Advertisement

ಚಾರಣಿಗರ ಸ್ವರ್ಗ ರಾಣಿಪುರಂ ಚಾರಣಕ್ಕೆ ತಾತ್ಕಾಲಿಕ ನಿಷೇಧ

09:45 AM Mar 15, 2018 | Karthik A |

ಕಾಸರಗೋಡು: ತಮಿಳುನಾಡಿನ ಕುರುಂಗನಿ ಅರಣ್ಯದಲ್ಲಿ ಕಾಡ್ಗಿಚ್ಚು ಹಬ್ಬಿ11 ಮಂದಿ ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಚಾರಣಿಗರ ಸ್ವರ್ಗ ಎಂದೇ ಕರೆಸಿಕೊಂಡಿರುವ ರಾಣಿಪುರಂನಲ್ಲಿ ಚಾರಣ ಮಂಗಳವಾರದಿಂದ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 
ರಾಣಿಪುರಂನ ಒಂದು ಭಾಗದಲ್ಲಿ ಕರ್ನಾಟಕದ ಅರಣ್ಯ ಪ್ರದೇಶವಾಗಿದ್ದರೆ, ಇನ್ನೊಂದು ಭಾಗ ಕೇರಳಕ್ಕೆ ಸೇರಿದ ಅರಣ್ಯ ಪ್ರದೇಶವಿದೆ. ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಿದರೆ ಚಾರಣಿಗರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದು. ಈ ಅರಣ್ಯ ಪ್ರದೇಶದಿಂದ ಪಾರಾಗಿ ಹೊರ ಬರಲು ಕಷ್ಟಸಾಧ್ಯ. ಇದರಿಂದ ಅಪಾಯ ತಪ್ಪಿದಲ್ಲ. ರಾಣಿಪುರಂ ಅರಣ್ಯಕ್ಕೆ ಸಾಗಲು ರಸ್ತೆ ವ್ಯವಸ್ಥೆಯೂ ಇಲ್ಲದಿರುವುದರಿಂದ ಅಗ್ನಿಶಾಮಕ ದಳವಾಗಲೀ, ಇತರ ರಕ್ಷಣಾ ಕಾರ್ಯಕರ್ತರಿಗಾಗಲೀ ಪ್ರವೇಶಿಸಲು ಸುಲಭವಾಗದು. ಅರಣ್ಯ ರಕ್ಷಕರಿಗೂ ತತ್‌ಕ್ಷಣ ಬೆಂಕಿಯನ್ನು ಆರಿಸಲು ಸಾಧ್ಯವಾಗದು. ರಾಣಿಪುರಂನಲ್ಲಿ ಪ್ರತಿ ವರ್ಷವೂ ಕಾಡ್ಗಿಚ್ಚು ಸಾಮಾನ್ಯವಾಗಿದೆ. 

Advertisement

ಸಂಬಂಧಪಟ್ಟವರ ನೇತೃತ್ವದಲ್ಲಿ ಅರಣ್ಯ ಪಾಲಕರು, ಅರಣ್ಯ ಸಂರಕ್ಷಣೆ ಸಮಿತಿಯ ಕಾರ್ಯಕರ್ತರು ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗುವುದರಿಂದ ಬೆಂಕಿ ಹರಡದಂತೆ ಜಾಗೃತೆ ವಹಿಸುತ್ತಿದ್ದಾರೆ. ಆದರೂ ಚಾರಣ ಪ್ರಿಯರು ಅಕಸ್ಮಾತ್‌ ಬೀಡಿ, ಸಿಗರೇಟ್‌ ಸೇದಿ ಎಸೆದರೆ ಬೆಂಕಿ ಹತ್ತಿಕೊಂಡು ವ್ಯಾಪಕವಾಗಿ ಹರಡುವುದರಲ್ಲಿ ಸಂಶಯವಿಲ್ಲ. ಕಳೆದ ವರ್ಷ 7 ಬಾರಿ ರಾಣಿಪುರಂನಲ್ಲಿ ಕಾಡ್ಗಿಚ್ಚು ಸಂಭವಿಸಿತ್ತು. ಆದರೆ ತತ್‌ಕ್ಷಣದಲ್ಲೇ ಬೆಂಕಿ ಆರಿಸಿದ್ದರಿಂದ ಹೆಚ್ಚಿನ ಅಪಾಯದಿಂದ ಪಾರು ಮಾಡಲಾಗಿತ್ತು.

ಚಾರಣ ನಿಷೇಧದಿಂದ ನಷ್ಟ : ಮುಂದಿನ ದಿನಗಳು ಬೇಸಗೆ ರಜೆಯಾಗಿರುವುದರಿಂದ ಪ್ರವಾಸಿಗರು, ಚಾರಣಿಗರು ರಾಣಿಪುರಂಗೆ ಬರುತ್ತಾರೆ. ಆದರೆ ಈ ಬಾರಿ ಚಾರಣ ನಿಷೇಧಿಸಿರುವುದರಿಂದಾಗಿ ಪ್ರವಾಸಿಗರಿಂದ ಲಭಿಸುವ ವರಮಾನ ನಷ್ಟವಾಗಲಿದೆ. ಬೇಸಗೆಯ ರಜಾದಿನಗಳಲ್ಲಿ ಪ್ರತೀ ವರ್ಷವೂ ಟಿಕೆಟ್‌ ರೂಪದಲ್ಲಿ 75 ಸಾವಿರ ರೂ.ಯಿಂದ ಒಂದುಕಾಲು ಲಕ್ಷ ರೂ. ವರೆಗೆ ವರಮಾನ ಬರುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಈ ಹಣ ನಷ್ಟವಾಗಲಿದೆ. ಕಾಡ್ಗಿಚ್ಚಿನ ಭೀತಿಯಿಂದಾಗಿ ಮಳೆ ಸುರಿಯುವವರೆಗೆ ಪ್ರವಾಸಿಗರಿಗೆ ಇಲ್ಲಿಗೆ ಪ್ರವೇಶಕ್ಕೆ ಅನುಮತಿಯಿಲ್ಲ. ಹೀಗಿರುವಂತೆ ಕಾಡ್ಗಿಚ್ಚು ತತ್‌ಕ್ಷಣ ಕಂಡುಕೊಳ್ಳಲು ಹೆಚ್ಚಿನ ಸಿಬಂದಿಗಳನ್ನು ನೇಮಿಸಲಾಗುವುದು ಎಂದು ಸೆಕ್ಷನ್‌ ಫಾರೆಸ್ಟರ್‌ ಕೆ.ಮಧುಸೂದನನ್‌ ಅವರು ತಿಳಿಸಿದ್ದಾರೆ.

ಚಾರಣ ನಿಷೇಧಿಸಿದ್ದರೂ ರಾಣಿಪುರದ ಅರಣ್ಯ ಪ್ರದೇಶದಿಂದ ದೂರದವರೆಗೆ ಪ್ರವಾಸಿಗರು ವೀಕ್ಷಿಸಲು ಬರಬಹುದು. ಅರಣ್ಯ ಪ್ರದೇಶಕ್ಕೆ ಸಾಗಲು ಅವಕಾಶವಿಲ್ಲ. ಪ್ರವಾಸಿ ಕೇಂದ್ರದಲ್ಲಿ ಶಿಬಿರಗಳು, ಸಭೆಗಳು, ವಿಚಾರಗೋಷ್ಠಿಗಳು, ತರಗತಿಗಳು ಮೊದಲಾದವುಗಳನ್ನು ನಡೆಸಲು ಅನುಮತಿ ಇದೆ. ಟೂರಿಸ್ಟ್‌ ಕಾಟೇಜುಗಳಲ್ಲಿ ವಾಸ್ತವ್ಯ ಹೂಡಲು ಅವಕಾಶವಿದೆ. ಅರಣ್ಯ ಪ್ರದೇಶದ ಗಡಿಯವರೆಗೆ ಸಾಗಬಹುದು.

ಬೇಸಗೆಯಲ್ಲಿ ಕಾಡ್ಗಿಚ್ಚು ಸಾಮಾನ್ಯವಾಗಿರುವುದರಿಂದ ರಕ್ಷಣಾ ಕಾರ್ಯ ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಾರಣಿಗರಿಗೆ ಯಾವುದೇ ಅಪಾಯ ಎದುರಾಗಬಾರದೆಂಬ ಕಾರಣಕ್ಕೆ ರಾಣಿಪುರಂನಲ್ಲಿ ಚಾರಣ ನಿಷೇಧಿಸಲಾಗಿದೆ. ರಾಣಿಪುರಂನಲ್ಲಿ ಆಗಾಗ ಕಾಡ್ಗಿಚ್ಚು ಸಾಮಾನ್ಯವಾಗಿದೆ. ರಾಣಿಪುರಂ ಪ್ರವಾಸಿ ಕೇಂದ್ರದಿಂದ ಅರಣ್ಯ ಪ್ರದೇಶದಲ್ಲಿ ಎರಡು ಕಿಲೋ ಮೀಟರ್‌ ದೂರಕ್ಕೆ ಟ್ರಕ್ಕಿಂಗ್‌ ಮೂಲಕ ತಲುಪುವ ಪ್ರವಾಸಿಗರ ಸ್ವರ್ಗವಾಗಿ ಪರಿಣಮಿಸುವ ಮಾಣಿಮಲದಲ್ಲಿ ಹುಲ್ಲು ಒಣಗಿ ನಿಂತಿರುವುದರಿಂದ ಬೆಂಕಿಯ ಕಿಡಿ ತಗುಲಿದರೂ ವ್ಯಾಪಕವಾಗಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ಹತ್ತಿಕೊಂಡು ಹುಲ್ಲು ಸರ್ವನಾಶವಾಗಲಿದೆ. ಇಂತಹ ಸಂದರ್ಭದಲ್ಲಿ ಚಾರಣಿಗರು ಸಿಕ್ಕಿ ಹಾಕಿಕೊಂಡರೆ ಅವರನ್ನು ರಕ್ಷಿಸುವುದು ಬಹಳಷ್ಟು ಕಷ್ಟ. ಈ ಕಾರಣಕ್ಕೆ ಚಾರಣಕ್ಕೆ ತಾತ್ಕಾಲಿಕ ನಿಷೇಧ  ಹೇರಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next