ್ನು ಕೆಟ್ಟದಾಗಿ ನೋಡಲಾಗುತ್ತಿದೆ. ದೇವರು ಕೊಟ್ಟ ಗುಣ ಅದು. ಅದಕ್ಕೆ ಮನುಷ್ಯ ತಾನೇ ಏನು ಮಾಡೋಕೆ ಸಾಧ್ಯ? ಅವರಿಗೆ ನ್ಯಾಯ ಸಿಗಬೇಕು. ಇಂಥ ಹಲವು ವಿಷಯಗಳನ್ನು ಈ ಚಿತ್ರದಲ್ಲಿ ಚರ್ಚಿಸಿದ್ದೀವಿ’ ಎನ್ನುತ್ತಾರೆ ಟೇಶಿ.

ಈ ವಿಚಾರವಾಗಿ ಅವರು ಸಾಕಷ್ಟು ರಿಸರ್ಚ್‌ ನಡೆಸಿದ್ದಾರಂತೆ. ಅದರಲ್ಲೂ ಶ್ರುತಿ ಮತ್ತು ರಶ್ಮಿಗೆ ಸಂಬಂಧಿಸಿದವರನ್ನು ಮಾತನಾಡಿಸಿ, ಹಲವು ವಿಚಾರಗಳನ್ನು ಹೆಕ್ಕಿ ತೆಗಿಯಲಾಗಿದೆಯಂತೆ. ಇದರಿಂದ ನಾಳೆ ಸಮಸ್ಯೆ ಆಗುವುದಿಲ್ಲವಾ ಎಂಬ ಪ್ರಶ್ನೆಯೂ ಬಂತು. “ಇದು ನೈಜ ಘಟನೆಯನ್ನಾಧರಿಸಿದ ಚಿತ್ರ ಹೌದು. ಆದರೆ, ಸಂಪೂರ್ಣ ಅದೇ ಘಟನೆ ಅಲ್ಲ. ಹಲವು ಕಥೆಗಳಲ್ಲಿ ಅವರದ್ದೂ ಒಂದು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಪರವಾಗಿ ನಾವು ಹೋರಾಟ ಮಾಡಿದ್ದೀವಿ. ಹಾಗಾಗಿ ಅವರು ಯಾಕೆ ಸಮಸ್ಯೆ ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ ಟೇಶಿ.

Advertisement

ಮೇಘನಾ ಮತ್ತು ದ್ರವ್ಯ “ಬೆಸ್ಟ್‌ ಫ್ರೆಂಡ್ಸ್‌’ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಆಶಾ, ಸುಮತಿ ಪಾಟೀಲ್‌ ಮುಂತಾದವರು ನಟಿಸಿದ್ದಾರೆ. ಲಯನ್‌ ವೆಂಕಟೇಶ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಲ್ಲರೂ ಇಂಥದ್ದೊಂದು ವಿಭಿನ್ನ ಕಥಾವಸ್ತುವಿರುವ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಬಹಳ ಖುಷಿಪಟ್ಟರು.

ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next