Advertisement

ಭಜರಂಗಿ ಮಾಂತ್ರಿಕನ ತೆಲುಗು ಪಯಣ

11:16 AM Jul 26, 2018 | |

ತನ್ನ 26 ನೇ ವಯಸ್ಸಲ್ಲಿ ಭಯಹುಟ್ಟಿಸೋ ಮಾಂತ್ರಿಕ! 29 ನೇ ವಯಸ್ಸಲ್ಲಿ ಹಠಮಾರಿ ತಂದೆ! ಇದೇನು, ಮಾಂತ್ರಿಕ, ಹಠಮಾರಿ ತಂದೆ ಎಂಬ ಪ್ರಶ್ನೆ ಎದುರಾದರೆ, ಆ ಪ್ರಶ್ನೆಗೆ ಉತ್ತರ ನಟ ಮಧುಗುರುಸ್ವಾಮಿ. ಹೌದು, ಇದು ಅವರ ವಿಭಿನ್ನ ಪಾತ್ರಗಳ ವಿವರ. ಮಧುಗುರುಸ್ವಾಮಿ ಅಂದಾಕ್ಷಣ,  ಎಲ್ಲರಿಗೂ ಗೊತ್ತಾಗಲಿಕ್ಕಿಲ್ಲ.

Advertisement

ಆದರೆ, “ಭಜರಂಗಿ’ಯ ಮಾಂತ್ರಿಕ ಮತ್ತು “ವಜ್ರಕಾಯ’ ಚಿತ್ರದ ಹಠಮಾರಿ ತಂದೆ ಪಾತ್ರ ನೆನಪಿಸಿಕೊಂಡವರಿಗೆ ಈ ಮಧುಗುರುಸ್ವಾಮಿ ಅವರು ಥಟ್ಟನೆ ನೆನಪಾಗುತ್ತಾರೆ. ಅದೇ ಮಧುಗುರುಸ್ವಾಮಿ ಇದೀಗ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟು, ಸದ್ದಿಲ್ಲದೆಯೇ ಅಲ್ಲೊಂದು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಬಂದಿದ್ದಾರೆ.

ಈ ವಾರ ಆ ಚಿತ್ರ ಬಿಡುಗಡೆಯಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಸಾಕ್ಷ್ಯಂ’. ಜಗಪತಿಬಾಬು ಅವರ ಕಾಂಬಿನೇಷನ್‌ನಲ್ಲಿ ನಟಿಸಿರುವ ಮಧುಗುರುಸ್ವಾಮಿ ಅವರಿಗೆ ಆ ಚಿತ್ರ ಹೊಸ ಇಮೇಜ್‌ ತಂದುಕೊಡಲಿದೆ ಎಂಬ ಅದಮ್ಯ ವಿಶ್ವಾಸ. “ಭಜರಂಗಿ’ ಚಿತ್ರದ ಪಾತ್ರ ನೋಡಿದ ತೆಲುಗು ನಿರ್ದೇಶಕ ಶ್ರೀವಾಸ್‌, “ಸಾಕ್ಷ್ಯಂ’ ಚಿತ್ರದಲ್ಲಿ ವಿಶೇಷ ಪಾತ್ರ ಕೊಟ್ಟಿದ್ದಾರೆ.

ಬೆಲಂಕೊಂಡ ಶ್ರೀನಿವಾಸ್‌, ಪುಜಾ ಹೆಗಡೆ, ಸುಮಾರು 40 ದಿನಗಳ ಕಾಲ ಹೈದರಾಬಾದ್‌ ಸುತ್ತಮುತ್ತ ಚಿತ್ರೀಕರಣದಲ್ಲಿ ಪಾಲ್ಗೊಂಡ ಮಧು ಗುರುಸ್ವಾಮಿ, ತಮ್ಮ ಪಾತ್ರಕ್ಕೆ ತಾವೇ ಡಬ್‌ ಮಾಡಿದ್ದಾರೆ. ಹೀಗಾಗಿ ಮಧುಗುರುಸ್ವಾಮಿ ಅವರ ಮೊದಲ ತೆಲುಗು ಚಿತ್ರ ಇದಾಗಿರುವುದರಿಂದ “ಸಾಕ್ಷ್ಯಂ’ ಮೇಲೆ ಸಂಪೂರ್ಣ ವಿಶ್ವಾಸವಿದೆ.

ಹಾಗೆ ನೋಡಿದರೆ, ಕನ್ನಡದಲ್ಲಿ ಈಗ ಖಳನಟರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ತರಹೇವಾರಿ ಪಾತ್ರಗಳ ಮೂಲಕ ಗಮನಸೆಳೆಯುತ್ತಿರುವ ಬೆರಳೆಣಿಕೆ ಖಳನಟರ ಪೈಕಿ ಮಧುಗುರುಸ್ವಾಮಿ ಮೊದಲ ಸಾಲಲ್ಲಿ ಕಾಣ ಸಿಗುತ್ತಾರೆ. ಟಿ.ನರಸಿಪುರದ ಮಧು ಗುರುಸ್ವಾಮಿ, ಶಾಲೆ ದಿನಗಳಲ್ಲೇ ಸಿನಿಮಾ ಹುಚ್ಚು ಅಂಟಿಸಿಕೊಂಡವರು.

Advertisement

ಸಿನಿಮಾ ನೋಡುವ ಮೂಲಕ, ಮುಂದೊಂದು ದಿನ ನಾನೂ ನಟಿಸಬೇಕು ಎಂಬ ಆಸೆ ಇಟ್ಟುಕೊಮಡಿದ್ದರು. ಕಾಲೇಜು ಮುಗಿಸಿದ ಬಳಿಕ 2007 ರಲ್ಲಿ ಬೆಂಗಳೂರಿಗೆ ಬಂದ ಮಧುಗುರುಸ್ವಾಮಿ, ಹಿರಿಯ ರಂಗಭೂಮಿ ಕಲಾವಿದರಾದ ಎ.ಎಸ್‌.ಮೂರ್ತಿ ಅವರ ಅಭಿನಯ ತರಂಗದಲ್ಲಿ ನಟನೆ ತರಬೇತಿ ಪಡೆದು, “ಡೆಡ್ಲಿ ಸೋಮ’ ಚಿತ್ರಕ್ಕೆ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದರು.

ನಂತರ “ಡೆಡ್ಲಿ 2′ ಚಿತ್ರದ ಮೂಲಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಮಧು ಗುರುಸ್ವಾಮಿ, ಅಂದಿನಿಂದ ಇಂದಿನವರೆಗೂ ಹಿಂದಿರುಗಿ ನೋಡಿಲ್ಲ. “ಚಿಂಗಾರಿ’, “ಜಾನು’,”ಭಜರಂಗಿ’, “ವಜ್ರಕಾಯ’, “ಮಾರುತಿ 800′, “ಮಫ್ತಿ’ ಹೀಗೆ ಒಂದಷ್ಟು ಯಶಸ್ವಿ ಚಿತ್ರಗಳಲ್ಲಿ ನಟಿಸಿದರು.

ಕೆಲ ಚಿತ್ರಗಳ ಪಾತ್ರಕ್ಕಾಗಿ ಅವರು ಸುಮಾರು 12 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೂ ಉಂಟು, 20 ಕೆಜಿ ಹೆಚ್ಚು ಮಾಡಿಕೊಂಡಿದ್ದೂ ಇದೆ. “ಭಜರಂಗಿ’ ಚಿತ್ರದ ಬಳಿಕ ಇವರಿಗೆ ಹುಡುಕಿ ಬಂದ ಅವಕಾಶಗಳಿಗೆ ಲೆಕ್ಕವೇ ಇಲ್ಲ. ಆಗ ಸುಮಾರು 60 ಕಥೆಗಳನ್ನು ಕೇಳಿ ಬಿಟ್ಟಿದ್ದುಂಟು.

ಕಾರಣ, ಇಷ್ಟವಾಗದ ಪಾತ್ರ. ಅದರಲ್ಲೂ ಪೂರ್ಣ ಕಥೆ ಹೇಳಿ, ಆ ಪಾತ್ರ ಭಯ ಹುಟ್ಟಿಸುವಂತಿದ್ದರೆ ಅಥವಾ, ಚಾಲೆಂಜ್‌ ಎನಿಸಿದರೆ ಮಾತ್ರ ಹೊಸದನ್ನು ಕಲಿಯಲು ಸಾಧ್ಯ ಅಂದುಕೊಂಡು ಇಷ್ಟದ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದೇನೆ ಇರಲಿ, ಕನ್ನಡ ಚಿತ್ರರಂಗದಲ್ಲಿ ಖಳನಟರಾಗಿ ಘರ್ಜಿಸುವುದರ ಜೊತೆಗೆ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟು, ಅಲ್ಲೂ ಒಂದಷ್ಟು ಮೆಚ್ಚುಗೆ ಪಡೆದಿರುವುದು ಮಧುಗುರುಸ್ವಾಮಿ ಅವರ ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next