Advertisement

ಉಗ್ರರು ಉತ್ತರ ಕಾಶ್ಮೀರಕ್ಕೆ?

01:23 AM Aug 23, 2019 | mahesh |

ಶ್ರೀನಗರ: ಕಳೆದ ಕೆಲವು ವರ್ಷಗಳಿಂದ ಕಾಶ್ಮೀರದ ದಕ್ಷಿಣ ಭಾಗದಲ್ಲೇ ಉಗ್ರ ಚಟುವಟಿಕೆ ನಡೆಯುತ್ತಿತ್ತಾದರೂ, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ಹಿಂಪಡೆದ ನಂತರ ಉಗ್ರರು ಉತ್ತರದ ಕಡೆಗೆ ಸ್ಥಳ ಬದಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

ಈವರೆಗೆ ಉತ್ತರದ ಬಾರಾಮುಲ್ಲಾ ಹಾಗೂ ಇತರ ಪ್ರದೇಶಗಳಲ್ಲಿ ಉಗ್ರರು ಅಷ್ಟೇನೂ ಪ್ರಭಾವಶಾಲಿಯಾಗಿರಲಿಲ್ಲ. ಅದರಲ್ಲೂ ಕಳೆದ ಜನವರಿಯಲ್ಲಂತೂ ಬಾರಾಮುಲ್ಲಾವನ್ನು ಉಗ್ರ ಚಟುವಟಿಕೆ ಮುಕ್ತ ಜಿಲ್ಲೆ ಎಂದೇ ಸೇನೆ ಘೋಷಿಸಿತ್ತು. ಆದರೆ ಮಂಗಳವಾರ ಬಾರಾಮುಲ್ಲಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್‌ ಉಗ್ರನೊಬ್ಬನನ್ನು ಸೇನೆ ಹೊಡೆದುರುಳಿಸಿದೆ. ಈತನನ್ನು ತಿಂಗಳ ಹಿಂದಷ್ಟೇ ಉಗ್ರ ಸಂಘಟನೆ ಸೇರಿದ್ದ 20 ವರ್ಷದ ಮೋಮಿನ್‌ ರಸೂಲ್ ಗೋಜ್ರಿ ಎಂದು ಗುರುತಿಸಲಾಗಿದೆ.

ಉತ್ತರ ಕಾಶ್ಮೀರ ಭಾಗವು ಜನನಿಬಿಡ ಪ್ರದೇಶವಾಗಿದ್ದು, ಸಣ್ಣ ರಸ್ತೆಗಳು ಹಾಗೂ ಗಲ್ಲಿಗಳಿವೆ. ಇದರಿಂದ ಉಗ್ರರು ಮನೆಗಳಲ್ಲಿ ಅವಿತುಕೊಳ್ಳುವುದು ಸುಲಭ ಮತ್ತು ಶೋಧ ಕಾರ್ಯಾಚರಣೆ ನಡೆಸುವುದೂ ಸೇನೆಗೆ ಕಷ್ಟಕರ. ಅಲ್ಲದೆ, ಸೇನೆ ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆಯೇ ಜನರು ಕಲ್ಲೆಸೆಯುವುದರಿಂದ ಕಾರ್ಯಾಚರಣೆ ನಡೆಸಲು ಅಸಾಧ್ಯ ಎಂಬಂತಾಗಿದೆ. 1997ರ ನಂತರದಲ್ಲಿ ನಡೆಸಿದ ಯಾವ ಕಾರ್ಯಾಚರಣೆಯೂ ಈ ಭಾಗದಲ್ಲಿ ಯಶಸ್ವಿಯಾಗಿರಲಿಲ್ಲ. ಕಾಲಾನಂತರದಲ್ಲಿ ಉಗ್ರ ಚಟುವಟಿಕೆ ದಕ್ಷಿಣ ಭಾಗಕ್ಕೆ ಸೀಮಿತಗೊಂಡಿತ್ತು. ಈಗ ಪುನಃ ಉಗ್ರರು ಉತ್ತರ ಭಾಗಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಸೇನೆ ಶಂಕಿಸಿದೆ.

ವಿಪಕ್ಷಗಳಿಂದ ಪ್ರತಿಭಟನೆ: ಜಮ್ಮು ಕಾಶ್ಮೀರದಲ್ಲಿ ಬಂಧಿಸಲಾಗಿರುವ ರಾಜಕೀಯ ಮುಖಂಡರನ್ನು ಬಿಡುಗಡೆ ಮಾಡುವಂತೆ ಗುರುವಾರವೂ ಹಲವು ಪಕ್ಷಗಳ ಮುಖಂಡರು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಕಾಶ್ಮೀರದ ಹಲವೆಡೆ ನಿರ್ಬಂಧ ಸಡಿಲಿಸಲಾಗಿದೆ. ಆದರೆ ಮಾರುಕಟ್ಟೆ ಇನ್ನೂ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ. ಅಲ್ಲದೆ, ಮೊಬೈಲ್, ಇಂಟರ್ನೆಟ್ ಸೇವೆಗಳು ಬಂದ್‌ ಆಗಿಯೇ ಇದೆ.

ಸದ್ಯಕ್ಕೆ ಸೇನೆ ವಾಪಸ್‌ ಇಲ್ಲ

ಜಮ್ಮು ಕಾಶ್ಮೀರದಿಂದ ಸದ್ಯಕ್ಕೆ ಸೇನೆ ಹಿಂಪಡೆಯುವ ಯೋಜನೆಯಿಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್‌ ಹೇಳಿದ್ದಾರೆ. ಪಾಕಿಸ್ತಾನವು ಉಗ್ರರನ್ನು ಕಳುಹಿಸಿ ದಾಳಿ ನಡೆಸಲು ಪ್ರಚೋದಿಸುತ್ತಿರುವಾಗ ಯಾಕೆ ತಕ್ಷಣ ಸೇನೆಯನ್ನು ಹಿಂಪಡೆಯಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಕಾಶ್ಮೀರದ ಜನರನ್ನು ಪಾಕ್‌ ಪ್ರಚೋದಿಸಲು ಯತ್ನಿಸುತ್ತಿದೆ. ಕಾಶ್ಮೀರದಲ್ಲಿ ಅಸ್ಥಿರತೆ ಸೃಷ್ಟಿಸಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ದೂರುವುದು ಪಾಕಿಸ್ತಾನದ ಉದ್ದೇಶ ಎಂದೂ ಅವರು ಆರೋಪಿಸಿದ್ದಾರೆ.

ಕ್ಷೌರಿಕರದ್ದೇ ಸಮಸ್ಯೆ!

ಕಾಶ್ಮೀರದಲ್ಲಿ ಈಗ ಕ್ಷೌರಿಕರ ಕೊರತೆ ಎದುರಾಗಿದೆ. ಹೊರ ರಾಜ್ಯದಿಂದ ಬಂದ ಕ್ಷೌರಿಕರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಆ. 5ರಂದು ಇಲ್ಲಿ ಕರ್ಫ್ಯೂ ವಿಧಿಸಿದ ನಂತರ ಕ್ಷೌರಿಕರು ತಮ್ಮ ರಾಜ್ಯಗಳಿಗೆ ವಾಪಸಾಗಿದ್ದರು. ಇದರಿಂದ ಕ್ಷೌರಿಕರ ಕೊರತೆ ಕಂಡುಬಂದಿದೆ. ಕೆಲವೇ ಜನರು ವಾಪಸಾಗಿದ್ದು, ಇವರು ದುಪ್ಪಟ್ಟು ದರ ಹೇಳುತ್ತಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next