ನವದೆಹಲಿ: ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದಂದು ಸ್ಫೋಟ ನಡೆಸಿದ ಉಗ್ರರ ಜೊತೆಗೆ ನಂಟು ಹೊಂದಿದ್ದರು ಎಂಬ ಶಂಕೆಯ ಮೇರೆಗೆ ಕಳೆದ ವಾರ ತಮಿಳುನಾಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದ ಮೂವರು ಉಗ್ರರು ದಕ್ಷಿಣ ಭಾರತದ ಪ್ರಮುಖ ದೇಗುಲಗಳು ಮತ್ತು ಚರ್ಚ್ಗಳ ಮೇಲೆ ದಾಳಿ ನಡೆಸುವ ಯೋಜನೆ ಹೊಂದಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಸ್ಫೋಟದ ಸಂಚು ಇನ್ನೂ ಯೋಜನೆಯ ರೂಪದಲ್ಲೇ ಇತ್ತು. ಅಷ್ಟೇ ಅಲ್ಲ, ಇದಕ್ಕೆ ಅಗತ್ಯವಿರುವವರನ್ನು ನೇಮಕ ಮಾಡುವ ಪ್ರಕ್ರಿಯೆಯೂ ನಡೆಯುತ್ತಿತ್ತು. ಐಸಿಸ್ಗೆ ಸಂಬಂಧಿಸಿದ ಕೈಪಿಡಿಗಳನ್ನು ಇವರು ತಮಿಳಿಗೆ ಅನುವಾದ ಮಾಡುತ್ತಿದ್ದರು. ಇದನ್ನು ಬಳಸಿ ಯುವಕರನ್ನು ಮನವೊಲಿಸಲಾಗುತ್ತಿತ್ತು.
ಪೊಲೀಸರು ಈ ವಿವರಗಳನ್ನು ಎಫ್ಐಆರ್ನಲ್ಲಿ ವಿವರಿಸಿದ್ದಾರೆ. ಕಳೆದ ವಾರವೇ ತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ದಳ ಏಳು ಕಡೆಗಳಲ್ಲಿ ಶೋಧ ನಡೆಸಿತ್ತು. ಅಲ್ಲದೆ ಶ್ರೀಲಂಕಾ ಸ್ಫೋಟದ ಸಂಚುಕೋರ ಝಹ್ರನ್ ಹಶೀಮ್ಗೆ ಸ್ನೇಹಿತನಾಗಿದ್ದ ಮೊಹಮದ್ ಅಜರುದ್ದೀನ್ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿತ್ತು.
ಈ ವೇಳೆ ಇವರ ಬಳಿ ಇದ್ದ 14 ಮೊಬೈಲ್ ಫೋನ್ಗಳು, 29 ಸಿಮ್ ಕಾರ್ಡ್ಗಳು, 10 ಪೆನ್ ಡ್ರೈವ್ಗಳು, ಮೂರು ಲ್ಯಾಪ್ಟಾಪ್ಗ್ಳು, ಆರು ಮೆಮೊರಿ ಕಾರ್ಡ್ಗಳು, ನಾಲ್ಕು ಹಾರ್ಡ್ ಡಿಸ್ಕ್ ಡ್ರೈವ್ಗಳು ಹಾಗೂ ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಹಲವು ಪ್ರಚೋದನಕಾರಿ ಸಾಹಿತ್ಯವೂ ಇವರ ಬಳಿ ಇತ್ತು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖೀಸಲಾಗಿದೆ. ಇವರ ಬಳಿ ಪಿಎಫ್ಐ ಮತ್ತು ಎಸ್ಡಿಪಿಐಗೆ ಸಂಬಂಧಿಸಿದ ಕೆಲವು ಕೈಪಿಡಿಗಳೂ ಇದ್ದವು ಎಂದು ಎನ್ಐಎ ಹೇಳಿದೆ. ಈ ಉಗ್ರರು ಫೇಸ್ಬುಕ್ನಲ್ಲಿ ಖಲೀಫಾಜಿಎಫ್ಎಕ್ಸ್ ಎಂಬ ಹೆಸರಿನ ಪೇಜ್ ತೆರೆದಿದ್ದು, ಇದರಲ್ಲಿ ಐಸಿಸ್ ಪರ ಪೋಸ್ಟ್ ಮಾಡುತ್ತಿದ್ದರು.