Advertisement

ಟೆಂಪೋ ಟ್ರಾವೆಲರ್‌ ಢಿಕ್ಕಿ; ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಸಾವು

12:29 AM Dec 01, 2019 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಬೈಕ್‌ಗೆ ಟೆಂಪೋ ಟ್ರಾವೆಲರ್‌ ಢಿಕ್ಕಿಯಾಗಿ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ರಾತ್ರಿ 8.30ರ ಸುಮಾರಿಗೆ ಸಂಭವಿಸಿದೆ.

Advertisement

ಗಂಗೊಳ್ಳಿಯ ಮೊಹಲ್ಲಾ ನಿವಾಸಿ ವೃತ್ತಿಯಲ್ಲಿ ಮೀನು ಸಾಗಾಟ ವಾಹನದ ಚಾಲಕರಾಗಿರುವ ಶಾದಾಬ್‌ (40) ಹಾಗೂ ಬೈಂದೂರಿನ ನಿವಾಸಿ ಅಡುಗೆ ವೃತ್ತಿಯ ಅಬ್ದುಲ್‌ ರಹೀಂ (55) ಮೃತಪಟ್ಟವರು. ರಹೀಂ ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಆಲೂರು ಕಡೆಯಿಂದ ಗಂಗೊಳ್ಳಿ ಕಡೆಗೆ ಸಂಚರಿಸುತ್ತಿದ್ದ ಬೈಕ್‌ಗೆ ಬೈಂದೂರಿನಿಂದ ಮಲ್ಪೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲ್ಲರ್‌ ಢಿಕ್ಕಿ ಹೊಡೆಯಿತು. ಅಪಘಾತದ ತೀವ್ರತೆಗೆ ಬೈಕ್‌ ಸವಾರರ ಪೈಕಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.ಗಂಗೊಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಅಪಾಯಕಾರಿ ಜಂಕ್ಷನ್‌
ಹೆದ್ದಾರಿ ಕಾಮಗಾರಿಯಿಂದಾಗಿ ಮುಳ್ಳಿಕಟ್ಟೆಯ ಜಂಕ್ಷನ್‌ ಅಪಾಯ ಕಾರಿಯಾಗಿ ಪರಿಣಮಿಸಿದೆೆ. ರಾತ್ರಿ ವೇಳೆ ಸರಿಯಾದ ಬೀದಿ ದೀಪದ ವ್ಯವಸ್ಥೆಯೂ ಇಲ್ಲಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆತಂದರೂ ಯಾವುದೇ ಪ್ರಯೋಜನ ವಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕಾಮಗಾರಿಯ ಕಾರಣ ಎರಡೂ ಕಡೆಯ ವಾಹನಗಳು ಒಂದೇ ರಸ್ತೆ ಯಲ್ಲಿ ಸಂಚರಿಸುತ್ತವೆ. ಇದರಿಂದ ಆಲೂರು, ಹಕ್ಲಾಡಿ ಕಡೆಯಿಂದ ಗಂಗೊಳ್ಳಿ ಕಡೆಗೆ ತೆರಳುವ ವಾಹನಗಳಿಗೆ ಕಷ್ಟವಾಗುತ್ತಿದೆ. ಅಪಾಯಕಾರಿ ಸ್ಥಳವಾಗಿದ್ದರೂ ಬ್ಯಾರಿಕೇಡ್‌ ಸಹಿತ ಯಾವುದೇ ಎಚ್ಚರಿಕೆಯನ್ನು ಇಲ್ಲಿ ಅಳವಡಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next